Advertisement

ಎಸಿಬಿ ತನಿಖೆಯ ವಿಧಾನಗಳ “ಎಬಿಸಿ”ಯೂ ಪಾಲಿಸುತ್ತಿಲ್ಲ: ಹೈಕೋರ್ಟ್‌ ಕಟು ಮಾತು

10:51 PM Jul 27, 2022 | Team Udayavani |

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಿರುದ್ದ ಮತ್ತೊಮ್ಮೆ ಚಾಟಿ ಬೀಸಿರುವ ಹೈಕೋರ್ಟ್‌, ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಎಸಿಬಿಯು ತನಿಖಾ ವಿಧಾನಗಳ ಎಬಿಸಿಯನ್ನೂ ಪಾಲಿಸುತ್ತಿಲ್ಲ ಎಂದು ಕಟು ಮಾತುಗಳಲ್ಲಿ ಹೇಳಿದೆ.

Advertisement

ಕೆಪಿಟಿಸಿಎಲ್‌ನ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಕೆ.ಆರ್‌. ಕುಮಾರ್‌ ನಾಯ್ಕ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ತನಿಖಾ ವಿಧಾನಗಳ ಎಬಿಸಿಯನ್ನೂ ಎಸಿಬಿ ಪಾಲಿಸುತ್ತಿಲ್ಲ. ಈ ಪ್ರಕರಣದಲ್ಲಿ ಕಾನೂನಿನ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇಂತಹ ತಪ್ಪು ನೋಡಿಯೂ ನ್ಯಾಯಾಲಯ ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ ಎಂದು ಕಟು ಮಾತುಗಳಲ್ಲಿ ಹೇಳಿದೆ.

ಕಾನೂನಿನ ದುರುಪಯೋಗ
ಪ್ರಕರಣದಲ್ಲಿ ಆತುರವಾಗಿ ಮೂಲ ವರದಿ ಸಲ್ಲಿಸಲಾಗಿದೆ. ಒಂದೇ ದಿನ ಅದೂ ಸಹ 24 ಗಂಟೆಗಳಲ್ಲೇ ಮೂಲ ವರದಿ ಹಾಗೂ ಎಫ್ಐಆರ್‌ ಸಿದ್ದಪಡಿಸಲಾಗಿದೆ. ಆಶ್ಚರ್ಯವೆಂದರೆ ಅಧಿಕಾರಿಯ ಸೇವಾವಧಿಯ ವಿವರವನ್ನೂ ನಮೂದಿಸಿಲ್ಲ. ಎಫ್ಐಆರ್‌ ದಾಖಲಿಸುವ ಮುನ್ನ ಅಧಿಕಾರಿಯ ವಾರ್ಷಿಕ ಸಂಬಳವನ್ನೂ ಪರಿಶೀಲಿಸಿಲ್ಲ. ಆಸ್ತಿಯ ವಾರ್ಷಿಕ ವರದಿಯನ್ನೂ ಪರಾಮರ್ಶಿಸಿಲ್ಲ. ಇಡೀ ಪ್ರಕರಣದಲ್ಲಿ ಕಾನೂನಿನ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಎಸಿಬಿಯ ಲೋಪಗಳನ್ನು ಪಟ್ಟಿ ಮಾಡಿರುವ ನ್ಯಾಯಪೀಠ, ಕುಮಾರ್‌ ನಾಯ್ಕ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿತು. ಅರ್ಜಿದಾರರ ಪರ ವಕೀಲ ಕೆ. ಸತೀಶ್‌ ವಾದ ಮಂಡಿಸಿದರು.

ಕೆಪಿಟಿಸಿಎಲ್‌ ನಲ್ಲಿ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ಆಗಿ ಕೆಲಸ ಮಾಡುತ್ತಿದ್ದ ಕೆ.ಆರ್‌.ಕುಮಾರ್‌ ನಾಯ್ಕ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಮಾ.16ರಂದು ದಾಖಲಿಸಲಾಗಿತ್ತು. ಆದಾಯ ಮೀರಿ ಆಸ್ತಿ ಗಳಿಕೆ ಕೇಸ್‌ ಗಳಲ್ಲಿ ಮೊದಲು ಮೂಲ ವರದಿ ಅಥವಾ ಸೋರ್ಸ್‌ ರಿಪೋರ್ಟ್‌ ತಯಾರಿಸಬೇಕು. ನಂತರ ಅದನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಬೇಕು. ಆದರೆ ಎಸಿಬಿ ಸಮರ್ಪಕ ಮೂಲ ವರದಿ ತಯಾರಿಸದೇ ಎಫ್‌ಐಆರ್‌ ದಾಖಲಿಸಿತ್ತು. ಒಂದೇ ದಿನ ಅಂದರೆ 2022ರ ಮಾ.16ರಂದೇ ಮೂಲ ವರದಿ ಸಿದ್ಧಪಡಿಸಿ, ಅದೇ ದಿನ 24 ಗಂಟೆಗಳಲ್ಲಿ ಎಫ್‌ಐಆರ್‌ ದಾಖಲಿಸಿತ್ತು. ಎಸಿಬಿ ಕ್ರಮ ಕಾನೂನು ಬಾಹಿರವೆಂದು ಕುಮಾರ್‌ ನಾಯ್ಕ್ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next