Advertisement

ಹಿಜಾಬ್‌, ಗಡ್ಡ, ಬುರ್ಖಾ ಬಗ್ಗೆ ಕೋರ್ಟ್‌ ಇನ್ನೆಷ್ಟು ತೀರ್ಪು ಕೊಡಬೇಕು?

11:33 PM Feb 25, 2022 | Team Udayavani |

ಬೆಂಗಳೂರು: ಹಿಜಾಬ್‌, ಗಡ್ಡ, ಬುರ್ಖಾ ಮತ್ತಿತರ ವಿಷಯಗಳ ಬಗ್ಗೆ ಈಗಾಗಲೇ ಹಲವು ನ್ಯಾಯಾಲಯಗಳು ನಿರ್ಣಯಗಳನ್ನು ನೀಡಿರುವಾಗ, ಮತ್ತದೇ ವಿಚಾರಗಳ ಬಗ್ಗೆ ನ್ಯಾಯಾಲಯಗಳು ಮತ್ತೆಷ್ಟು ಕಾಲ ನಿರ್ಣಯಿಸುತ್ತಾ ಕೂರಬೇಕು? ನ್ಯಾಯಾಲಯದ ಇನ್ನೆಷ್ಟು ಸಮಯ ಅಪವ್ಯಯವಾಗಬೇಕು?

Advertisement

ಹೀಗೆಂದು ಹಿಜಾಬ್‌ ಸಂಘರ್ಷದ ಹಿಂದೆ ಕೆಲ ಇಸ್ಲಾಮಿ ಸಂಘಟನೆಗಳ ಕೈವಾಡವಿದ್ದು, ಅವುಗಳಿಗೆ ಸೌದಿ ಅರೇಬಿಯಾದಿಂದ ಆರ್ಥಿಕ ನೆರವು ಸಿಗುತ್ತಿದೆ. ಇದರ ಬಗ್ಗೆ ಸಿಬಿಐ ಅಥವಾ ಎನ್‌ಐಎ ತನಿಖೆ ನಡೆಸಬೇಕು ಎಂದು ಕೋರಿ ಮುಂಬಯಿ ಮೂಲದ ವಕೀಲ ಘನಶ್ಯಾಮ ಉಪಾಧ್ಯಾಯ ಸಲ್ಲಿಸಿರುವ ಅರ್ಜಿಯಲ್ಲಿ ವಾದ ಮಂಡಿಸಿದ ವಕೀಲ ಸುಭಾಷ್‌ ಝಾ ನ್ಯಾಯಾಲಯದ ಮುಂದೆ ಪ್ರಶ್ನೆ ಇಟ್ಟರು.

ಹಿಜಾಬ್‌ಗ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ| ರಿತುರಾಜ್‌ ಅವಸ್ಥಿ ನೇತೃತ್ವದ ತ್ರಿಸದಸ್ಯ ನ್ಯಾಯಪೀಠದ ಶುಕ್ರವಾರ ವಾದ ಮಂಡಿಸಿದ ವಕೀಲ ಝಾ, ಹಿಜಾಬ್‌, ಗಡ್ಡ, ಬುರ್ಖಾ ವಿಚಾರ ಇದೇ ಮೊದಲು ನ್ಯಾಯಾಲಯದ ಮುಂದೆ ಬಂದಿದ್ದಲ್ಲ. 1973ರಿಂದಲೂ ಹಲವು ಬಾರಿ, ದೇಶದ ಹಲವು ಹೈಕೋರ್ಟ್‌ಗಳು ಈ ಬಗ್ಗೆ ನಿರ್ಣಯ ಕೊಟ್ಟಾಗಿದೆ. ಮತ್ತದೇ ವಿಚಾರಗಳು ನ್ಯಾಯಾಲಯದ ಮುಂದೆ ಬಂದರೆ ವಿಚಾರಣೆ ಮಾಡು ತ್ತಲೇ ಇರಬೇಕೇ? ಇದಕ್ಕೊಂದು ಕೊನೆ ಇಲ್ಲವೇ ಎಂದು ಪ್ರಶ್ನಿಸಿದರು.

ಹೈಕೋರ್ಟ್‌ ತಿರಸ್ಕರಿಸಿತ್ತು
ಸಮವಸ್ತ್ರದ ಮಹತ್ವ ಏನೆಂದು ಅಲಹಾಬಾದ್‌ ಹೈಕೋರ್ಟ್‌ 1973 ರಲ್ಲೇ ನಿರ್ಣಯಿಸಿದೆ. ವಕೀಲರಿಗೆ ನಿಗದಿ ಮಾಡಿರುವ ಸಮವಸ್ತ್ರ ಪ್ರಶ್ನಿಸಿ ಹಾಗೂ ಭಾರತೀಯ ಸಂಸ್ಕೃತಿಯಂತೆ ಧೋತಿ-ಕುರ್ತಾ ಬಳಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ತಿರಸ್ಕರಿಸಿತ್ತು. ವಕೀಲರು, ನ್ಯಾಯಮೂರ್ತಿಗಳು ಕೂಡ ಸಮವಸ್ತ್ರ ಧರಿಸುತ್ತಾರೆ. ವಕೀಲರ ಸಮವಸ್ತ್ರ ದ ಬಗ್ಗೆ ಕೇರಳ ಹೈಕೋರ್ಟ್‌ ತೀರ್ಮಾನ ನೀಡಿದೆ. ವಿದ್ಯಾರ್ಥಿಗಳಿಗೇಕೆ ಸಮ ವಸ್ತ್ರ ಇರಬಾರದು ಎಂದರು. ಅದಕ್ಕೆ ನ್ಯಾ| ದೀಕ್ಷಿತ್‌ ಪ್ರತಿಕ್ತಿಯಿಸಿ ನೀವು ಹೇಳುತ್ತಿರುವುದು ಕೋರ್ಟ್‌ ಸಮವಸ್ತ್ರದ ವಿಚಾರ. ಆದರೆ, ನಮ್ಮ ಮುಂದೆ ಇರುವುದು ಶಾಲಾ ಸಮವಸ್ತ್ರದ ವಿಚಾರ ಎಂದರು. ನಾನು ಸಮವಸ್ತ್ರದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದೇನೆ ಎಂದು ಝಾ ಉತ್ತರಿಸಿದರು.

ಸಬಲೀಕರಣ ಯಾವಾಗ?
ಇಸ್ಲಾಮಿನಲ್ಲಿ 1,400 ವರ್ಷಗಳ ಹಿಂದೆ ಇದ್ದದ್ದು, ಈಗ 2022ರಲ್ಲೂ ನಡೆಯಬೇಕು, ಭವಿಷ್ಯದಲ್ಲೂ ಅನ್ವಯವಾಗಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ. ಸಿದ್ಧಾಂತ ಗಳನ್ನು ಅಕ್ಷರಶಃ ಪಾಲಿಸಲು ಸಾಧ್ಯ ವಿಲ್ಲ. ಇಸ್ಲಾಮ್‌ ಹುಟ್ಟಿದ ಸೌದಿ ಅರೇ ಬಿಯಾದಲ್ಲೇ ಇಂದು ಮಹಿಳಾ ಸಬಲೀ ಕರಣಕ್ಕೆ ಒತ್ತು ಕೊಡಲಾಗುತ್ತಿದೆ. ಅಲ್ಲಿನ ಮಹಿಳೆಯರಿಗೆ ವಾಹನ ಚಲಾಯಿಸಲು ಅನುಮತಿ ಇರ ಲಿಲ್ಲ. ಎರಡು ವರ್ಷಗಳ ಹಿಂದೆ ಅನುಮತಿ ನೀಡಲಾಗಿದ್ದು, 1.97 ಲಕ್ಷ ಮಹಿಳೆಯರು ಡ್ರೈವಿಂಗ್‌ ಲೈಸೆನ್ಸ್‌ ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಭಾರತದಲ್ಲಿ ಇನ್ನೂ ಮಹಿಳೆಯರು ಮುಖ ಮುಚ್ಚಿಕೊಂಡು ಒಡಾಡಬೇಕು ಎಂದು ಹೇಳಲಾಗುತ್ತಿದೆ ಎಂದರು.

Advertisement

ಊಹಿಸಲು ಸಾಧ್ಯವಿಲ್ಲ: ಸಿಜೆ
ಹಿಜಾಬ್‌ಗ ಸಂಬಂಧಿಸಿದ ಹೋರಾಟಗಳನ್ನು ಗಮನಿಸಿದರೆ ಅವು ರಾತೋರಾತ್ರಿ ಹುಟ್ಟಿಕೊಂಡಿದ್ದು ಎನಿ ಸುವುದಿಲ್ಲ. ವಿದ್ಯಾರ್ಥಿನಿಯರು ಹಿಜಾಬ್‌ ಹಾಕುತ್ತಿರಲಿಲ್ಲ ಎನ್ನುವುದಕ್ಕೆ ಫೋಟೋ ಸಾಕ್ಷಿಗಳಿವೆ, ಹಾಗಿದ್ದರೂ ಪ್ರತಿಭಟನೆಗಳು ಆರಂಭವಾದವು. ಸರಣಿ ಅರ್ಜಿಗಳು ಕೋರ್ಟ್‌ ಮುಂದೆ ಬಂದವು. ವಾದಿಸಲು ದೇಶದ ಹಿರಿಯ ವಕೀಲರನ್ನು ನೇಮಿಸಲಾಗಿದೆ. ಇದೆಲ್ಲವೂ ತನ್ನಷ್ಟಕ್ಕೇ ನಡೆಯುತ್ತಿರುವುದಲ್ಲ ಎಂದು ಝಾ ಹೇಳಿದರು. ಅದಕ್ಕೆ, ನಾವು ಊಹೆಗಳನ್ನು ನಂಬುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಹಿಜಾಬ್‌ ಸಂಘರ್ಷದ ಪರಿಣಾಮ ವಾಗಿ ಹರ್ಷ ಎಂಬ ಯುವಕನ ಹತ್ಯೆ ನಡೆದಿದೆ. ಅದರ ಹಿಂದೆ ಸಿಎಫ್ಐ ಇದೆ ಎಂಬ ಮಾಹಿತಿ ಇದೆ ಎಂದು ಝಾ ಹೇಳಿದರು. ಆ ಘಟನೆ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ನಾವು ಯಾವೂದನ್ನೂ ಊಹಿಸುವುದಿಲ್ಲ. ಸಂಘಟನೆ ಬಗ್ಗೆ ವರದಿ ನೀಡುವಂತೆ ಸರಕಾರಕ್ಕೆ ಹೇಳಿದ್ದೇವೆ. ನಿಮ್ಮ ವಾದ ನ್ಯಾಯಾಲಯ ಕೇಳಿದೆ ಎಂದು ಮುಖ್ಯ ನ್ಯಾ| ಹೇಳಿದರು.

ಇಸ್ಲಾಮಿ ಸಂಘಟನೆಗಳ ಪಾತ್ರ: ಝಾ
ಹಿಜಾಬ್‌ ವಿವಾದ ಉಲ್ಬಣಗೊಳ್ಳಲು ಕೆಲ ಇಸ್ಲಾಮಿ ಸಂಘಟನೆಗಳ ಪಾತ್ರವಿದೆ. ಸಿಎಫ್ಐ, ಪಿಎಫ್ಐ, ಎಸ್‌ಐಒ, ಜಮಾತೆ ಇಸ್ಲಾಮಿ ಸಂಘಟನೆಗಳು ಭಾಗಿಯಾಗಿವೆ. ಅವುಗಳಿಗೆ ಸೌದಿಯಿಂದ ಆರ್ಥಿಕ ನೆರವು ಸಿಗುತ್ತಿದೆ ಎನ್ನುವ ಬಗ್ಗೆ ಮಾಧ್ಯಮಗಳ ವರದಿಯಿದೆ. ಭಾರತವನ್ನು ಇಸ್ಲಾಮೀಕರಣ ಮಾಡುವುದು ಆ ಸಂಘಟನೆಗಳ ಉದ್ದೇಶ. ಸಿಬಿಐ ಅಥವಾ ಎನ್‌ಐಎ ತನಿಖೆಗೊಳಪಡಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ವಕೀಲ ಝಾ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ಹೋರಾಟದ ಹಿಂದೆ ಕೆಲ ಸಂಘಟನೆಗಳ ಪಾತ್ರವಿದೆ. ಅದನ್ನು ಸಿಬಿಐ ಅಥವಾ ಎನ್‌ಐ ತನಿಖೆಗೆ ವಹಿಸಬೇಕು ಎಂದು ನೀವು ಅರ್ಜಿ ಸಲ್ಲಿಸಿದ್ದೀರಿ. ಆದರೆ, ಅದನ್ನು ಋಜುವಾತುಪಡಿಸಲು ನಿಮ್ಮ ಬಳಿ ದಾಖಲೆಗಳು ಇದ್ದಾವೆಯೇ? ಇದ್ದರೆ, ನಾವು ಪರಿಗಣಿಸಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next