Advertisement

ಚಿದು ವಾದಿಸಿದ ಕೇಸಲ್ಲಿ ವಾರೆಂಟ್‌ಗೆ ಹೈ ತಡೆ 

12:56 PM May 31, 2017 | Team Udayavani |

ಬೆಂಗಳೂರು: ಕಾರ್ಮಿಕ ಕಾಯಿದೆ ಉಲ್ಲಂಘನೆ ಆರೋಪ ಸಂಬಂಧ ನಗರದ “ಮೆಟ್ರೋ ಕ್ಯಾಶ್‌ ಅಂಡ್‌ ಕ್ಯಾರಿ ಇಂಡಿಯಾ’ ಕಂಪೆನಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಅಧೀನ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರಹಿತ ವಾರೆಂಟ್‌ಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

Advertisement

 ಅಧೀನ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರಹಿತ ವಾರೆಂಟ್‌ ರದ್ದುಗೊಳಿಸುವಂತೆ ಕೋರಿ ಕಂಪೆನಿಯ ನಿರ್ದೇಶಕರಿಬ್ಬರು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ಕೇಂದ್ರ ಮಾಜಿ ಸಚಿವ ಹಾಗೂ ಹಿರಿಯ ವಕೀಲ ಚಿದಂಬರಂ ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾ.ರತ್ನಕಲಾ ಅವರಿದ್ದ ಪೀಠ ಜಾಮೀನು ರಹಿತ ವಾರೆಂಟ್‌ಗೆ ತಡೆಯಾಜ್ಞೆ ನೀಡಿತು. 

ಚಿದು ವಾದ ಹೀಗಿತ್ತು: ನ್ಯಾಯಾಲಯದಲ್ಲಿ ದಾಖಲಾದ ಯಾವುದೇ ದೂರಿನ ಸಂಬಂಧ ಮೊದಲು ನೋಟೀಸ್‌ ಜಾರಿಗೊಳಿಸಿ, ಬಳಿಕ  ಜಾಮೀನು ಸಹಿತ ವಾರೆಂಟ್‌ ಹೊರಡಿಸಬೇಕು. ಆಗಲೂ ವಿಚಾರಣೆಗೆ ಹಾಜರಾಗದಿದ್ದರೆ ಅಂತಿಮವಾಗಿ ಜಾಮೀನು ರಹಿತ ವಾರೆಂಟ್‌ ಹೊರಡಿಸಬೇಕು. ಆದರೆ ಈ ಪ್ರಕರಣದಲ್ಲಿ ನಿಗದಿತ ಕಾನೂನು ನಿಯಮಗಳನ್ನು ಪಾಲಿಸದೇ ನಮ್ಮ ಕಕ್ಷಿದಾರರಿಗೆ ಅಧೀನ ನ್ಯಾಯಾಲಯ ಏಕಾಏಕಿ ಜಾಮೀನು ರಹಿತ ವಾರೆಂಟ್‌ ಹೊರಡಿಸಿರುವುದು ಕಾನೂನು ಬಾಹಿರ.

ಹೀಗಾಗಿ ಅಧಿನ ನ್ಯಾಯಾಲಯದ ವಾರೆಂಟ್‌ ರದ್ದುಗೊಳಿಸಬೇಕು ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳಿಗೂ ತಡೆನೀಡಬೇಕು ಎಂದು ಮನವಿ ಕೋರಿದರು. ಈ ವಾದ ಪುರಸ್ಕರಿಸಿದ ನ್ಯಾಯಪೀಠ, “ಮೆಟ್ರೋ ಕ್ಯಾಷ್‌ ಅಂಡ್‌ ಕ್ಯಾರಿ’ ಮಾಲೀಕರ ವಿರುದ್ಧದ ಜಾಮೀನು ರಹಿತ ವಾರಂಟ್‌ಗೆ, ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಿತು. ಈ ಅರ್ಜಿಯ ಸಂಬಂಧ ಎರಡು  ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರದ ಪರ  ವಕೀಲರಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next