Advertisement

ಅವನು ಗೆಳೆಯ “ನಲ್ಲ’

05:52 PM Aug 06, 2019 | Sriram |

ಮೆಟ್ಟಿಲು ಇಳಿದು ಫೀಲ್ಡ… ನಲ್ಲಿ ಓಡುವಾಗ ಅವಳ ದುಪ್ಪಟ್ಟಾ ಬಿದ್ದು, ಗೆಜ್ಜೆ ಕಳಚಿ ಹೋಯ್ತು. ಇದ್ಯಾವುದರ ಪರಿವೆಯೇ ಇಲ್ಲ ಅವಳಿಗೆ. ಕಣ್ಣಂದಾಜು ದೂರದಲ್ಲಿ ಅವನಿದ್ದ. ನೋಡ ನೋಡುತ್ತಿದ್ದಂತೆ ಆತ ಅದ್ಯಾವುದೋ ಬೈಕ್‌ ಹತ್ತಿ ಹೊರಟುಬಿಟ್ಟ…ಅವಳ ಓಟದ ರಭಸ ಹೆಚ್ಚಾಯಿತು.

Advertisement

ಹಾಲ್‌ ಕಿಕ್ಕಿರಿದು ತುಂಬಿದೆ. ಅಲ್ಲೊಂದು ಪ್ರತಿಷ್ಠಿತ ಸಂವಾದ- ಚರ್ಚಾಕೂಟ. ಅಪ್ಪ-ಅಮ್ಮ ಎಲ್ಲರಿಂದ ಖಾಸಗಿ ಕಾರ್ಯಕ್ರಮ ತಪ್ಪಿಸಿ ಈ ಸಂವಾದಕ್ಕೆ ಹಾಜರಾಗುವ ಹೊತ್ತಿಗೆ ಅರ್ಧ ಮುಗಿದು ಹೋಗಿ, ನಂತರದ ಗ್ರೂಪ್‌ ಡಿಬೇಟ್‌ ಆರಂಭವಾಗಿತ್ತು. ತಡವಾಗಿದ್ದರಿಂದ ಹಿಂದಿನ ಸಾಲಿನ ಬೆಂಚಿನಲ್ಲಿ ತೂರಿಕೊಂಡೆವು..

ಆ ಗುಂಪಿಗೊಬ್ಬ ನಾಯಕ, ಈ ಗುಂಪಿಗೊಬ್ಬ : ಚರ್ಚೆ ಬಹುಗಂಭೀರವಾಗಿ ಸಾಗಿತ್ತು. ಮಧ್ಯೆ ದಿಢೀರ್‌ ಅಂತ ಬಂದದ್ದು ಅನಂತಮೂರ್ತಿಯವರ ನಿಧನದ ಸುದ್ದಿ. ಅಲ್ಲಿ ಅವರ ಆರಾಧಕರು, ವಿರೋಧಿಗಳು ಎರಡೂ ಬಣದವರಿದ್ದರು. ಹಾಗಾಗಿ, ವಾದಗಳು ಶುರುವಾದವು. ನಾವು ಕೂತಿದ್ದ ಗುಂಪಿನವ ಅವರನ್ನು ಓದಿಕೊಂಡವನಿರಬೇಕು. ಒಳ್ಳೇ ನಿದರ್ಶನಗಳೊಂದಿಗೆ ವಾದ ಮೊದಲಿಟ್ಟ. ಕಲಾವಿದರನ್ನು ರಾಜಕೀಯ ವ್ಯಕ್ತಿ ಎಂದು ಗುರುತಿಸುವ ಮೊದಲು, ಅವರ ಕಲೆಯ ಆಳಕ್ಕೆ ಬೆಲೆ ನೀಡಬೇಕು ಎನ್ನುವಂಥ ಗಂಭೀರ ಧ್ವನಿಯಲ್ಲಿ ಸ್ವಲ್ಪವೂ ಅಳುಕಿಲ್ಲದೇ ಈತ ವಾದಿಸುತ್ತಲೇ ಹೋದ. ಆ ಕಡೆಯವ ರಾಜಕೀಯ ಒಲವಿದ್ದವನಿರಬೇಕು….ಧ್ವನಿ ಎತ್ತರಿಸುತ್ತಾ ಹೋಗಿ, ಕಡೆಗೆ ಎರಡೂ ಗುಂಪು ಎದ್ದು ಬಡಿದಾಟಕ್ಕೆ ನಿಲ್ಲುವ ಮಟ್ಟಕ್ಕೆ ಹೋಯ್ತು. ಈ ವಾದದ ಗಲಭೆಯಲ್ಲಿ ಪಕ್ಕದಲ್ಲಿದ್ದ ಹಿಮಾಳನ್ನ ಗಮನಿಸಲೇ ಇಲ್ಲ. ನೋಡಿದರೆ ಎದ್ದು ಬೆಂಚಿನ ಮೇಲೆ ನಿಂತು ನಮ್ಮ ಗುಂಪಿನಲ್ಲಿ ವಾದ ಮಂಡಿಸುತ್ತಿದ್ದವನನ್ನು ತದೇಕವಾಗಿ ನೋಡುತ್ತಿದ್ದಾಳೆ. ಎಲ್ಲರೂ ಎದ್ದು ನಿಂತಿದ್ದರಿಂದ ಸಹಜವಾಗಿ ಆತ ಕಾಣುತ್ತಿಲ್ಲ. ಕೆಳಗಿಳಿದು ಕುಳಿತಳವಳತ್ತ ನೋಡಿದರೆ ಸಣ್ಣಗೆ ಬೆವತಿದ್ದಾಳೆ.

ದಿಗ್ಬಮೆಯಿಂದ ಏನಾಯ್ತು ಅಂದೆ…..
ಅವಳ ಉಸಿರು ತಿರುಗುತ್ತಿಲ್ಲ- ಕೈ ಮಾತ್ರ ಮುಂದಿನ ಸೀಟಿನ ಕಡೆ ಹೋಯ್ತು. ಅಷ್ಟರಲ್ಲಿ ಅರಚಾಟ ಜೋರಾಗಿ, ಸಂವಾದ ನಿಂತು ಎಲ್ಲರೂ ಒಮ್ಮೆಲೇ ಕದಲಲು ಆರಂಭಿಸಿದ್ದರಿಂದ ಸಂದಣಿ ಹೆಚ್ಚಾಯ್ತು. ಇವಳ ಏದುಸಿರಿನ ತೀವ್ರತೆ ಕೂಡ ಏರುತ್ತಲೇ ಹೋಯ್ತು. ಇದೇನಾಯ್ತು ದೇವರೇ ಅಂದುಕೊಂಡು, ನೀರಿನ ಬಾಟಲ್‌ಗೆ ಕೈಹಾಕಿ ತೆಗೆಯುವಷ್ಟರಲ್ಲಿ ಪಕ್ಕದಲ್ಲಿ ಇವಳಿಲ್ಲ..

ನೋಡಿದರೆ, ಒಂದೇ ಓಟಕ್ಕೆ ಆ ಸಂದಣಿ ಭೇದಿಸಿ ವೇದಿಕೆಯ ಹತ್ತಿರ ಎಂಟ್ರಿ ಲಿಸ್ಟ್‌ ಮಾಡುತ್ತಿದ್ದವರ ಬಳಿ ತಲುಪಿ ಅನಂತಮೂರ್ತಿ ಯವರ ಪರ ಮಾತಾಡುತ್ತಿದ್ದ ಆತನ ವಿವರ ಪಡೆಯುತ್ತಿದ್ದಾಳೆ. ಮೊಬೈಲ್‌ ನಂ, ಈಗ ಆತ ಧರಿಸಿದ್ದ ಬಟ್ಟೆ ಕಲರ್‌ ಇತ್ಯಾದಿ ವಿವರ ಪಡೆದವಳೇ ಒಂದೇ ಉಸುರಿಗೆ ಓಡಲು ಆರಂಭಿಸಿದಳು. ನಾನು ಮಹಡಿಯಿಂದ ಅವಳನ್ನು ದಿಟ್ಟಿಸುವುದು ಬಿಟ್ಟು ಬೇರೆ ದಾರಿ ಉಳಿಯಲಿಲ್ಲ. ಮೆಟ್ಟಿಲು ಇಳಿದು ಫೀಲ್ಡ… ನಲ್ಲಿ ಓಡುವಾಗ ಅವಳ ದುಪ್ಪಟ್ಟಾ ಬಿದ್ದು, ಗೆಜ್ಜೆ ಕಳಚಿ ಹೋಯ್ತು. ಇದ್ಯಾವುದರ ಪರಿವೆಯೇ ಇಲ್ಲ ಅವಳಿಗೆ. ಕಣ್ಣಂದಾಜು ದೂರದಲ್ಲಿ ಅವನಿದ್ದ. ನೋಡ ನೋಡುತ್ತಿದ್ದಂತೆ ಆತ ಅದ್ಯಾವುದೋ ಬೈಕ್‌ ಹತ್ತಿ ಹೊರಟುಬಿಟ್ಟ…

Advertisement

ಅವಳ ಓಟದ ರಭಸ ಹೆಚ್ಚಾಯಿತು. ಆಳದ ಭಾವತೀವ್ರತೆ ತಡೆಯದೇ ಆತ ಹೋದತ್ತ ದಿಟ್ಟಿಸುತ್ತಾ ನಿಂತಲ್ಲೇ ಕುಸಿದಳು. ಸುತ್ತ ಇದ್ದವರು ಎತ್ತಿ ಬೆಂಚ್‌ ಮೇಲೆ ಕೂರಿಸಿದರು. ಬೆವೆತು – ತೊಯ್ದು ತೊಪ್ಪೆಯಾಗಿದ್ದಾಳೆ ಹಿಮಾ. ಹಾರ್ಟ್‌ ಅಟ್ಯಾಕ್‌ ಆಗುವಾಗ ಇದು ಮೊದಲ ಲಕ್ಷಣ ಅನ್ನೋ ಭಯ ಎಲ್ಲರನ್ನೂ ಆವರಿಸಿತು.

ಅವಳಿಗಿಂತ ಹೆಚ್ಚು ಕುಸಿಯುವ ಸರದಿ ನನ್ನದು. ಎಂಥ ಗಂಭೀರ ಹುಡುಗಿ, ಏನಾಯ್ತು ಇವಳಿಗೆ? ಸಹಸ್ರ ಪ್ರಶ್ನೆಗಳು.ಪೇಪರ್‌ನಲ್ಲಿ ಗಾಳಿ ಹಾಕುತ್ತಾ ಸ್ವಲ್ಪ ನೀರು ಕುಡಿಸಿದೆ. ತೆರೆದ ಅವಳ ಪೇಲವ ಕಣ್ಣುಗಳು ಮತ್ತದೇ ಹುಡುಕಾಟ ನಡೆಸಿದವು. ಜ್ವರ ಸುಡುತ್ತಿತ್ತು.

ಇವಳನ್ನು ಅಲ್ಲೇ ಹತ್ತಿರದಲ್ಲೇ ಇದ್ದ ಚಿಕ್ಕ ಹೋಟೇಲಿಗೆ ಕರೆದೊಯ್ದು ಅವಳ ಅತೀ ಪ್ರಿಯವಾದ ಪಲಾವ್‌ಗೆ ಆರ್ಡರ್‌ ಮಾಡಿದೆ.

ಒಂದೆರಡು ಸ್ಪೂನ್‌ ಪಲಾವ್‌ ತಿಂದವಳೇ, ಅದೇನು ತೋಚಿತೋ… ಕಣ್ಮುಚ್ಚಿ ಅದೇನು ಧ್ಯಾನಿಸಿದಳ್ಳೋ. ಬ್ಯಾಗ್‌ ನಲ್ಲಿದ್ದ ಪ್ಯಾರಾಸಿಟಮಲ್‌ ಮಾತ್ರೆಗಳನ್ನು ಎರಡೆರಡು ಒಟ್ಟಿಗೇ ತೆಗೆದುಕೊಂಡಳು. ಐದಾರು ನಿಮಿಷ ಸೀಟಿಗೆ ಹಿಂದಕ್ಕೊರಗಿ ಕಣ್ಮಚ್ಚಿದಳು. ನಾನು ಆಂಟಿಗೆ ಫೋನ್‌ ಮಾಡೊದಕ್ಕಿಂತ ಅವಳಕ್ಕನಿಗೆ ಫೋನ್‌ ಮಾಡುವುದು ಸೂಕ್ತವಾ ಅಂತ ಯೋಚಿಸುತ್ತಾ ಕೂತೆ…..

ಏಳೆಂಟು ನಿಮಿಷ ಕಳೆದಿರಬೇಕು. ಅದೇನು ತೋಚಿತೋ ದಿಗ್ಗನೆ ಎದ್ದಳು…ನನಗೋ ಯಾವುದೋ ಹಾರರ್‌ ಮೂವಿ ಲೈವ್‌ ನೋಡುತ್ತಿರುವಂತೆ… ಮತ್ತೆಲ್ಲಿಗೆ ಓಡುತ್ತಾಳ್ಳೋ ಅಂತ ನೋಡುತ್ತಿದ್ದೆ. ತಕ್ಷಣ ಗಾಡಿಯ ಕೀ ನನ್ನ‌ತ್ತ ಚಾಚಿದಳು. ಮನೆಕಡೆ ತಿರುಗಿಸು ಅಂದಳು. ಅವಳ ಜ್ವರ ಏರುತ್ತಲೇ ಇದೆ. ಪಕ್ಕ ಕೂತರೆ ಜ್ವಾಲೆ.

ಮನೆ ಹತ್ತಿರವಾಗುತ್ತಿದ್ದಂತೆ, ಗಾಡಿಯಿಂದ ಹಾರಿದವಳೇ ತನ್ನ ರೂಂ ತಲುಪಿ ಹಳೆಯ ಬ್ಯಾಗ್‌ ತೆರೆದಳು. ಅದರಲ್ಲಿ ಕಸೂತಿ ವರ್ಕ್‌ ಇದ್ದ ಒಂದು ಮರದ ಪೆಟ್ಟಿಗೆ ತೆಗೆದಳು. ಹಿಮಾ ಏನು ಮಾಡುತ್ತಿದ್ದಾಳೆಂದೇ ತಿಳಿಯದೆ ನಾನು ಸುಮ್ಮನೆ ನಿಂತೆ.

ಆ ಪೆಟ್ಟಿಗೆ ನೋಡಿದವಳೇ, ಅದೆಷ್ಟೋ ವರ್ಷಗಳಿಂದ ಭೂಮಿಯನ್ನು ಬಗೆದು ಹೊರತೆಗೆದ ಸಾಹಸ ಮೆರೆದಂತೆ ನಿರುಮ್ಮಳವಾಗಿ ನಕ್ಕಳು. ನನ್ನ ಕೈ ಹಿಡಿದು ಎಳೆದು ಬೆಡ್‌ ಮೇಲೆ ಕೂರಿಸಿ, ಪುಟವೊಂದನ್ನು ತೆರೆದು ಓದುತ್ತಾ, ಜೋರಾಗಿ ಅಳಲು ಆರಭಿಸಿದಳು. ಕೆಲವು ನಿಮಿಷ ಅತ್ತ ಮೇಲೆ ಅದೇ ಡೈರಿಯ ಮತ್ತೂಂದು ಪುಟ ತೆಗೆದು ಇದನ್ನು ಓದು ಅಂತ ನನ್ನ ಕೈಗಿಟ್ಟಳು.. ಆ ಡೈರಿ ಹಿಡಿದು ಅದೆಷ್ಟು ಸಲ ಅತ್ತಿದ್ದಳ್ಳೋ..ಅಲ್ಲಲ್ಲಿ ಅಕ್ಷರ ಕಣ್ಣೀರಿಂದ ಮುಸುಕಾಗಿತ್ತು. ನಾನು ಓದುತ್ತಾ ಸಣ್ಣಗೆ ಬೆವೆಯುತ್ತಾ ಹೋದೆ. ಬಹುಶಃ ಹತ್ತು ವರ್ಷ ಹಿಂದಿನ ಡೈರಿ ಅದು… ಈಗಿನ ಕಾಲದಲ್ಲೂ ಇಂಥವು ಘಟಿಸುತ್ತವಾ ಅಥವಾ ಅವಳು ನಂಬಿದ ದೈವ ತೋರಿದ ದಾರಿಯಾ..

ಇಷ್ಟು ವರ್ಷ್‌ ಇವಳನ್ನ ನಾವೆಲ್ಲಾ ಅಂದಿರುವುದು ಒಂದಾ- ಎರಡಾ. ಭಾವನೆಗಳೇ ಇಲ್ಲದವಳು- ಸೂರ್ಯನಂಥ ಸೂರ್ಯನೂ ಕೂಡ ಇವಳ ಭಾವನೆ ತಿರುಗಿಸದೇ ಹೋದ…ಚಿಕ್ಕ ಡೈವರ್ಷನ್‌ ಕೂಡ ಇಲ್ಲದೇ ಹೀಗೆ ಬದುಕಲು ಸಾಧ್ಯ ವಾ ಹಿಮಾಳ ಬಗ್ಗೆ ಎಷ್ಟೆಲ್ಲಾ ಬೈದೆವು ಮಾತಾಡಿದೆವು.

ಒಂದು ಲವಲೇಶ ಅನುಮಾನವೂ ಇಲ್ಲದೇ ಆ ಗಳಿಗೆಯಿಂದಲೇ ಅವನ ಇಹ-ಪರಗಳ ಬಗ್ಗೆ ಒಂದಂಶ ತಿಳಿಯದಿದ್ದರೂ ಆಕೆ ಅವನವಳಾದ ಕತೆ ನನ್ನ ಅದೆಷ್ಟು ಕದಲಿಸಿತೆಂದರೆ. ಅವಳಿಗಿಂತ ಜೋರಾಗಿ ಬಿಕ್ಕಿ ಅತ್ತೆ…..

ಒಳಗೆ ಬಂದು ನೋಡಿದರೆ, ಹಿಮ ಡೈರಿ ಅಪ್ಪಿಕೊಂಡು ನಿರಾಳವಾಗಿ ನಿದ್ದೆ
ಹೋಗಿದ್ದಳು. ಅದೆಷ್ಟೋ ಜನುಮಗಳಿಂದ ಯಾರಿಗಾಗಿಯೋ ತಪಿಸಿ ಇಂದು ಪೂರ್ಣಗೊಂಡಂತೆ…..

-ಮಂಜುಳಾ ಡಿ.

Advertisement

Udayavani is now on Telegram. Click here to join our channel and stay updated with the latest news.

Next