ಬೆಂಗಳೂರು: ಮದ್ಯದ ಅಮಲಿನಲ್ಲಿ ಪತಿಯೇ ಪತ್ನಿಯನ್ನು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಸಣವಾಡಿಯ ಎ.ಕೆ.ಕಾಲೋನಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಎ.ಕೆ.ಕಾಲೋನಿ ನಿವಾಸಿ ವೆಂಕಟಲಕ್ಷ್ಮೀ (38) ಮೃತರು. ಪತಿ ಶಂಕರ್ (45) ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜೀವನಹಳ್ಳಿಯ ವೆಂಕಟಲಕ್ಷಿ 20 ವರ್ಷಗಳ ಹಿಂದೆ ಶಂಕರ್ನನ್ನು ವಿವಾಹವಾಗಿದ್ದು, ದಂಪತಿಗೆ 18 ವರ್ಷದ ಪುತ್ರ ಇದ್ದಾನೆ.
ಶಂಕರ್ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ವಿಪರೀತ ಮದ್ಯ ಸೇವಿಸುತ್ತಿದ್ದ. ಆರಂಭದಲ್ಲಿ ಜೀವನಹಳ್ಳಿಯಲ್ಲಿ ವಾಸವಿದ್ದ ದಂಪತಿ, ಎರಡು ವರ್ಷಗಳ ಹಿಂದೆ ಬಾಣಸವಾಡಿಯ ಎ.ಕೆ.ಕಾಲೋನಿಗೆ ಸ್ಥಳಾಂತರಗೊಂಡಿದ್ದರು. ಮದ್ಯದ ಅಮಲಿನಲ್ಲಿದ್ದ ಶಂಕರ್, ಭಾನುವಾರ ಬೆಳಗ್ಗೆ ಪತ್ನಿ ವೆಂಕಟಲಕ್ಷಿ ಜತೆ ಜಗಳವಾಡಿದ್ದಾನೆ.
ಇದು ವಿಕೋಪಕ್ಕೆ ಹೋಗಿದ್ದು, ಶಂಕರ್ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿ ಕುತ್ತಿಗೆಗೆ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಕೊನೆಯುಸಿರೆಳೇದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯನ್ನು ಕಂಡು ಗಾಬರಿಗೊಂಡ ಶಂಕರ್,
ಅದೇ ಚಾಕುವಿನಿಂದ ತನ್ನ ಕುತ್ತಿಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳೀಯರು ಕೂಡಲೇ ಶಂಕರ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಶಂಕರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.