Advertisement

ಗೊಂದಲಕ್ಕೆಡೆ ಮಾಡುವ ಹೆಮ್ಮಾಡಿ ಜಂಕ್ಷನ್‌

11:32 PM Jun 25, 2019 | Team Udayavani |

ಹೆಮ್ಮಾಡಿ: ಕುಂದಾಪುರದಿಂದ ಕೊಲ್ಲೂರು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮಖ ಪ್ರದೇಶವಾದ ಹೆಮ್ಮಾಡಿ ಜಂಕ್ಷನ್‌ನಲ್ಲಿ ಈಗ ಅರೆಬರೆ ಹಾಗೂ ಅವೈಜ್ಞಾನಿಕ ತಿರುವಿನ ಹೆದ್ದಾರಿ ಕಾಮಗಾರಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಪಾಯ ಆಹ್ವಾನಿಸುವಂತಿದೆ.

Advertisement

ಕುಂದಾಪುರದಿಂದ ಗಂಗೊಳ್ಳಿ, ಬೈಂದೂರು ಕಡೆಗಳಿಗೆ ಸಂಚರಿಸುವ ವಾಹನಗಳಿಗೆ ಹೆಮ್ಮಾಡಿಯಿಂದ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೆಮ್ಮಾಡಿ ಸರ್ಕಲ್ನಲ್ಲಿ ತಿರುವು ಕೊಟ್ಟಿದ್ದ ರಿಂದ ಈ ಭಾಗದಲ್ಲಿ ದಿನನಿತ್ಯವೂ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.

ಕೊಲ್ಲೂರು ರಸ್ತೆಯಿಂದ ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವಸ್ಥಾನದ ರಸ್ತೆ ಪ್ರವೇಶಿಸುವವರು ಗೊಂದಲದಲ್ಲಿಯೇ ರಸ್ತೆ ದಾಟಬೇಕಾದ ಸ್ಥಿತಿ ಇದೆ. ಎರಡೂ ರಸ್ತೆಗಳಲ್ಲಿ ಬರುವ ವಾಹನಗಳು ಹೆಮ್ಮಾಡಿ ಜಂಕ್ಷನ್‌ ಬಳಿ ಒಂದೇ ರಸ್ತೆಗೆ ಸಂಧಿಸುವುದರಿಂದ ಸಮಸ್ಯೆಯಾಗುತ್ತಿದೆ.

ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ

ಹೆಮ್ಮಾಡಿ ಪೇಟೆ ಭಾಗದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಪೇಟೆಯಿಂದ ಬರುವ ಕೊಳಚೆ ನೀರೆಲ್ಲ ಭಟ್ರಬೆಟ್ಟು ರಸ್ತೆ ಮೂಲಕ ಕೃಷಿ ಗದ್ದೆಗಳಿಗೆ ಪ್ರವೇಶಿಸುತ್ತಿದೆ. ನೀರು ರಸ್ತೆಯ ಮೇಲೆ ಹೋಗುವುದರಿಂದ ಭಟ್ರಬೆಟ್ಟು ರಸ್ತೆ ಸಂಪೂರ್ಣ ಹಾಳಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಇದೇ ರೀತಿ ಇದೆ.

Advertisement

ಸೇತುವೆ ಕಾಮಗಾರಿ ವಿಳಂಬ

ರಾಜಾಡಿ ಹಳೆ ಸೇತುವೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದ ಗುತ್ತಿಗೆ ಕಂಪೆನಿ ಈಗ ಕಾಮಗಾರಿಯನ್ನು ನಿಲ್ಲಿಸಿ ಹಲವು ದಿನಗಳಾಗಿದೆ. ಇದರ ದುರಸ್ತಿ ಪೂರ್ಣವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಹೆಮ್ಮಾಡಿಯಲ್ಲಿನ ಸಮಸ್ಯೆ ದೂರವಾಗಬಹುದು.

ಮಳೆಯಿಂದ ವಿಳಂಬ

ಹೆಮ್ಮಾಡಿಯಲ್ಲೂ ಸರ್ಕಲ್ ಮಾಡಲಿದ್ದೇವೆ. ಅಲ್ಲಿ ಸ್ಥಳಾವಕಾಶದ ಕೊರತೆಯಿದ್ದು, ಭೂಸ್ವಾಧೀನ ಮಾಡಿಕೊಳ್ಳದ ಕಾರಣ ತಾತ್ಕಾಲಿಕವಾಗಿ ಕ್ರಾಸಿಂಗ್‌ಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಹೆಮ್ಮಾಡಿ ಸರ್ಕಲ್ ಸಮಸ್ಯೆಯ ಬಗ್ಗೆ ಈಗಾಗಲೇ ಎಸಿಯವರಿಗೂ ತಿಳಿಸಿದ್ದೇವೆ. ರಾಜಾಡಿ ಸೇತುವೆ ಕಾಮಗಾರಿ ಪೂರ್ಣಗೊಂಡರೆ ಅರ್ಧದಷ್ಟು ಸಮಸ್ಯೆ ಪರಿಹಾರವಾಗುತ್ತದೆ.
– ಯೋಗೇಂದ್ರಪ್ಪ,ಐಆರ್‌ಬಿ ಪ್ರಾಜೆಕ್ಟ್ ಮ್ಯಾನೇಜರ್‌
Advertisement

Udayavani is now on Telegram. Click here to join our channel and stay updated with the latest news.

Next