Advertisement

ಹೇಮರಡ್ಡಿ ಮಲ್ಲಮ್ಮ ಆದರ್ಶ ಮಾದರಿ: ಸಚಿವ ಎಚ್‌.ಕೆ.ಪಾಟೀಲ

05:29 PM Aug 07, 2024 | Team Udayavani |

ಉದಯವಾಣಿ ಸಮಾಚಾರ
ಮುಧೋಳ: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ ಆದರ್ಶವನ್ನು ಅಳವಡಿಸಿಕೊಂಡು ಎಲ್ಲರೂ ಜೀವನದಲ್ಲಿ ಯಶಸ್ಸು ಸಾಧಿಸೋಣ ಎಂದು ಕಾನೂನು ಮತ್ತು ಸಂಸದೀಯ ಮಂಡಳಿ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

Advertisement

ಮೆಟಗುಡ್ಡ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾಸಾ ದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಹಾಗೂ ಹೇಮ-ವೇಮ ಸಭಾಭವನ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೆಟಗುಡ್ಡ ಗ್ರಾಮದಲ್ಲಿ ಸಮಾಜದ ರಚನಾತ್ಮಕ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಹಿಂದಿನ ದಿನಮಾನದಲ್ಲಿ ಹೇಮರಡ್ಡಿ ಮಲ್ಲಮ್ಮನನ್ನು ಕೇವಲ ಜ.19ರಂದು ಮಾತ್ರ ನೆನಪಿಸಿಕೊಳ್ಳುತ್ತಿದ್ದರು. ಆದರೆ, ಇಂದಿನ ದಿನಮಾನದಲ್ಲಿ ಎರೆಹೊಸಳ್ಳಿ ಶ್ರೀಗಳ ಪರಿಶ್ರಮದಿಂದ ಪ್ರತಿಯೊಂದು ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿರುವುದರಿಂದ ಮನೆ ಮನೆಗೂ ಹೇಮರಡ್ಡಿ ಮಲ್ಲಮ್ಮನ ಮಹಿಮೆ ತಲುಪುವಂತಾಗಿದೆ ಎಂದರು.

ಮಹಾಯೋಗಿ ವೇಮನರು ಜಗತ್ತು ಕಂಡ ಮಹಾನ್‌ ಯೋಗಿಯಾಗಿದ್ದಾರೆ. ಅವರ ಸಾಹಿತ್ಯ, ಸಂದೇಶ, ಮಾರ್ಗದರ್ಶನದಲ್ಲಿ ಎಲ್ಲರೂ ಮುನ್ನಡೆದು ಸಮುದಾಯದ ಜತೆಗೆ ಇತರರಿಗೂ ಮಾದರಿಯಾಗಿ ಜೀವಿಸೋಣ, ಹೇಮರಡ್ಡಿ ಮಲ್ಲಮ್ಮನ ಪ್ರೇರಣೆಯಿಂದ ಮಹಾಯೋಗಿ ವೇಮನ ನಿರೂಪಿತರಾದರು. ನಮ್ಮತನವನ್ನು ನೆನಪಿಸುವ ವೃತ್ತಿಯನ್ನು ಮರೆಯದೆ
ನಮ್ಮ ಸಮಾಜ ಬೇರೆ-ಬೇರೆ ರಂಗದಲ್ಲಿಯೂ ವಿಶೇಷ ಸಾಧನೆ ಮಾಡಿದೆ ಎಂದರು.

ಅನ್ಯಾಯ ಕಂಡಲ್ಲಿ ಪ್ರತಿಭಟನೆಗೆ ನಮ್ಮ ಸಮುದಾಯ ಕೂಡಲೇ ಮುಂದಾಗುತ್ತದೆ. ವೇಮನರ ಚಿಂತನೆಯೊಂದಿಗೆ ನಾವೆಲ್ಲರೂ ಜೀವನದಲ್ಲಿ ಬದುಕಿ ಸುಂದರ ಜೀವನ ನಿರೂಪಿಸಿಕೊಳ್ಳೋಣ ಎಂದರು.

Advertisement

ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಮಾತನಾಡಿ, ಕೌಟುಂಬಿಕ ಬದುಕಿನ ಚಿತ್ರಣ ನೀಡಿದ ಮಲ್ಲಮ್ಮ ಹಾಗೂ ವೇಮನರ ವಚನಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡರೆ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ವೇಮನರ ವಚನಗಳ ಅಧ್ಯಯನದಿಂದ ಜೀವನದಲ್ಲಿ ಬದಲಾವಣೆ ಸಾಧ್ಯ ಎಂದು ತಿಳಿಸಿದರು.

ಎಚ್‌.ಕೆ. ಪಾಟೀಲರ ಇಚ್ಛಾಶಕ್ತಿಯಿಂದಾಗಿ ಈ ಭಾಗದಲ್ಲಿ ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣಗೊಂಡು ಈ ಭಾಗ ನೀರಾವರಿಯಿಂದ ಹಸಿರುಮಯವಾಗಿದೆ ಎಂದು ಚ್‌.ಕೆ.ಪಾಟೀಲರ  ಕಾರ್ಯವೈಖರಿ ಕೊಂಡಾಡಿದರು.

ಸಾರ್ವಜನಿಕ ಜೀವನದಲ್ಲಿ ಜನಪರ ಕಾಳಜಿಯಿಂದ ಕಾರ್ಯನಿರ್ವಹಿಸಿದರೆ ನಮ್ಮ ಸೇವೆಗೆ ಒಂದು ಅರ್ಥಬರುತ್ತದೆ. ಹೇಮರಡ್ಡಿ ಮಲ್ಲಮ್ಮ ಶಾಲೆಗೆ 20 ಹಾಗೂ ಹೇಮರಡ್ಡಿ ಸಮುದಾಯ ಭವನಕ್ಕೆ 10 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ಸಾಮರಸ್ಯತೆಯನ್ನು ಮೈಗೂಡಿಸಿಕೊಂಡಿರುವ ರಡ್ಡಿ ಸಮುದಾಯ ನೋಡಿ ಕಲಿಯುವುದು ಸಾಕಷ್ಟಿದೆ ಎಂದು ಹೇಳಿದರು. ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ, ರಡ್ಡಿ ಸಮುದಾಯ ಹಲವಾರು ದಾರ್ಶನಿಕರನ್ನು ಸಮಾಜಕ್ಕೆ ನೀಡಿದ ಸಮಾಜವಾಗಿದೆ. ದಾರ್ಶನಿಕರ ಸಾಧನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಾಜಿ ಸಚಿವ ಎಸ್‌.ಆರ್‌. ಪಾಟೀಲ ಮಾತನಾಡಿ, ಹೇಮ-ವೇಮ ದಾಸೋಹ ಭವನಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂ. ನೀಡಿದರು.
ಎರೆಹೊಸಳ್ಳಿ ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಶ್ರೀಗಳು ಆಶೀರ್ವಚನ ನೀಡಿದರು. ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿದರು. ಶಾಸಕ ಎನ್‌.ಎಚ್‌. ಕೋನರಡ್ಡಿ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ರಾಮಣ್ಣ ತಳೇವಾಡ, ಬಿ.ಆರ್‌.ಪಾಟೀಲ ಯಾವಗಲ್ಲ, ಹೇಮ-ವೇಮ ಸಂಸ್ಥೆ ಅಧ್ಯಕ್ಷ ದಯಾನಂದ ಪಾಟೀಲ, ಅರಳಿಕಟ್ಟಿ ಫೌಂಡೇಶನ್‌ ಅಧ್ಯಕ್ಷ ತಿಮ್ಮಣ್ಣ ಅರಳಿಕಟ್ಟಿ, ವಿ.ಆರ್‌. ನಾಡಗೌಡ, ಶಿವನಗೌಡ ನಾಡಗೌಡ, ಸುರೇಶ ಮಾಸರಡ್ಡಿ, ಎಸ್‌.ಟಿ.ಪಾಟೀಲ, ಸತೀಶ ಬಂಡಿವಡ್ಡರ ಸೇರಿದಂತೆ ಇತರರು ಇದ್ದರು.

ಶ್ರಮಪಟ್ಟು ಹೇಮವೇಮ ಸಂಸ್ಥೆಯವರು ಮಲ್ಲಮ್ಮ ದೇವಸ್ಥಾನ ಹಾಗೂ ಸಮುದಾಯಭವನ ನಿರ್ಮಾಣ ಮಾಡಿದ್ದೀರಿ ಅದನ್ನು ಸಾರ್ವಜನಿಕರು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು.
●ಗೋವಿಂದ ಕಾರಜೋಳ,
ಚಿತ್ರದುರ್ಗ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next