Advertisement

ಈಶ್ವರನ ಸಾಕ್ಷಿಯಾಗಿ ಹೇಳ್ತೀನಿ, ನಮ್ಮಿಬ್ಬರ ಮಧ್ಯೆ ಏನೂ ಇಲ್ಲ

11:22 AM Mar 27, 2017 | Team Udayavani |

ಒಂದೇ ದಿನ ಪ್ರಥಮ್‌ ನಾಲ್ಕು ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರಂತೆ, ಸದ್ಯದಲ್ಲೇ ನಾಯಕನಾಗಿ ಲಾಂಚ್‌ ಆಗುತ್ತಿದ್ದಾರಂತೆ ಎಂಬಂತಹ ಮಾತುಗಳು ಹಲವು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಆದರೆ, ಯಾವ ಚಿತ್ರ ಯಾವಾಗ ಶುರುವಾಗುತ್ತದೆ ಎಂಬ ವಿಷಯ ಮಾತ್ರ ಯಾರಿಗೂ ಗೊತ್ತಿರಲಿಲ್ಲ.

Advertisement

ಹೀಗಿರುವಾಗಲೇ ಪ್ರಥಮ್‌ ನಾಯಕನಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ “ದೇವರಂಥಾ ಮನುಷ್ಯ’ ಎಂಬ ಚಿತ್ರಕ್ಕೆ ಚಾಲನೆ ಸಿಕ್ಕಿದೆ. “ಸಂಜೆ ಮೇಲ್‌ ಸಿಗಬೇಡಿ’ ಎಂಬ ಟ್ಯಾಗ್‌ಲೈನ್‌ ಇರುವ ಈ ಚಿತ್ರದ ಟೈಟಲ್‌ ಬಿಡುಗಡೆ ಸಮಾರಂಭದ ಸಂದರ್ಭದಲ್ಲಿ ಪ್ರಥಮ್‌ ಮಾತನಾಡಿದರು. ನಾಯಕನಾಗಿ ಅಭಿನಯಿಸುತ್ತಿರುವ ಬಗ್ಗೆ, “ಬಿಗ್‌ ಬಾಸ್‌’ ನಂತರದ ದಿನಗಳ ಬಗ್ಗೆ, ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು.

* ಸರಿಯಾಗಿ ಹೇಳಿ, ಎಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೀರಿ ಅಂತ?
ಸದ್ಯಕ್ಕೆ ನಾಲ್ಕು ಚಿತ್ರಗಳನ್ನ ಒಪ್ಪಿಕೊಂಡಿದ್ದೀನಿ. ಇದೊಂದು. ಬಾಬು ರೆಡ್ಡಿ ನಿರ್ಮಾಣದ ಇನ್ನೊಂದು ಚಿತ್ರ. ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ಸೈನ್ಸ್‌ ಫಿಕ್ಷನ್‌. ಆಮೇಲೆ ಇನ್ನೊಂದು. ಒಂದರ ಹಿಂದೊಂದು ಚಿತ್ರ ಮಾಡುತ್ತಿದ್ದೀನಿ. ಮಾತುಕತೆ ಆಗಿ ಅಡ್ವಾನ್ಸ್‌ ತಗೊಂಡೆ.

* ನಿಮ್ಮ ನಿರ್ದೇಶನದ ಚಿತ್ರ ತಡವಾಗ್ತಲೇ ಇದೆ?
ಚಿತ್ರದಲ್ಲಿ ಪುನೀತ್‌ ರಾಜಕುಮಾರ್‌, ಪ್ರಿಯಾಮಣಿ ಹಾಡಿದ್ದಾರೆ. ಭಾರತಿ ವಿಷ್ಣುವರ್ಧನ್‌, ಶ್ವೇತಾ ಬಸು ಮುಂತಾದವರು ನಟಿಸಿದ್ದಾರೆ. ಅವರನ್ನೆಲ್ಲಾ ಸೇರಿಸಿ ಸಿನಿಮಾ ಮಾಡುವುದು ಸ್ವಲ್ಪ ನಿಧಾನವಾಯ್ತು. ಡೇಟ್ಸ್‌ ಸಮಸ್ಯೆ, ಹಣಕಾಸಿನ ತೊಂದರೆ ಇದೆಲ್ಲದರಿಂದ ಚಿತ್ರ ತಡವಾಗಿದ್ದು ಹೌದು. ಇನ್ನು ಏಳು ದಿನಗಳ ಬ್ಯಾಲೆನ್ಸ್‌ ಕೆಲಸ ಇದೆ. ಏಳು ದಿನಗಳ ಚಿತ್ರೀಕರಣ ಮುಗಿಸಿ, ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂಬ ಆಸೆ ನನಗೂ ಇದೆ.

* “ಬಿಗ್‌ ಬಾಸ್‌’ಗೆ ಬಂದವರೊಬ್ಬರ ಜೊತೆಗೆ ಪ್ರಥಮ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ?
ಈಶ್ವರ ಸಾಕ್ಷಿಯಾಗಿ ಹೇಳ್ತೀನಿ ನಮ್ಮಿಬ್ಬರ ಮಧ್ಯೆ ಏನೂ ಇಲ್ಲ. ಇರೋದಾದರೆ ಅದು ಸ್ನೇಹ ಮಾತ್ರ. ಈ ವಿಷಯದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆಯ್ತು. ಆದರೆ, 
ಅವೆಲ್ಲಾ ಸುಳ್ಳು. ನಮ್ಮಿಬ್ಬರ ನಡುವೆ ಒಂದು ಆರೋಗ್ಯಕರ ಸ್ನೇಹ ಇದೆ .

Advertisement

* ನಿರ್ದೇಶಕರಾಗಬೇಕೆಂದು ಬಂದವರು ನೀವು. ಈಗ ಹೀರೋ ಆಗ್ತಿದ್ದೀರಲ್ಲಾ?
ನಿರ್ದೇಶಕನಾಗಿರಬೇಕು ಎಂಬುದು ನನ್ನ ವೈಯಕ್ತಿಕ ಆಸೆ. ಆದರೆ, ನಾನು ನಟಿಸಬೇಕು ಅಂತ ಸ್ನೇಹಿತರು ಬಯಸುತ್ತಿದ್ದಾರೆ. ಅಷ್ಟೇ ಅಲ್ಲ, ಒಬ್ಬ ಹೀರೋ ಆಗಿ ತಯಾರಿ ಮಾಡುತ್ತಿದ್ದಾರೆ. ನನಗೆ ನಟನೆ ಗೊತ್ತಿಲ್ಲ. ಹಾಗಂತ ಹೇಳಿಕೊಳ್ಳುವುದಕ್ಕೆ ನನಗೆ ಯಾವ ಮುಜುಗರವೂ ಇಲ್ಲ. “ದೇವರಂಥಾ ಮನುಷ್ಯ’ ಚಿತ್ರದ ವಿಷಯದ ಬಗ್ಗೆ ಹೇಳುವುದಾದರೆ, ಇಲ್ಲಿ ನಟನೆಗಿಂಥ ಲವಲವಿಕೆ ಮುಖ್ಯ. ನಾನು ನಿಜ ಜೀವನದಲ್ಲಿ ಹೇಗಿದ್ದೀನೋ, ತೆರೆಯ ಮೇಲೂ ಹಾಗೆ ಇರಬಹುದು. ಹಾಗಾಗಿ ಒಪ್ಪಿಕೊಂಡೆ.

* “ಬಿಗ್‌ ಬಾಸ್‌’ನಿಂದ ಹಣ ಬಂತಾ? ಮುಂಚೆ ಘೋಷಿಸಿದಂತೆ ಅದನ್ನು ವಿನಿಯೋಗ ಮಾಡ್ತಾ ಇದ್ದೀರಾ?
“ಬಿಗ್‌ ಬಾಸ್‌’ನಿಂದ ನನಗೆ ಇನ್ನೂ ಹಣ ಬಂದಿಲ್ಲ. ಕಾರಣ ನನ್ನ ಹತ್ತಿರ ಪ್ಯಾನ್‌ಕಾರ್ಡ್‌ ಇರಲಿಲ್ಲ. ಪ್ಯಾನ್‌ಕಾರ್ಡ್‌ಗೆ ಅಪ್ಲೆ„ ಮಾಡಿದ್ದೀನಿ. ದುಡ್ಡು ಬಂದ ನಂತರ ಅದನ್ನು ಏನು ಮಾಡಬೇಕೋ ಅದಕ್ಕೆ ವ್ಯವಸ್ಥೆ ಮಾಡುತ್ತೀನಿ. ನಾನು ಮುಂಚಿನಿಂದಲೂ, “ಈ ಗೆಲುವು ನನ್ನದಲ್ಲ, ಕನ್ನಡಿಗರದ್ದು’ ಎಂದು ಹೇಳಿಕೊಂಡು ಬಂದವನು. ಹಾಗಾಗಿ ಅವರಿಗೆ ಅರ್ಪಣೆ ಮಾಡಿದ್ದೀನಿ. ನನ್ನ ಕೈಗೆ ಇನ್ನೂ ದುಡ್ಡು ಬರದಿದ್ದೂ, ನನ್ನ ಬಳಿ ಎಷ್ಟಿದೆಯೋ ಅದರಲ್ಲೇ ಸಹಾಯ ಮಾಡುತ್ತಿದ್ದೀನಿ.

ನನಗೆ ಒಂದು ವಿಷಯ ಅರ್ಥವಾಗುತ್ತಿಲ್ಲ. ದುಡ್ಡು ಬಂದ ಮೇಲೆ, ಅದನ್ನು ಅವರಿಗೆ ಕೊಟ್ಟೆ ಇವರಿಗೆ ಕೊಟ್ಟೆ ಎಂದು ತೋರ್ಪಡಿಸಿಕೊಳ್ಳಬೇಕಾ? ನಾನು ಕೊಡುತ್ತಿರುವುದು ಆತ್ಮತೃಪ್ತಿಗೆ. ಹಾಗಿರುವಾಗ ಕೊಟ್ಟಿದ್ದನ್ನು ಹೇಳಿಕೊಳ್ಳುವ ನೀಚತನ ಬೇರೊಂದಿಲ್ಲ ಎಂಬುದು ನನ್ನ ಅಭಿಪ್ರಾಯ. ಕೊಡುವ ಮನಸ್ಥಿತಿ ಮುಖ್ಯಾನೋ, ಅದನ್ನು ತೋರ್ಪಡಿಸಿಕೊಳ್ಳೋದು ಮುಖ್ಯಾನೋ ನೀವೇ ಹೇಳಿ? ಹಾಗಾಗಿ ದುಡ್ಡು ಬಂದ ಮೇಲೆ, ತೋರ್ಪಡಿಸಿಕೊಳ್ಳದೇ, ಅದನ್ನು ಹೇಗೆ ವಿನಿಯೋಗ ಮಾಡಬೇಕೋ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತೀನಿ.

* ನೀವು ಜೆಡಿಎಸ್‌ ಪಕ್ಷದ ಬಗ್ಗೆ ಹೆಚ್ಚು ಗುರುತಿಸಿಕೊಳ್ಳುತ್ತಿದ್ದೀರಾ ಎಂಬ ಮಾತಿದೆ?
ನಾನು ಯಾವುದೇ ಪಕ್ಷದ ಜೊತೆಗೂ ಗುರುತಿಸಿಕೊಳ್ಳುತ್ತಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ನಮ್ಮ ನೇತಾರರು. ಅವರಿಗೆ ಮೋಸ ಮಾಡಬಹುದು. ಆದರೆ, ಅವರೆದುರು ರೈತರಿಗೆ ಮೋಸ ಮಾಡುವುದಕ್ಕೆ ಆಗುವುದಿಲ್ಲ. ಆ ಮಟ್ಟಿಗೆ ಅವರಿಗೆ ರೈತರ ಸಮಸ್ಯೆಯ ಬಗ್ಗೆ ಕಾಳಜಿ ಇದೆ. ಅದೇ ಕಾರಣಕ್ಕೆ ಅವರು ನನಗೆ ಬಹಳ ಇಷ್ಟ. ಈ ವಯಸ್ಸಿನಲ್ಲೂ ಅವರು ರೈತರಿಗಾಗಿ ಕೆಲಸ ಮಾಡುತ್ತಲ್ಲೇ ಇದ್ದಾರೆ. ಒಬ್ಬ ರೈತನ ಮಗನಾಗಿ ಅವರ ಕಾಳಜಿ ಮತ್ತು ಕಳಕಳಿ ಬಹಳ ಇಷ್ಟ.

ಇನ್ನು ನನ್ನ ಹುಟ್ಟುಹಬ್ಬಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಶ್‌ ಮಾಡಿದ್ದರು. ಇನ್ನು ನಿನ್ನೆ ಮಧ್ಯಾಹ್ನ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ್ದೆ. ನನಗೆ ಖಂಡಿತಾ ಯಾವುದೇ ಬೇಧ-ಬಾವ ಇಲ್ಲ. ಅವರಲ್ಲೂ ಸಹ ಯಾರಿಗೂ ವೈಯಕ್ತಿಕ ಸಮಸ್ಯೆಗಳಿರುವುದಿಲ್ಲ. ಇಲ್ಲಿ ಸ್ವಂತ ಹಿತಾಸಕ್ತಿ ಏನೂ ಇಲ್ಲ. ಅವರು ವಿರೋಧ ಮಾಡೋದು ರಾಜ್ಯದ ಅಭಿವೃದ್ಧಿಯ ಕಾರಣಕ್ಕೇ ಹೊರತು ಬೇರೆ ಕಾರಣಕ್ಕಲ್ಲ.

* “ಬಿಗ್‌ ಬಾಸ್‌’ಗೆ ಹೋಗಿ ಬಂದ ಮೇಲೆ ಜೀವನ ಎಷ್ಟು ಬದಲಾಗಿದೆ?
ಅಂತಹ ಬದಲಾವಣೆ ಏನಿಲ್ಲ. ಇವತ್ತಿಗೂ ನನ್ನ ಬಳಿ ಯಾವುದೇ ಕಾರು, ಬೈಕು ಇಲ್ಲ. ಬಾಡಿಗೆ ಮನೆಯಲ್ಲಿದ್ದೀನಿ. ಫ‌ುಟ್‌ಪಾತ್‌ನಲ್ಲಿ ತಿಂಡಿ ತಿನ್ನುತ್ತೀನಿ. ಯಾವ ಗೆಲುವೂ ನನ್ನನ್ನು ಬದಲಾಯಿಸಿಲ್ಲ, ಬದಲಾಯಿಸುವುದೂ ಇಲ್ಲ, ಬದಲಾಯಿಸಲೂ ಬಾರದು ಎಂಬುದು ನನ್ನ ಅಭಿಪ್ರಾಯ. ಸಾಮಾನ್ಯ ಮನುಷ್ಯನಾಗಿದ್ದೆ. ಈಗಲೂ ಸಾಮಾನ್ಯ ಮನುಷ್ಯನಾಗೇ ಇದ್ದೀನಿ. ಚಿತ್ರರಂಗ ಬೇಜಾರಾದರೆ, ಸೀದಾ ಊರಿಗೆ ಹೋಗಿ ತೋಟದಲ್ಲಿ ಕೆಲಸ ಮಾಡಿಕೊಂಡು ಇರುತ್ತೀನಿ.

ಸಾಮಾನ್ಯ ಮನುಷ್ಯನ ತರಹವೇ ಬದುಕುತ್ತೀನಿ. ನನಗೆ ಸೆಲೆಬ್ರಿಟಿ ಎಂಬ ಯಾವುದೇ ಭ್ರಮೆ ಇಲ್ಲ ಮತ್ತು ನಾನು ಯಶಸ್ಸಿನಿಂದ ಬದಲಾಗಿಲ್ಲ. ಆದರೆ, ವೈಯಕ್ತಿಕವಾಗಿ ನಾನು ಒಂದಿಷ್ಟು ಬದಲಾಗಿದ್ದೀನಿ. “ಬಿಗ್‌ ಬಾಸ್‌’ ಮನೆಗೆ ಹೋದ ಹೊಸತರಲ್ಲಿ ಎಲ್ಲರನ್ನೂ ಖಂಡಿಸುತ್ತಿದ್ದೆ. 15ನೇ ವಾರದಲ್ಲಿ ಶಾಲಿನಿ ಔಟ್‌ ಆದ ಸಂದರ್ಭದಲ್ಲಿ ಸಾಕಷ್ಟು ಅತ್ತುಬಿಟ್ಟೆ. ಮೊದಲ ವಾರ ಇದ್ದ ಅಹಂಕಾರ 15ನೇ ವಾರದ ಹೊತ್ತಿಗೆ ಇರಲಿಲ್ಲ. ಅದು ನಾನು ಬದಲಾದ ಪ್ರತೀಕ.

Advertisement

Udayavani is now on Telegram. Click here to join our channel and stay updated with the latest news.

Next