ಕೋಟೇಶ್ವರ: ಉಡುಪಿ ಜಿಲ್ಲೆಯಲ್ಲಿ ಕಳೆದ 19 ದಿನಗಳಿಂದೀಚೆ ಯಾವುದೇ ಹೊಸ ಕೋವಿಡ್ 19 ಪಾಸಿಟಿವ್ ಕೇಸ್ ಕಂಡುಬಂದಿಲ್ಲ. ಬಹುತೇಕ ಏ.28ಕ್ಕೆ ಜಿಲ್ಲೆಯನ್ನು ಗ್ರೀನ್ ಝೋನ್ ಎಂದು ಘೋಷಿಸುವ ಸಾಧ್ಯತೆ ಇದೆ. ಹಾಗಾಗಿ ಎಲ್ಲರು ಸರಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಶುಕ್ರವಾರದಂದು ಕೋಟೇಶ್ವರದ ವಿವಿಧೆಡೆ ಲಾಕ್ ಡೌನ್ ಅನಾನುಕೂಲವಾದವರಿಗೆ ಅಗತ್ಯ ಸಾಮಗ್ರಿಗಳ ಕಿಟ್ ಅನ್ನು ವಿತರಿಸಿ ಅವರು ಪತ್ರಕರ್ತರೊಡನೆ ಮಾತನಾಡುತ್ತ ಸಾಕಷ್ಟು ಆರ್ಥಿಕ ನಷ್ಟವನ್ನು ಎದುರಿಸುತ್ತಿದ್ದೇವೆ, ಆರ್ಥಿಕ ಹಾಗು ಸಾಮಾಜಿಕ ಚಟುವಟಿಕೆ ನಿಂತಿವೆ ಇದರಿಂದಾಗಿ ಎಲ್ಲ ವರ್ಗದ ಜನರಿಗೆ ಸಮಸ್ಯೆ ಉಂಟಾಗಿದೆ. ಅದಕ್ಕೆ ಪರಿಹಾರ ನೀಡುವಲ್ಲಿ ಪ್ರಧಾನಿ ಮೋದಿ ಅವರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ ಎಂದರು.
ಜಿಲ್ಲೆಯ ಗಡಿ ಪ್ರದೇಶದಿಂದ ನಾನಾ ರೀತಿಯ ಒತ್ತಡ ಬರುತ್ತಿದೆ ಆದರೆ ಕೊರೊನ ವೈರಸ್ ಬಾಧೆ ಇತರ ಜಿಲ್ಲೆಗಳಲ್ಲಿ ಇರುವದರಿಂದ ಇಲ್ಲಿ ಕಟ್ಟು ನಿಟ್ಟಾದ ಕ್ರಮ ಅನಿವಾರ್ಯ ವಾಗಿದೆ. ನನ್ನ ವೈಯಕ್ತಿಕ ನೆಲೆಯಲ್ಲಿ ಹಾಗು ದಾನಿಗಳ ಸಹಕಾರದೊಡನೆ ಪ್ರತಿ ವಿಧಾನ ಸಭಾ ಕ್ಷೇತ್ರದ ಲಾಕ್ ಡೌನ್ ಪ್ರದೇಶಕ್ಕೆ 25 ಕ್ವಿಂಟಾಲ್ ಅಕ್ಕಿ, ಬೇಳೆ ಇನ್ನಿತರ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳಾದ ಯಶೋದಾ, ಮುತ್ತು ದೇವಾಡಿಗ ಹಾಗೂ ಸತ್ಯ ನಾರಾಯಣ ಅಡಿಗ ಅವರಿಗೆ ಕಿಟ್ ಸಾಮಗ್ರಿಗಳನ್ನು ವಿತರಿಸಿದರು.
ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ಶಾಂತ ಗೋಪಾಲಕೃಷ್ಣ, ಉಪಾಧ್ಯಕ್ಷ ಉದಯ ನಾಯಕ್, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಗುತ್ತಿಗೆದಾರ ರಾಜೇಶ್ ಕಾರಂತ, ವೆಂಕಟೇಶ ಪ್ರಭು ಮೊದವರು ಉಪಸ್ಥಿತರಿದ್ದರು.
ಸಾಗಾಟಕ್ಕೆ ಅಡೆತಡೆ ಇಲ್ಲ
ತುರ್ತು ವೈದ್ಯಕೀಯ ಸೇವೆಗೆ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಆ್ಯಂಬುಲೆನ್ಸ್ ಸಾಗಲು ಅವಕಾಶ ಕಲ್ಪಿಸಲಾಗಿದೆ. ಕೃಷಿಕರಿಗೆ ತಮ್ಮ ಬೆಳೆಗಳ ಸಾಗಾಟಕ್ಕೆ ಯಾವುದೇ ಅಡೆ ತಡೆ ಇರುವುದಿಲ್ಲ.
-ಶೋಭಾ ಕರಂದ್ಲಾಜೆ, ಸಂಸದೆ