Advertisement

‘ಪರಿಸ್ಥಿತಿ ಎದುರಿಸಲು ಜನತೆ ಸಹಕರಿಸಿ’

11:46 PM Aug 07, 2019 | Team Udayavani |

ಸುಳ್ಯ: ಪ್ರಾಕೃತಿಕ ವಿಕೋಪ ಸಂದರ್ಭ ಆಡಳಿತದೊಂದಿಗೆ ಸಾರ್ವಜನಿಕರು ಕೈ ಜೋಡಿಸಿದರೆ ಪರಿಸ್ಥಿತಿ ತಹಬದಿಗೆ ತರಲು ಸಾಧ್ಯ. ತಾಲೂಕಿನ ಯಾವುದೇ ಪ್ರದೇಶದಲ್ಲಿ ತೊಂದರೆ ಉಂಟಾದಲ್ಲಿ ಸಹಕಾರದಿಂದ ಪರಿಹಾರ ಕಂಡುಕೊಳ್ಳೋಣ ಎಂದು ತಹಶೀಲ್ದಾರ್‌ ಕುಂಞಿ ಅಹ್ಮದ್‌ ಹೇಳಿದರು.

Advertisement

ಪ್ರಾಕೃತಿಕ ವಿಪತ್ತು ನಿರ್ವಹಣ ಕುರಿತಂತೆ ತುರ್ತು ಸ್ಪಂದನೆಯ ದೃಷ್ಟಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಉಪಸ್ಥಿತಿಯಲ್ಲಿ ತಾಲೂಕು ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ತಹಶೀಲ್ದಾರ್‌ ಅವರು ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿದರು.

ಮಾಹಿತಿ ನೀಡಿ
ವಿಪತ್ತು ಸಂಭವಿಸಿದ ಸ್ಥಳದ ಮಾಹಿತಿ ನೀಡಿದರೆ ಅನುಕೂಲ. ಇದರಿಂದ ತತ್‌ಕ್ಷಣ ಪರಿಹಾರ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಪರಿಸ್ಥಿತಿ ಎದುರಿಸಲು ತಾಲೂಕು ಆಡಳಿತ ಸಿದ್ಧಗೊಂಡಿದೆ. ಬೋಟ್, ಜೆಸಿಬಿ ಯಂತ್ರ ಸಹಿತ ಅಗತ್ಯ ಪರಿಕರಗಳನ್ನು ಜೋಡಿಸಲಾಗಿದೆ. ತಾಲೂಕಿನಲ್ಲಿರುವ ಮುಳುಗು ತಜ್ಞರು ಸಂಪರ್ಕಿಸಿದರೆ ಅಗತ್ಯ ಸಂದರ್ಭ ಬಳಸಿಕೊಳ್ಳಲಾಗುವುದು ಎಂದರು.

ವಾಟ್ಸ್‌ ಆ್ಯಪ್‌ ಗ್ರೂಪ್‌
ತುರ್ತು ಸ್ಪಂದನೆಗಾಗಿ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಸಂಘ ಸಂಸ್ಥೆ ಪದಾಧಿಕಾರಿಗಳು, ಕಳೆದ ಬಾರಿ ರಕ್ಷಣೆ ಕಾರ್ಯಕ್ಕೆ ಸಹಕರಿಸಿದವರು, ಅಧಿಕಾರಿಗಳು ಸಹಿತ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿದ್ದು, ಅದರಲ್ಲಿ ಅಗತ್ಯ ಮಾಹಿತಿ ಹಂಚಿಕೊಳ್ಳಬಹುದು ಎಂದು ತಹಶೀಲ್ದಾರ್‌ ವಿವರಿಸಿದರು.

ಅನಗತ್ಯ ಭಯ ಸೃಷ್ಟಿಸಬೇಡಿ
ಎಸ್‌ಐ ಹರೀಶ್‌ ಕುಮಾರ್‌ ಮಾತ ನಾಡಿ, ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ಭಯ ಸೃಷ್ಟಿಸಬಾರದು. ವಿಕೋಪದ ಚಿತ್ರಗಳನ್ನು ಖುದ್ದು ಸ್ಥಳ ದಲ್ಲಿದ್ದು ತೆಗೆದಿದ್ದರೆ ಮಾತ್ರ ಕಳುಹಿಸಿ. ಖಚಿತತೆ ಇಲ್ಲದೆ ರವಾನೆ ಮಾಡಬೇಡಿ. ತೊಂದರೆ ಪೀಡಿತ ಸ್ಥಳಕ್ಕೆ ತೆರಳಲು ಸಾಧ್ಯವಾದರೆ ಜಿಪಿಎಸ್‌ ಲೊಕೇಷನ್‌ ಕಳುಹಿಸಿದರೆ ಉತ್ತಮ ಎಂದರು.

Advertisement

ರಸ್ತೆ ಸನಿಹದಲ್ಲಿರುವ ಅಪಾಯಕಾರಿ ಮರ ತೆರವುಗೊಳಿಸುವಿಕೆ, ಪ್ರಾಕೃತಿಕ ವಿಕೋಪ ಸಂದರ್ಭ ನದಿ, ತೋಡು ಹತ್ತಿರವಿರುವ ಶಾಲೆಗಳಲ್ಲಿ ರಜೆ ಘೋಷಣೆ ಮತ್ತಿತರ ಸಲಹೆಗಳನ್ನು ಮುಖಂಡರು ನೀಡಿದರು.

ಮರ ಕಡಿಯಲು ಆತುರ ಬೇಡ
ವಲಯ ಅರಣ್ಯಾಧಿಕಾರಿ ಮಂಜುನಾಥ ಎನ್‌. ಮಾತನಾಡಿ, ಬಿದ್ದ ಮರ ತೆರವುಗೊಳಿಸಲು ಜನರೇ ಸ್ವತಃ ಮುಂದಾಗಬಹುದು. ಮರದ ಗೆಲ್ಲು ತೆರವಿಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಮರ ಸಂಪೂರ್ಣ ಕಡಿಯುವುದಾದರೆ ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆದುಕೊಳ್ಳಬೇಕು ಎಂದರು.

2 ದಿನಗಳಿಂದ ಮರ ಕಡಿಯಲು ದೂರವಾಣಿ ಕರೆಗಳು ಬರುತ್ತಿವೆ. ಎರಡೇ ಮಳೆಗೆ ಮರ ಕಡಿಯುವ ಎನ್ನುವ ನಿರ್ಧಾರಕ್ಕೆ ಬರಬೇಡಿ. ಅನಿವಾರ್ಯ ಸಂದರ್ಭ ಇದ್ದರೆ ಮಾತ್ರ ಕರೆ ಮಾಡಿ. ಮರ ಗಿಡ ಉಳಿಸುವುದು ಅಗತ್ಯ ಎಂದರು. ಮೆಸ್ಕಾಂ ಅಧಿಕಾರಿ ಸುಪ್ರೀತ್‌ ಮಾತನಾಡಿ, ವಿದ್ಯುತ್‌ ಲೈನ್‌ಗೆ ಗೆಲ್ಲು ತಾಗಿದರೆ, ಲೈನ್‌ ತುಂಡಾದಲ್ಲಿ ಮೆಸ್ಕಾಂಗೆ ಮಾಹಿತಿ ನೀಡಿದಲ್ಲಿ ಸ್ಪಂದಿಸಲಾಗುವುದು ಎಂದರು.

ಅತಿ ಉತ್ಸಾಹ ಬೇಡ
ಎಸ್‌ಐ ಹರೀಶ್‌ ಮಾತನಾಡಿ, ಅವಘಡ ಸಂದರ್ಭ ಅತಿ ಉತ್ಸಾಹದಿಂದ ರಕ್ಷಣೆಗೆ ಧುಮುಕುವುದು ಬೇಡ. ಇದರಿಂದ ಆಪತ್ತು ಉಂಟಾಗಬಹುದು. ವಿದ್ಯುತ್‌ ಲೈನ್‌ ತುಂಡಾದ ಸಂದರ್ಭ ಇರುತ್ತದೆ. ಹೀಗಾಗಿ ಮುಂಜಾಗ್ರತೆ ಕ್ರಮಕ್ಕೆ ಹೆಚ್ಚು ತೊಡಗಿಕೊಳ್ಳಿ. ಸ್ವರಕ್ಷಣೆ ಜತೆಗೆ ಇತರರಿಗೆ ಹಾನಿ ಉಂಟಾಗದಂತೆ ತಡೆಯುವಲ್ಲಿ ಗಮನ ಹರಿಸಿ ಎಂದರು.

ಸ್ಥಳಾಂತರಕ್ಕೆ ಕ್ರಮ
ಪ್ರಾಕೃತಿಕ ವಿಪತ್ತು ಹೆಚ್ಚಾದರೆ ವಾಸ ಸ್ಥಾನ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು. ಕೊಲ್ಲಮೊಗ್ರ ಮತ್ತು ಕಲ್ಲುಗುಂಡಿಯಲ್ಲಿ ತಾತ್ಕಾಲಿಕ ಗಂಜಿ ಕೇಂದ್ರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಹಶೀಲ್ದಾರ್‌ ಮಾಹಿತಿ ನೀಡಿದರು.

ತಾಲೂಕಿನ ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬೇರೆ ಬೇರೆ ಹಂತದ ತಂಡ ರಚಿಸಲಾಗಿದೆ ಎಂದು ತಹಶೀಲ್ದಾರ್‌ ಹೇಳಿದರು. ಸಭೆಯಲ್ಲಿ ಇ.ಒ. ಭವಾನಿಶಂಕರ್‌, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next