Advertisement

ಹೆಗ್ಗಡೆ ಸೇವಾ ಸಂಘ : ಕ್ರೀಡೋತ್ಸವಕ್ಕೆ ಅದ್ದೂರಿ ಚಾಲನೆ

12:26 PM Jan 16, 2018 | Team Udayavani |

ನವಿಮುಂಬಯಿ: ಕ್ರೀಡೆಗೆ ಯಾವುದೇ ಜಾತಿ, ಮತ, ಭೇದವಿಲ್ಲದೆ ಎಲ್ಲರನ್ನು ಒಂದುಗೂಡಿಸುವ ಶಕ್ತಿಯಿದೆ. ಕ್ರೀಡೆ ಎಂಬುವುದೇ ಒಂದು ಧರ್ಮವಾಗಿದೆ. ಕ್ರೀಡಾಮನೋಭಾವನೆಯನ್ನು ಬೆಳೆಸಿಕೊಳ್ಳುವ ಕ್ರೀಡಾಳುಗಳು ಎಲ್ಲರೊಂದಿಗೆ ಪ್ರೀತಿ, ಒಗ್ಗಟ್ಟಿನಿಂದ ವ್ಯವಹರಿಸುತ್ತಾರೆ. ಕ್ರೀಡಾಲೋಕದಲ್ಲಿ ಎಲ್ಲರು ಒಬ್ಬರನ್ನೊಬ್ಬರು ಅರಿತು ಸ್ನೇಹದಿಂದ ಇರುತ್ತಾರೆ. ಆದ್ದರಿಂದ ನಾವೆಲ್ಲರೂ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡು ಯಶಸ್ಸನ್ನು ಸಾಧಿಸಬೇಕು ಎಂದು ಶಿವಛತ್ರಪತಿ ಪುರಸ್ಕೃತ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ ಇದರ ಮಾಜಿ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌,  ಮಾಜಿ ಕಬಡ್ಡಿಪಟು  ಜಯ ಎ. ಶೆಟ್ಟಿ ಅವರು ನುಡಿದರು.

Advertisement

ಜ. 14 ರಂದು ಐರೋಲಿಯ ಹೆಗ್ಗಡೆ ಭವನ ಸಮೀಪದ ಸೆಕ್ಟರ್‌ 15 ರಲ್ಲಿರುವ ಎನ್‌ಎಂಸಿ ಮೈದಾನದಲ್ಲಿ ಬೆಳಗ್ಗೆ ನಡೆದ ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಇವರು, ಹೆಗ್ಗಡೆ ಸೇವಾ ಸಂಘವು ಪ್ರತೀ ವರ್ಷವೂ ಆಯೋಜಿಸುವ ಕ್ರೀಡಾಕೂಟವು ಸಮಾಜ ಬಾಂಧವರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ನೀಡಿದಂತಾಗುತ್ತದೆ. ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು. ಸಮಾಜದ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ನಾನು ಸಿದ್ಧನಿದ್ದೇನೆ. ಅವರಿಗೆ ಯಾವುದೇ ರೀತಿಯ ಸಹಾಯ, ಸಹಕಾರವನ್ನು ನೀಡಲು ಹಿಂಜರಿಯುವುದಿಲ್ಲ ಎಂದು ನುಡಿದು ಕ್ರೀಡಾಳುಗಳಿಗೆ ಶುಭಹಾರೈಸಿದರು.

ಗೌರವ ಅಥಿತಿಗಳಾಗಿ ಅಂತಾರಾಷ್ಟ್ರೀಯ ಮಟ್ಟದ ಮಾಜಿ ಬಾಸ್ಕೆಟ್‌ಬಾಲ್‌ ಆಟಗಾರ್ತಿ ಆಶಾ ಆರ್‌. ಹೆಗ್ಡೆ, ಹೆಬ್ರಿ  ಇವರು ಮಾತನಾಡಿ, ಕ್ರೀಡೆ ಎಂಬುವುದು ನಮ್ಮ ದೈನಂದಿನ ಬದುಕಿಗೆ ಪ್ರೇರಣೆ ಹಾಗೂ ಸ್ಫೂ³ರ್ತಿಯನ್ನು ನೀಡುತ್ತದೆ. ನಮ್ಮಲ್ಲಿ ಕ್ರೀಡಾಸಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಹಾಗೂ ಕ್ರೀಡಾಕ್ಷೇತ್ರದ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ನಾವು ಮಾಡಬೇಕು. ಹೆಗ್ಗಡೆ ಸೇವಾ ಸಂಘವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದು ಅಭಿನಂದನೀಯವಾಗಿದೆ. ಮಹಿಳೆಯರಿಗೆ ಕ್ರೀಡಾ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶಗಳಿವೆ. ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ಕ್ರೀಡಾಳುಗಳಿಗೆ ಪ್ರಸ್ತುತ ದಿನಗಳಲ್ಲಿ ಗೌರವವು ಲಭಿಸುತ್ತಿದ್ದು, ಇದೇ ಕ್ಷೇತ್ರದಲ್ಲಿ ಮುಂದುವರಿದರೆ ಜೀವನ ಯಶಸ್ವಿಯತ್ತ ಸಾಗುವುದರಲ್ಲಿ ಸಂಶಯವಿಲ್ಲ ಎಂದರು.

ತುಳುಕೂಟ ಐರೋಲಿ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರು ಮಾತನಾಡಿ, ಹೆಗ್ಗಡೆ ಸೇವಾ ಸಂಘವು ಪ್ರತೀ ವರ್ಷ ಇಂತಹ ಕ್ರೀಡೋತ್ಸವವನ್ನು ಆಯೋಜಿಸುವುದರ ಮೂಲಕ ಸಮಾಜ ಬಾಂಧವರಲ್ಲಿ ಕ್ರೀಡಾ ಮನೋಭಾವನೆಯನ್ನು ಬೆಳೆಸಿ, ಪ್ರತಿಭೆಗಳಿಗೆ ನೀರೆರೆದು ಪೋಷಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದೆ. ಅದನ್ನು ಸಮತೋಲನದಿಂದ ಸ್ವೀಕರಿಸುವ ಗುಣ ಕ್ರೀಡಾಳುಗಳಲ್ಲಿ ಇರಬೇಕು. ಸೋಲೇ ಯಶಸ್ಸಿನ ಸೋಪಾನ ಎಂದು ತಿಳಿದು ಮುಂದುವರಿದಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿಯಾಗುತ್ತದೆ ಎಂದು ಹೇಳಿದರು.

ಸಮಾಜಪರ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು 
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ  ವಿಜಯ್‌ ಬಿ. ಹೆಗ್ಡೆ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ಪ್ರತೀ ವರ್ಷವೂ ಕ್ರೀಡೋತ್ಸವವನ್ನು ಆಚರಿಸುತ್ತಿದೆ. ಯುವ ಜನಾಂಗ ಇದರ ಸದುಪಯೋಗಪಡಿಸಿಕೊಂಡು ಸಂಘದ ಸಮಾಜಪರ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ನುಡಿದು ಶುಭಹಾರೈಸಿದರು.

Advertisement

ಸಂಘದ ಜೊತೆ ಕಾರ್ಯದರ್ಶಿ ರವಿ ಎಸ್‌. ಹೆಗ್ಡೆ ಹೆರ್ಮುಂಡೆ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಗೌರವ  ಕಾರ್ಯಾಧ್ಯಕ್ಷ  ಸಂಜೀವ ಪಿ. ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ  ಶಂಕರ್‌ ಆರ್‌. ಹೆಗ್ಡೆ, ಗೌರವ ಕೋಶಾಧಿಕಾರಿ   ರಮೇಶ್‌  ಎಂ. ಹೆಗ್ಡೆ, ಉಪಾಧ್ಯಕ್ಷ ಸುರೇಶ ಎಸ್‌. ಹೆಗ್ಡೆ,  ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ  ಶಶಿಧರ ಎಸ್‌. ಹೆಗ್ಡೆ,  ಯುವ ಸಮಿತಿಯ ಕಾರ್ಯಾಧ್ಯಕ್ಷ  ಅಭಿಷೇಕ್‌ ಎಸ್‌. ಹೆಗ್ಡೆ, ಜೊತೆ ಕೋಶಾಧಿಕಾರಿ ಚಂದ್ರಶೇಖರ ಬಿ. ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಕ್ರೀಡಾ ಕಾರ್ಯಕ್ರಮವನ್ನು ಪ್ರಭಾಕರ ಎಸ್‌. ಹೆಗ್ಡೆ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ನಿರ್ವಹಿಸಿದರು.

ಆಡಳಿತ ಮಂಡಳಿ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಸಹಕರಿಸಿದರು. ಕ್ಯಾಟರಿಂಗ್‌ ಸಮಿತಿಯ ಕಾರ್ಯಾಧ್ಯಕ್ಷ ಬಿ. ಗೋಪಾಲ್‌ ಹೆಗ್ಡೆ, ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಜಯರಾಮ ಬಿ. ಹೆಗ್ಡೆ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷೆ ಲೀಲಾವತಿ ಆರ್‌. ಹೆಗ್ಡೆ, ಮೆಂಟೆನೆನ್ಸ್‌ ಆ್ಯಂಡ್‌ ರಿಪೇರ್ ಸಮಿತಿಯ ಕಾರ್ಯಾಧ್ಯಕ್ಷ ಕೆ. ಪ್ರಸನ್ನ ಹೆಗ್ಡೆ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಮಂಜುನಾಥ ಎಂ. ಹೆಗ್ಡೆ, ಸಂತೋಷ್‌ ಆರ್‌. ಹೆಗ್ಡೆ, ಸೇವಂತಿ ಎಲ್‌. ಹೆಗ್ಡೆ, ರಾಜೇಶ್‌ ಆರ್‌. ಹೆಗ್ಡೆ, ಸಂದೇಶ್‌ ಜೆ. ಹೆಗ್ಡೆ, ಭಾರತಿ ಎಂ. ಹೆಗ್ಡೆ, ವಿಶ್ವನಾಥ ಆರ್‌. ಹೆಗ್ಡೆ, ನವೀನ್‌ ಆರ್‌. ಹೆಗ್ಡೆ, ಸುಜಾತಾ ಎಸ್‌. ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.

ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಸಮಾಜ ಭಾಂದವರ ವಯೋಮಿತಿಗೆ ಅನುಗುಣವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ಆಡಳಿತ ಮಂಡಳಿ ಸದಸ್ಯರು, ಯುವ ವಿಭಾಗ ಮತ್ತು ಮಹಿಳಾ ವಿಭಾಗದವರ ಸಹಕಾರದಿಂದ ನಡೆಯಿತು. ಸಂಜೆ 7 ರಿಂದ ಹೆಗ್ಗಡೆ ಭವನದಲ್ಲಿ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ  ಕ್ರೀಡಾ ಸ್ಪರ್ಧೆಯಲ್ಲಿ  ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಭೋಜನ, ಸಂಜೆ ಚಹಾದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ನಗರದ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದರು. 

ವಿಶೇಷ ಆಕರ್ಷಣೆ
ದಿನಪೂರ್ತಿ ನಡೆದ ಕ್ರೀಡೋತ್ಸವದಲ್ಲಿ ಸಮಾಜ ಬಾಂಧವರು, ಸದಸ್ಯ ಬಾಂಧವರು ಬೆಳಗ್ಗೆ 7.30ಕ್ಕೆ ಹೆಗ್ಗಡೆ ಭವನದಿಂದ ಎನ್‌ಎಮ್‌ಎಂಸಿ ಮೈದಾನದವರೆಗೆ ಕ್ರೀಡಾಳುಗಳನ್ನು  ಮತ್ತು ಅತಿಥಿಗಳನ್ನು   ವೈವಿಧ್ಯಮಯ ಭಾರತೀಯ ಸಂಸ್ಕೃತಿ  ಬಿಂಬಿಸುವ ಪಥ ಸಂಚಲನದ ಮೂಲಕ ಕರೆತಂದು ಸ್ವಾಗತಿಸಿದರು. ನಾಡಿನ ಯಕ್ಷಗಾನ ಕುಣಿತ, ಬೊಂಬೆ ಕುಣಿತ, ಡೋಲು-ಚೆಂಡೆಯ ನಿನಾದ ಇನ್ನಿತರ ಪ್ರಾತ್ಯಕ್ಷಿಕೆ, ಕುಣಿತಗಳು ಕ್ರೀಡಾಳುಗಳನ್ನು ರಂಜಿಸಿತು. ಅಪರಾಹ್ನ ದಿ|  ಇಸರಮಾರು ಅಚ್ಚಣ್ಣ ಹೆಗ್ಡೆ ಅಡಂದಾಲು ಸ್ಮರಣಾರ್ಥ ಕ್ರಿಕೆಟ್‌ ಟ್ರೋಫಿ ಮತ್ತು ಮಹಿಳೆಯರಿಗಾಗಿ ದಿವಂಗತ ಅಡಂದಾಲು ಚೆನ್ನಕ್ಕ ಹೆಗ್ಗಡ್ತಿ ಸ್ಮರಣಾರ್ಥ ಥ್ರೋ ಬಾಲ್‌ ಪಂದ್ಯಾಟ, ಮಹಿಳೆಯರಿಗಾಗಿ ಮತ್ತು ಪುರುಷರಿಗಾಗಿ ಹಗ್ಗ ಜಗ್ಗಾಟ ಪಂದ್ಯಾಟಗಳು ನೆರವೇದವು.

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next