Advertisement

ಗೋವಾದ ಕೆಲವೆಡೆ ಭಾರೀ ಮಳೆ- ಪ್ರವಾಹ ಪರಿಸ್ಥಿತಿ ನಿರ್ಮಾಣ

06:59 PM Jul 19, 2023 | Team Udayavani |

ಪಣಜಿ: ಗೋವಾದ ಸತ್ತರಿ ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ತಾಲೂಕಿನ ಹಲವೆಡೆ ಮರಗಳು ಬಿದ್ದು ಅನಾಹುತ ಸೃಷ್ಠಿಸಿದೆ.

Advertisement

ಗೋವಾ ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆಯಲ್ಲಿ ಅಕೇಶಿಯಾ ಮರ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ವಾಲ್ಪೈ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಚೋರ್ಲಾ ಘಾಟ್‍ನಲ್ಲಿ ಬಿದ್ದಿದ್ದ ಮರವನ್ನು  ತೆರವುಗೊಳಿಸಿದರು.  ಸೋಮವಾರ ತಡರಾತ್ರಿ ಪಾಡೇಲಿಯ ಸರಕಾರಿ ಶಾಲೆಯ ಬಳಿ ವಿದ್ಯುತ್ ತಂತಿಗಳ ಮೇಲೆ ಆಲದ ಮರ ಬಿದ್ದು ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಈ ಮರ ಬಿದ್ದು ಕೆಲ ಕಾಲ ಈ ಭಾಗದ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆಯೂ ಉಂಟಾಯಿತು. ವಾಲ್ಪೈ ಅಗ್ನಿಶಾಮಕ ದಳ ಮತ್ತು ವಿದ್ಯುತ್ ಇಲಾಖೆಯು ಭಾರೀ ಮಳೆಯ ಸಮಯದಲ್ಲೆ ದುರಸ್ತಿ ಮಾಡುವ ಮೂಲಕ ವಿದ್ಯುತ್ ಸರಬರಾಜು ಸುಮಗಗೊಳಿಸಿದರು.

ವಾಲ್ಪೈ ಅಗ್ನಿಶಾಮಕ ದಳದ ಅಧಿಕಾರಿ ಸಂತೋಷ ಗವಾಸ್ ಮಾರ್ಗದರ್ಶನದಲ್ಲಿ ಅರವಿಂದ ದೇಸಾಯಿ, ಗಂಗಾರಾಮ್ ಪಾವಣೆ, ವಿರಾಜ್ ಗವಾಸ್, ಜ್ಞಾನೇಶ್ವರ್ ಗವಾಸ್, ತುಳಸಿದಾಸ್ ಜರ್ಮೇಕರ್, ಉಮೇಶ್ ಗಾಂವ್ಕರ್, ರೂಪೇಶ್ ಸಾಲೇಲ್ಕರ್, ರೂಪೇಶ್ ಗಾಂವ್ಕರ್ ಇತರರು ಈ ಭಾಗದಲ್ಲಿ ವಿವಿದೆಡೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನದಿ ಮಟ್ಟದಲ್ಲಿ ಹೆಚ್ಚಳ; ಪ್ರವಾಹದ ಭಯ
ಗೋವಾ ರಾಜ್ಯಾದ್ಯಂತ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಹೀಗಾಗಿ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ. ಮಳೆ ಮುಂದುವರಿದರೆ ನೀರಿನ ಮಟ್ಟ ಹೆಚ್ಚಿ ಪ್ರವಾಹ ಉಂಟಾಗಲಿದೆ. ಕೆಲವೆಡೆ ರಸ್ತೆಯ ಚರಂಡಿಗಳಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ ರಸ್ತೆ ಜಲಾವೃತವಾಗಿತ್ತು. ಈಗಾಗಲೇ ಈ ಸತ್ತರಿ ತಾಲೂಕಿನ ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಜನತೆ ಆತಂಕಕ್ಕೊಳಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next