Advertisement

ಭಾರೀ ಮಳೆ-ಗಾಳಿ: ಧರೆಗುರುಳಿದ ಮರ-ವಿದ್ಯುತ್‌ ಕಂಬ

12:37 PM Apr 26, 2022 | Team Udayavani |

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಸೋಮವಾರ ಸಂಜೆ ಮುಂಗಾರು ಪೂರ್ವ ಮಳೆ ಅಬ್ಬರಿಸಿದೆ. ಭಾರೀ ಗುಡುಗು, ಬಿರುಗಾಳಿ ಸಹಿತ ತುರಿಸಿನ ಮಳೆಯಾಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಹಲವೆಡೆ ಮರ, ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಕೆಲ ಗಂಟೆಗಳ ಕಾಲ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.

Advertisement

ಸಂಜೆ 5 ಗಂಟೆ ಸುಮಾರಿಗೆ ಗುಡುಗು, ಸಿಡಿಲು ಸಹಿತ ಬಿರುಗಾಳಿಯೊಂದಿಗೆ ಬಿರುಸಿನ ಮಳೆ ಆರಂಭವಾಯಿತು. ನೋಡನೋಡುತ್ತಿದ್ದಂತೆ ಮಹಾತ್ಮಗಾಂಧಿ ವೃತ್ತದಲ್ಲಿರುವ ಬೃಹತ್‌ ಮರ ಧರೆಗುರುಳಿದ್ದು, ತಳ್ಳುಗಾಡಿ ಮತ್ತು ಒಂದು ಬೈಕ್‌ ಅಲ್ಪಸ್ವಲ್ಪ ಜಖಂಗೊಂಡಿವೆ. ಇದೇ ವೇಳೆ ಗದುಗಿನಿಂದ ರೋಣಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ.

ಬಿರುಗಾಳಿಗೆ ಮಹಾತ್ಮ ಗಾಂಧಿ ವೃತ್ತದಲ್ಲಿರುವ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಅಳವಡಿಸಿದ್ದ ಸಿಸಿ ಕ್ಯಾಮರಾ ಸ್ತಂಭ ಮುರಿದು ಬಿದ್ದಿದೆ. ಎಸ್‌.ಎಂ.ಕೃಷ್ಣ ನಗರ, ರಾಜೀವಗಾಂಧಿ ನಗರ, ಗಂಗಿಮಡಿ, ಸೇರಿದಂತೆ ಗ್ರಾಮೀಣ ಭಾಗದ ಹಲವೆಡೆ ಮರಗಳು ಮತ್ತು ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಪರಿಣಾಮ ಸಂಜೆ 5.30 ರಿಂದ ಅವಳಿ ನಗರದ ಹಲವು ಬಡಾವಣೆಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಕತ್ತಲೆಯಲ್ಲೇ ಕಾಲ ಕಳೆಯುವಂತಾಯಿತು. ಭಾರೀ ಮಳೆಯಿಂದಾಗಿ ಇಲ್ಲಿನ ಹಳೇ ಡಿಸಿ ಸರ್ಕಲ್‌, ಗಾಂಧಿ ವೃತ್ತ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡಿದರು. ಜೊತೆಗೆ ಎಸ್‌.ಎಂ.ಕೃಷ್ಣಾ ನಗರ, ರೆಹಮತ ನಗರ, ಗಂಗಿಮಡಿ, ಬೆಟಗೇರಿಯ ಹಲವು ಬಡಾವಣೆಗಳ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ, ಭಾರೀ ಅವಾಂತರ ಸೃಷ್ಟಿಸಿತು.

Advertisement

Udayavani is now on Telegram. Click here to join our channel and stay updated with the latest news.

Next