Advertisement

Heavy Rain ದ್ವೀಪವಾಗುವ ಭೀತಿಯಲ್ಲಿ ಕರಾವಳಿ; ಶಿರಾಡಿ ಘಾಟಿ ಬಂದ್‌-ರಾ.ಹೆ. 66 ಬಂದ್‌

10:39 AM Jul 19, 2024 | Team Udayavani |

ಮಂಗಳೂರು/ ಉಡುಪಿ: ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕರಾವಳಿಯನ್ನು ಹೊರ ಜಿಲ್ಲೆಗಳ ಜತೆಗೆ ಬೆಸೆಯುವ ಎಲ್ಲ ಘಾಟಿ ರಸ್ತೆಗಳಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದ್ದು, ಕರಾವಳಿಯ ಉಭಯ ಜಿಲ್ಲೆಗಳು ಹೊರ ಸಂಪರ್ಕ ಕಳೆದುಕೊಂಡು ಅಕ್ಷರಶಃ ದ್ವೀಪವಾಗುವ ಭೀತಿ ತಲೆದೋರಿದೆ. ಪರಿಸ್ಥಿತಿ ತಿಳಿಗೊಂಡು ಸಂಪರ್ಕ ಪುನರ್‌ ಸ್ಥಾಪನೆಯಾಗದೆ ಹೋದರೆ ಜನ-ವಾಹನ ಸಂಚಾರ ಸಂಕಷ್ಟದ ಜತೆಗೆ ಹಣ್ಣು, ತರಕಾರಿಗಳಂತಹ ಆವಶ್ಯಕ ವಸ್ತುಗಳ ಕೊರತೆಯೂ ಎದುರಾಗಬಹುದಾಗಿದೆ.

Advertisement

ಶಿರಾಡಿ ಘಾಟಿ ಬಂದ್‌
ಶಿರಾಡಿ ಘಾಟಿ ರಸ್ತೆಯ ಸಕಲೇಶಪುರ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿರುವುದರಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಮಾಣಿಯಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ.

ಮಾಣಿ – ಮೈಸೂರು ರಸ್ತೆ:
ರಾತ್ರಿ ವಾಹನ ಸಂಚಾರ ನಿಷೇಧ
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡಿನ ಕರ್ತೋಜಿ ಬಳಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸಮೀಪದ ಗುಡ್ಡದಿಂದ ಮಣ್ಣು ರಸ್ತೆಗೆ ಕುಸಿಯುವ ಭೀತಿ ಎದುರಾಗಿರುವುದರಿಂದ ಗುರುವಾರ ರಾತ್ರಿ 8ರಿಂದ ನಾಲ್ಕು ದಿನಗಳ ಕಾಲ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಶಿರೂರು ಗುಡ್ಡ ಕುಸಿತ: ರಾ.ಹೆ. 66 ಬಂದ್‌
ಅಂಕೋಲಾ ತಾಲೂಕಿನ ಶಿರೂರು ಬಳಿ ಮಂಗಳ ವಾರ ಮಂಗಳೂರು-ಗೋವಾ ಹೆದ್ದಾರಿಗೆ ಕುಸಿದ ಗುಡ್ಡವನ್ನು ಇನ್ನೂ ಪೂರ್ಣವಾಗಿ ತೆರವುಗೊಳಿಸಿಲ್ಲ. ಹೀಗಾಗಿ ರಾ.ಹೆ. 66ರ ಈ  ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಚಾರ್ಮಾಡಿ, ನಾಗೋಡಿ, ಮಾಳ ರಸ್ತೆ ಮಾತ್ರ ಸುಸ್ಥಿತಿ
ಸದ್ಯ ಚಾರ್ಮಾಡಿ ಘಾಟಿ ರಸ್ತೆ, ನಾಗೋಡಿ ಘಾಟಿ ರಸ್ತೆ ಮತ್ತು ಮಾಳ ಘಾಟಿ ರಸ್ತೆಗಳು ಮಾತ್ರ ಸುಸ್ಥಿತಿಯಲ್ಲಿವೆ. ಹುಲಿಕಲ್‌ ರಸ್ತೆಯ ಕೆಲವೆಡೆ ಗುಡ್ಡ ಕುಸಿತ ಆಗಿದ್ದರೂ ವಾಹನಗಳು ಸಂಚರಿಸುತ್ತಿವೆ. ಆದರೆ ಉಳಿದೆಲ್ಲ ಘಾಟಿ ರಸ್ತೆಗಳು ಸ್ಥಗಿತ ಗೊಂಡಿರುವುದರಿಂದ ಈ ರಸ್ತೆಗಳ ಮೇಲೆ ಒತ್ತಡ ಹೆಚ್ಚಿದ್ದು, ಭಾರೀ ಮಳೆಯಾಗುತ್ತಿರುವುದರಿಂದ ಯಾವುದೇ ಸಮಯದಲ್ಲಿ ಇಲ್ಲೂ ಸಂಚಾರ ಸ್ಥಗಿತಗೊಳ್ಳುವ ಆತಂಕವಿದೆ. ಬಿಸಿಲೆ ಘಾಟಿ ರಸ್ತೆ ಇಕ್ಕಟ್ಟಾಗಿದ್ದು, ಸಂಚಾರ ದುಸ್ತರವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next