Advertisement

ತತ್ತರಿಸಿದ ಉತ್ತರ ಭೀಮಾ, ಕೃಷ್ಣಾರ್ಭಟ

05:35 PM Aug 05, 2019 | mahesh |

ಹುಬ್ಬಳ್ಳಿ: ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬರಗಾಲದಲ್ಲೂ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದೆ. ಕೃಷ್ಣಾ, ಭೀಮಾ, ವೇದಗಂಗಾ, ದೂಧ್‌ಗಂಗಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ, ಕಾಳಿ, ಅಘನಾಶಿನಿ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಐದು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹಲವೆಡೆ ಗಂಜಿ ಕೇಂದ್ರ ತೆರೆಯಲಾಗಿದ್ದು, 38 ಸೇತುವೆಗಳು ಮುಳುಗಡೆಯಾಗಿ ಕೆಲವೆಡೆ ಸಂಪರ್ಕ ಕಡಿತಗೊಂಡಿದೆ. 900ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

Advertisement

ಮಹಾರಾಷ್ಟ್ರದ ಕೊಯ್ನಾ ಜಲಾಶಯ ವ್ಯಾಪ್ತಿ, ಅಂಬೋಲಿ, ಅಜರಾ ಪ್ರದೇಶ, ಮಲಪ್ರಭಾ ನದಿಯ ಉಗಮ ಸ್ಥಾನ ಖಾನಾಪುರದ ಕಣಕುಂಬಿ ಅರಣ್ಯದಲ್ಲಿ ಧಾರಾಕಾರ ಮಳೆಯಿಂದ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿಗೆ 2.31 ಲಕ್ಷ ಕ್ಯುಸೆಕ್‌ ನೀರು ಹರಿದು ಬರಲಾರಂಭಿಸಿದೆ. ಕೊಯ್ನಾ ಜಲಾಶಯದಲ್ಲಿ 94 ಟಿಎಂಸಿ ನೀರು ಸಂಗ್ರಹವಾಗಿದ್ದು, ಭರ್ತಿಗೆ ಇನ್ನು 10 ಟಿಎಂಸಿ ಅಗತ್ಯವಿದೆ.

ಸ್ಥಳಾಂತರ: ಪ್ರವಾಹಕ್ಕೆ ತುತ್ತಾಗಿರುವ ಚಿಕ್ಕೋಡಿ ತಾಲೂಕು ಸೇರಿದಂತೆ ಹಲವು ಪ್ರದೇಶಗಳಿಂದ ಇದುವರೆಗೆ 900ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಿದ್ದಾರೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಆಲಮಟ್ಟಿ ಜಲಾಶಯದಿಂದ 2,49,823 ಕ್ಯೂಸೆಕ್‌ ನೀರನ್ನು 26 ಕ್ರಸ್ಟ್‌ಗೇಟ್‌ಗಳ ಮೂಲಕ ಹೊರ ಬಿಡಲಾಗುತ್ತಿದೆ.

ಭೀಮಾ ಭರ್ತಿ: ಬರದಿಂದ ಬತ್ತಿ ಬರಿದಾಗಿದ್ದ ಭೀಮೆ ಒಡಲು ಕೂಡ ಇದೀಗ ತುಂಬಿಕೊಂಡಿದೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 60 ಸಾವಿರ ಕ್ಯುಸೆಕ್‌ ನೀರು ಬರುತ್ತಿದ್ದು, ಕರ್ನಾಟಕ-ಮಹಾರಾಷ್ಟ್ರಕ್ಕೆ ಸೇರಿದ 8 ಬ್ಯಾರೇಜ್‌ಗಳು ಭರ್ತಿಯಾಗಿ ಪ್ರವಾಹ ಭೀತಿ ಎದುರಾಗಿದೆ.

ಸಮೀಕ್ಷೆ

ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಜು.5ರಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬೆಳಗ್ಗೆ 10ಕ್ಕೆ ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ ಅಥಣಿ, ರಾಯಚೂರು, ಯಾದಗಿರಿ ಮೂಲಕ ಬಾಗಲಕೋಟೆಗೆ ಆಗಮಿಸಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ವಿಜಯಪುರ ಜಿಲ್ಲೆಗೆ ತೆರಳಿ ಮಧ್ಯಾಹ್ನ 12ಕ್ಕೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಪ್ರವಾಹ ಪರಿಸ್ಥಿತಿ ಕುರಿತು ಪರಿಶೀಲನೆ ಸಭೆ ನಡೆಸಲಿದ್ದಾರೆ.

ಸೇನಾ ನಿಯೋಜನೆ

ಕೃಷ್ಣಾ ನದಿಯ ಪ್ರವಾಹ ಏರಿಕೆಯಾಗುತ್ತಿರುವ ಕಾರಣ ಪರಿಹಾರ ಕಾರ್ಯಗಳಿಗಾಗಿ ಮರಾಠಾ ಲಘು ಪದಾತಿ ದಳ ಕೇಂದ್ರದ ಎರಡು ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ. ಈ ಸೇನಾ ಸಿಬ್ಬಂದಿ ಅಥಣಿ, ರಾಯಬಾಗ, ನಿಪ್ಪಾಣಿ, ಚಿಕ್ಕೋಡಿ ಹಾಗೂ ಕಾಗವಾಡ ತಾಲೂಕುಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next