ಕೋಟೇಶ್ವರ: ಮೋಡ ಕವಿದ ವಾತಾವರಣದ ನಡುವೆ ಗುಡುಗು, ಮಿಂಚು ಸಹಿತ ಮೇ 18ರಂದು ಕೋಟೇಶ್ವರ ಪೇಟೆಯಲ್ಲಿ ಸುರಿದ ಭಾರಿ ಮಳೆಯಿಂದ ಪೇಟೆಯ ಪ್ರಮುಖ ರಸ್ತೆಯಲ್ಲಿ ನೀರು ನಿಂತಿದ್ದು ಪಾದಚಾರಿಗಳು ಕಷ್ಟ ಪಟ್ಟು ರಸ್ತೆಯಲ್ಲಿ ಸಾಗಬೇಕಾದ ಪರಿಸ್ಥಿತಿ ಎದುರಾಯಿತು.
ಒಳ ಚರಂಡಿಯ ಅವ್ಯವಸ್ಥೆ
ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ( ವಿಜಯ ಬ್ಯಾಂಕ್ ) ಕಟ್ಟದ ಎದುರು ಸಹಿತ ನಾಗ ಬನ ಕಟ್ಟೆಯ ಪರಿಸರದ ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ನೀರಿನ ಹೊರ ಹರಿವಿಗೆ ಅನುಕೂಲವಾಗುವ ಒಳಚರಂಡಿ ವ್ಯವಸ್ಥೆಯಾಗದಿರುವುದು ಈ ಭಾಗದಲ್ಲಿ ಜಲಾವೃತಗೊಳಿಸುತ್ತಿದ್ದು ವ್ಯಾಪಾರ ವ್ಯವಹಾರಕ್ಕೆ ಬರುವವರು ಸಾಗುವ ವಾಹನಗಳ ಕೆಸರು ನೀರಿನ ಸಿಂಚನದಿಂದ ತೊಯ್ದ ಬಟ್ಟೆಯಲ್ಲಿ ಮನೆಗೆ ಸಾಗಬೇಕಾದ ಪರಿಸ್ಥಿತಿ ಇದೆ.
ಗ್ರಾ.ಪಂ.ಮಳೆಗಾಲ ಆರಂಭದ ಈ ದಿಸೆಯಲ್ಲಿ ಎದುರಾಗುತ್ತಿರುವ ನೀರಿನ ಹೊರ ಹರಿವಿನ ಸಮಸ್ಯೆ ನಿಭಾಯಿಸುವಲ್ಲಿ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೋಟೇಶ್ವರ ಗ್ರಾ.ಪಂ.ನ ಸೀಮಾ ರೇಖೆ ಬಗ್ಗೆ ಅವಲೋಕಿಸಿದರೆ ಪೇಟೆಯ ಒಂದು ಭಾಗ ಕೋಟೇಶ್ವರ ಗ್ರಾ.ಪಂ. ವ್ಯಾಪ್ತಿಗೆ ಸೇರಿದ್ದು ಇನ್ನೊಂದು ಭಾಗ ಬೀಜಾಡಿ ಗ್ರಾ.ಪಂ.ವ್ಯಾಪ್ತಿಗೆ ಸೇರಿದೆ. ಹಾಗಾಗಿ 2 ಗ್ರಾ.ಪಂ.ಗಳು ಏಕಕಾಲದಲ್ಲಿ ಚರಂಡಿ ದುರಸ್ಥಿ ಬಗ್ಗೆ ಕ್ರಮ ಕೈಗೊಂಡಲ್ಲಿ ಮಾತ್ರ ಮಳೆಗಾಲದ ಕೃತಕ ನೆರೆ ಹಾವಳಿಗೆ ಶಾಶ್ವತ ಪರಿಹಾರ ಲಭಿಸಿತು.