Advertisement

ಭಾರೀ ಮಳೆ; ಮನೆಗಳಿಗೆ ನುಗ್ಗಿದ ನೀರು

11:13 AM Apr 20, 2019 | keerthan |

ಬಂಗಾರಪೇಟೆ: ಪಟ್ಟಣದಲ್ಲಿ ಗುರುವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸೇಟ್ ಕಾಂಪೌಂಡ್‌ ವಾರ್ಡ್‌ನ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ನಿವಾಸಿಗಳು ಇಡೀರಾತ್ರಿ ನಿದ್ದೆ ಇಲ್ಲದೆ, ಪರದಾಡುವಂತಾಯಿತು. ಈ ಅವಾಂತರಕ್ಕೆ ರೈಲ್ವೆ ಇಲಾಖೆ ಹೊಸದಾಗಿ ನಿರ್ಮಿಸಿರುವ ರಸ್ತೆಯೇ ಪ್ರಮುಖ ಕಾರಣ ಎಂದು ಆರೋಪಿಸಿ ಸ್ಥಳೀಯರು ಶುಕ್ರವಾರ ಬೆಳಗ್ಗೆ ರಸ್ತೆ, ರೈಲು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ವ್ಯಕ್ತಿಯೊಬ್ಬ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.

Advertisement

ಪಟ್ಟಣದಲ್ಲಿ ಹಾದುಹೋಗಿರುವ ಬಂಗಾರಪೇಟೆ-ಬೂದಿಕೋಟೆ ರಸ್ತೆಗೆ ಅಡ್ಡಲಾಗಿ ಸೇಟ್ ಕಾಂಪೌಂಡ್‌ ವಾರ್ಡ್‌ನಲ್ಲಿ ರೈಲ್ವೆ ಕ್ರಾಸಿಂಗ್‌ ಇದೆ. ಅದು ತೀರಾ ಕಿರಿದಾಗಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು 200 ಮೀಟರ್‌ ದೂರದಲ್ಲಿ ವಾಹನಗಳು ಸುಗಮವಾಗಿ ರೈಲ್ವೆ ಹಳಿ ದಾಟಲು ಅನುಕೂಲವಾಗುವಂತೆ ಇಲಾಖೆಯು ಹೊಸ ಕ್ರಾಸಿಂಗ್‌ ನಿರ್ಮಿಸಿದೆ. ಈ ಕ್ರಾಸಿಂಗ್‌ವರೆಗೆ ವಾಹನಗಳು ಬರಲು ರೈಲ್ವೆ ಹಳಿ ಪಕ್ಕದಲ್ಲೇ ಹೊಸದಾಗಿ ಎತ್ತರಿಸಿದ ರಸ್ತೆ ನಿರ್ಮಿಸಿದೆ. ಇದರಿಂದ ವಾರ್ಡ್‌ನ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ರಸ್ತೆಯಲ್ಲಿ ಬಿದ್ದ ಮಳೆ ನೀರು ನೇರ ರಸ್ತೆ ಪಕ್ಕದ ಮನೆಗಳಿಗೆ ನುಗ್ಗುತ್ತಿದೆ.

100ಕ್ಕೂ ಹೆಚ್ಚು ಮನೆಗೆ ನೀರು: ಗುಡುಗು -ಮಿಂಚಿನೊಂದಿಗೆ ಗುರುವಾರ ರಾತ್ರಿ 11 ಗಂಟೆಗೆ ಆರಂಭವಾದ ಮಳೆ ಬಿರುಸಾಗಿಯೇ ಸುರಿಯಿತು. ಇದರಿಂದ ಸೇಟ್ಕಾಂಪೌಂಡ್‌ನ‌ 100ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಇಡೀ ರಾತ್ರಿ ಜಾಗರಣೆ ಮಾಡಬೇಕಾಯಿತು. ಮನೆಯಲ್ಲಿದ್ದ ದವಸ ಧಾನ್ಯ, ಬಟ್ಟೆ, ದಾಖಲೆಗಳು, ಇತರೆ ವಸ್ತುಗಳನ್ನು ರಕ್ಷಿಸಿಕೊಳ್ಳಲು ಜನ ಪರದಾಡುವಂತಾಯಿತು.

ಪ್ರತಿಭಟನೆ: ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರಿಂದ ತೀವ್ರ ಆತಂಕಕ್ಕೆ ಒಳಗಾದ ನಾಗರಿಕರು, ಶಾದಿ ಮಹಲ್ ಕಟ್ಟಡದಲ್ಲಿ ಇಡೀ ರಾತ್ರಿ ಕಳೆದಿದ್ದಾರೆ. ಈ ವೇಳೆ ರೈಲ್ವೆ ಇಲಾಖೆ, ಜನಪ್ರನಿಧಿಗಳು, ಪುರಸಭೆ ಅಧಿಕಾರಿಗಳು ನಿವಾಸಿಗಳ ಕಷ್ಟ ಆಲಿಸಲು ಬರಲೇ ಇಲ್ಲ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಬೆಳಗ್ಗೆ 6 ಗಂಟೆಗೆ ಮುಖ್ಯರಸ್ತೆ ತಡೆದು 3 ಗಂಟೆ ಪ್ರತಿಭಟನೆ ನಡೆಸಿದರೂ ಸ್ಥಳಕ್ಕೆ ಯಾರೂ ಬರಲಿಲ್ಲ. ಇದರಿಂದ ಕುಪಿತಗೊಂಡ ಪ್ರತಿಭಟನೆಗಾರರು, ಕೋಲಾರ – ಬೆಂಗಳೂರು ರೈಲು ತಡೆಯಲು ಮುಂದಾದರೂ ಪ್ರಯೋಜನವಾಗಿಲ್ಲ. ಇದರಿಂದ ಪ್ರತಿಭಟನೆ ಮತ್ತೆ ತೀವ್ರಗೊಳಿಸಿದ ಸ್ಥಳೀಯರು ರೈಲು ಹಳಿ ಪಕ್ಕದಲ್ಲೇ ನಿರ್ಮಿಸಿದ್ದ ಎರಡೂ ಕಡೆಯ ರಸ್ತೆ ತಡೆದು ಪ್ರತಿಭಟನೆ ಮಾಡಿದರು.

ಪುರಸಭೆ ಸದಸ್ಯರು ಸ್ಥಳಕ್ಕೆ ಆಗಮನ: ಪ್ರತಿಭಟನೆ ಸ್ಥಳಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಶಂಶುದ್ಧೀನ್‌ಬಾಬು, ಸಿ.ರಮೇಶ್‌, ಸದಸ್ಯರಾದ ಮುಕ್ತಿಯಾರ್‌, ಸಾಧಿಕ್‌ಪಾಷ ಸೇರಿ ಕೆಲವು ಮುಖಂಡರು ಬಂದು ಸಮಸ್ಯೆ ಆಲಿಸಿದರು. ಈ ಮುಖಂಡರು ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಿದ್ದಂತೆ ಅಲ್ಲಿನ ವಾಸಿಗಳು ಮುಖಂಡರ ವಿರುದ್ಧವೇ ತಿರುಗಿಬಿದ್ದು ಟೀಕಾ ಪ್ರಹಾರ ನಡೆಸಿದರು. ಈ ವೇಳೆ ವ್ಯಕ್ತಿಯೊಬ್ಬ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದಾಗ ಅದನ್ನು ನಾಗರಿಕರು ತಡೆದರು. ಸೇಟ್ಕಾಂಪೌಂಡ್‌ ವಾರ್ಡ್‌ನಲ್ಲಿ ಹಲವು ವರ್ಷಗಳಿಂದಲೂ ಸಮಸ್ಯೆಗಳಿದ್ದರೂ ಯಾರೂ ಕ್ರಮಕೈಗೊಳ್ಳದೇ ಕೇವಲ ಓಟಿಗೋಸ್ಕರ ಜನರನ್ನು ಮರಳು ಮಾಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪುರಸಭೆ ಮಾಜಿ ಅಧ್ಯಕ್ಷ ಶಂಶುದ್ದೀನ್‌ ಬಾಬು ಮಧ್ಯಪ್ರವೇಶಿಸಿ, ಮಳೆಗಾಲ ಪ್ರಾರಂಭವಾಗಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಖುದ್ದು ಪರಿಶೀಲನೆ ಮಾಡಿದ್ದೇವೆ. ದಿನದ 24 ಗಂಟೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು. ಇದರ ಬಗ್ಗೆ ಯಾರೂ ಆತಂಕಪಡದೇ ಧೈರ್ಯದಿಂದ ಇರುತೆ ಮನವಿ ಮಾಡಿದ ಮೇಲೆ ಪ್ರತಿಭಟನೆ ವಾಪಸ್‌ ಪಡೆಯಲಾಯಿತು. ಮತ್ತೆ ನಿರ್ಲಕ್ಷ್ಯ ಮಾಡಿದ್ದಲ್ಲಿ ಬೂದಿಕೋಟೆ ಮಾರ್ಗದ ರಸ್ತೆಯನ್ನು ಜೆಸಿಬಿಯಿಂದ ಕೆಡವಿ ಸಂಪೂರ್ಣ ಮುಚ್ಚಿಸಲಾಗುವುದೆಂದು ಎಚ್ಚರಿಸಿದರು.

ಬಂಗಾರಪೇಟೆ: ತಾಲೂಕಿನಲ್ಲಿ ಗುರುವಾರ ರಾತ್ರಿ ಸಿಡಿಲು ಬಡಿದು ಗುಡಿಸಲು ಸುಟ್ಟು ಕರಕಲಾಗಿದ್ದು, ಕೂದಲೆಳೆ ಅಂತರದಲ್ಲಿ ಕುಟುಂಬವೊಂದು ಬಚಾವ್‌ ಆಗಿರುವ ಘಟನೆ ತಾಲೂಕಿನ ಬೂದಿಕೋಟೆ ಹೋಬಳಿಯ ಮುತ್ತೇನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ತೀವ್ರ ಬಿಸಿಲಿನ ತಾಪದಿಂದ ಬಸವಳಿದಿದ್ದ ಜನರ ಮನಕ್ಕೆ ಮಳೆ ತಂಪೆರೆಯಿತಾದರೂ ಗುರುವಾರ ರಾತ್ರಿ ಬಡಿದ ಸಿಡಲು ಕುಟುಂಬವೊಂದನ್ನು ಬೀದಿಪಾಲು ಮಾಡಿದೆ. ಗ್ರಾಮ ಹೊರವಲಯದ ತೋಟದಲ್ಲಿ ಪುಟ್ಟಪ್ಪ ಅವರು ಮಣ್ಣಿನ ಗೋಡೆ ನಿರ್ಮಿಸಿ, ತೆಂಗಿನ ಗರಿಹಾಕಿಕೊಂಡು ಗುಡಿಸಲನ್ನು ನಿರ್ಮಿಸಿಕೊಂಡಿದ್ದರು. ಗುರುವಾರ ರಾತ್ರಿ 10 ಗಂಟೆಯಲ್ಲಿ ಮಿಂಚು, ಗುಡುಗು ಸಿಡಿಲಿನೊಂದಿಗೆ ಮಳೆ ಆರ್ಭಟ ಜೋರಾಗಿದೆ. ಇದರಿಂದ ಆತಂಕಗೊಂಡ ಪುಟ್ಟಪ್ಪ ತನ್ನ ಕುಟುಂಬದ ಸದಸ್ಯರೊಂದಿಗೆ ಗುಡಿಸಲಿನಿಂದ ಹೊರಗೆ ಬಂದಿದ್ದಾರೆ. ಕೆಲಹೊತ್ತಿನಲ್ಲೇ ಸಿಡಿಲು ಬಡಿದು ಗುಡಿಸಲು ಸುಟ್ಟು ಕರಕಲಾಗಿದೆ. ಗುಡಿಸಲು ಪಕ್ಕದಲ್ಲಿ ಕಟ್ಟಿದ್ದ ಸೀಮೆಹಸುಗಳು ಪ್ರಾಣಾಪಾಯದಿಂದ ಪಾರಾಗಿವೆ.

ಗುಡಿಸಲಿನಲ್ಲಿದ್ದ ಅಡುಗೆ ಪಾತ್ರೆಗಳು, ಸಾಮಾನುಗಳು, 8 ಮೂಟೆ ರಾಗಿ, ಅಕ್ಕಿ, ದವಸ ಧಾನ್ಯ, ಬಟ್ಟೆ, ಟ್ರಂಕ್‌ನಲ್ಲಿದ್ದ 45 ಸಾವಿರ ರೂ. ಹಣ, ಕೋಳಿಗಳು ಸೇರಿ 2 ಲಕ್ಷ ರೂ. ನಷ್ಟು ನಷ್ಟ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ, ಬೂದಿಕೋಟೆ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಷ್ಟಕ್ಕೆ ಒಳಗಾದ ಪುಟ್ಟಪ್ಪ ಕುಟುಂಬದ ವಸ್ತುಸ್ಥಿತಿಯನ್ನು ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗಳಿಗೆ lತಿಳಿಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next