Advertisement

ನೆರೆಗಾವಿ

09:15 AM Aug 05, 2019 | Team Udayavani |

ಬೆಳಗಾವಿ: ಮಹಾರಾಷ್ಟ್ರ ಮತ್ತು ಬೆಳಗಾವಿಯ ನದಿಗಳ ವ್ಯಾಪ್ತಿ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ವೇದಗಂಗಾ, ಮಲಪ್ರಭಾ ಮತ್ತು ಹಿರಣ್ಯಕೇಶಿ ನದಿಗಳು ತುಂಬಿ ಹರಿಯುತ್ತಿದ್ದು, ಎಲ್ಲ ಕಡೆ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ನದಿಗಳಲ್ಲಿ ನೀರನ ಮಟ್ಟ ಒಂದೇ ಸಮನೆ ಏರಿಕೆಯಾಗುತ್ತಿರುವದರಿಂದ ಜಿಲ್ಲೆಯಲ್ಲಿ 26 ಬ್ಯಾರೇಜ್‌-ಸೇತುವೆಗಳು ನೀರಿನಲ್ಲಿ ಮುಳುಗಿವೆ.

Advertisement

ಪ್ರಮುಖ ನದಿಗಳ ಅಬ್ಬರದಿಂದ ಚಿಕ್ಕೋಡಿ ತಾಲೂಕಿನಲ್ಲಿ ಎಂಟು, ರಾಯಬಾಗ ತಾಲೂಕಿನಲ್ಲಿ ಎರಡು, ಅಥಣಿ ತಾಲೂಕಿನಲ್ಲಿ ಐದು, ಕಾಗವಾಡ ತಾಲೂಕಿನಲ್ಲಿ ಒಂದು, ಗೋಕಾಕ ತಾಲೂಕಿನಲ್ಲಿ ಮೂರು, ಮೂಡಲಗಿ ತಾಲೂಕಿನಲ್ಲಿ ನಾಲ್ಕು, ಖಾನಾಪುರ ತಾಲೂಕಿನಲ್ಲಿ ಮೂರು ಸೇತುವೆಗಳು ಮುಳುಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ದಿನಕ್ಕೊಂದು ರಸ್ತೆ ಸಂಪರ್ಕಗಳು ಕಡಿತಗೊಳ್ಳುತ್ತಿದ್ದು ನದಿ ತೀರದ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಆವರಿಸಿದೆ. ಪ್ರವಾಹಕ್ಕೆ ತುತ್ತಾಗಿರುವ ತಾಲೂಕುಗಳಲ್ಲಿ ಇದುವರೆಗೆ 700 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.

ವಿವಿಧೆಡೆ ಸಂಚಾರ ಸ್ಥಗಿತ: ಮಹಾರಾಷ್ಟ್ರದಲ್ಲಿ ಕೊಯ್ನಾ ಜಲಾಶಯ ವ್ಯಾಪ್ತಿಯಲ್ಲಿ ಕಳೆದ ಎರಡು ವಾರಗಳಿಂದ ಧಾರಾಕಾರ ಮಳೆಯಾಗುತ್ತಿದ್ದು ಕೃಷ್ಣಾ ನದಿಗೆ ಈಗ 2.31 ಲಕ್ಷ ಕ್ಯೂಸೆಕ್‌ ನೀರು ಹರಿದು ಬರಲಾರಂಭಿಸಿದೆ. ಇದರ ಪರಿಣಾಮ ಚಿಕ್ಕೋಡಿ ತಾಲೂಕಿನ ಏಳು ಕಡೆ ಸೇತುವೆ ಮತ್ತು ರಾಯಬಾಗ ತಾಲೂಕಿನ ಕುಡಚಿ ಸೇತುವೆ ಮೇಲೆ ನೀರು ಬಂದಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಅಥಣಿ ತಾಲೂಕಿನಲ್ಲಿ ಮೂರು ಸೇತುವೆಗಳು ಸಂಪರ್ಕ ಕಳೆದುಕೊಂಡಿವೆ. ಆದರೆ ಈ ಸೇತುವೆಗಳಿಗೆ ಪರ್ಯಾಯ ಮಾರ್ಗ ಇರುವದರಿಂದ ಗ್ರಾಮದ ಜನರಿಗೆ ಅಂತಹ ತೊಂದರೆಯಾಗಿಲ್ಲ.

ಪ್ರವಾಹ ಭೀತಿ ಜನರಿಗೆ ಮುನ್ನೆಚ್ಚರಿಕೆ: ಮಹಾರಾಷ್ಟ್ರದ ಜಲಾಶಯಗಳಿಂದ ಅದಿಕ ಪ್ರಮಾಣದಲ್ಲಿ ನೀರು ಬರುತ್ತಿರುವದವರಿಂದ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಂಭವವಿದ್ದು ಈ ಹಿನ್ನಲೆಯಲ್ಲಿ ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಚಿಕ್ಕೋಡಿ, ರಾಯಬಾಗ ಮತ್ತು ಅಥಣಿ ತಾಲೂಕಿನ 50 ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ ಈಗ 94 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಇನ್ನು 10 ಟಿಎಂಸಿ ನೀರು ಮಾತ್ರ ಬರಬೇಕಿದೆ. ಈ ಹಿನ್ನಲೆಯಲ್ಲಿ ಜಲಾಶಯದಿಂದ ಕೃಷ್ಣಾ ನದಿಗೆ 20998 ಕ್ಯೂಸೆಕ್ಸ್‌ ನೀರು ಬಿಡಲಾಗುತ್ತಿದೆ. ಅದೇ ರೀತಿ ವಾರಣಾ ಜಲಾಶಯದಿಂದ 20472 ಕ್ಯೂಸೆಕ್‌ ನೀರು ಸಹ ಕೃಷ್ಣಾ ನದಿಗೆ ಹರಿದು ಬರುತ್ತಿದೆ.

Advertisement

ಪ್ರವಾಹ ಎರಡು ಸೇನಾ ತುಕಡಿ ನಿಯೋಜನೆ: ಕೃಷ್ಣಾ ನದಿಯ ಪ್ರವಾಹ ಒಂದೇ ಸಮನೆ ಏರಿಕೆಯಾಗುತ್ತಿರುವ ಕಾರಣ ಪರಿಹಾರ ಕಾರ್ಯಗಳಿಗಾಗಿ ಮರಾಠಾ ಲಘು ಪದಾತಿ ದಳ ಕೇಂದ್ರದ ಎರಡು ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ. ಈ ಸೇನಾ ಸಿಬ್ಬಂದಿಗಳು ಅಥಣಿ, ರಾಯಬಾಗ, ನಿಪ್ಪಾಣಿ, ಚಿಕ್ಕೋಡಿ ಹಾಗೂ ಕಾಗವಾಡ ತಾಲೂಕುಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಜಿಲ್ಲಾ ಎಸ್‌ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಘಟಪ್ರಭಾದಲ್ಲಿ ಪ್ರವಾಹ: ಮಹಾರಾಷ್ಟ್ರದ ಅಂಬೋಲಿ ಮತ್ತು ಅಜರಾ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಘಟಪ್ರಭಾ ನದಿಗೆ ಈಗ 36 ಸಾವಿರ ಕ್ಯೂಸೆಕ್‌ ನೀರು ಬರಲಾರಂಭಿಸಿದೆ. ಇದರಿಂದ ಗೋಕಾಕ-ಶಿಂಗಳಾಪುರ, ಚಿಗಡೊಳ್ಳಿ-ನಲ್ಲಾನಟ್ಟಿ, ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಘಟಪ್ರಭಾ ನದಿಯ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಿರುವದರಿಂದ ಹಿಡಕಲ್ ಜಲಾಶಯದಲ್ಲಿ ಒಂದೇ ದಿನ ನಾಲ್ಕು ಅಡಿ ಏರಿಕೆ ಕಂಡುಬಂದಿದೆ.

ಕಣಕುಂಬಿ ಅರಣ್ಯ ಪ್ರದೇಶ ಭಾರೀ ಮಳೆ: ಮಲಪ್ರಭಾ ನದಿಯ ಉಗಮ ಸ್ಥಾನ ಖಾನಾಪುರದ ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಭಾರೀ ಮಳೆಯಿಂದ ನದಿಗೆ 31032 ಕ್ಯೂಸೆಕ್‌ ನೀರು ಬರುತ್ತಿದ್ದು ಇದರಿಂದ ಜಲಾಶಯದ ಮಟ್ಟದಲ್ಲಿ ಒಂದೇ ದಿನದಲ್ಲಿ ಮೂರು ಅಡಿಗಳಷ್ಟು ಏರಿಕೆ ಕಂಡುಬಂದಿದೆ. ಇದರಿಂದಾಗಿ ಖಾನಾಪುರ ತಾಲೂಕಿನಲ್ಲಿ ಮೂರು ಗ್ರಾಮಗಳ ಸೇತುವೆಗಳು ನೀರಿನಲ್ಲಿ ಮುಳುಗಿವೆ.

ಬೆಳಗಾವಿ ಮತ್ತು ಗೋಕಾಕ ತಾಲೂಕಿನ ಕೆಲ ಹಳ್ಳಿಗಳಲ್ಲಿ ಆತಂಕ ಸೃಷ್ಟಿಸುತ್ತ ಬಂದಿರುವ ಬೆಳಗಾವಿಯಲ್ಲಿ ಹರಿಯುವ ಬಳ್ಳಾರಿ ನಾಲಾ ಈಗ ಸಂಪೂರ್ಣ ತುಂಬಿ ಹೊಲಗಳಿಗೆ ನುಗ್ಗಿದೆ.ಆದರೆ ಇದುವರೆಗೆ ಎಲ್ಲಿಯೂ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿಲ್ಲ.

ಸುರಕ್ಷಿತ ಸ್ಥಳಕ್ಕೆ: ಕೃಷ್ಣಾ, ವೇದಗಂಗಾ ಹಾಗೂ ದೂದಗಂಗಾ ನದಿಗಳ ಪ್ರವಾಹಕ್ಕೆ ತುತ್ತಾಗಿರುವ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿನ 54 ಕುಟುಂಬಗಳ 162 ಜನರು, ಯಡೂರವಾಡಿಯ 49 ಕುಟುಂಬಗಳ 147 ಜನ ಹಾಗೂ ಮಾಂಜರಿ ಗ್ರಾಮದ 8 ಕುಟುಂಬಗಳ 24 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ. ಈ ಮೂರು ಗ್ರಾಮಗಳಲ್ಲಿ ತಲಾ ಒಂದು ಗಂಜಿ ಕೇಂದ್ರ ಆರಂಭಿಸಲಾಗಿದೆ.

ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ 40 ಕುಟುಂಬಗಳ 150 ಜನ, ನಾಗನೂರು ಪಿ ಕೆ ಗ್ರಾಮದ ಕುಟುಂಬಗಳ 25 ಜನ. ನದಿ ಇಂಗಳಗಾವದ ಆರು ಕುಟುಂಬಗಳ 18 ಜನ ಶಿರಹಟ್ಟಿ ಗ್ರಾಮದ 10 ಕುಟುಂಬಗಳ 28 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ. ಇದಲ್ಲದೆ ಗೋಕಾಕ ತಾಲೂಕಿನ ಕುಂದರಗಿಯ ಮಠದಲ್ಲಿ ಮಾರ್ಕಂಡೇಯ ನದಿಯ ಪ್ರವಾಹದಿಂದ ಸಿಲುಕಿಹಾಕಿಕೊಂಡಿದ್ದ 15 ಜನರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಮುಳುಗಿದ ಸೇತುವೆ: ಚಿಕ್ಕೋಡಿ ತಾಲೂಕು: ಕಲ್ಲೋಳ- ಯಡೂರ. ಸದಲಗಾ- ಬೋರಗಾಂವ, ಕಾರದಗಾ- ಭೋಜ, ಬೋಜವಾಡಿ- ಕುನ್ನೂರ. ಯಕ್ಸಾಂಬಾ- ದಾನವಾಡ. ಸಿದ್ನಾಳ- ಅಕ್ಕೋಳ, ಜತ್ರಾಟ-ಭೀವಶಿ ಹಾಗೂ ಮಲಿಕವಾಡ- ದತ್ತವಾಡ ಸೇತುವೆಗಳು. ರಾಯಬಾಗ ತಾಲೂಕು: ಕುಡಚಿ ಸೇತುವೆ. ರಾಯಬಾಗ-ಚಿಂಚಲಿ. ಅಥಣಿ: ನದಿ ಇಂಗಳಗಾವ-ತೀರ್ಥ. ಸಪ್ತಸಾಗರ- ಬಾವನಸವದತ್ತಿ. ಕೊಕಟನೂರ- ಶಿರಹಟ್ಟಿ. ಜುಂಜರವಾಡ- ತುಬಚಿ. ಖವಟಕೊಪ್ಪ- ಶೇಗುಣಸಿ. ಕಾಗವಾಡ ತಾಲೂಕು: ಉಗಾರ ಕೆ ಎಚ್-ಉಗಾರ ಬಿ ಕೆ ರಸ್ತೆ. ಖಾನಾಪುರ: ಮಂತುರ್ಗಾ. ತಿವೋಲಿ. ನಿಲವಡೆ. ಗೋಕಾಕ: ಶಿಂಗಳಾಪುರ-ಗೋಕಾಕ. ಚಿಗಡೊಳ್ಳಿ- ನಲ್ಲಾನಟ್ಟಿ. ಉದಗಟ್ಟಿ- ವಡೇರಹಟ್ಟಿ, ಮೂಡಲಗಿ: ಸುಣಧೋಳಿ- ಮೂಡಲಗಿ. ಢವಳೇಶ್ವರ- ಮಹಾಲಿಂಗಪುರ. ಹುಣಶ್ಯಾಳ ಪಿ ವೈ-ಮುನ್ಯಾಳ. ಅವರಾದಿ- ನಂದಗಾವ ಸೇತುವಗಳು ಮುಳುಗಿವೆ.

Advertisement

Udayavani is now on Telegram. Click here to join our channel and stay updated with the latest news.

Next