Advertisement

ನರಕವಾಗುತ್ತಿದೆ ನಗರ ಜೀವನ

02:53 PM Oct 20, 2017 | Sharanya Alva |

ನಾವೀಗ ಬದುಕುತ್ತಿರುವುದು ಅವೇಗದ ಯುಗದಲ್ಲಿ, ಅವೇಶದ ಯುಗದಲ್ಲಿ. ಅಲೋಚಿಸುವುದಕ್ಕಾಗಲಿ, ಅವಲೋಕಿಸುವುದಕ್ಕಾಗಲಿ ನಮಗೆ ಸಮಯವೇ ಇಲ್ಲ. ಎಲ್ಲದರಲ್ಲಿಯೂ ಗಡಿಬಿಡಿ, ಮನದಲ್ಲಿ ಸಂಕಲ್ಪ ಮಾಡಿಕೊಂಡಿದ್ದು ಕೂಡಲೇ ದೊರಕಿಸಿಕೊಳ್ಳಬೇಕೆಂಬ ತವಕ. ಅದ್ದರಿಂದಲೇ ಅನಾಹುತಗಳ ಸರಣಿ ಪರಂಪರೆ ನಮ್ಮ ಹೆಗಲೇರಿ ಕುಳಿತಿದೆ.

Advertisement

ಉದ್ಯಾನ ನಗರಿ ಎಂದು ಖ್ಯಾತಿವೆತ್ತ ರಾಜಧಾನಿಯ ಮೇಲೆ ಮುಗಿಲೇ ಕಳಚಿ ಬಿದ್ದಂತೆ ಮಳೆ ಸುರಿಯುತ್ತದೆ. ಮಹಾನಗರದ ಜನಸಾಮಾನ್ಯರ ಬದುಕು ದುಸ್ತರವಾಗುತ್ತದೆ. ಎಡಬಿಡದೇ ಸುರಿಯುವ ಮಳೆಯು ಹತ್ತಾರು ಅಮಾಯಕರನ್ನು ಪ್ರವಾಹದ ರೂಪದಲ್ಲಿ ಹೊತ್ತೂಯ್ಯುತ್ತದೆ. ಬದುಕಿ ಉಳಿದವರ ಸ್ಥಿತಿ ಕೂಡ ಸಮಾಧಾನಕರವಾಗಿಲ್ಲ. ಕೆಲವರು ಇಡೀ ದಿನ ಕಾರುಗಳಲ್ಲಿಯೇ ಬಂಧಿಯಾಗಿ ಜೀವ ಉಳಿಸಿಕೊಂಡರೆ, ಕೊಚ್ಚಿಹೋದ ಜೋಪಡಿಗಳ ಆಸೆ ಬಿಟ್ಟು ಎತ್ತರದ ಕಟ್ಟಡಗಳನ್ನೇರಿ ಬದುಕಿನ ದಡ ಸೇರಿದವರು, ಬಸ್‌ ನಿಲ್ದಾಣಗಳಲ್ಲಿಯೇ ಕಾಲ ಕಳೆದು ಮನೆಗೆ
ಮರಳಿದವರು ಹೀಗೆ ಮಹಾಮಳೆಯಲ್ಲಿ ಅಕ್ಷರಶಃ ಸಾವಿನ ಕದ ತಟ್ಟಿ ಬಂದ ಒಬ್ಬೊಬ್ಬರದ್ದೂ ಒಂದೊಂದು ಸಾಹಸಮಯ ಕತೆ. ಚಂಡಿ ಹಿಡಿದ ಮಳೆಯು ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿಯನ್ನು ಆಪೋಷನ ತೆಗೆದುಕೊಂಡಿದೆ. ವರ್ಷದ ಹಿಂದೆ ಚೆನ್ನೈ ಹಾಗೂ ಎರಡು ವರ್ಷದ ಹಿಂದೆ ಮುಂಬೈ ಮಹಾನಗರಗಳಲ್ಲಿ ಸುರಿದ ಮಹಾಮಳೆಯಿಂದ ಬೆಂಗಳೂರು ಮಹಾನಗರ ಕಲಿತ ಪಾಠವೇನು? ಬೆಂಗಳೂರು ಅಂತಷ್ಟೇ
ಅಲ್ಲ, ನಗರೀಕರಣದ ಹುಚ್ಚು ಓಟಕ್ಕೆ ಬಿದ್ದಿರುವ ದೇಶದ ಇತರ ಮಹಾನಗರಗಳಲ್ಲಿಯಾದರೂ ಈ ರೀತಿಯ ಅಕಾಲಿಕ ವಿಕೋಪಗಳನ್ನು ಎದುರಿಸಲು ಏನಾದರೂ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆಯೇ? ಎಂದು ಪ್ರಶ್ನಿಸಿಕೊಂಡರೆ ಅದಕ್ಕೆ ಸಮರ್ಪಕವಾದ ಉತ್ತರ ಸಿಗುವುದಿಲ್ಲ.

ಕಳೆದ 10 ವರ್ಷಗಳಿಗೆ ಹೋಲಿಸಿದರೆ ಬೆಂಗಳೂರು ಬಹಳಷ್ಟು ವಿಷಯಗಳಲ್ಲಿ ತೀರಾ ಕಳಪೆ ಕಾಮಗಾರಿಗಳ ಕನ್ನಡಿಯಾಗಿದೆ. ಈ ಒಂದು ತಿಂಗಳ ಅವಧಿಯಲ್ಲಿ ಸುರಿದ ಮಳೆಯಿಂದ ಒಂದು ದಶಕದಲ್ಲಿ ಮಹಾನಗರದ ಬೆಳವಣಿಗೆ ಏನಾಗಿದೆ ಎಂಬ ಸತ್ಯ ಬೆತ್ತಲೆಗೊಂಡಿದೆ. ಕಳೆದ ವರ್ಷಗಳಲ್ಲಿ ಸುರಿದ ಮಳೆಯ ಕೇವಲ 3ನೆಯ ಒಂದು ಭಾಗ ಈ ಬಾರಿ ಸುರಿದಿದ್ದರೂ ಅದರ ಪರಿಣಾಮ ಮಾತ್ರ ಹೆಚ್ಚು ಕಡಿಮೆ ಹಿಂದಿನಂತೆಯೇ ಇದೆ. ಇಡೀ ನಗರದ ಜನಜೀವನ ಬಹುಪಾಲು ಕಳೆದ ವರ್ಷಗಳ ಮಹಾಮಳೆ ಸ್ಥಿತಿಗೆ ಹೋಗಿದೆ. ಆದರೆ ಈಗ ಮೋಡ ಬಿತ್ತನೆ 
ಮಾಡುತ್ತಿರುವುದರಿಂದ ಭಾರಿ ಮೋಡಗಳು ಮುಗಿಲಲ್ಲಿ ಹಿಂದಿಗಿಂತ ಹೆಚ್ಚಾಗಿವೆ. ಮಳೆ ನೀರಿನ ಪ್ರವಾಹ ತಗ್ಗಲು ಮುಂಚೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಲಿದೆ.

2009ರಲ್ಲಿ ರಾಜ್ಯದ ವಿವಿಧಡೆಯಲ್ಲಿ ಸುರಿದ ಮಹಾಮಳೆಯ ನಂತರ ಅಳವಡಿಸಿರುವ ಮಳೆಮಾಪಕಗಳಲ್ಲಿ ದೊರೆತ ಅಂಕಿ ಅಂಶಗಳ ದೋಷದಿಂದಾಗಿ ಈ ಎಚ್ಚರಿಕೆ ವ್ಯವಸ್ಥೆ ಇದ್ದೂ ಇಲ್ಲದಂತಾಗಿದೆ. ಇದು ಸಾಲದೆಂಬಂತೆ, ನೂರಾರು ಕೋಟಿ ವೆಚ್ಚದಲ್ಲಿ ಆರಂಭವಾಗಿದ್ದ ರಸ್ತೆ ಕಾರಿಡಾರ್‌ಗಳು ಮತ್ತು ಚರಂಡಿಗಳ ಅಗಲೀಕರಣ ಕಾಮಗಾರಿ ಈಗಲೂ ಪೂರ್ಣಗೊಳ್ಳದಿರುವುದು ಇನ್ನೂ ಹೆಚ್ಚಿನ ಅನಾಹುತಗಳಿಗೆ ಕಾರಣವಾಗುತ್ತಿದೆ. ಈ ಸಮಸ್ಯೆಗೆ ಮುಖ್ಯವಾಗಿ ನಮ್ಮ ವ್ಯವಸ್ಥೆಯ ಆಮೆಗತಿಯ ನಿರ್ಧಾರಗಳು ಮತ್ತು ಜಿಡ್ಡುಗಟ್ಟಿರುವ ರಾಜಕಾರಣಿ-ಭ್ರಷ್ಟ ಅಧಿಕಾರಶಾಹಿ ಮತ್ತು ಗುತ್ತಿಗೆದಾರರ ನಡು ವಿನ ಅಪವಿತ್ರ ಮೈತ್ರಿಗಳಲ್ಲದೆ ಇನ್ನೂ ಹಲವಾರು ಕಾರಣಗಳನ್ನು ಪಟ್ಟಿಮಾಡಬಹುದು. ಮೇಲಿನ ಕಾರಣಗಳಲ್ಲದೇ ಇನ್ನೊಂದು ಮೂಲಭೂತ ಸಮಸ್ಯೆ ಇದೆ.

ಅದನ್ನು ನಮ್ಮಲ್ಲಿನ ಯಾವ ಯೋಜನೆಯಿಂದಲೂ ಸರಿಪಡಿಸಲಾಗಿಲ್ಲ. ಜಾಗತೀಕರಣದ ನಂತರದಲ್ಲಿ ನಮಗೆ ಹೆಚ್ಚು ಹೆಚ್ಚು ನಿವೇಶನ ಗಳನ್ನು ಸೃಷ್ಟಿ ಮಾಡಿ ಕಟ್ಟಡ ನಿರ್ಮಾಣಕ್ಕೆ ಇಂಚಿಂಚು ಜಾಗವನ್ನು ಅಕ್ರಮಿಸಿ ಬಹುಮಹಡಿ ಕಟ್ಟಡಗಳ ಕಾಂಕ್ರೀಟು ಕಾಡು ನಿರ್ಮಾಣ ಮಾಡುವುದೇ ಆದ್ಯತೆಯಾಗಿಬಿಟ್ಟಿದೆ. ಈ ಅಂಧಾದುಂಧಿ ಬೆಳವಣಿಗೆಯ ದುಷ್ಪರಿಣಾಮವೇನಾಗಿದೆ ಎನ್ನುವುದನ್ನು ಮಳೆ ಸಾದರಪಡಿಸುತ್ತಿದೆ. ಹಾಗೆಂದು ಈ ಸಂಗತಿ  ನಮಗೆ ಹಾಗೂ ವ್ಯವಸ್ಥೆಗೆ ಗೊತ್ತಿಲ್ಲವೆಂದೇನೂ ಅಲ್ಲ. ನೆಲಕ್ಕೆ ಬಿದ್ದ ಮಳೆಯ ನೀರು ಅಪಾರ ಪ್ರಮಾಣದಲ್ಲಿರುವುದರಿಂದ
ಹರಿದು ಹೋಗುವುದಕ್ಕೆ ವಿಶಾಲವಾದ ಜಾಗ ಬೇಕು. ಚರಂಡಿ, ಕಾಲುವೆಗಳಲ್ಲಿ ಸರಾಗ ಹರಿವಿರಬೇಕು, ಉತ್ತಮ ಸಂಪರ್ಕವಿರಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ಸಾಮಾನ್ಯ ಸಂಗತಿಯಾಗಿದ್ದರೂ. ಈ ಸಂಗತಿಗಳೇ ಹಳ್ಳ ಹಿಡಿದಿವೆ. ಈ ಸಮಸ್ಯೆಯನ್ನು ಜಾಣ ಕುರುಡರಂತೆ ನಿರ್ಲಕ್ಷ ಮಾಡುತ್ತಲೇ ಮುಂದೆ ಸಾಗಿದ್ದೇವೆ ನಾವೆಲ್ಲ. ಈ ಹಿಂದೆ ಸುರಿದ ಮಹಾಮಳೆಯ ಪಾಠವೂ ಇದೇ ಆಗಿತ್ತು. ನೀರಿನ ಸರಾಗ ಹರಿವಿಗೆ ಜಾಗವಿಲ್ಲದಿದ್ದರೆ ಕೃತಕ ಪ್ರವಾಹ ಸೃಷ್ಟಿಯಾಗುತ್ತದೆ. ರಸ್ತೆಗಳು ನದಿಗಳಾಗುತ್ತವೆ. 

Advertisement

ವಾಸಸ್ಥಾನಗಳು ಮುಳುಗಡೆಯಾಗಿ ಅಪಾರ ನಷ್ಟ ಸಂಭವಿಸುತ್ತದೆ. ಆದರೆ ಮುಂದೋಡಬೇಕು, ಎಲ್ಲವನ್ನೂ ಬಾಚಿಕೊಳ್ಳಬೇಕು ಎಂಬ ಓಟದಲ್ಲಿರುವ ನಮಗೆ ಈ ಯಾವ ಘಟನೆಗಳೂ ನೆನಪಿಗೆ ಬರುವುದೇ ಇಲ್ಲ. ಮಳೆ ನಿಂತದ್ದೇ ಏನೂ ಆಗೇ ಇಲ್ಲವೇನೋ ಎಂಬಂತೆ ಸುಮ್ಮನಾಗಿಬಿಡುತ್ತೇವೆ. ಮುಂದೆ ಇಂಥ ವಿಪತ್ತುಗಳು ಎದುರಾದಾಗಲೇ ಎಚ್ಚೆತ್ತುಕೊಳ್ಳುವುದು.

ಬೆಂಗಳೂರು ನಗರದಲ್ಲಿ ಇದ್ದ ಹಲವಾರು ಕೆರೆಗಳ ಅಂಗಳ ಈಗ ನಿವೇಶನಗಳಾಗಿ ಮಾರ್ಪಟ್ಟಿವೆ. ಈ ಖಾಲಿ ಜಾಗಗಳಲ್ಲಿ
ತಲೆ ಎತ್ತುತ್ತಿರುವ ಕಟ್ಟಡಗಳು ನಗರದೊಳಗಿದ್ದ ಕೆರೆಗಳನ್ನು ಕೊಳಚೆ ಚರಂಡಿಗಳನ್ನಾಗಿಸಿದ್ದಲ್ಲದೇ ಅಭಿವೃದ್ಧಿ ಹೆಸರಿನ ಈ ಎಲ್ಲಾ ಬೃಹತ್‌ ಪ್ರಮಾದಗಳು ನಗರದ ಬದುಕನ್ನು ನರಕವಾಗಿಸುವತ್ತ ದಾಪುಗಾಲು ಹಾಕಿವೆ. ಇಷ್ಟಲ್ಲದೇ ಅರಣ್ಯ ಪ್ರದೇಶ, ಉದ್ಯಾನವನ ಹಾಗೂ ಮೈದಾನಗಳು ದಿನೇ ದಿನೆ ರಿಯಲ್‌ ಎಸ್ಟೇಟ್‌ ಪಾಲಾಗುತ್ತಿವೆ. ಇವುಗಳಲ್ಲಿ ಬಹುಪಾಲು ಕಾನೂನಾತ್ಮಕವಾಗಿ ನಡೆಯುತ್ತಿಲ್ಲ. ಬದಲಿಗೆ ಇಲ್ಲಿ ಬೇರೆಯದೇ ಶಕ್ತಿಗಳು ಕೆಲಸ ಮಾಡುತ್ತಿವೆ.

ಅಧಿಕಾರರೂಢರ ಆಶೀರ್ವಾದವೇ ಈ ಅಕ್ರಮಗಳು ಜರುಗಲು ಅಧಿಕೃತ ಮೊಹರು. ರಿಯಲ್‌ ಎಸ್ಟೇಟ್‌ ಮಾಫಿಯಾಕ್ಕೆ ಹಲವು ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳೊಡನೆ ನಿಕಟ ಸಂಪರ್ಕವಿರುತ್ತದೆ ಎನ್ನುವುದು ಓಪನ್‌ ಸೀಕ್ರೆಟ್‌. ಬೆಂಗಳೂರು ಮಹಾನಗರವನ್ನು ರಿಯಲ್‌ ಎಸ್ಟೇಟ್‌ ವಲಯ ಯಾವ ಪ್ರಮಾಣದಲ್ಲಿ ಕಬಳಿಸಿದೆ ಎನ್ನುವುದನ್ನು ತಿಳಿಯಬೇಕಾದರೆ ನಗರದ ಹಿಂದಿನ ಮತ್ತು ಇಂದಿನ ಉಪಗ್ರಹ ಚಿತ್ರಗಳನ್ನುಗಮನಿಸಬೇಕು. ಆಗ ಕಟು ವಾಸ್ತವ ಕಣ್ಣಿಗೆ ರಾಚುತ್ತದೆ. ಮಳೆ ನೀರನ್ನು ಇಂಗಿಸಿ ನಗರವನ್ನು ಪ್ರವಾಹದಿಂದ ಉಳಿಸಬಹುದಾಗಿದ್ದ ನೈಸರ್ಗಿಕ ಅವಕಾಶಗಳನ್ನೇ ಮುಚ್ಚಿ ಹಾಕಲಾಗುತ್ತಿದೆ. ನಗರದ ವಿವಿಧ ಹಂತಗಳ ಬೆಳವಣಿಗೆಯ ಸಮಯದಲ್ಲಿ ಭೂಗರ್ಭ ಶಾಸ್ತ್ರಜ್ಞರು ರಚಿಸಿರುವ ನಕ್ಷೆಗಳು ಈ ಎಡವಟ್ಟುಗಳ ಬಗ್ಗೆ ಇನ್ನೂ ಸುದೀರ್ಘ‌ ವಿವರಣೆ ನೀಡುತ್ತವೆ. ದೇಶ ಸ್ವಾತಂತ್ರ ಪಡೆದಾಗ ಬೆಂಗಳೂರು ಮಹಾನಗರದ ಶೇ.70ರಷ್ಟು ಪ್ರದೇಶ ಹಸಿರಿ  ನಿಂದ ಕಂಗೊಳಿಸುತ್ತಿದ್ದುದ್ದಲ್ಲದೇ ಶೇ.18ರಷ್ಟು ಕೆರೆಕುಂಟೆ ಗಳಿದ್ದು ಶೇ.12ರಷ್ಟು ಪ್ರದೇಶದಲ್ಲಿ ಮಾತ್ರ ಕಟ್ಟಡಗಳಿದ್ದವು.ಜಾಗತೀಕರಣದ ನಂತರದಲ್ಲಿ ಈ ಮೇಲಿನ ಎಲ್ಲಾ ಚಿತ್ರಣವೂ ಉಲ್ಟಾ ಆದ ಪರಿಣಾಮ ಮುಗಿಲಿನಿಂದ ಸುರಿದ ಮಳೆಗೆ ಕಡಲು ಸೇರುವ ದಾರಿಗಳನ್ನು ಕಲ್ಪಿಸುವುದು ಹೇಗೆಂದು ನಾವೀಗ ಪರದಾಡುತ್ತಿದ್ದೇವೆ.

ನಮ್ಮ ಅಧುನಿಕ ಬದುಕಿನ ದುರಂತದ ಪರಮಾವಧಿ ಎಂದರೆ, ಈ ಅನಾಹುತಕಾರಿ ಬೆಳವಣಿಗೆ ಸಮಕಾಲೀನ ಭಾರತದ ಸಾಂಕ್ರಾಮಿಕ ರೋಗವಾಗಿದೆ. ಉತ್ತರ ಭಾರತ ಇರಲಿ, ಮಧ್ಯ ಭಾರತವಿರಲಿ, ಎಲ್ಲೆಡೆ ರಿಯಲ್‌ ಎಸ್ಟೇಟ್‌ ಮಾಫಿಯಾ ಜನಸಾಮಾನ್ಯರ ಭವಿಷ್ಯದ ಬದುಕನ್ನು ದುರಂತಕ್ಕೆ ಒಯ್ಯುತ್ತಿದೆ.

ಪರಿಸರ ನಿಯಮಗಳು ಅಭಿವೃದ್ಧಿಯ ಓಟಕ್ಕೆ ಅಡ್ಡಗಾಲಾಗಿವೆ ಎಂದು ಬಿಂಬಿಸಲಾಗುತ್ತಿದೆ. ನಗರದೊಳಗೆ ಹರಿಯುತ್ತಿದ್ದ ನದಿಗಳನ್ನು ಚರಂಡಿಗಳನ್ನಾಗಿ ಮಾಡಿಕೊಳ್ಳಲಾಗಿದೆ. ನಿಯಂತ್ರಣವಿಲ್ಲದ ಕಟ್ಟಡಗಳ ನಿರ್ಮಾಣದಿಂದಾಗಿ ನಗರಗಳ ಚಿತ್ರಣವೇ ಬದಲಾಗಿ ಹೋಗಿದೆ. ಮುಗಿಲಿನ ಎತ್ತರೆತ್ತರಕ್ಕೆ ತಲೆ ಎತ್ತಿ ನಿಂತಿರುವ ಕಟ್ಟಡಗಳು ಮಳೆನೀರು ಕೊಯ್ಲಿಗೆ ಯಾವುದೇ ಸಂರಕ್ಷಣಾ ವ್ಯವಸ್ಥೆಯನ್ನು ಕ್ರಮಬದ್ಧವಾಗಿ ಮಾಡಿಕೊಳ್ಳಲಾಗಿಲ್ಲ. ಇಂದಿನ ನಮ್ಮ ದುರಂತಗಳ ಸರಮಾಲೆಗೆ ವ್ಯವಸ್ಥೆಯಲ್ಲಿ ಮಳೆನೀರಿನ ಹರಿವನ್ನು ನಿಯಂತ್ರಿಸುವುದಕ್ಕೆ ಅಯಾ ಸ್ಥಳೀಯ ಸರ್ಕಾರದ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಬಜೆಟ್‌ ರೂಪರೇಷೆಗಳಿಲ್ಲದಿರುವುದೇ ಇಂದಿನ ಎಲ್ಲಾ ಆವಾಂತರಗಳಿಗೆ ಪ್ರಮುಖ ಕಾರಣ.

ಕೊನೆಯದಾಗಿ, ನಮ್ಮ ಆಧುನಿಕ ವ್ಯವಸ್ಥೆಯ ನಾಗಲೋಟದಲ್ಲಿ ಸದ್ಯದ ನಗರೀಕರಣವನ್ನು ಯಾವುದೇ ರೀತಿಯಲ್ಲೂ, ಯಾವುದೇ
ಮಾನದಂಡ ಅನುಸರಿಸಿ ನೋಡಿದರೂ ಸುಸ್ಥಿರವಾದ ಮಾದರಿ ಇಲ್ಲದಿರುವುದಕ್ಕೆ ಈಗಿನ ಅನಾಹುತಗಳೇ ಸಾಕ್ಷ್ಯಾಧಾರಗಳನ್ನು ಒದಗಿಸುತ್ತವೆ. ಇದೇ ಪರಿಸ್ಥಿತಿ ಮುಂದಿನ ದಿನಮಾನಗಳಲ್ಲಿ ಹಾಗೆಯೇ ಮುಂದುವರಿದರೆ ನಗರದಲ್ಲಿ ವಾಸಿಸುವ ಜನರು ಅನ್ಯಪ್ರದೇಶಗಳತ್ತ ಹೊರಳುವುದು ಖಚಿತ. ಹವಾಮಾನ ವೈಪರೀತ್ಯ, ಮಳೆಯ ಪ್ರಮಾಣದ ವ್ಯತ್ಯಾಸ ಮಾಮೂಲಿ ಆಗಿಬಿಟ್ಟಿರುವ ಈ ದಿನಗಳಲ್ಲಿ ನಗರದೊಳಗಿನ ನೀರು ಹರಿವಿನ ಸುಗಮಗೊಳಿಸದೇ ಇದ್ದರೆ ನರಕವನ್ನು ನಾವು ಮತ್ತೆಲ್ಲೋ ಹುಡುಕಬೇಕಾಗಿಲ.

 *ಮಂಜುನಾಥ ಉಲುವತ್ತಿ ಶೆಟ್ಟರ್‌ 

Advertisement

Udayavani is now on Telegram. Click here to join our channel and stay updated with the latest news.

Next