Advertisement

ಭಾರೀ ಗಾಳಿ ಮಳೆ: ಕೃಷಿ, ಮೆಸ್ಕಾಂಗೆ ಅಪಾರ ಹಾನಿ

10:04 AM Apr 05, 2022 | Team Udayavani |

ಬೆಳ್ತಂಗಡಿ: ತಾಲೂಕಿನ ಹಲವೆಡೆ ರವಿವಾರ ಸುರಿದ ಗುಡುಗು ಸಹಿತ ಭಾರೀ ಗಾಳಿ ಮಳೆಯ ಪರಿಣಾಮ ಕೃಷಿ ಹಾನಿ ಸಹಿತ ವಿದ್ಯುತ್‌ ಕಂಬಗಳು ಉರುಳಿ ಮೆಸ್ಕಾಂಗೆ ಭಾರೀ ನಷ್ಟ ಸಂಭವಿಸಿದೆ.

Advertisement

ರವಿವಾರ ಸಂಜೆ ಸ್ವಲ್ಪ ಮಳೆ ಸುರಿದು ನಿಂತಿದ್ದು, ಬಳಿಕ ರಾತ್ರಿ 8.30 ರ ಸುಮಾರಿಗೆ ಭಾರೀ ಮಳೆಯೊಂದಿಗೆ ಬೀಸಿದ ಗಾಳಿಗೆ ನಡ, ನಡ ಗ್ರಾ.ಪಂ. ವ್ಯಾಪ್ತಿಯ ಕನ್ಯಾಡಿ 1 ಗ್ರಾಮದ ಗುರಿಪಳ್ಳದಲ್ಲಿ ಒಂದೇ ಕಡೆ 6 ವಿದ್ಯುತ್‌ ಕಂಬ ಉರುಳಿದೆ. ಕನ್ಯಾಡಿ-1, ಗುರಿಪಳ್ಳ, ಕಲ್ಮಂಜ, ಮುಂಡಾಜೆ ಸೇರಿದಂತೆ ಹಲವೆಡೆ ಅಡಿಕೆ, ರಬ್ಬರ್‌ ಮರಗಳು ಮುರಿದು ಬಿದ್ದಿವೆ. ಅಡಿಕೆ ತೋಟ, ರಸ್ತೆ, ವಿದ್ಯುತ್‌ ಲೈನ್‌ಗಳ ಮೇಲೆ ಕೂಡ ಮರಗಳು ಉರುಳಿ ಬಿದ್ದಿವೆ.

ಉಜಿರೆ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯಲ್ಲಿ 9 ಎಚ್‌ಟಿ ಹಾಗೂ 12 ಎಲ್‌ಟಿ ಕಂಬಗಳು ಗಾಳಿಗೆ ಮುರಿದು ಇಲಾಖೆಗೆ 5 ಲಕ್ಷ ರೂ.ಗಿಂತ ಅಧಿಕ ನಷ್ಟ ಉಂಟಾಗಿದೆ. ಗುರಿಪಳ್ಳ ಸಮೀಪ ಮರವೊಂದು ಲೈನ್‌ ಮೇಲೆ ಉರುಳಿ 6 ವಿದ್ಯುತ್‌ ಕಂಬಗಳು ಮುರಿದಿವೆ. ಇದರಿಂದ ಇಂದಬೆಟ್ಟು ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಸ್ಥಳೀಯರು ಹಾಗೂ ಮೆಸ್ಕಾಂ ಸಕಾಲಿಕವಾಗಿ ಸ್ಪಂದಿಸಿ ರಾತ್ರಿಯೇ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಟ್ಟರು.

ವಿದ್ಯುತ್‌ ಪೂರೈಕೆಯಾಗಿಲ್ಲ

ಎಸ್ಸೆಸ್ಸೆಲ್ಸಿ ಸಹಿತ ಹಲವು ತರಗತಿಗಳಿಗೆ ಅಂತಿಮ ಪರೀಕ್ಷೆಗಳು ನಡೆಯುತ್ತಿದ್ದು, ಒಂದೆಡೆ ವಿದ್ಯುತ್‌ ಕೈಕೊಟ್ಟಿದ್ದು, ಮತ್ತೂಂದೆಡೆ ಸಿಡಿಲಿಗೆ ಹಲವೆಡೆ ಇನ್ವರ್ಟರ್‌ ಗಳು ಕೆಟ್ಟು ನಿಂತ ಪರಿಣಾಮ ಗ್ರಾಮೀಣ ಭಾಗದ ಮಕ್ಕಳ ಪರೀಕ್ಷೆಗೆ ಅಭ್ಯಾಸ ನಡೆಸಲು ಸಮಸ್ಯೆಯಾಗಿದೆ. ಕೆಲವೆಡೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ವಿದ್ಯುತ್‌ ಬಂದಿದ್ದು, ಹಲವು ಭಾಗಗಳಲ್ಲಿ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದು ಸೋಮವಾರ ಸಮರ್ಪಕ ವಿದ್ಯುತ್‌ ಪೂರೈಕೆಯಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next