Advertisement

ಕರಾವಳಿ ಭಾಗದಲ್ಲಿ ಸಿಡಿಲು ಸಹಿತ ಮಳೆ, ಕೆಲವೆಡೆ ಹಾನಿ

01:22 AM Apr 19, 2021 | Team Udayavani |

ಮಂಗಳೂರು / ಉಡುಪಿ: ಕರಾವಳಿ ಭಾಗದಲ್ಲಿ ಪೂರ್ವ ಮುಂಗಾರು ವೇಗ ಪಡೆದಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ರವಿವಾರವೂ ಸಿಡಿಲು ಸಹಿತ ಮಳೆಯಾಗಿದೆ.

Advertisement

ದ.ಕ. ಜಿಲ್ಲೆಯ ಬೆಳ್ತಂಗಡಿ, ಧರ್ಮಸ್ಥಳ, ನಿಡ್ಲೆ, ಬಳಂಜ, ಮುಂಡಾಜೆ, ಧರ್ಮಸ್ಥಳ, ಗೇರುಕಟ್ಟೆ, ವಿಟ್ಲ, ಮಂಚಿ, ಸಾಲೆತ್ತೂರು, ಬಂಟ್ವಾಳ, ಕಲ್ಲಡ್ಕ, ಬಿ.ಸಿ.ರೋಡ್‌, ಪುತ್ತೂರು, ಕೆಯ್ಯೂರು, ಕೆದಂಬಾಡಿ, ಪಾಣಾಜೆ, ಸುಳ್ಯ ಪರಿಸರದ ಉಬರಡ್ಕ, ಬಳ್ಪ, ಕಲ್ಮಡ್ಕ, ಐನೆಕಿದು ಸುತ್ತಮುತ್ತಲಿನ ಭಾಗಗಳಲ್ಲಿ ಮಳೆ ಸುರಿದಿದೆ. ಕಡಬ, ಆಲಂಕಾರು ಪರಿಸರದಲ್ಲಿಯೂ ಮಳೆಯಾಗಿದೆ. ಗುತ್ತಿಗಾರು ಯುವಕ ಮಂಡಲ ಕಟ್ಟಡದ ಛಾವಣಿಯ ಹೆಂಚುಗಳು ಗಾಳಿಯ ರಭಸಕ್ಕೆ ಹಾರಿಹೋಗಿವೆ.

ಉಪ್ಪಿನಂಗಡಿ: ಭಾರೀ ಗಾಳಿ ಮಳೆ
ಉಪ್ಪಿನಂಗಡಿ ಪರಿಸರದಲ್ಲೂ ಸುಮಾರು ಒಂದು ತಾಸು ಸಿಡಿಲು ಸಹಿತ ಭಾರೀ ಮಳೆಯಾಗಿದ್ದು 10ಕ್ಕೂ ಹೆಚ್ಚಿನ ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ.

ಭಾರೀ ಗಾಳಿ ಮಳೆಯಿಂದಾಗಿ ಉಪ್ಪಿನಂಗಡಿ-ಅಂಡೆತಡ್ಕ ಮಾರ್ಗದಲ್ಲಿ ಬೃಹತ್‌ ಮರವೊಂದು ರಸ್ತೆಗೆ ಬಿದ್ದು ಸ್ವಲ್ಪಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತು. ಉಪ್ಪಿನಂಗಡಿ, ಇಳಂತಿಲ, ರಾಮಕುಂಜ ಮುಂತಾದ ಕಡೆ ವಿದ್ಯುತ್‌ ವ್ಯತ್ಯಯ ಗೊಂಡಿದೆ.

ಮೂಡುಬಿದಿರೆ: ಮಳೆ
ಮೂಡುಬಿದಿರೆ: ರವಿವಾರ ರಾತ್ರಿ ಸುಮಾರು ಅರ್ಧ ತಾಸು ಮೂಡುಬಿದಿರೆ ಪರಿಸರದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯಿತು. ಶಿರ್ತಾಡಿ, ಹೊಸ್ಮಾರು ಕಡೆಗಳಲ್ಲಿ ಜೋರಾಗಿ ಮಳೆ ಸುರಿದಿದೆ.

Advertisement

ಉಡುಪಿ ಜಿಲ್ಲೆ: ಉತ್ತಮ ಮಳೆ
ಉಡುಪಿ ಜಿಲ್ಲೆಯ ವಿವಿಧೆಡೆ ರವಿವಾರ ಸಂಜೆಯ ವೇಳೆ ಉತ್ತಮ ಮಳೆಯಾಗಿದೆ. ಉಡುಪಿ ನಗರ ಮತ್ತು ಆಸುಪಾಸಿನಲ್ಲಿ ಸಾಧಾರಣ ಮಳೆಯಾಗಿದ್ದು, ಸಿಡಿಲಿನ ಅಬ್ಬರ ಜೋರಾಗಿತ್ತು.

ಉಡುಪಿ ತಾ|ನ ಕೋಟ, ಕಟಪಾಡಿ, ಬ್ರಹ್ಮಾವರ, ಮಣಿಪಾಲ ಪರಿಸರದಲ್ಲಿ ಸಾಧಾರಣ ಮಳೆಯಾಗಿದೆ. ಗುಡುಗಿನ ಆರ್ಭಟ ಜೋರಿದ್ದರೂ ನಿರೀಕ್ಷಿಸಿದಷ್ಟು ಮಳೆ ಯಾಗಲಿಲ್ಲ.

ಶಿರೂರು, ಬೈಂದೂರು, ಕೊಲ್ಲೂರು, ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಆಜ್ರಿ, ಅಂಪಾರು, ಶಂಕರ ನಾರಾಯಣ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ, ಉಳ್ಳೂರು – 74, ಕುಂದಾಪುರ, ಬಸ್ರೂರು, ತೆಕ್ಕಟ್ಟೆ, ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next