Advertisement

ಪ್ರವಾಹ; ರಾಯಚೂರಿನಲ್ಲಿ ತೆಪ್ಪ ಮುಳುಗಿ ನಾಲ್ವರು ಕಣ್ಮರೆ: ಉತ್ತರ ಮೂರಾಬಟ್ಟೆ

01:30 AM Aug 18, 2020 | mahesh |

ಬೆಳಗಾವಿ/ರಾಯಚೂರು/ಬಾಗಲಕೋಟೆ: ಭಾರೀ ಮಳೆ, ಪ್ರವಾಹದಿಂದಾಗಿ ಉತ್ತರ ಕರ್ನಾಟಕದ ಜನರ ಬದುಕು ಮೂರಾಬಟ್ಟೆಯಾಗಿದೆ. ಈ ಭಾಗದ ನದಿಗಳಲ್ಲಿ ನೆರೆ ಉಂಟಾಗಿದ್ದು, ಜನ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಈಗಾಗಲೇ ಹಲವಾರು ಸೇತುವೆಗಳು ಮುಳುಗಡೆಯಾಗಿದ್ದು, ಅಲ್ಲಲ್ಲಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ತೆಪ್ಪವೊಂದು ಮುಳುಗಿ ಒಂದೇ ಕುಟುಂಬದ ನಾಲ್ವರು ಕಣ್ಮರೆಯಾಗಿದ್ದಾರೆ.

Advertisement

ರಾಯಚೂರು ತಾಲೂಕಿನ ನಡುಗಡ್ಡೆ ಪ್ರದೇಶ ಕುರುಪುರದ ಒಂದೇ ಕುಟುಂಬದ ಸುಮಲತಾ (35), ಮಗಳು ರೋಜಾ (6), ನರಸಮ್ಮ ರಾಮುಲು (45), ನರಸಮ್ಮ ನರಸಪ್ಪ (55) ನಾಪತ್ತೆಯಾದವರು. ಇವರು ತೆಲಂಗಾಣದ ಪಂಚಾದಿಪಾಡಕ್ಕೆ ದಿನಬಳಕೆ ವಸ್ತುಗಳ ಖರೀದಿಗೆ ತೆಪ್ಪದಲ್ಲಿ ಹೋಗಿದ್ದರು. ಹಿಂದಿರುಗುವಾಗ ತೆಪ್ಪದಲ್ಲಿ 13 ಜನ ಇದ್ದು, ಭಾರ ಹೆಚ್ಚಾದ ಕಾರಣ ತೆಪ್ಪ ಮುಳುಗಿದೆ. ಈ ವೇಳೆ 9 ಜನ ಈಜಿ ದಡ ಸೇರಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ.

ಬೆಳಗಾವಿಯಲ್ಲಿ ಮಳೆ ಆತಂಕ ಕಡಿಮೆಯಾಗಿದೆ. ಆದರೆ ಕೃಷ್ಣಾ, ಘಟಪ್ರಭಾ, ಹಿರಣ್ಯಕೇಶಿ ಮತ್ತು ಮಲಪ್ರಭಾ ನದಿಗಳ ನೀರಿನ ಮಟ್ಟ ಒಂದೇ ಸಮನೆ ಏರಿದ್ದರಿಂದ ಪ್ರವಾಹದ ಭೀತಿ ಮುಂದುವರಿದಿದೆ. ಗೋಕಾಕ, ರಾಮದುರ್ಗ ತಾಲೂಕುಗಳ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಆತಂಕ ಆವರಿಸಿದೆ. ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಸೇತುವೆಗಳು ನೀರಿನಲ್ಲಿ ಮುಳುಗಿವೆ.

51 ಕುಟುಂಬ ಸ್ಥಳಾಂತರ
ಮಲಪ್ರಭಾ ನದಿಯ ಪ್ರವಾಹದಿಂದಾಗಿ ರಾಮದುರ್ಗ ತಾಲೂಕಿನ ಹಿರೇ ಹಂಪಿಹೊಳಿ ಮತ್ತು ಚಿಕ್ಕಹಂಪಿಹೊಳಿ ಗ್ರಾಮಗಳ ಜನರು ತೊಂದರೆಗೆ ಈಡಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 51 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಯಾದಗಿರಿ ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.77 ಲಕ್ಷ ಕ್ಯುಸೆಕ್‌ ನೀರು ಹರಿಬಿಡಲಾಗಿದೆ. ಇದರಿಂದಾಗಿ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದೆ. ರೋಣ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ. ಹೊಳೆಆಲೂರಿನಲ್ಲಿ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು ಸೇತುವೆ ಮುಳುಗಡೆಯಾಗಿದೆ.

ಆಲಮಟ್ಟಿ: 2.50 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ
ಕೃಷ್ಣೆಯ ಉಗಮ ಸ್ಥಾನ ಮತ್ತು ಉಪ ನದಿಗಳ ಜಲಾನಯನ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಆಲಮಟ್ಟಿ ಜಲಾಶಯದಿಂದ 2.50 ಲಕ್ಷ ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಸೋಮವಾರ ಸಂಜೆ 106.172 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,50,472 ಕ್ಯುಸೆಕ್‌ ಒಳಹರಿವಿದ್ದು 2.50 ಲಕ್ಷ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next