Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಧಿಕ ಭಾರ ಹೊತ್ತ ಟಿಪ್ಪರ್‌ ಲಾರಿ ಸಂಚಾರ

05:57 PM Oct 13, 2022 | Team Udayavani |

ಗುಂಡ್ಲುಪೇಟೆ: ತಾಲೂಕಿನ ಊಟಿ-ಮೈಸೂರು ರಾಷ್ಟ್ರೀಯ ಹೆದ್ದಾರಿ-766ರಲ್ಲಿ ಅನೇಕ ಟಿಪ್ಪರ್‌ ಲಾರಿಗಳು ಅಧಿಕ ಭಾರ ಹೊತ್ತು ಹಾಗೂ ಅತೀ ವೇಗದಿಂದ ಸಾಗುತ್ತಿದೆ. ಹೀಗಿದ್ದರೂ ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳು ಚಕಾರ ಎತ್ತದೆ ಮೌನಕ್ಕೆ ಶರಣಾಗಿದ್ದಾರೆ. ಇದು ಸಾರ್ವಜನಿಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ತಾಲೂಕಿನ ಕೂತನೂರು ರಸ್ತೆ, ಮಡಹಳ್ಳಿ ರಸ್ತೆ, ತೆರಕಣಾಂಬಿ ರಸ್ತೆ ಮಾರ್ಗವಾಗಿ ಪ್ರತಿನಿತ್ಯ ನೂರಾರು ಟಿಪ್ಪರ್‌ ಲಾರಿಗಳು ಅಧಿಕ ಭಾರ ಹೊತ್ತು ಸಾಗುತ್ತವೆ. ಇದರ ಅರಿವಿದ್ದರೂ ಸಹ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ ಎಂದು ಪುರಸಭೆ ಸದಸ್ಯ ರಾಜಗೋಪಾಲ್‌ ಆರೋಪಿಸಿದ್ದಾರೆ.

ಆರ್‌ಟಿಒ ಕಚೇರಿ ಹಾಗೂ ಪೊಲೀಸ್‌ ಠಾಣೆ ಮುಂದೆ ಸಂಚಾರ: ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಎಗ್ಗಿಲ್ಲದೆ ಟಿಪ್ಪರ್‌ ಲಾರಿಗಳು ಪಟ್ಟಣದ ಆರ್‌ಟಿಒ ಕಚೇರಿ, ಗುಂಡ್ಲುಪೇಟೆ, ತೆರಕಣಾಂಬಿ, ಬೇಗೂರು ಪೊಲೀಸ್‌ ಠಾಣೆ ಮುಂದೆಯೇ ಅಧಿಕ ಭಾರಹೊತ್ತು ಸಾಗುತ್ತಿವೆ. ಹೀಗಿದ್ದರೂ ಸಹ ಆರ್‌ಟಿಒ ಅಧಿಕಾರಿಗಳು ಹಾಗೂ ಪೊಲೀಸರು ತಪಾಸಣೆ ಮುಂದಾಗದೆ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.

ಹಿಂಬದಿ ಬೈಕ್‌ ಸವಾರರ ಕಣ್ಣಿಗೆ ಧೂಳು: ಹೆದ್ದಾರಿ ರಸ್ತೆಯಲ್ಲಿ ಟಿಪ್ಪರ್‌ಗಳು ಅಧಿಕ ಭಾರಹೊತ್ತು, ಅತೀ ವೇಗದಿಂದ ಕಲ್ಲು ತುಂಬಿಕೊಂಡು ಹಿಂಬದಿಯಲ್ಲಿ ಟಾರ್ಪಲ್‌ ಕಟ್ಟದೆ ಸಂಚಾರ ಮಾಡುತ್ತವೆ. ಈ ವೇಳೆ ಹಿಂದೆ ಬರುವ ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ಧೂಳು ಬೀಳುತ್ತದೆ. ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಸಹ ಲಾರಿ ಚಾಲರು ಕ್ಯಾರೇ ಎನ್ನದೆ ಟಿಪ್ಪರ್‌ ಚಲಾಯಿಸುತ್ತಿದ್ದಾರೆ.

ನಂಬರ್‌ ಪ್ಲೇಟ್‌ ಇಲ್ಲದೆ ಟಿಪ್ಪರ್‌ ಲಾರಿಗಳ ಸಂಚಾರ: ಹೆದ್ದಾರಿಯಲ್ಲಿ ಅಧಿಕ ಭಾರ ಕಲ್ಲುತುಂಬಿ ಕೊಂಡು ಸಂಚಾರ ಮಾಡುವ ಅನೇಕ  ಟಿಪ್ಪರ್‌ ಲಾರಿಗಳಿಗೆ ನಂಬರ್‌ ಪ್ಲೇಟ್‌ ಇಲ್ಲ. ಇದರಿಂದ ವಾಹನಗಳಿಗೆ ಇನ್ಶೂರೆನ್ಸ್‌ ಇದಿಯೋ? ಇಲ್ಲವೋ? ಎಂಬ ಮಾಹಿತಿ ತಿಳಿಯುತ್ತಿಲ್ಲ. ಹೀಗಿದ್ದರೂ ಸಹ ಅಧಿಕಾರಿಗಳು ಮಾತ್ರ ಚಕಾರ ಎತ್ತುತ್ತಿಲ್ಲ.

Advertisement

ನೆಪ ಮಾತ್ರಕ್ಕೆ ತಪಾಸಣೆ
ಅಧಿಕ ಭಾರ ಹೊತ್ತ ಟಿಪ್ಪರ್‌ ಲಾರಿಗಳು ಹೆದ್ದಾರಿಯಲ್ಲಿ ಸಂಚರಿಸುವ ಕುರಿತು ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದ ಸಂದರ್ಭ ಹಾಗೂ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ವೇಳೆ ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳು ಕೇವಲ ನೆಪಮಾತ್ರಕ್ಕೆ ಮಾತ್ರ ತಪಾಸಣೆ ನಡೆಸಿ ಸುಮ್ಮನಾಗುತ್ತಾರೆ. ನಂತರ ಯಥಾಸ್ಥಿತಿಯಲ್ಲಿ ಟಿಪ್ಪರ್‌ಗಳು ಸಂಚರಿಸುತ್ತವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಕ್ರಮ ವಹಿಸಬೇಕೆಂದು ಪಟ್ಟಣದ ನಿವಾಸಿ ರಾಜು ಒತ್ತಾಯಿಸಿದ್ದಾರೆ.

ಹೆದ್ದಾರಿಯಲ್ಲಿ ಓವರ್‌ಲೋಡ್‌ ಹಾಕಿಕೊಂಡು ಸಂಚರಿಸುತ್ತಿರುವ ಟಿಪ್ಪರ್‌ಗಳನ್ನು ಪರಿಶೀಲನೆ ನಡೆಸಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.
●ಮುದ್ದುರಾಜು, ಪೊಲೀಸ್‌ ಇನ್ಸ್‌ಪೆಕ್ಟರ್‌

ಹೆದ್ದಾರಿಯಲ್ಲಿ ಅಧಿಕ ಭಾರಹೊತ್ತು ಸಾಗುವ ಟಿಪ್ಪರ್‌ ಲಾರಿಗಳನ್ನು ಕಟ್ಟುನಿಟ್ಟಿನ ತಪಾಸಣೆ ನಡೆಸಲು ಈಗಾಗಲೇ ತಾಲೂಕು ಆಡಳಿತದಿಂದ ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಾಗ್ಯೂ ನಿಯಮ ಮೀರಿ ಸಂಚರಿಸುವುದು ಕಂಡು ಬಂದರೆ ಸೂಕ್ತ ಕ್ರಮ
ಜರುಗಿಸಲಾಗುವುದು.
● ಸಿ.ಜಿ.ರವಿಶಂಕರ್‌, ತಹಶೀಲ್ದಾರ್‌, ಗುಂಡ್ಲುಪೇಟೆ

*ಬಸವರಾಜು ಎಸ್.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next