ಗಜೇಂದ್ರಗಡ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಭಾರಿ ಪೈಪೋಟಿಯ ನಡುವೆ ಪುರಸಭೆ ಅಧೀನದ 37 ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಮಂಗಳವಾರ ನಡೆಯಿತು.
ಪುರಸಭೆ ಅಧ್ಯಕ್ಷ ವೀರಣ್ಣ ಪಟ್ಟಣಶೆಟ್ಟಿ ಹಾಗೂ ಪುರಸಭೆ ಎಲ್ಲ ಸದಸ್ಯರ ಸಮ್ಮುಖದಲ್ಲಿ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಸುಸೂತ್ರವಾಗಿ ನಡೆದು, ಹಲವು ಅಚ್ಚರಿಗಳಿಗೆ ಕಾರಣವಾಗುವುದರ ಜೊತೆಗೆ ಪುರಸಭೆಗೆ ದೊಡ್ಡ ಮಟ್ಟದ ಆದಾಯ ದೊರೆಯಲು ಕಾರಣವಾಯಿತು.
ಹರಾಜುಗಾರರನ್ನು ಉದ್ದೇಶಿಸಿ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮಳಿಗೆಯನ್ನು ಪಡದುಕೊಂಡವರು ಕಡ್ಡಾಯವಾಗಿ ತಾವೇ ಉಪಯೋಗಿಸಿಕೊಳ್ಳಬೇಕು. ಹೊರತು ಬೇರೆಯವರಿಗೆ ಬಾಡಿಗೆ ಅಥವಾ ಲೀಸ್ ಆಧಾರದ ಮೇಲೆ ಕೊಟ್ಟಿರುವ ವಿಷಯ ನಮ್ಮ ಗಮನಕ್ಕೆ ಬಂದಲ್ಲಿ ಅಂತಹ ಹರಾಜುಗಾರನ ಮೇಲೆ ಕಾನೂನು ಕ್ರಮ ಜರುಗಿಸಿ ಹರಾಜಿನಲ್ಲಿ ಪಡೆದುಕೊಂಡ ಮಳಿಗೆ ಮುಟ್ಟುಗೋಲು ಹಾಕಿ ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪುರಸಭೆ ಒಟ್ಟು 37 ವಾಣಿಜ್ಯ ಮಳಿಗೆಗಳಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 52 ಹರಾಜುದಾರರು ಪಾಲ್ಗೊಂಡಿದ್ದರು. ಪಟ್ಟಣದ ಬಸವೇಶ್ವರ ವೃತ್ತ ಬಳಿಯ ಪುರಸಭೆ 19 ವಾಣಿಜ್ಯ ಮಳಿಗೆಗಳ ಪೈಕಿ ಒಂದು ಮಳಿಗೆ ಅತಿ ಹೆಚ್ಚು ವಾರ್ಷಿಕ 3.15 ಲಕ್ಷ ರೂ.ಗಳಿಗೆ ಹರಾಜಾಯಿತು. ಮೂಲ ಬೆಲೆಗೆ ಹತ್ತು ಪಟ್ಟು ಬಿಡ್ ಆಯಿತು. ತೀವ್ರ ಪೈಪೋಟಿ ಬಳಿಕ ಹರಾಜುಗೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಇನ್ನುಳಿದ ಇನ್ನೊಂದು ಮಳಿಗೆ ವಾರ್ಷಿಕ 2.33 ಲಕ್ಷ ರೂ.ಗಳಿಗೆ ಹರಾಜು ಪೂರ್ಣಗೊಂಡಿತು.
Related Articles
ಹರಾಜು ಪ್ರಕ್ರಿಯೆಯಲ್ಲಿ ಸ್ಥಳೀಯ ಬಸವೇಶ್ವರ ವೃತ್ತ ಬಳಿ ಇರುವ ಮಳಿಗೆ ಸಂಖ್ಯೆ 11-12, 04, 05 ಮಳಿಗೆಗಳಿಗೆ ತೀವೃತರವಾದ ಬಿಡ್ಡಿಂಗ್ ನಡೆಯಿತು. 11-12 ಮಳಿಗೆಗೆ ವಾರ್ಷಿಕ 3.15 ಲಕ್ಷ ರೂ. ಗಳಿಗೆ, ಇನ್ನು ಮಳಿಗೆ ಸಂಖ್ಯೆ 4ಕ್ಕೆ 2.07 ಲಕ್ಷ ರೂ. ಗಳಿಗೆ ಅಲ್ಲದೇ, ಮಳಿಗೆ ಸಂಖ್ಯೆ 5ಕ್ಕೆ 2.33 ಲಕ್ಷ ರೂ. ಗಳಿಗೆ ಬಿಡ್ ಮಾಡುವ ಮೂಲಕ ಆ ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿರುವವರೇ ಮಳಿಗೆಗಳನ್ನು ತಮ್ಮದಾಗಿಸಿಕೊಂಡರು.
ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಒಟ್ಟು 12 ಅಂಗಡಿಗಳನ್ನು ಮೀಸಲಿರಿಸಲಾಗಿತ್ತು. ಆದರೆ ಕೇವಲ 4 ಅಂಗಡಿಗಳು ಮಾತ್ರ ಹರಾಜಿಗೆ ಒಳಪಟ್ಟವು. ಇನ್ನುಳಿದ 8 ಅಂಗಡಿಗಳ ಹರಾಜನ್ನು ಮುಂದೂಡಲಾಯಿತು. ಸ್ಥಳೀಯ ಕುಷ್ಟಗಿ ರಸ್ತೆಯ ಜನತಾ ಪ್ಲಾಟ್ ಬಳಿಯ 8 ವಾಣಿಜ್ಯ ಮಳಿಗೆಗಳಲ್ಲಿ 6 ಮಳಿಗೆಗಳು ಹರಾಜು ಮಾಡಲಾಯಿತು.
ಬಸವೇಶ್ವರ ವೃತ್ತ ಬಳಿಯ 19 ಮಳಿಗೆಗಳಲ್ಲಿ 7ಕ್ಕೆ ಹರಾಜು ನಡೆಯಿತು. ಇನ್ನು ಪುರಸಭೆ ಆವರಣದಲ್ಲಿರುವ 10 ಮಳಿಗೆಗಳಲ್ಲಿ 3 ಬಿಡ್ ನಡೆಯಿತು. ಇನ್ನುಳಿದಂತೆ ಒಟ್ಟು 21 ಅಂಗಡಿಗಳ ಹರಾಜನ್ನು ಮುಂದೂಡಲಾಯಿತು. ಈ ವಾಣಿಜ್ಯ ಮಳಿಗೆಗಳ ಹರಾಜಿನಲ್ಲಿ ಬಹುತೇಕ ಮಳಿಗೆಗಳನ್ನು ಈಗಾಗಲೇ ಆ ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿರುವವರೇ ಮಳಿಗೆಗಳನ್ನು ಪೈಪೋಟಿಯಲ್ಲಿ ಹೆಚ್ಚಿನ ಬಿಡ್ಗೆ ಹರಾಜು ಕೂಗಿದ್ದರು. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಇ.ಎಂ.ಡಿ. ಠೇವಣಿ ಮೊತ್ತವನ್ನು ಸಲ್ಲಿಸಲಾಗಿತ್ತು. ಹರಾಜಿನಲ್ಲಿ ಭಾಗವಹಿಸುವವರು ಯಾವ ಮಳಿಗೆಗೆ ಹರಾಜಿನಲ್ಲಿ ಭಾಗವಹಿಸುತ್ತೇವೆ ಎಂದು ಅರ್ಜಿ ನೀಡಿದ್ದರು.
ಅದೇ ಮಳಿಗೆಯ ಬಿಡ್ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಅವರು ಬೇರೆ ಮಳಿಗೆಯ ಬಿಡ್ನಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ಕನಕಪ್ಪ ಅರಳಿಗಿಡದ, ರಾಜು ಸಾಂಗ್ಲಿಕಾರ, ಮುದಿಯಪ್ಪ ಮುಧೋಳ, ಮುರ್ತುಜಾ ಡಾಲಾಯತ್, ಲೀಲಾ ಸವಣೂರ, ರುಪ್ಲೇಶ ರಾಠೊಡ, ಅಧಿಕಾರಿಗಳಾದ ಸಿ.ಡಿ. ದೊಡ್ಡಮನಿ, ರಿಯಾಜ್ ಒಂಟಿ, ಮಲ್ಲಿಕಾರ್ಜುನ ಎಸ್., ರಾಘವೇಂದ್ರ ಮಂತಾ, ಶಿವಕುಮಾರ ಇಲ್ಲಾಳ,
ಎಸ್.ಜಿ. ಕಡೇತೋಟದ ಸೇರಿದಂತೆ ಇನ್ನಿತರರು ಇದ್ದರು.