Advertisement

ಹೆಚ್ಚುತ್ತಿರುವ ವಾಹನ : ಸಂಚಾರ ಅಡಚಣೆ ನಿತ್ಯ ಗೋಳು

09:04 AM May 22, 2019 | sudhir |

ಕಾಸರಗೋಡು: ಜಿಲ್ಲೆಯಲ್ಲಿ ಕಾಸರಗೋಡು ಪ್ರಮುಖ ನಗರ. ಈ ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಅಧಿಕವಾಗುತ್ತಲೇ ಇದ್ದರೂ, ಮೂಲ ಸೌಕರ್ಯಗಳಿಂದ ವಂಚಿತವಾಗುತ್ತಿದೆ. ವಾಹನಗಳ ಸಂಖ್ಯೆ ಅಧಿಕವಾಗುವಂತೆ ಅದಕ್ಕೆ ಅನುಗುಣವಾಗಿ ರಸ್ತೆ ಸೌಲಭ್ಯ ಒದಗಿಸಲು ಸಂಬಂಧಪಟ್ಟವರು ವಿಫಲರಾಗುತ್ತಲೇ ಬಂದಿದ್ದಾರೆ. ಇದರಿಂದಾಗಿ ನಗರದಲ್ಲಿ ವಾಹನ ಸಂಚಾರ ಅಡ್ಡಾದಿಡ್ಡಿಯಾಗಿ ನಡೆಯುತ್ತಿದ್ದು, ಪ್ರಯಾಣಿಕರಿಗೆ ನಿತ್ಯ ಸಂಕಟ ತಪ್ಪಿಲ್ಲ.

Advertisement

ಕಳೆದ ಕೆಲವು ವರ್ಷಗಳಿಂದ ವಾಹನಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅದಕ್ಕೆ ಹೊಂದಿಕೊಂಡು ಸಂಚಾರ ವ್ಯವಸ್ಥೆ ಮಾತ್ರ ಬದಲಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಸರಗೋಡು ನಗರ ಸೇರಿದಂತೆ ಜಿಲ್ಲೆಯ ಇತರ ಪೇಟೆ ಪ್ರದೇಶಗಳಲ್ಲೂ ಸಾರಿಗೆ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ.

ಇದರಿಂದಾಗಿ ಸಂಚಾರ ಅಡಚಣೆಯು ನಿತ್ಯದ ಗೋಳಾಗಿದ್ದು, ಎಂದಿಗೂ ಮುಗಿಯದ ಸಮಸ್ಯೆಯಾಗಿ ಮಾರ್ಪಟ್ಟಿದೆ.

ಕಾಸರಗೋಡು ನಗರ ಅಲ್ಲದೆ ನೀಲೇಶ್ವರ, ತೃಕ್ಕರಿಪುರ, ಹೊಸದುರ್ಗ, ಕಾಞಂಗಾಡು, ಉದುಮ, ಮುಳ್ಳೇರಿಯಾ, ಬದಿಯಡ್ಕ, ಪೆರ್ಲ, ಕುಂಬಳೆ, ಉಪ್ಪಳ, ಹೊಸಂಗಡಿ, ಮಂಜೇಶ್ವರ ಸಹಿತ ಕೆಲವೊಂದು ಗ್ರಾಮೀಣ ಪ್ರದೇಶಗಳಲ್ಲೂ ವಾಹನ ಸಂಚಾರವು ಅವ್ಯವಸ್ಥೆಯ ಆಗರ ಎನಿಸುತ್ತಿದೆ.

ಕಾಂಕ್ರೀಟ್‌ ರಸ್ತೆಗಳು ಹೆಚ್ಚುತ್ತಿದ್ದರೂ, ಸಂಚಾರ ವ್ಯವಸ್ಥೆ ಮಾತ್ರ ಯಾವುದೇ ಸುಧಾರಣೆ ಕಾಣದೆ ಮೂಲೆಗುಂಪಾಗುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಕಾಸರಗೋಡು ನಗರದ ಹೊಸ ಬಸ್‌ ನಿಲ್ದಾಣ, ಎಂ.ಜಿ. ರಸ್ತೆ, ಹಳೆ ಬಸ್‌ ನಿಲ್ದಾಣ, ಬ್ಯಾಂಕ್‌ ರಸ್ತೆ, ಕರಂದಕ್ಕಾಡ್‌ ರಸ್ತೆ, ರಾ.ಹೆದ್ದಾರಿ…ಹೀಗೆ ಎಲ್ಲಿ ನೋಡಿದರೂ ವಾಹನಗಳ ಅಡ್ಡಾದಿಡ್ಡಿ ಸವಾರಿ ಸಾಕಷ್ಟು ಗೊಂದಲದ ಜತೆಗೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಪ್ರತಿದಿನ ಅಪಘಾತಗಳು ಸಂಭವಿಸುತ್ತಿದ್ದರೂ, ಸಂಬಂಧ‌ಪಟ್ಟವರು ವಾಹನ ದಟ್ಟಣೆಯನ್ನು ಮತ್ತು ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ಮೌನಕ್ಕೆ ಶರಣಾಗುತ್ತಿದ್ದಾರೆ. ಕೆಲವೊಮ್ಮೆ ಟ್ರಾಫಿಕ್‌ ಪೊಲೀಸರು ಟ್ರಾಫಿಕ್‌ ಉಲ್ಲಂಘನೆಯ ವಿರುದ್ಧ ಕ್ರಮ ತೆಗೆದುಕೊಂಡು ಅಂತಹ ವಾಹನಗಳಿಗೆ ಹಳದಿ ಚೀಟಿ ಅಂಟಿಸಿ, ದಂಡ ವಸೂಲಿ ಮಾಡುತ್ತಿದ್ದಾರೆ. ಆದರೆ ಈ ಪ್ರಕ್ರಿಯೆ ದಿನಂಪ್ರತಿ ನಡೆಯುತ್ತಿಲ್ಲ. ಮನಸ್ಸಿಗೆ ತೋಚಿದಂತೆ ಟ್ರಾಫಿಕ್‌ ಪೊಲೀಸರು ವಾಹನಗಳ ಮೇಲೆ ಹದ್ದುಗಣುr ಇಡುತ್ತಾರೆ. ಆದರೆ ದಿನಂಪ್ರತಿ ಇಂತಹ ಪ್ರಕ್ರಿಯೆ ನಡೆಯದಿರುವುದರಿಂದ ಟ್ರಾಫಿಕ್‌ ವ್ಯವಸ್ಥೆ ಉಲ್ಲಂಘನೆಯಾಗುತ್ತಲೇ ಇರುತ್ತದೆ. ವಾಹನ ಅಪಘಾತಗಳು ನಿಯಂತ್ರಣಕ್ಕೆ ಬರುವುದೇ ಇಲ್ಲ. ಬದಲಾಗಿ ಹೆಚ್ಚುತ್ತಲೇ ಸಾಗುತ್ತಿದೆ.

Advertisement

ಅಡ್ಡಾದಿಡ್ಡಿ ವಾಹನ ಚಲಾವಣೆಯಿಂದ ಆತಂಕ
ಇದೆಲ್ಲದರ ನಡುವೆ ವಾಹನ ದಟ್ಟಣೆ ಸಂದರ್ಭ ಹಾಗೂ ಟ್ರಾಫಿಕ್‌ ಪರಿಸರದಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳು ಸಂಚರಿಸುತ್ತಿದ್ದು, ಇದು ಅತ್ಯಂತ ಅಪಾಯಕಾರಿ ಸನ್ನಿವೇಶವಾಗಿದೆ. ಇದರಿಂದಾಗಿ ಪಾದಚಾರಿಗಳು ದಿನನಿತ್ಯ ಸಂಕಷ್ಟ ಎದುರಿಸುವಂತಾಗಿದೆ. ಕಾಸರಗೋಡು ಜಿಲ್ಲೆಯ ಎಲ್ಲಾ ನಗರ, ಪಟ್ಟಣಗಳಲ್ಲಿ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಬದಲಾಯಿಸಿ ಹಲವಾರು ಮಾರ್ಪಾಡುಗಳನ್ನು ಮಾಡಲೇ ಬೇಕಾಗಿದೆ. ಕೆಲವೊಂದು ರಸ್ತೆಯಲ್ಲಿ ಏಕಮುಖ ಸಂಚಾರ ನಿಯಮವನ್ನು ಅಳವಡಿಸಿದ್ದರೂ, ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಯೋಜನೆ ರೂಪಿಸಬೇಕು. ಅಲ್ಲದೆ ಅನೇಕ ಅಂಗಡಿ ಮುಂಗಟ್ಟುಗಳಿಗೆ ವಾಹನಗಳಲ್ಲಿ ಆಗಮಿಸುವವರಿಗೆ ಸಮರ್ಪಕ ವಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಹೆದ್ದಾರಿ ಬದಿಯಲ್ಲಿ ಅಥವಾ ಇನ್ನಿತರ ರಸ್ತೆಗಳ ಆಸುಪಾಸುಗಳಲ್ಲೇ ವಾಹನಗಳನ್ನು ನಿಲುಗಡೆ ಮಾಡಬೇಕಾಗುತ್ತದೆ.

ಇದು ಇತರ ವಾಹನಗಳ ಸುಗಮ ಸಂಚಾರಕ್ಕೆ ಸಂಚಕಾರವನ್ನುಂಟು ಮಾಡುತ್ತಿದ್ದು, ವಾಹನಗಳು ರಸ್ತೆಯಲ್ಲಿ ಮಂದಗತಿಯಲ್ಲಿ ಸಾಗುವಂತೆ ಸಮಸ್ಯೆಯನ್ನೊಡ್ಡುತ್ತಿದೆ.

ಸಂಜೆ ಮತ್ತು ಬೆಳಗ್ಗಿನ ಹೊತ್ತು ಸೇರಿದಂತೆ ದಿನವಿಡೀ ಹಾಗೂ ವಾರಾಂತ್ಯಗಳಲ್ಲಿ ಕೂಡ ಟ್ರಾಫಿಕ್‌ ಸಮಸ್ಯೆ ಒಂದು ಕಿರಿಕಿರಿಯಾಗಿ ಪರಿಣಮಿಸಿದೆ. ಕಾಸರಗೋಡು ನಗರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸುಗಮ ವಾಹನ ಸಂಚಾರ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಟ್ರಾಫಿಕ್‌ ಪೊಲೀಸ್‌ ಅಧಿಕಾರಿಗಳು ಇನ್ನಾದರೂ ಸಾರಿಗೆ ಸಂಚಾರವನ್ನು ಅತ್ಯಂತ ಹೆಚ್ಚು ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಕಾಸರಗೋಡು ನಗರದಲ್ಲಿ ವಾಹನ ದಟ್ಟಣೆ ಹೆಚ್ಚು : ಜಿಲ್ಲೆಯ ಕಾಸರಗೋಡು ನಗರದಲ್ಲಿ ವಾಹನ ದಟ್ಟಣೆ ಇತರ ಕಡೆಗಳಿಗಿಂತ ಅಧಕವಿದೆ. ನಗರದ ಅಗಲ ಕಿರಿದಾದ ರಸ್ತೆಗಳಲ್ಲಿ ವಾಹನಗಳು ಸಾಗಬೇಕಾದರೆ ಸಮಸ್ಯೆಯ ಜತೆಗೆ ಅಪಾರ ಸಮಯ ಬೇಕಾಗುತ್ತದೆ. ಅಡ್ಕತ್ತಬೆ„ಲು, ಕರಂದಕ್ಕಾಡು, ಅಶ್ವಿ‌ನಿನಗರ, ಹೊಸ ಬಸ್‌ ನಿಲ್ದಾಣ, ನುಳ್ಳಿಪ್ಪಾಡಿ, ಅಣಂಗೂರು, ವಿದ್ಯಾನಗರ, ಹಳೆಯ ಪ್ರಸ್‌ಕ್ಲಬ್‌ ಜಂಕ್ಷನ್‌, ಹಳೆ ಬಸ್‌ ನಿಲ್ದಾಣ, ಟ್ರಾಫಿಕ್‌ ಜಂಕ್ಷನ್‌, ರೈಲ್ವೇ ನಿಲ್ದಾಣ ರಸ್ತೆ , ತಾಲೂಕು ಕಚೇರಿ ನಿಲ್ದಾಣ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪರಿಸರ, ಕೆಎಸ್‌ಆರ್‌ಟಿಸಿ ನಿಲ್ದಾಣ, ಬ್ಯಾಂಕ್‌ ರಸ್ತೆ ಮುಂತಾದ ಎಲ್ಲಾ ಕಡೆಗಳಲ್ಲೂ ದಿನನಿತ್ಯ ಟ್ರಾಫಿಕ್‌ ಸಮಸ್ಯೆ ಇದ್ದೇ ಇರುತ್ತದೆ.

ಶಾಶ್ವತ ಪರಿಹಾರ
ಆದ್ದರಿಂದ ಒಟ್ಟು ಕಾಸರಗೋಡು ನಗರ ಪ್ರದೇಶವನ್ನು ಗಣನೆಗೆ ತೆಗೆದುಕೊಂಡು ಹೊಸತೊಂದು ಸಮಗ್ರ ಯೋಜನೆ ರೂಪಿಸಿ ವಾಹನ ದಟ್ಟಣೆ ಹಾಗೂ ಟ್ರಾಫಿಕ್‌ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಟ್ರಾಫಿಕ್‌ ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಜನರು ಅನುಭವಿಸುತ್ತಿರುವ ಬವಣೆಗೆ ಸಮರ್ಥವಾದ ಮತ್ತು ಕ್ರಮಬದ್ಧವಾದ ಯೋಜನೆ ಜಾರಿಗೊಳಿಸಬೇಕಾಗಿದೆ. ಇದಕ್ಕಾಗಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಕೂಡ ಸಹಕಾರ ನೀಡಬೇಕು. ಇಲ್ಲದಿದ್ದಲ್ಲಿ ವಾಹನಗಳ ಸಂಖ್ಯೆ ಅಧಿಕಗೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಟ್ರಾಫಿಕ್‌ ಸಂಕಷ್ಟ ಅನುಭವಿಸಬೇಕಾಗಿ ಬರಲಿದೆ.

ಸಿಸಿ ಟಿವಿ ಕೆಮರಾಗಳು ಸಮರ್ಪಕವಾಗಿಲ್ಲ
ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಇದೀಗ ಕಾಸರಗೋಡು ಜಿಲ್ಲೆಯ ಅನೇಕ ಪೇಟೆ ಪಟ್ಟಣಗಳ ಸ್ವರೂಪವೇ ಬದಲಾಗಿದೆ. ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಆಧುನಿಕ ಜೀವನ ಶೈಲಿಯಿಂದಾಗಿ ನಗರ ಪ್ರದೇಶಗಳು ಅತ್ಯಂತ ವೇಗವಾಗಿ ಬದಲಾವಣೆ ಕಾಣುತ್ತಿವೆ. ಕಾಂಕ್ರೀಟ್‌, ಸಿಮೆಂಟ್‌ ರಸ್ತೆಗಳು ಹೆಚ್ಚೆಚ್ಚು ನಿರ್ಮಾಣವಾಗುತ್ತಿದ್ದರೂ, ಪ್ರಮುಖವಾದ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮರಾ ಸೇರಿದಂತೆ ಇನ್ನಿತರ ಅತ್ಯಾಧುನಿಕ ಕ್ಯಾಮರಾ ಅಳವಡಿಕೆಯಲ್ಲಿ ಸಂಬಂಧಪಟ್ಟ ಇಲಾಖೆಯು ಎಡವಿದೆ ಎಂದರೆ ತಪ್ಪಾಗಲಾರದು.
ಅಲ್ಲದೆ ಕೆಲವೊಂದು ಕಡೆಗಳಲ್ಲಿ ಸಿಸಿ ಟಿವಿ ಕೆಮರಾಗಳನ್ನು ಸ್ಥಾಪಿಸಲಾಗಿದ್ದರೂ, ಸರಿಯಾದ ಸ್ಥಳದಲ್ಲಿ, ಸರಿಯಾದ ಸಮಯದಲ್ಲಿ ಉಪಯೋಗಕ್ಕೆ ಬಾರದೆ ಪ್ರಯೋಜನಕ್ಕಿಲ್ಲದಂತಾಗಿದೆ. ಕಾಸರಗೋಡು ನಗರ ಪ್ರದೇಶದಲ್ಲಂತೂ ಟ್ರಾಫಿಕ್‌ ಸಮಸ್ಯೆ ವಿಪರೀತಗೊಳ್ಳುತ್ತಿದ್ದು, ಜನಸಾಮಾನ್ಯರಿಗೆ ನಡೆದಾಡಲೂ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next