Advertisement

ಕರಾವಳಿಯಲ್ಲಿ ಉತ್ತಮ ಮಳೆ, 2 ಸಾವು

02:09 AM Jun 14, 2019 | sudhir |

ಮಂಗಳೂರು/ಉಡುಪಿ:ಮುಂಗಾರು ಆಗಮನಕ್ಕೂ ಮುನ್ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನಿಂದಲೇ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಗಾಳಿ ಮತ್ತು ಗುಡುಗು ಜೋರಾಗಿತ್ತು. ಪಣಂಬೂರು, ತಣ್ಣೀರುಬಾವಿ ಬೀಚ್‌ಗಳಲ್ಲಿ ಅಲೆಗಳ ಅಬ್ಬರ ಹೆಚ್ಚಿತ್ತು. ಮಳೆಗೆ ಸಂಬಂಧಿಸಿದ ಅವಘಡಗಳಲ್ಲಿ ಎರಡು ಸಾವು ಸಂಭವಿಸಿದೆ.

Advertisement

ಉಡುಪಿ ಜಿಲ್ಲೆಯ ಉಪ್ಪುಂದ ಸಮೀಪ ತೋಟದಲ್ಲಿ ಕಡಿದು ಬಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ವೃದ್ಧೆಯೊಬ್ಬರು ಮತ್ತು ಬೆಳ್ತಂಗಡಿಯ ಗೇರುಕಟ್ಟೆಯಲ್ಲಿ ಕಡಿದು ಬಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಕೃತಕ ನೆರೆ

ಪಡೀಲ್ ಹೆದ್ದಾರಿಯ ರೈಲ್ವೇ ಅಂಡರ್‌ಪಾಸ್‌ನ ಬದಿಗೆ ಮೇಲಿನಿಂದ ಮಣ್ಣು ಜರಿದು ಬಿದ್ದು ರಸ್ತೆ ಸಂಚಾರ ಗುರುವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಅಸ್ತವ್ಯಸ್ತವಾಗಿತ್ತು.

ಪಂಪ್‌ವೆಲ್ ಒಮೇಗಾ ಆಸ್ಪತ್ರೆ ಮುಂಭಾಗದ ರಸ್ತೆ ಪಕ್ಕದಲ್ಲಿ ಬುಧವಾರ ರಾತ್ರಿ ತೋಡು ಬಂದ್‌ ಆಗಿದ್ದ ಹಿನ್ನೆಲೆಯಲ್ಲಿ ಮಳೆ ನೀರು ವಸತಿ ಸಮುಚ್ಚಯದ ಕೆಳಮಹಡಿಗೆ ನುಗ್ಗಿದೆ. ಬುಧವಾರ ರಾತ್ರಿ-ಗುರುವಾರ ಬೆಳಗ್ಗಿನ ಮಳೆಗೆ ಗೋರಿಗುಡ್ಡದ ಒಂದು ಭಾಗದಲ್ಲಿ ಮಳೆ ನೀರು ಸರ್ವಿಸ್‌ ರಸ್ತೆಯ ಬದಿಯ ಮಣ್ಣನ್ನು ಕೊಚ್ಚಿಕೊಂಡು ಹೋಗಿದೆ.

Advertisement

ಸೆಂಟ್ರಲ್ ರೈಲು ನಿಲ್ದಾಣದ ಮುಂಭಾಗದಲ್ಲಿ ಕೃತಕ ನೆರೆ ಕಾಣಿಸಿ ಕೊಂಡಿತ್ತು. ಬಲ್ಮಠದ ಸನ್ಯಾಸಿಗುಡ್ಡೆ ಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು ಹತ್ತಿರದ ಮನೆಗೆ ಬಿದ್ದು ಸಮಸ್ಯೆಯಾಯಿತು. ಜ್ಯೋತಿ, ಬಂಟ್ಸ್‌ ಹಾಸ್ಟೆಲ್, ಸಿಟಿ ಸೆಂಟರ್‌ ಮುಂಭಾಗ, ಕಂಕನಾಡಿಯ ಫಾದರ್‌ ಮುಲ್ಲರ್‌ ಆಸ್ಪತ್ರೆ, ಜೈಲು ರಸ್ತೆಯ ಸಮೀಪ ಮತ್ತಿತರ ಕಡೆಗಳಲ್ಲಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ಸಂಚಾರ ದಟ್ಟಣೆ

ಮಳೆಯಿಂದ ಗುರುವಾರ ಮಂಗಳೂರಿನ ಅಲ್ಲಲ್ಲಿ ಸಂಚಾರ ದಟ್ಟಣೆ ಕಾಣಿಸಿಕೊಂಡಿತ್ತು. ಮಂಗಳೂರು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್ ಭೇಟಿ ನೀಡಿ ಕ್ರಮ ಕೈಗೊಂಡರು.

ಉಡುಪಿ -ಮಣಿಪಾಲ ರಸ್ತೆ ಕಾಮಗಾರಿ ಪ್ರದೇಶವು ಮಳೆಯಿಂದ ಅಸ್ತವ್ಯಸ್ತಗೊಂಡಿದೆ. ಅನೇಕ ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಕೃತಕ ನೆರೆ ಸೃಷ್ಟಿಯಾಗಿದೆ.

ದಕ್ಷಿಣ ಕನ್ನಡದ ಬೆಳ್ತಂಗಡಿ, ಧರ್ಮಸ್ಥಳ, ಪುತ್ತೂರು, ಉಪ್ಪಿನಂಗಡಿ, ಶಿರಾಡಿ, ಬಜತ್ತೂರು, ಸುಬ್ರಹ್ಮಣ್ಯ, ಸುಳ್ಯ, ಜಾಲ್ಸೂರು, ಕಾಸರಗೋಡು, ಕನ್ಯಾನ, ವಿಟ್ಲ, ಸುರತ್ಕಲ್, ಬಂಟ್ವಾಳ, ಉಳ್ಳಾಲ, ಮೂಡುಬಿದಿರೆ; ಉಡುಪಿ ಜಿಲ್ಲೆಯ ಕಾಪು, ಉಡುಪಿ, ಮಣಿಪಾಲ, ಪಡುಬಿದ್ರಿ, ಕಾರ್ಕಳ, ಹೆಬ್ರಿ, ಸಿದ್ದಾಪುರ, ತೆಕ್ಕಟ್ಟೆ, ಬೆಳ್ಮಣ್‌, ಕೊಲ್ಲೂರು, ವಂಡ್ಸೆ, ಕೋಟೇಶ್ವರ, ಕುಂದಾಪುರ, ಕೋಟ, ಬ್ರಹ್ಮಾವರ, ಶಿರ್ವ ಮತ್ತಿತರೆಡೆ ಭಾರೀ ಮಳೆಯಾಗಿದೆ.

ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಕೈಕೋ ಪ್ರದೇಶದಲ್ಲಿ ಕಡಲ್ಕೊರೆತ ಅಪಾಯ ನಿರ್ವಹಣೆಗಾಗಿ ಪ್ರತ್ಯೇಕ ತಂಡವೊಂದನ್ನು ಮಂಗಳೂರು ತಹಶೀಲ್ದಾರ್‌ ನೇತೃತ್ವದಲ್ಲಿ ರಚಿಸ ಲಾಗಿದೆ. ಉಡುಪಿಯ ಮಲ್ಪೆ ಪಡುಕರೆಗೆ ಅಪರ ಜಿಲ್ಲಾಧಿಕಾರಿ, ತಹಶೀಲ್ದಾರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಸೂಚನೆ

ಕೃತಕ ನೆರೆಗೆ ಕಾರಣ ಕಂಡು ಕೊಂಡು ಪರಿಹರಿಸಲು ಜಿಲ್ಲಾಧಿಕಾರಿ ಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದ್ಯಪಾಡಿ ಪ್ರದೇಶದಲ್ಲಿ ಭೂಕುಸಿತ ಅಥವಾ ನೀರು ಬಂದರೆ ದೋಣಿಯನ್ನು ಕಾದಿರಿಸಲಾಗಿದೆ. ಚಾರ್ಮಾಡಿಯಲ್ಲಿ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸ ಲಾಗಿದೆ. ಮಂಗಳೂರು ನಗರದ ಕೊಡಿಯಾಲಬೈಲ್, ಡೊಂಗರಕೇರಿ ಸೋನಾರ್‌ ಅಪಾರ್ಟ್‌ಮೆಂಟ್ ಬಳಿ ನೀರು ನಿಲ್ಲಲು ಕಾರಣವಾದ ಸ್ಲ್ಯಾಬ್‌ ತೆಗೆಯಲು ಸೂಚಿಸಲಾಗಿದೆ.

ಉಡುಪಿಯಲ್ಲಿ ಆ್ಯಪ್‌ ಮೂಲಕ ದೂರು ಸ್ವೀಕರಿಸಿ ಪರಿಹಾರಕ್ಕೆ ಯತ್ನಿಸ ಲಾಗುತ್ತಿದೆ. ಗುರುವಾರ ನಡೆದ ವಿಶೇಷ ಸಭೆಯಲ್ಲಿ ಮುಂಜಾಗ ರೂಕತಾ ಕ್ರಮ ಕೈಗೊಳ್ಳಲು ಜಿಲ್ಲಾಧಿ ಕಾರಿಗಳು ಸೂಚಿಸಿದ್ದಾರೆ.

ವಿಪತ್ತು ನಿರ್ವಹಣೆಗಾಗಿ ಎನ್‌ಡಿ ಆರ್‌ಎಫ್, ಪೊಲೀಸ್‌, ಅಗ್ನಿಶಾಮಕ ದಳ ಅಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ 60 ಮಂದಿ ಸಿಬಂದಿ ಕಾರ್ಯೋನ್ಮುಖ ರಾಗಿದ್ದಾರೆ.

ಮೀನುಗಾರರಿಗೆ ಎಚ್ಚರಿಕೆ

ಕಾಸರಗೋಡು: ಮುಂದಿನ 24 ತಾಸುಗಳಲ್ಲಿ ತಾಸಿಗೆ 35-45 ಕಿ.ಮೀ. ವೇಗದಲ್ಲಿ ಗಾಳಿಬೀಸುವ ಸಾಧ್ಯತೆ ಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಹವಾಮಾನ ಕೇಂದ್ರವು ಎಚ್ಚರಿಕೆ ನೀಡಿದೆ.

ಆದಿಕ್ಕ ಮಸೀದಿ, 2 ಮನೆ ಸಮುದ್ರಪಾಲು

ಕುಂಬಳೆ: ಉಪ್ಪಳ ಬಳಿಯ ಮೂಸೋಡಿ ಆದಿಕ್ಕದಲ್ಲಿ ಸಮುದ್ರ ಕೊರೆತದಿಂದ ಒಂದು ಮಸೀದಿ ಮತ್ತು 2 ಮನೆಗಳು ಕುಸಿದಿದ್ದು 13 ಮನೆಗಳು ಅಪಾಯದಂಚಿನಲ್ಲಿವೆ.

ಸ್ಥಳೀಯ ಬಳಪ್ಪು ಮಸೀದಿ ಮತ್ತು ಮಹಮ್ಮದ್‌ ಮತ್ತು ಅವರ ಪುತ್ರಿ ಮರಿಯಞಿ ಅವರ ಮನೆಗಳು ಕುಸಿದಿವೆ. 6 ಮನೆಯವರನ್ನು ಸ್ಥಳಾಂತರಿಸಲಾಗಿದೆ.

ಸ್ಥಳಕ್ಕೆ ಕಾಸರಗೋಡು ಸಂಸದ ಕೆ.ಪಿ. ಉಣ್ಣಿತ್ತಾನ್‌ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಉಪ್ಪಳ ಪಂಜತೊಟ್ಟಿಯಲ್ಲಿ ಬುಧವಾರ ರಾತ್ರಿ ಅಕೇಶಿಯ ಮರ ಬಿದ್ದು ವಿದ್ಯುತ್‌ ತಂತಿ ತುಂಡಾಗಿದೆ. ಉಪ್ಪಳ ಅಗ್ನಿಶಾಮಕ ದಳ ಹಾಗೂ ವಿದ್ಯುತ್‌ ಇಲಾಖೆಯ ಅಧಿಕಾರಿಗಳು ಮರವನ್ನು ಕಡಿದು ತೆರವುಗೊಳಿಸಿದರು.

ಮುಂಡ್ಕೂರು: ಸಿಡಿಲು ಬಡಿದು ಮನೆಗೆ ಹಾನಿ

ಬೆಳ್ಮಣ್‌: ಬುಧವಾರ ರಾತ್ರಿ ಸಿಡಿಲಿನ ಹೊಡೆತಕ್ಕೆ ಮುಂಡ್ಕೂರು ಪಂಚಾಯತ್‌ ಬಳಿಯ ರಾಬರ್ಟ್‌ ಫೆರ್ನಾಂಡಿಸ್‌ ಅವರ ಮನೆಗೆ ಹಾನಿಯಾಗಿದೆ. ರಾತ್ರಿ 8ರ ಹೊತ್ತಿಗೆ ಅಡುಗೆ ಕೋಣೆಯ ಗೋಡೆಗೆ ಸಿಡಿಲು ಬಡಿದಿದ್ದು ಛಾವಣಿ ಮತ್ತು ಮನೆಯ ಒಳಭಾಗ ನುಚ್ಚುನೂರಾಗಿದೆ.

ಅಡುಗೆ ಕೋಣೆಯಲ್ಲಿದ್ದ ರಾಬರ್ಟ್‌ ಅವರ ಪತ್ನಿ, ಮಗಳು ಮತ್ತು ತ್ರಿವಳಿ ಮೊಮ್ಮಕ್ಕಳು ಸಿಡಿಲು ಬಡಿಯುವ ಕೇವಲ 5 ನಿಮಿಷ ಮೊದಲು ಅಲ್ಲಿಂದ ಹೊರಗೆ ಹೋಗಿದ್ದರಿಂದ ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ. ಫ್ರಿಜ್ಜು, ಟಿ.ವಿ., ಪಂಪ್‌ ಸೆಟ್, ಮೀಟರ್‌ ಸುಟ್ಟು ಕರಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next