Advertisement

ಉ.ಕರ್ನಾಟಕದ 7 ಜಿಲ್ಲೆಗೆ ಉಷ್ಣ ಅಲೆ ಎಚ್ಚರಿಕೆ; ಎ.9ಕ್ಕೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

12:44 PM Apr 06, 2024 | Team Udayavani |

ಬೆಂಗಳೂರು: ಬಾಗಲಕೋಟೆ, ಕಲಬುರಗಿ, ಹಾವೇರಿ, ಧಾರವಾಡ, ಕೊಪ್ಪಳ, ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ ಶನಿವಾರ ಉಷ್ಣ ಅಲೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2024ರಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ ಬರೋಬ್ಬರಿ 38.3 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

Advertisement

ಗಾಳಿ ಸ್ಥಗಿತವು ಈಗ ಪೂರ್ವ ವಿದರ್ಭದಿಂದ ಕೊಮೊರಿನ್‌ ಪ್ರದೇಶದವರೆಗೆ ಕರ್ನಾಟಕದ ಒಳಭಾಗ ಮತ್ತು ತಮಿಳುನಾಡಿನ ಒಳಭಾಗದವರೆಗೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಮೀ ಎತ್ತರದಲ್ಲಿದೆ. ಕರಾವಳಿ ಕರ್ನಾಟಕದಲ್ಲಿ 33 ರಿಂದ 36 ಡಿ.ಸೆ. ವರೆಗೆ ತಾಪಮಾನ ದಾಖಲಾದರೆ, ಉತ್ತರ ಒಳನಾಡಿನಲ್ಲಿ ಸರಾಸರಿ ತಾಪಮಾನವು 37 ರಿಂದ 43 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿವೆ. ಮುಂದಿನ 2 ದಿನಗಳಲ್ಲಿ ಕರಾವಳಿಯ ಹಲವು ಕಡೆ ವಾಡಿಕೆಗಿಂತ 2 ಡಿ.ಸೆ. ತಾಪಮಾನ ಹೆಚ್ಚಾಗಲಿದೆ.

ಮುಂದಿನ 5 ದಿನಗಳಲ್ಲಿ ಬೆಳಗಾವಿ, ವಿಜಯಪುರ, ಬೀದರ್‌, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೋಲಾರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕ್ರಮೇಣ 2-4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ. ಮುಂದಿನ 2 ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಗದಗ, ಕೊಪ್ಪಳ, ಕಲಬುರಗಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆದ್ರìತೆ ಇರಲಿದೆ. ಮುಂದಿನ 2 ದಿನಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ರಾಯಚೂರು, ಬಾಗಲಕೋಟೆ, ಕೊಪ್ಪಳ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಬೆಚ್ಚನೆಯ ರಾತ್ರಿಯ ವಾತಾವರಣ ಇರಲಿದೆ.

ಶುಕ್ರವಾರ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಎ.9ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ವಿಜಯಪುರ, ಗದಗ, ಕೊಪ್ಪಳ, ಬಳ್ಳಾರಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ವಿಜಯನಗರ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಎ.6ರಂದು ಕೊಡಗು, ಎ.7ರಂದು ಚಿಕ್ಕಮಗಳೂರು, ಮಂಡ್ಯ, ಎ.8ರಂದು ಕೊಡಗು, ಚಿಕ್ಕಮಗಳೂರು ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಉಷ್ಣಾಂಶ ?

Advertisement

ಬೆಂಗಳೂರಿನಲ್ಲಿ 37, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 38.3 ಗರಿಷ್ಠ ಉಷ್ಣಾಂಶ ದಾಖಲಾಗಿದೆ. ರಾಯಚೂರು 41.6, ಬಾಗಲಕೋಟೆ 41.1, ಕೊಪ್ಪಳ 40.8, ಗದಗ 40.6, ವಿಜಯಪುರ 40, ದಾರವಾಡ 39.8, ಮಂಗಳೂರು 35.4, ಬೀದರ್‌ 39.2, ದಾವಣಗೆರೆ 39.5 ಗರಿಷ್ಠ ಉಷ್ಣಾಂಶ ಶುಕ್ರವಾರ ದಾಖಲಾಗಿದೆ. 2016ರ ಎ.25ರಂದು 39.2ಡಿ.ಸೆ ಗರಿಷ್ಠ ತಾಪಮಾನ ದಾಖಲಾಗಿತ್ತು. ಅದನ್ನ ಹೊರತುಪಡಿಸಿದರೆ ಕೆಐಎಎಲ್‌ನಲ್ಲಿ 2024ರ ಏ.5ರಂದು 38.3 ಡಿ.ಸೆ.ಗರಿಷ್ಠ ತಾಪಮಾನ ದಾಖಲಾಗಿದೆ.

ಕಲಬುರಗಿಯಲ್ಲಿ ಈ ವರ್ಷದ ಗರಿಷ್ಠ ತಾಪ 44 ಡಿ.ಸೆ. ದಾಖಲು

ಕಲಬುರಗಿ: ರಣಬಿಸಿಲಿಗೆ ಇಡೀ ರಾಜ್ಯವೇ ತತ್ತರಿಸಿದ್ದು ಶುಕ್ರವಾರ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಹೋಬಳಿಯ ನಿಂಬಾಳ-ಹಡಲಗಿಯಲ್ಲಿ ಈ ವರ್ಷದ ಗರಿಷ್ಠ ತಾಪಮಾನ 44.5 ಡಿಗ್ರಿ ಸೆಲ್ಸಿಯಸ್‌ ಬಿಸಿಲು ದಾಖಲಾಗಿದೆ. ಬಿಸಿಲು ನಾಡು ಎಂದೇ ಖ್ಯಾತಿ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ರಣಬಿಸಿಲಿಗೆ ಜನಜೀವನ ತತ್ತರಿಸಿದ್ದು, 44 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ದಾಖಲಾಗುತ್ತಿತ್ತು.

ಶುಕ್ರವಾರ ರಾಜ್ಯದಲ್ಲೇ ಅತ್ಯಧಿಕ ತಾಪ ದಾಖಲಾಗಿದ್ದು, ಜನರನ್ನು ಇನ್ನಷ್ಟು ಹೈರಾಣಾಗಿಸಿದೆ. ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ಜನತೆ ಹೊರಗೆ ಬಾರದಂತಾಗಿದೆ. ಜಿಲ್ಲೆಯ ಜೀವನದಿ ಭೀಮಾ ನದಿ ಸಂಪೂರ್ಣ ಬತ್ತಿದ್ದು, ಉರಿ ಬಿಸಿಲಿಗೆ ತುಪ್ಪ ಸವರಿದಂತಾಗಿದೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸಲಹೆ-ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next