Advertisement

ಕಾಣ್ತಿಲ್ಲ ಕಾವು, ನಿರಾಸಕ್ತಿಯ ನೋವು

03:22 PM Apr 19, 2019 | Team Udayavani |

ಬೆಳಗಾವಿ: ಲೋಕಸಭೆ ಚುನಾವಣೆಯ ದಿನ ಹತ್ತಿರವಾಗುತ್ತಿದ್ದರೂ ಅಥಣಿ ಕ್ಷೇತ್ರದಲ್ಲಿ ಪ್ರಚಾರದ ಕಾವು ಮತ್ತು ಚುನಾವಣೆಯ ಬಗ್ಗೆ ಅಂತಹ ಆಸಕ್ತಿ ಕಾಣುತ್ತಿಲ್ಲ. ಕ್ಷೇತ್ರದಲ್ಲಿ ನಕಾರಾತ್ಮಕ ಅಂಶಗಳು ಹಾಗೂ ಮುಖಂಡರಲ್ಲಿರುವ ಗೊಂದಲದಿಂದ ಕಾರ್ಯಕರ್ತರು ಸಹ ಉತ್ಸಾಹದಿಂದ ಕೆಲಸ ಮಾಡುತ್ತಿರುವುದು ಗೋಚರಿಸುತ್ತಿಲ್ಲ.

Advertisement

ಈ ಮೊದಲು ಬಿಜೆಪಿಯ ಭದ್ರಕೋಟೆಯಾಗಿದ್ದ ಅಥಣಿ ಕ್ಷೇತ್ರ ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ತೆಕ್ಕೆಗೆ ಬಂದಿದೆ. ಕಾಂಗ್ರೆಸ್‌ ಶಾಸಕ ರಮೇಶ ಜಾರಕಿಹೊಳಿ ಈ ಕ್ಷೇತ್ರವನ್ನು ಬಹಳ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದರಿಂದ ಮಹೇಶ ಕುಮಠಳ್ಳಿ ಮೊದಲ ಬಾರಿ ಶಾಸಕರಾದರು. ಆದರೆ ನಂತರ ನಡೆದಿರುವ ರಾಜಕೀಯ ಬೆಳವಣಿಗೆಗಳಿಂದ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ರಮೇಶ ಜಾರಕಿಹೊಳಿ ಬೆಂಬಲಿಗ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರದಲ್ಲಿ ಅಷ್ಟು ಆಸಕ್ತಿಯಿಂದ ಭಾಗವಹಿಸುತ್ತಿಲ್ಲ.

ದೇಶದ ಪ್ರಮುಖ ವಿಷಯಗಳಾದ ರಫೇಲ್‌ ಡೀಲ್‌, ಬಾಲಾಕೋಟ್‌ ಘಟನೆಗಳಿಗಿಂತ ಸ್ಥಳೀಯ ನಾಯಕರ ಕಿತ್ತಾಟ, ವೈಮನಸ್ಸು, ಅಂತರಿಕ ಮನಸ್ತಾಪದ ವಿಷಯಗಳೇ ಹೆಚ್ಚು ಚರ್ಚೆಗೆ ಗ್ರಾಸವಾಗಿವೆ. ಹಳ್ಳಿಗಳಲ್ಲಿ ಇದರದ್ದೇ ಹೆಚ್ಚು ಸುದ್ದಿಯಾಗುತ್ತಿದೆ.

ಸಂಜೆಯಾದರೆ ಸಾಕು ಹಳ್ಳಿಗಳ ಕಟ್ಟೆಗಳು ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ಸಾಧನೆ ಮತ್ತು ನಿರ್ಲಕ್ಷ್ಯ, ಸರಕಾರದ ಕೆಲಸಗಳ ಬಗ್ಗೆಯೇ ಸ್ವಾರಸ್ಯಕರ ಚರ್ಚೆಗಳು ನಡೆಯುತ್ತಿವೆ. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅಲೆಯೂ ಸದ್ದು ಮಾಡದೇ ಬಿಟ್ಟಿಲ್ಲ. ಕೇಂದ್ರದಿಂದ ಎಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ನಮಗೆ ಏನು ಪ್ರಯೋಜನವಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲದಿದ್ದರೂ ಪಾಕಿಸ್ತಾನಕ್ಕೆ ಒಳ್ಳೆ ಪಾಠ ಕಲಿಸಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಕೇಳುತ್ತವೆ.

ಇನ್ನು ಪ್ರಚಾರದ ವಿಷಯ ತೆಗೆದುಕೊಂಡರೆ ಬಿಜೆಪಿ ಇದರಲ್ಲಿ ಒಂದು ಹೆಜ್ಜೆ ಮುಂದಿದೆ. ಮಾಜಿ ಶಾಸಕ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಾಕಷ್ಟು ಪ್ರಚಾರ ಸಭೆಗಳು ನಡೆದಿವೆ. ಆದರೆ ಇದೇ ಸ್ಥಿತಿ ಕಾಂಗ್ರೆಸ್‌ದಲ್ಲಿ ಇಲ್ಲ. ನಾಯಕರಲ್ಲಿನ ಗೊಂದಲ ಕಾರ್ಯಕರ್ತರ ಮೇಲೂ ಪರಿಣಾಮ ಬೀರಿದೆ. ಶಾಸಕ ಮಹೇಶ ಕುಮಠಳ್ಳಿ ಅವರ ಹೊಯ್ದಾಟ ಅನೇಕ ಕಡೆ ಕಾರ್ಯಕರ್ತರ ಮೌನಕ್ಕೆ ಕಾರಣವಾಗಿದೆ, ಚುನಾವಣೆಯಲ್ಲಿ
ಗೆದ್ದುಬಂದವರು ಏನು ಮಾಡುತ್ತಾರೆ. ಯಾರು ಬಂದರೂ ಅಷ್ಟೇ ಎಂಬ ನಿರ್ಲಿಪ್ತ ಭಾವನೆ ಜನರಲ್ಲಿದೆ. ಇದೇ ಕಾರಣದಿಂದ ಚುನಾವಣೆಯ ಬಗ್ಗೆ ಮತದಾರರಲ್ಲಿ ಅಷ್ಟು ಕುತೂಹಲ ಕಾಣಿಸುತ್ತಿಲ್ಲ.

Advertisement

ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಅಥಣಿ ಕ್ಷೇತ್ರದಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಅಂತಹ ಬದಲಾವಣೆ ಕಾಣುವುದಿಲ್ಲ. ಈಗಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಹದಗೆಟ್ಟ ರಸ್ತೆಗಳಿವೆ. ಕೇಂದ್ರದ ಅನುದಾನ ಕ್ಷೇತ್ರದ ಅಭಿವೃದ್ಧಿ ಗೆ ಸಹಾಯಕಾರಿಯಾಗಿಲ್ಲ ಎಂಬ ಅಸಮಾಧಾನ ಜನರಲ್ಲಿದೆ.

ಕ್ಷೇತ್ರದಲ್ಲಿ ಈಗ ಭೀಕರ ಬರ ಇದೆ. ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಪ್ರತಿದಿನ ಕೊಡ ನೀರಿಗಾಗಿ ಮೈಲುಗಟ್ಟಲೇ ಅಲೆದಾಡುವ ಸ್ಥಿತಿ ಇದೆ. ಹೀಗಿರುವಾಗ ಈ ವಾರದಲ್ಲಿ ಕೃಷ್ಣಾ ನದಿಗೆ ನೀರು ಬರದೇ ಇದ್ದರೆ ಮತದಾನದ ಪ್ರಮಾಣದಲ್ಲಿ ಬಹಳ ಇಳಿಕೆಯಾಗಲಿದೆ ಎಂಬ ಆತಂಕ ಮನೆಮಾಡಿದೆ. ಮತದಾನದ ವೇಳೆ ನದಿಯಲ್ಲಿ ನೀರು ಇರದೇ ಇದ್ದರೆ ಜನರು ಮತದಾನದ ಬಗ್ಗೆ ಆಸಕ್ತಿ ಕಳೆದುಕೊಂಡು ನೀರನ್ನು ಹುಡುಕಿಕೊಂಡು ಹೋಗುತ್ತಾರೆ ಎಂಬ ಮಾತುಗಳು ಕೇಳಿಬಂದವು.

ಕ್ಷೇತ್ರದಲ್ಲಿ ನೀರಾವರಿ, ಕುಡಿವ ನೀರು, ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಮುಖ್ಯವಾಗಿ ಕರಿ ಮಸೂತಿ ನೀರಾವರಿ ಯೋಜನೆಯಿಂದ ಕೈಬಿಟ್ಟು ಹೋಗಿರುವ ಎಂಟು ಹಳ್ಳಿಗಳನ್ನು ಮರಳಿ ಇದರಲ್ಲಿ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆಯಿದೆ. ಈ ಕಾರ್ಯ ಅನುಷ್ಠಾನಗೊಂಡಿದ್ದೇ ಆದರೆ ಈ ಎಂಟು ಹಳ್ಳಿಗಳ ಕುಡಿಯುವ ಹಾಗೂ ನೀರಾವರಿಯ ಸಮಸ್ಯೆ ದೂರವಾಗಲಿದೆ. ಎರಡನೇಯದಾಗಿ ರೈತರನ್ನು ಬಹಳವಾಗಿ ಕಾಡುತ್ತಿರುವ ಸವುಳು ಜವುಳು ಸಮಸ್ಯೆಗೆ ಕೇಂದ್ರದಿಂದ ಅನುದಾನ ತಂದು ಶಾಶ್ವತವಾದ ಪರಿಹಾರ ದೊರಕಿಸಿಕೊಡಬೇಕು ಎಂಬುದು ಕ್ಷೇತ್ರದ ಮತದಾರರ ಒತ್ತಾಯ. ಇದಲ್ಲದೆ ರಾಜಕೀಯ ತಿಕ್ಕಾಟದಲ್ಲಿ ಇನ್ನೂ  ಉದ್ಘಾಟನೆ ಯಾಗದೆ ಹಾಗೆ ನಿಂತಿರುವ ಅಥಣಿಯ ಪಶು ವೈದ್ಯಕೀಯ ಕಾಲೇಜು ಕಟ್ಟಡವನ್ನು ನಾಡಿಗೆ ಸಮರ್ಪಿಸಬೇಕು ಎಂಬ ಆಗ್ರಹ ಕ್ಷೇತ್ರದ ಜನರಿಂದ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next