Advertisement

ಶೀಘ್ರವೇ ಹೃದಯ ಕಸಿ ಕೇಂದ್ರ; ವರ್ಷಕ್ಕೆ 25 ಲಕ್ಷ ರೋಗಿಗಳಿಗೆ ಚಿಕಿತ್ಸೆ

09:57 PM Jul 21, 2019 | Team Udayavani |

ಉಡುಪಿ: ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮತ್ತು ವೈದ್ಯಕೀಯ ಆರೈಕೆಯನ್ನು ಹೆಚ್ಚು ಸಮಗ್ರವನ್ನಾಗಿ ಮಾಡುವುದಕ್ಕಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಹಲವಾರು ಯೋಜನೆಗಳನ್ನು ಆರಂಭಿಸಿವೆ. 2019ರ ವರ್ಷವನ್ನು ರೋಗಿ ಕೇಂದ್ರಿತ ವರ್ಷವನ್ನಾಗಿ ಆಚರಿಸುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ|ಅವಿನಾಶ ಶೆಟ್ಟಿ ಅವರು ತಿಳಿಸಿದರು.

Advertisement

ಸುಲಭ ಚಿಕಿತ್ಸಾ ಪ್ರಕ್ರಿಯೆ
ಶುಕ್ರವಾರ ಓಶಿಯನ್‌ ಪರ್ಲ್ಸ್‌ ಹೊಟೇಲ್‌ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತಮ ರೋಗಿ ಕೇಂದ್ರಿತ ಸೇವೆಯನ್ನು ಒದಗಿಸಲು ರೋಗಿಗಳಿಗೆ ಗೃಹ ಆರೈಕಾ ಸೇವೆಗಳು, ವೈದ್ಯಕೀಯ ಹೊರರೋಗಿ ವಿಭಾಗದಲ್ಲಿ ರಕ್ತ ಸಂಗ್ರಹಣಾ ಕೇಂದ್ರ, 24×7 ಔಷಧಾಲಯ, ಬೇರೆ ವೈದ್ಯರಿಂದ ಬಂದ ರೋಗಿಗಳಿಗೆ ರೆಫ‌ರಲ್‌ ಡೆಸ್ಕ್, ಅನಗತ್ಯ ಜನದಟ್ಟಣೆ ತಪ್ಪಿಸಲು ಸ್ವಯಂ-ನೋಂದಣಿ ಕೌಂಟರ್‌, ಮಗುವಿಗೆ ಹಾಲುಣಿಸುವ ಕೊಠಡಿ, ಡಿಜಿಟಲ್‌ ಮಾಹಿತಿ ಪ್ರದರ್ಶನ, ರೋಗಿಗಳ ಫ‌ಲಾಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. ಇದು ಚಿಕಿತ್ಸೆಗಾಗಿ ಅಥವಾ ವೈದ್ಯಕೀಯ ಸಮಾಲೋಚನೆಗಾಗಿ ಆಸ್ಪತ್ರೆಗೆ ಭೇಟಿ ಕೊಡುವ ರೋಗಿಗಳು ಉತ್ತಮ ಸೇವಾ ಅನುಭವ ಪಡೆಯಲು ನೆರವಾಗುತ್ತದೆ ಎಂದರು.

ಶೀಘ್ರವೇ ಹೃದಯ ಕಸಿ ಕೇಂದ್ರ
ಇತ್ತೀಚೆಗೆ ಆರಂಭಿಸಿದ ಸಮಗ್ರ ಕ್ಯಾನ್ಸರ್‌ ಕೇಂದ್ರವು ಈಗ ಮಕ್ಕಳ ರಕ್ತ ಕ್ಯಾನ್ಸರ್‌ ತಜ್ಞ (ಪಿಡಿಯಾಟ್ರಿಕ್‌ ಹೆಮಟೋ ಆಂಕಾಲಜಿಸ್ಟ್‌) ಮತ್ತು ಪ್ರಶಾಮಕ ಔಷಧಿ (ಪಾಲಿಯೇಟಿವ್‌ ಮೆಡಿಸಿನ್‌) ವಿಭಾಗ ಹೊಂದಿದ್ದು ಇದರಿಂದ ಸಮಗ್ರ ಕ್ಯಾನ್ಸರ್‌ ಆರೈಕೆ ಮತ್ತು ಚಿಕಿತ್ಸೆ ಒದಗಿಸಬಹುದು. ಮಕ್ಕಳ ಹೃದ್ರೋಗ ತಜ್ಞರು, ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ಹೃದಯ ಕಸಿ ಸೌಕರ್ಯಗಳನ್ನು ಒದಗಿಸುವ ಮೂಲಕ ಹೃದ್ರೋಗ ಕೇಂದ್ರವನ್ನು ಇನ್ನಷ್ಟು ಸುದೃಢಪಡಿಸಲಾಗಿದೆ. ಹೃದಯ ಕಸಿ ಕೇಂದ್ರಕ್ಕೆ ಅನುಮತಿ ಸಿಕ್ಕಿದ್ದು ಶೀಘ್ರದಲ್ಲಿ ಕೇಂದ್ರವನ್ನು ಆರಂಭಿಸಲಾಗುತ್ತದೆ. ಇದರಿಂದಾಗಿ ರೋಗಿಗಳು ಮಹಾನಗರಗಳಿಗೆ ಹೋಗಬೇಕಾಗಿಲ್ಲ. ಸುಟ್ಟ ಗಾಯ ಘಟಕದಲ್ಲಿ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸಿರುವುದರಿಂದ ಅದೊಂದು ಸಮಗ್ರ ಘಟಕವಾಗಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.

ಸುಸಜ್ಜಿತ ಜಠರ ವಿಭಾಗ
ನುರಿತ ಜಠರಕರುಳು ತಜ್ಞರು, ಜಠರಕರುಳು ಮತ್ತು ಜೀರ್ಣಾಂಗ ಶಸ್ತ್ರಚಿಕಿತ್ಸಾ ತಜ್ಞರು, ಜಠರಕರುಳಿನ ಶರೀರ ವಿಜ್ಞಾನ ಪ್ರಯೋಗಾಲಯ (ಜಿಐ ಫಿಸಿಯೋಲಜಿ ಲ್ಯಾಬ್‌) ಮತ್ತು ಚಲನ ವಿಜ್ಞಾನ ಚಿಕಿತ್ಸಾಲಯ (ಮೊಟಿಲಿಟಿ ಕ್ಲಿನಿಕ್‌) ಸೇರ್ಪಡೆಯೊಂದಿಗೆ ಜಠರಕರುಳು (ಗ್ಯಾಸ್ಟ್ರೋ ಎಂಟೆರಾಲಜಿ) ವಿಭಾಗ ಸುಸಜ್ಜಿತವಾಗಿ ಕಾರ್ಯನಿರ್ವಹಿಸುತ್ತಿದೆ. ಜತೆಗೆ ಯಾವುದೇ ತುರ್ತು ಅಥವಾ ಅಪಘಾತ ಪ್ರಕರಣಗಳಿಗಾಗಿ 24×7 ತುರ್ತು ಚಿಕಿತ್ಸೆ ಮತ್ತು ಕ್ರಿಟಿಕಲ್‌ ಕೇರ್‌ ವಿಭಾಗ ಲಭ್ಯವಿದೆ. ವೈದ್ಯರನ್ನು ತರಬೇತುಗೊಳಿಸಲು ಪರಿಣಿತಿ ಪ್ರಯೋಗಾಲಯದ (ಸ್ಕಿಲ್‌ ಲ್ಯಾಬ್‌) ವ್ಯವಸ್ಥೆ ಮಾಡಲಾಗಿದೆ ಎಂದರು.

ರೋಗಿ ಕೇಂದ್ರಿತ ವರ್ಷ ಘೋಷಣೆಯ ಪ್ರಮುಖ ಭಾಗವಾಗಿ ಪ್ರಶಾಮಕ ಔಷಧಿ ವಿಭಾಗ, ಭ್ರೂಣ ಸಂಬಂಧಿ ಔಷಧಿ ವಿಭಾಗ, ಹಿರಿಯರಿಗಾಗಿ ವೃದ್ಧಾಪ್ಯ ಚಿಕಿತ್ಸಾಲಯ, ಚಲನ ವಿಜ್ಞಾನ ಚಿಕಿತ್ಸಾಲಯ (ಮೊಟಿಲಿಟಿ ಕ್ಲಿನಿಕ್‌), ಮಕ್ಕಳ ಹೃದ್ರೋಗ ವಿಭಾಗ, ಮಕ್ಕಳ ರಕ್ತ ಕ್ಯಾನ್ಸರ್‌ (ಹೆಮಟೋ ಆಂಕಾಲಜಿ) ವಿಭಾಗ, ಜಠರಕರುಳಿನ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ಹೃದಯ ವೈಫ‌ಲ್ಯ ಚಿಕಿತ್ಸಾಲಯ ಮೊದಲಾದ ಹಲವು ವಿಭಾಗಗಳನ್ನು ತೆರೆಯಲಾಗಿದೆ ಎಂದರು.

Advertisement

ಇಎಸ್‌ಐ, ಆಯುಷ್ಮಾನ್‌ ಭಾರತ
ಪ್ರಶ್ನೆಗೆ ಉತ್ತರಿಸಿದ ಅವರು ಇಎಸ್‌ಐ ಸೌಲಭ್ಯವನ್ನು ಒದಗಿಸುವ ಅಧಿಕಾರ ಇಎಸ್‌ಐ ನಿಗಮಕ್ಕೆ ಇರುವುದೇ ವಿನಾ ನಮಗಲ್ಲ. ಇತ್ತೀಚೆಗೆ ಸ್ವಲ್ಪ ದಿನ ಈ ಸೌಲಭ್ಯ ನಿಂತು ಈಗ ಮತ್ತೆ ಆರಂಭವಾಗಿದೆ.ಆಯುಷ್ಮಾನ್‌ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಯನ್ನು ಕರ್ನಾಟಕದಲ್ಲಿ ಜತೆ ಸೇರಿಸಿ ಮಾಡಿದ ಕಾರಣ ಮೊದಲೆರಡು ಹಂತಗಳ ರೋಗಿಗಳು ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಸೌಲಭ್ಯವಿಲ್ಲದಿದ್ದರೆ ಮಾತ್ರ ನಮ್ಮ ಆಸ್ಪತ್ರೆಗೆ ಬರಬೇಕು. ತೃತೀಯ ಹಂತದ ಕೆಲವು ಗಂಭೀರ ಕಾಯಿಲೆಗಳಿಗೆ ಮಾತ್ರ ನೇರವಾಗಿ ನಮ್ಮಲ್ಲಿಗೆ ಬರಬಹುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಉಪವೈದ್ಯಕೀಯ ಅಧೀಕ್ಷಕ ಡಾ| ಪದ್ಮರಾಜ ಹೆಗ್ಡೆ, ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಚಿನ್‌ ಕಾರಂತ್‌ ಉಪಸ್ಥಿತರಿದ್ದರು.

ವರ್ಷಕ್ಕೆ 25 ಲಕ್ಷ ರೋಗಿಗಳಿಗೆ ಚಿಕಿತ್ಸೆ
ಕಸ್ತೂರ್ಬಾ ಆಸ್ಪತ್ರೆಯು ಮಂಚೂಣಿಯಲ್ಲಿರುವ ಚತುರ್ಥ ಆರೈಕೆ ವಿಭಾಗದ (ಕ್ವಾಟೆರ್ನರಿ ಕೇರ್‌) ಆಸ್ಪತ್ರೆಯಾಗಿದ್ದು 2,000ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿದೆ ಹಾಗೂ ಭಾರತದ ಪ್ರಸಿದ್ಧ ವಿಶ್ವವಿದ್ಯಾಲಯವಾಗಿರುವ ಮಾಹೆಯ ಅಂಗವಾಗಿದೆ. ಪ್ರತಿದಿನ ಮೂರು ರಾಜ್ಯಗಳಿಂದ 2,500 ಹೊರರೋಗಿಗಳು ಇಲ್ಲಿ ಭೇಟಿ ಕೊಡುತ್ತಾರೆ ಮತ್ತು ಪ್ರತಿ ವರ್ಷ 25 ಲಕ್ಷ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗುತ್ತದೆ ಎಂದರು.


Advertisement

Udayavani is now on Telegram. Click here to join our channel and stay updated with the latest news.

Next