Advertisement

ಬೇಸಗೆ ಬೇಗೆ ನಿವಾರಿಸಲು ಆರೋಗ್ಯಕರ ಪಾನೀಯಗಳು

11:55 PM May 02, 2019 | Sriram |

ಬೇಸಿಗೆಯ ಈ ದಿನಗಳಲ್ಲಿ ಪಾನಕ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಾಯಾರಿಕೆ, ದಣಿವು ನೀಗಿಸಿ ಹೊಟ್ಟೆ ತಂಪಾಗಿಸಿ ಉಲ್ಲಾಸ ನೀಡುವ ಪಾನೀಯಗಳು ಇಲ್ಲಿವೆ…

Advertisement

ಮಾವಿನ ಹಣ್ಣಿನ ಲಸ್ಸಿ
ಬೇಕಾಗುವ ಸಾಮಗ್ರಿ: ಮಾವಿನ ಹಣ್ಣು- 2, ಸಕ್ಕರೆ- 4 ಚಮಚ, ದಪ್ಪ ಮೊಸರು- 1 ಕಪ್‌, ಹಾಲು- 1/2 ಕಪ್‌, ಏಲಕ್ಕಿ ಸ್ವಲ್ಪ , ಐಸ್‌ ಚೂರು 4-5.
ತಯಾರಿಸುವ ವಿಧಾನ: ಮಾವಿನ ಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿ ಜಾರ್‌ನಲ್ಲಿ ಹಾಕಿ ರುಬ್ಬಿ ಪಾತ್ರೆಗೆ ಹಾಕಿ. ಮೊಸರನ್ನು ಮಿಕ್ಸಿಗೆ ಹಾಕಿ ಗೊಟಾಯಿಸಿ ಸಕ್ಕರೆ, ಬಿಸಿಮಾಡಿ ತಣಿಸಿದ ಹಾಲು, ಏಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ರುಬ್ಬಿದ ಮಾವಿನ ಪಾತ್ರೆಗೆ ಹಾಕಿ. ಕುಡಿಯುವಾಗ ಒಂದೆರಡು ಐಸ್‌ಕ್ಯೂಬ್‌ ಹಾಕಿ ಫ್ರಿಜ್‌ನಲ್ಲಿಟ್ಟು ತಣಿಸಿಯೂ ಕುಡಿಯಬಹುದು.

ಕೋಕಂ (ಪುನರ್ಪುಳಿ) ಜ್ಯೂಸ್‌
ಬೇಕಾಗುವ ಸಾಮಗ್ರಿ: ಒಣ ಪುನರ್ಪುಳಿ ಒಟೆ 5-6, ಸಕ್ಕರೆ 5-6 ಚಮಚ, ಕಾಮಕಸ್ತೂರಿ ಬೀಜ- 2 ಚಮಚ, ಏಲಕ್ಕಿ ಪುಡಿ- 1 ಚಮಚ.
ತಯಾರಿಸುವ ವಿಧಾನ: ಪುನರ್ಪುಳಿ ಓಟೆಯನ್ನು 4 ಕಪ್‌ ನೀರಿನಲ್ಲಿ ಕುದಿಸಿ ತಣಿಸಿರಿ. ಕಾಮಕಸ್ತೂರಿ ಬೀಜ, ಸಕ್ಕರೆ, ಏಲಕ್ಕಿ ಹುಡಿ ಹಾಕಿ ಫ್ರಿಜ್‌ನಲ್ಲಿಡಿ. ತಣ್ಣಗಾದ ಮೇಲೆ ಕುಡಿಯಿರಿ. ಇದರ ಸೇವನೆಯಿಂದ ಪಿತ್ತ ಶಮನವಾಗುವುದು. ಅಲ್ಲದೆ ಬಾಯಾರಿಕೆ ನೀಗುವುದು.

ಐಸ್‌ ಎಪ್ಪಲ್‌ (ತಾಟೆನುಂಗು) ಶರಬತ್‌
ಬೇಕಾಗುವ ಸಾಮಗ್ರಿ: ತಾಟೆನುಂಗು- 4, ಸಕ್ಕರೆ- 2 ಚಮಚ, ಲಿಂಬೆರಸ- 2 ಚಮಚ, ಏಲಕ್ಕಿ ಪುಡಿ.
ತಯಾರಿಸುವ ವಿಧಾನ: ಸಿಪ್ಪೆ ತೆಗೆದ ತಾಟೆನುಂಗಿನ ಚೂರು, ಸಕ್ಕರೆ, ಏಲಕ್ಕಿ ಹುಡಿ ಮಿಕ್ಸಿಯಲ್ಲಿ ಹಾಕಿ ತೆಳುಮಾಡಿ ಲಿಂಬೆರಸ ಹಾಕಿ ಫ್ರಿಜ್‌ನಲ್ಲಿಟ್ಟು ತಣಿಸಿ ಕುಡಿದರೆ ಬೇಸಿಗೆಯ ಬೇಗೆ ನೀಗುವುದು.

ಸಿಯಾಳ ಶರಬತ್‌
ಬೇಕಾಗುವ ಸಾಮಗ್ರಿ: ಸಿಯಾಳದ ತಿರುಳು- 1 ಕಪ್‌, ಸಕ್ಕರೆ- 2 ಚಮಚ, ಏಲಕ್ಕಿ ಹುಡಿ, ಲಿಂಬೆರಸ- 2 ಚಮಚ, ಕಾಳುಮೆಣಸಿನ ಹುಡಿ- 1 ಚಮಚ.
ತಯಾರಿಸುವ ವಿಧಾನ: ಸಿಯಾಳದ ತಿರುಳು, ಸಕ್ಕರೆ, ಏಲಕ್ಕಿ ಹುಡಿ, ಕಾಳುಮೆಣಸಿನ ಪುಡಿ, ಲಿಂಬೆರಸ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿ ಪಾತ್ರೆಯಲ್ಲಿ ಹಾಕಿ ಫ್ರಿಜ್‌ನಲ್ಲಿಟ್ಟು ತಣಿಸಿ ಕುಡಿಯಿರಿ.

Advertisement

ಗುಲಾಬಿದಳ ಲಸ್ಸಿ
ಬೇಕಾಗುವ ಸಾಮಗ್ರಿ: ಮಜ್ಜಿಗೆ- 2 ಕಪ್‌, ಸಕ್ಕರೆ- 2 ಚಮಚ, ಗುಲಾಬಿ ದಳಗಳು, ಹಸಿ ಶುಂಠಿರಸ- 2 ಚಮಚ.
ತಯಾರಿಸುವ ವಿಧಾನ: ಗುಲಾಬಿ ದಳಗಳನ್ನು ನಯವಾಗಿ ರುಬ್ಬಿ ಮಜ್ಜಿಗೆ, ಸಕ್ಕರೆ, ಶುಂಠಿ ರಸ ಬೆರೆಸಿ ತಣಿಸಿ ಕುಡಿದರೆ ಬಾಯಾರಿಕೆ, ದಣಿವು ಶಮನವಾಗುವುದು.

– ಎಸ್‌. ಜಯಶ್ರೀ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next