Advertisement

ಆರೋಗ್ಯ ಸಚಿವರು ಮಾತು ಮರೆತಂತಿದೆ: ಶಾಸಕ ಮಂಜುನಾಥ್ ಬೇಸರ

10:28 PM Feb 02, 2023 | Team Udayavani |

ಹುಣಸೂರು: ಈ ಬಿಜೆಪಿ ಸರಕಾರವು ಕಾಂಗ್ರೆಸ್ ಶಾಸಕನೆಂಬ ಕಾರಣಕ್ಕೆ ಅನುದಾನ ಬಿಡುಗಡೆಗೂ ಅಲಕ್ಷ್ಯ, ಯಾವುದೇ ಜಲ್ವಂತ ಸಮಸ್ಯೆಗಳ ಮನವಿಗೂ ಸ್ಪಂದಿಸದೆ ಮಲತಾಯಿ ದೋರಣೆ ಅನುಸರಿಸುತ್ತಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಗಂಭೀರ ಆರೋಪ ಮಾಡಿದರು.

Advertisement

ನಗರಸಭೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಅವರು ಅಲೆಮಾರಿ ಸಮುದಾಯಗಳಿಗೆ 3.75 ಲಕ್ಷರೂ ವೆಚ್ಚದ ಮನೆ ನಿರ್ಮಿಸಿ ಕೊಡುವುದಾಗಿ ಘೋಷಿಸಿ ಹಕ್ಕುಪತ್ರ ವಿತರಿಸಿರುವ ಮುಖ್ಯಮಂತ್ರಿಗಳು, ಇದೀಗ ಕೇವಲ 1.75 ಲಕ್ಷಗಳಿಗೆ ನಿಗದಿಪಡಿಸಿರುವುದು ಸರಕಾರ ಅಲೆಮಾರಿಗಳಿಗೆ ಮಾಡಿರುವ ದ್ರೋಹ, ಇನ್ನು ಸಿದ್ದರಾಮಯ್ಯರ ಅವಧಿಯಲ್ಲಿ ಮಂಜೂರಾಗಿದ್ದ 918 ಜಿ.ಪ್ಲಸ್ 2 ಮನೆಗಳನ್ನು ಹಾಗೂ ಶಾಸಕರ ಮೂಲಕ ಮಂಜೂರು ಮಾಡಿದ್ದ 820 ಮನೆಗಳನ್ನು ಹಿಂಪಡೆದಿರುವುದು ರಾಜಕೀಯ ದುರುದ್ದೇಶದಿಂದ ಎಂದು ಆರೋಪಿಸಿದರು.

ಸಚಿವರು ಕೊಟ್ಟ ಮಾತು ಮರೆತರೇ?
ಸಿದ್ದರಾಮಯ್ಯರ ಅವಧಿಯಲ್ಲಿ ಮಂಜೂರಾದ ಹೈಟೆಕ್ ಆಸ್ಪತ್ರೆ ಪೂರ್ಣಗೊಳಿಸಲು ಉಳಿಕೆ ಅನುದಾನ ಬಿಡುಗಡೆ ಮಾಡುವಂತೆ ಮೂರು ಬಾರಿ ಸದನದಲ್ಲಿ ಚರ್ಚಿಸಿದ್ದರೂ ಆರೋಗ್ಯ ಸಚಿವ ಡಾ.ಸುಧಾಕರ್‌ರವರೇ ಖುದ್ದಾಗಿ ಭೇಟಿಯಿತ್ತು. ಅಗತ್ಯ ಅನುದಾನ ಬಿಡುಗಡೆ ಮಾಡುವ, ಡಿಸೆಂಬರ್-೨೦೨೨ ಅಂತ್ಯದಲ್ಲಿ ಸೇವೆಗೆ ಸಮರ್ಪಿಸುವ ಭರವಸೆಯಿತ್ತು ಯಾವುದೇ ಕ್ರಮವಹಿಸಿಲ್ಲ. ಸಚಿವರು ತಮ್ಮ ಮಾತನ್ನೇ ಮರೆತಂತಿದೆ ಎಂದು ಟೀಕಿಸಿದರು.

ಅರಸು ಭವನಕ್ಕೆ ಗ್ರಹಣ
ಅರಸುಭವನ ಕಾಮಗಾರಿ ಪೂರ್ಣಗೊಳಿಸಲು ಇರುವ ಎರಡು ಕೋಟಿ ಅನುದಾನವನ್ನು ಬಿಡುಗಡೆ ಮಾಡದೆ ದೇವರಾಜಅರಸರಿಗೆ ಅವಮಾನ ಮಾಡುತ್ತಿದೆ. ಇನ್ನು ನೀರಾವರಿ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳಿಗೆ ನಿಗಧಿತ ಅನುದಾನ ಬಿಡುಗಡೆ ಮಾಡಿಲ್ಲಾ. ಇನ್ನು ಅನುದಾನ ಬಿಡುಗಡೆಯಲ್ಲೂ ತಾರತಮ್ಯವೆಸಗಿದ್ದು. ರಾಜ್ಯದ ಎಲ್ಲಾ ಬಿ.ಜೆ.ಪಿ. ಕ್ಷೇತ್ರಗಳಿಗೆ ತಲಾ 70 ಕೋಟಿ, ಜೆಡಿಎಸ್ ಕ್ಷೇತ್ರಗಳಿಗೆ 40ಕೋಟಿ, ಹುಣಸೂರು ಕ್ಷೇತ್ರಕ್ಕೆ ಮಾತ್ರ ಹತ್ತು ಕೋಟಿ ಅನುದಾನ ನೀಡುವ ಮೂಲಕ ಅನ್ಯಾಯವೆಸಗಿದೆ.

ದಿನಾಂಕ ನಿಗದಿ ಪಡಿಸಿದ್ದ ಸಚಿವರೂ ನಾಪತ್ತೆ!
ನಗರದ ಸ್ಲಂಬೋರ್ಡ್ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಸಚಿವರು ದಿನಾಂಕ ನಿಗದಿಪಡಿಸಿ ಕ್ಷೇತ್ರಕ್ಕೆ ಬಾರದೆ ಪಕ್ಕದ ಕ್ಷೇತ್ರಕ್ಕೆ ಆದ್ಯತೆ ನೀಡಿ ಸ್ಲಂನಿವಾಸಿಗಳಿಗೆ ಘೋರ ಅನ್ಯಾಯ ಮಾಡಿದ್ದಾರೆ. ಇಂತಹ ತಾರತಮ್ಯ ನೀತಿಯ ಸರಕಾರದಿಂದಾಗಿ ತಾಲೂಕಿನ ಜನತೆಗೆ ದೊಡ್ಡಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ತಾಲೂಕಿಗೆ 2640 ಕೋಟಿ ಅನುದಾನ ಬಿಡುಗಡೆಯಾಗಿತ್ತು, ಆವೇಳೆ ನೀರಾವರಿ, ಶಿಕ್ಷಣ ಹಾಗೂ ರಸ್ತೆ ಅಭಿವೃದ್ದಿ ಸೇರಿದಂತೆ ತಾಲೂಕಿನ ಸಮಗ್ರ ಅಭಿವೃದ್ದಿ ಪರ್ವವೇ ನಡೆದಿತ್ತೆಂದು ಸ್ಮರಿಸಿದರು.

Advertisement

ರಾಗಿ ಖರೀದಿಗೆ ಸರ್ವರ್ ಪ್ರಾಬ್ಲಂ?
ಸರಕಾರ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ವಾರವೂ ಕಳೆದಿಲ್ಲ. ಇನ್ನೂ ಖರೀದಿ ಕೇಂದ್ರ ಆರಂಭವಾಗಿಲ್ಲ. ಸರ್ವರ್ ಪ್ರಾಬ್ಲಂ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಕನಿಷ್ಟ ಸರಿಪಡಿಸುವಲ್ಲಿ ವಿಫಲವಾಗಿದ್ದು, ಇದರಿಂದಾಗಿ ಮಧ್ಯವರ್ತಿಗಳಿಗೆ ಅನುಕೂಲವಾಗಿದೆ. ತಾಲೂಕಿನಾದ್ಯಂತ ಬಸ್‌ಗಳ ಸಮಸ್ಯೆ ಸಾಕಷ್ಟಿದ್ದು, ಸರಿಪಡಿಸಲು ಸೂಚಿಸಿದ್ದರೂ ಕ್ರಮಕೈಗೊಳ್ಳದ ಕುರಿತು ಡಿಪೋಮ್ಯಾನೇಜರ್ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.

ಅಕ್ರಮ ಮದ್ಯನಿಲ್ಲಿಸಿ
ತಾಲೂಕಿನ ಎಲ್ಲೆಡೆ ಅಕ್ರಮ ಮದ್ಯ ಮಾರಾಟದ ದೂರುಗಳಿದ್ದು, ಕ್ರಮವಹಿಸುವಂತೆ ಅಬಕಾರಿ ಇನ್ಸ್ಪೆಕ್ಟರ್ ನಾಗಲಿಂಗಸ್ವಾಮಿಗೆ ಶಾಸಕರು ತಾಕೀತು ಮಾಡಿದರು.

ಬಹುತೇಕ ಇಲಾಖೆಗಳಿಗೆ ಅನುದಾನ ಬಾರದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸದೆ ಕೇವಲ ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ ತಾ.ಪಂ. ಆಡಳಿತಾಧಿಕಾರಿ ನಂದ, ಇಒ.ಮನು ಬಿ.ಕೆ, ತಹಶೀಲ್ದಾರ್ ಡಾ.ಅಶೋಕ್, ನಗರಸಭೆ ಆಯುಕ್ತೆ ಮಾನಸ, ಕೆ.ಡಿ.ಪಿ. ಸದಸ್ಯರಾದ ಬಸವರಾಜೇಗೌಡ, ಕಾಂತರಾಜ್, ಸತೀಶ್, ಮಂಜುಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲವೇ, ಸರ್ವೇಯರ್‌ಗೆ ತರಾಟೆ
ವಿಕಲಚೇತನ ರೈತ ಆಡಿಗನಹಳ್ಳಿಯ ನಿಂಗಯ್ಯರಿಂದ ಕೋರ್ಟ್ ಆದೇಶದಂತೆ ಭೂಮಿ ಸರ್ವೆ ಮಾಡಿಕೊಡಲು 15 ಸಾವಿರ ರೂ ಲಂಚ ಕೇಳಿದ್ದ ಸರ್ವೇಯರ್ ಜಯಕುಮಾರ್‌ರನ್ನು ಸಭೆಗೆ ಕರೆಸಿ, ಛೀಮಾರಿ ಹಾಕಿ ಎರಡು ದಿನದಲ್ಲಿ ದಾಖಲಾತಿ ಮಾಡಿಕೊಡುವಂತೆ ಎಚ್ಚರಿಸಿದರು.

ಕ್ಷೇತ್ರದ ಅಭಿವೃದ್ದಿಗೆ ಸರಕಾರದ ಸ್ಪಂದಿಸುತ್ತಿಲ್ಲವೆಂದು ಶಾಸಕರು ಮಾಡುತ್ತಿದ್ದ ಆರೋಪದ ವಿರುದ್ದ ಕೆಡಿಪಿ ಸದಸ್ಯ ಕಾಂತರಾಜ್ ಪ್ರಶ್ನಿಸಿದರು. ಇದಕ್ಕೆ ಶಾಸಕರು ಸಮಜಾಯಿಸಿ ನೀಡುತ್ತಿದ್ದಂತೆ ಸುಮ್ಮನಾದರು. ಸಭೆಯಲ್ಲಿ ಕಳೆದ ಬಾರಿಯ ಅನುಪಾಲನಾ ವರದಿ ಮಂಡಿಸದಿರುವುದಕ್ಕೆ ಶಾಸಕರು ಅಸಮಾದಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next