Advertisement

ಡೆಂಗ್ಯೂ ಹರಡದಂತೆ ಆರೋಗ್ಯ ಇಲಾಖೆ ಕಟ್ಟೆಚ್ಚರ

08:32 AM Jul 26, 2019 | Sriram |

ಉಡುಪಿ: ವಿವಿಧ ರೀತಿಯ ಜ್ವರಗಳು ಉಡುಪಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದೆಡೆ ಡೆಂಗ್ಯೂನಿಂದ ಜನರು ತತ್ತರಿಸುತ್ತಿದ್ದರೆ, ಇನ್ನೊಂದು ಕಡೆ ಮಲೇರಿಯಾ ಹಬ್ಬುತ್ತಿದೆ. ಈ ನಿಟ್ಟಿನಲ್ಲಿ ಜನರೂ ಸಾಕಷ್ಟು ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾಡಳಿತ ತಿಳಿಸಿದೆ.

Advertisement

ಇಲಾಖಾ ಮಟ್ಟದಲ್ಲಿಯೂ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಅಧಿಕಾರಿಗಳೂ ಎಚ್ಚರಿಕೆಯಿಂದ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಜು. 15ರ ವರೆಗೆ ಒಟ್ಟು 11 ಡೆಂಗ್ಯೂ ಹಾಗೂ 45 ಮಲೇರಿಯಾ ಪ್ರಕರಣಗಳು ದಾಖಲಾಗಿವೆ.

ಎಲ್ಲೆಲ್ಲಿ ಪ್ರಕರಣ ಜಾಸ್ತಿ?
ಉಡುಪಿಯ ಮಲ್ಪೆ ಭಾಗದಲ್ಲಿ ಹೆಚ್ಚಿನ ಮಲೇರಿಯಾ ಪ್ರಕರಣ, ಹನುಮಂತ ನಗರ, ಕೊಡಂಕೂರು, ನಿಟ್ಟೂರು ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಉಡುಪಿಯಲ್ಲಿ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮಲ್ಪೆಯಂತಹ ಪ್ರದೇಶಗಳಲ್ಲಿ ಹೆಚ್ಚಿನ ಜನರು ವಾಸಿಸುತ್ತಿದ್ದು, ಇಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಇದು ಮುಖ್ಯವಾಗಿ ವಲಸೆ ಹೋಗುವ ಜನರಿಂದ ಹರಡುವುದು ಹೆಚ್ಚು. ಕೆಮ್ಮಣ್ಣಿನಲ್ಲಿ 6 ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದು ಗುಣಮುಖರಾಗಿದ್ದಾರೆ.

ಎಚ್ಚರ ಅಗತ್ಯ
ಯಾವುದೇ ಜ್ವರವಿರಲಿ, ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರೋಗ್ಯ ಸಿಬಂದಿ ಮನೆಗೆ ಬಂದಾಗ ಪರೀಕ್ಷೆಗೆ ಸಹಕರಿಸಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ, ಚರಂಡಿಗಳಿಗೆ ಕಸ, ಕಡ್ಡಿಗಳನ್ನು ಎಸೆಯದೆ ನೀರು ಹರಿದು ಹೋಗುವಂತೆ ಮಾಡಬೇಕು. ನೀರು ಸಂಗ್ರಹಣೆ ಸಾಮಗ್ರಿಗಳನ್ನು ಮುಚ್ಚಿಡಿ, ದೊಡ್ಡ ತೊಟ್ಟಿ ವಾರಕ್ಕೊಮ್ಮೆ ತೊಳೆದರೆ ಉತ್ತಮ. ಟಯರು, ಎಳನೀರಿನ ಚಿಪ್ಪು, ಡಬ್ಬ, ಪ್ಲಾಸ್ಟಿಕ್‌ ಕವರ್‌ಗಳನ್ನು ವಿಲೇವಾರಿ ಮಾಡಿ ಮಳೆ ನೀರು ನಿಲ್ಲದಂತೆ ಮಾಡಿದರೆ ಸೊಳ್ಳೆ ಉತ್ಪತ್ತಿ ಕಡಿಮೆಯಾಗುತ್ತದೆ.

Advertisement

ನಗರದಲ್ಲಿ ಹಿಡಿತ
ಮಲೇರಿಯ ಹಾಗೂ ಡೆಂಗ್ಯೂ ನಿಯಂತ್ರಣದಲ್ಲಿದೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಈ ರೋಗಗಳು ಕಾಣಿಸಿಕೊಳ್ಳುತ್ತಿವೆ.
-ಡಾ| ಪ್ರಶಾಂತ್‌, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಉಡುಪಿ.

ಮಲ್ಪೆ: ಮಲೇರಿಯ ಹೆಚ್ಚಳ
ಮಲ್ಪೆಯಲ್ಲಿ ಒಂದೇ ಬಾರಿಗೆ 10 ಪ್ರಕರಣಗಳು ಪತ್ತೆಯಾಗಿವೆ. ಬಂದರಿನಲ್ಲಿ ನಿಲ್ಲಿಸಲಾದ ಬೋಟ್‌ನಲ್ಲಿರುವ ನೀರು ಸಂಗ್ರಹಣಾ ತೊಟ್ಟಿಯಲ್ಲಿ ಮಲೇರಿಯಾ ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಟ್ಯಾಂಕಿ ನೀರು ಖಾಲಿ ಮಾಡುವಂತೆ ಆದೇಶ ನೀಡಿದ್ದಾರೆ. ಈಗಾಗಲೇ ಆರೋಗ್ಯ ಇಲಾಖೆಯ ವತಿಯಿಂದ ಫಾಗಿಂಗ್‌ ಮಾಡಿಸಲಾಗಿದೆ.

ಸೊಳ್ಳೆಗಳಿಂದ
ರಕ್ಷಣೆಗೆ ಹೀಗೆ ಮಾಡಿ
ಡೆಂಗ್ಯೂ ಹರಡುವ ಸೊಳ್ಳೆ ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಮಲೇರಿಯಾ ಹರಡುವ ಸೊಳ್ಳೆ ರಾತ್ರಿ ಸಮಯದಲ್ಲಿ ಕಚ್ಚುತ್ತವೆ. ಔಷಧ ಲೇಪಿಸಿದ ಸೊಳ್ಳೆ ಪರದೆಗಳ ಬಳಕೆ, ಮಕ್ಕಳು/ ವೃದ್ಧರು ಹಗಲು ಮಲಗುವಾಗಲೂ ಸೊಳ್ಳೆ ಪರದೆ ಉಪಯೋಗಿಸುವುದು, ಸೊಳ್ಳೆ ಪ್ರವೇಶಿಸದಂತೆ ಸಂಜೆ ಹೊತ್ತು ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚುವುದು ಅಥವಾ ಜಾಲರಿಗಳನ್ನು ಅಳವಡಿಸುವುದು ಮುಂತಾದ ಕ್ರಮಗಳನ್ನು ಅನುಸರಿಸುವ ಮೂಲಕ ಸೊಳ್ಳೆಗಳಿಂದ ರಕ್ಷಣೆ ಪಡೆಯಬಹುದು. ಬಾವಿ/ಕೆರೆಗಳಲ್ಲಿ ಗಪ್ಪಿ ಮೀನುಗಳನ್ನು ಸಾಕುವ ಮೂಲಕ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಬಹುದು.

ಸಮಸ್ಯೆ ಇದ್ದರೆ ನಮಗೆ ತಿಳಿಸಿ
ನಗರದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ “ಉದಯವಾಣಿ’ ಕೂಡ ಜಾಗೃತಿ ಮೂಡಿಸುವ ಜತೆಗೆ ನಗರವಾಸಿಗಳಿಗೆ ತಮ್ಮ ಸಮಸ್ಯೆ-ಪರಿಹಾರ ಮಾರ್ಗೋಪಾಯಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ವೇದಿಕೆ ನೀಡುತ್ತಿದೆ. ಆ ಮೂಲಕ ಜನರು ಕೂಡ ಡೆಂಗ್ಯೂ ಹಾಗೂ ಮಲೇರಿಯಾ ವ್ಯಾಪಕವಾಗುವುದನ್ನು ತಡೆಗಟ್ಟುವುದಕ್ಕೆ ತಮ್ಮ ಜವಾಬ್ದಾರಿ ಮೆರೆಯುವುದು ಆವಶ್ಯಕ. ನಗರದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬಂದರೆ ಆ ಬಗ್ಗೆ ಸೂಕ್ತ ವಿವರದೊಂದಿಗೆ ಫೋಟೋ ತೆಗೆದು ಕಳುಹಿಸಬಹುದು. ಅಲ್ಲದೆ ಕೆಳ ಹಂತದ ಅಧಿಕಾರಿಗಳಿಂದ ಸಮಸ್ಯೆಗೆ ಸೂಕ್ತ ಸ್ಪಂದನೆ ದೊರೆಯದಿದ್ದರೂ ಆ ಬಗ್ಗೆ ಗಮನಕ್ಕೆ ತಂದರೆ ಉನ್ನತ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಲಾಗುವುದು.
9148594259


Advertisement

Udayavani is now on Telegram. Click here to join our channel and stay updated with the latest news.

Next