Advertisement

2ನೇ ಅಲೆ ಎದುರಿಸಲು ಆರೋಗ್ಯ ಇಲಾಖೆ ಸಜ್ಜು

09:34 AM Mar 18, 2021 | Team Udayavani |

ಮಂಡ್ಯ: ರಾಜ್ಯದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಮುಂಜಾಗ್ರತೆ ಕ್ರಮ ವಹಿಸಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಎಲ್ಲ ರೀತಿಯಿಂದಲೂ ಕೋವಿಡ್ ತಡೆಗೆ ಸಜ್ಜುಗೊಂಡಿದೆ.

Advertisement

ಪ್ರತಿದಿನ ಕೋವಿಡ್ ಪರೀಕ್ಷೆ ಹೆಚ್ಚಿಸಲು ಕ್ರಮವಹಿಸಲಾಗಿದೆ. ಅದರಂತೆ ಪ್ರತಿದಿನ 2 ಸಾವಿರ ಪರೀಕ್ಷೆ ನಡೆಸ ಲಾಗುತ್ತಿದೆ. ಕೆಮ್ಮು, ಜ್ವರ, ನೆಗಡಿ ಲಕ್ಷಣ ಕಾಣಿಸಿಕೊಂಡ ವ್ಯಕ್ತಿಗಳನ್ನು ಗುರುತಿಸಿ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರತಿದಿನ ಆರ್‌ಟಿಪಿಸಿಆರ್‌ ಮೂಲಕ1,770 ಮಂದಿ ಹಾಗೂ 230 ಮಂದಿಗೆ ರ್ಯಾಪಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಆರ್‌ಟಿಪಿಸಿಆರ್‌ ಪರೀಕ್ಷೆ ಹೆಚ್ಚಿಸಲಾಗಿದೆ.

ಮಾದರಿ ಸಂಗ್ರಹ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಮಾದರಿ ಸಂಗ್ರಹ ಹಾಗೂ ಪರೀಕ್ಷೆ ಕಡಿಮೆ ಮಾಡಲಾಗಿತ್ತು. ಈಗ ಮತ್ತೆ ಎರಡನೇಅಲೆ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ 7 ತಾಲೂಕಿನ ಸರ್ಕಾರಿ ಆಸ್ಪತ್ರೆ, ಸಮುದಾಯ ಕೇಂದ್ರ,ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾದರಿ ಸಂಗ್ರಹಿಸಲಾಗುತ್ತಿದೆ.

ನಾಲ್ಕು ಮೊಬೈಲ್‌ ತಂಡ: ಕೋವಿಡ್ ಮಾದರಿ ಸಂಗ್ರಹಕ್ಕೆ ಜಿಲ್ಲೆಯಾದ್ಯಂತ ನಾಲ್ಕು ಮೊಬೈಲ್‌ ತಂಡಸಂಚರಿಸುತ್ತಿದ್ದು, ಜ್ವರ, ಕೆಮ್ಮು, ನೆಗಡಿ ಇರುವವರನ್ನು ಗುರುತಿಸಿ ಮಾದರಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇಜ್ವರ, ನೆಗಡಿ, ಕೆಮ್ಮು ಇರುವವರ ಜತೆ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಹಾಗೂ ಎರಡನೇ ಸಂಪರ್ಕದಲ್ಲಿದ್ದವರಿಗೂ ಪರೀಕ್ಷೆ ಮಾಡಲು ಕ್ರಮ ವಹಿಸಲಾಗುತ್ತಿದೆ.

ಗುಣಮುಖರಾದವರಿಗೂ ಪರೀಕ್ಷೆ: ಈಗಾಗಲೇ ಕೋವಿಡ್ ಬಂದು ಗುಣಮುಖರಾಗಿದ್ದು, ಮತ್ತೆಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡರೆ ಅವರನ್ನು ಮತ್ತೂಮ್ಮೆ ಪರೀಕ್ಷೆಗೊಳಪಡಿಸಲಾಗುತ್ತಿದೆ. ನನಗೆ ಈಗಾಗಲೇ ಕೊರೊನಾ ಬಂದು ಹೋಗಿದೆ ಎಂದು ನಿರ್ಲಕ್ಷ್ಯ ವಹಿಸುವಂತಿಲ್ಲ. ಮತ್ತೆ ಕೋವಿಡ್ ಸೋಂಕು ಆವರಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಅದೃಷ್ಟವಶಾತ್‌ ಇದುವರೆಗೂ ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಸೋಂಕಿನಿಂದ ಗುಣಮುಖರಾದವರಿಗೆ ಮತ್ತೆ ಸೋಂಕು ಕಂಡು ಬಂದಿಲ್ಲ.

Advertisement

ಮುಂಬೈನಿಂದ ಬರುವವರ ಮೇಲೆ ನಿಗಾ: ಜಿಲ್ಲೆಗೆಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುತ್ತಿರುವ ವ್ಯಕ್ತಿಗಳಮೇಲೆ ನಿಗಾ ವಹಿಸಲಾಗುತ್ತಿದೆ. ಆಯಾ ಗ್ರಾಪಂವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರುಗುರುತಿಸುವ ಕಾರ್ಯ ದಲ್ಲಿ ತೊಡಗಿದ್ದಾರೆ. ಮಹಾರಾಷ್ಟ್ರದ ಮುಂಬೈನಿಂದ ಕೆ.ಆರ್‌.ಪೇಟೆ, ನಾಗಮಂಗಲ ಹಾಗೂ ಪಾಂಡವಪುರ ತಾಲೂಕಿಗೆ ಬರುವ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಕೆ. ಆರ್‌.ಪೇಟೆ ಗಡಿ ಭಾಗದಲ್ಲಿ ಕಟ್ಟೆಚ್ಚರ ಕೈಗೊಳ್ಳಲಾಗಿದೆ.

2 ದಿನದಿಂದ ಪ್ರಕರಣ ಹೆಚ್ಚಳ: ಜಿಲ್ಲೆಯಲ್ಲಿ ಈಗಾಗಲೇಕೋವಿಡ್ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಿತ್ತು. ಪ್ರತಿದಿನ 1ರಿಂದ 2 ಪ್ರಕರಣ ದಾಖಲಾಗುತ್ತಿದ್ದವು.ಆದರೆ, ಕಳೆದ ಎರಡು ದಿನದಿಂದ 7 ರಿಂದ 12ರವರೆಗೆಪ್ರಕರಣ ಹೆಚ್ಚಾಗಿವೆ. ಆದ್ದರಿಂದ ಸಾರ್ವಜನಿಕರು ಜಾಗೃತರಾಗಬೇಕಿದೆ.

ಲಸಿಕೆ ಪಡೆಯಲು ಸೂಚನೆ: ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ ಲಸಿಕೆ ನೀಡಲಾಗುತ್ತಿದೆ. 45 ವರ್ಷದಿಂದ 60 ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆಯುವಂತೆಸೂಚಿಸಲಾಗುತ್ತಿದೆ. 40 ವರ್ಷ ಮೇಲ್ಪಟ್ಟ ಬಿಪಿ, ಶುಗರ್‌ ಇರುವವರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ.

153 ಮಂದಿ ಸಾವು :

ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ ಸೋಂಕಿನಿಂದ 153 ಮಂದಿ ಮೃತಪಟ್ಟಿದ್ದಾರೆ.ಇದರಲ್ಲಿ ಸೋಂಕಿನ ಜತೆಗೆ ವಿವಿಧಕಾಯಿಲೆಗಳಿಂದ ಮೃತಪಟ್ಟವರೇ ಹೆಚ್ಚಾಗಿದ್ದಾರೆ. ಬಿಪಿ, ಶುಗರ್‌, ಕ್ಯಾನ್ಸರ್‌ ಸೇರಿದಂತೆ ವಿವಿಧರೋಗಗಳ ಜತೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳುತ್ತಾರೆ.

ಹಾಸಿಗೆಗಳ ಸಿದ್ಧತೆ :

ಕೋವಿಡ್ ಸೋಂಕಿತರಿಗಾಗಿ ಈಗಾಗಲೇ ಬೆಡ್‌ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ.ಮಿಮ್ಸ್‌ನಲ್ಲಿ 30 ಬೆಡ್‌ಗಳು ಹಾಗೂ ಸಾರಿಪ್ರಕರಣಗಳಿಗಾಗಿ 50 ಬೆಡ್‌ಗಳ ವ್ಯವಸ್ಥೆಹಾಗೂ ವೆಂಟಿಲೇಟರ್‌ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ಜತೆಗೆ ಎಲ್ಲತಾಲೂಕುಗಳ ಆಸ್ಪತ್ರೆಗಳಲ್ಲಿ 25 ಹಾಸಿಗೆಗಳ ಮೀಸಲಿಡುವಂತೆ ಸೂಚಿಸಲಾಗಿದೆ.

ಕೋವಿಡ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಸೂಚನೆನೀಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಬರುವವರನ್ನು ಪತ್ತೆ ಹಚ್ಚಿ ಪರೀಕ್ಷೆ, ಸಂಪರ್ಕಿತರನ್ನು ಪರೀ ಕ್ಷೆಗೊಳಪಡಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ನಿಯಂತ್ರಣಕ್ಕೆ ಕೈಜೋಡಿಸಬೇಕು. ಎಸ್‌.ಅಶ್ವಥಿ, ಜಿಲ್ಲಾಧಿಕಾರಿ, ಮಂಡ್ಯ

ಕೋವಿಡ್ ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಿಲ್ಲಾದ್ಯಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ಕೇಂದ್ರಗಳನ್ನು ಹಂತ-ಹಂತವಾಗಿ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಇದರ ಜತೆಗೆ ಹಾಸಿಗೆಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ 60 ವರ್ಷ ಮೇಲ್ಪಟ್ಟವನ್ನುಗುರುತಿನ ಚೀಟಿ ಆಧಾರದ ಮೇಲೆ ಗುರುತಿಸಿ ಲಸಿಕೆ ಹಾಗೂ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಡಾ.ಎಚ್‌.ಪಿ.ಮಂಚೇಗೌಡ, ಡಿಎಚ್‌ಒ, ಮಂಡ್ಯ

 

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next