Advertisement

ಬೇಸಿಗೆಗೆ ಇರಲಿ ಆರೋಗ್ಯದ ಕಾಳಜಿ

12:23 PM Feb 28, 2023 | Team Udayavani |

ಬೆಂಗಳೂರು: ಬೇಸಿಗೆ ಕಾಲ ಪ್ರಾರಂಭವಾಗು ತ್ತಿದ್ದಂತೆ ಮಕ್ಕಳಿಂದ ಇಳಿವಯಸ್ಸಿನ ಎಲ್ಲಾ ವಯೋಮಾನದವರಿಗೂ ಬಾಧಿಸುವ ಸಾಂಕ್ರಾಮಿಕ ರೋಗಗಳು ಪ್ರತ್ಯಕ್ಷವಾಗಿದ್ದು, ಬೇಸಿಗೆಯಲ್ಲಿ ಕಾಯಿಲೆಗಳು ಮೈ ಮೇಲೆ ಏರುವ ಮುನ್ನ ಸೂಕ್ತ ಕಾಳಜಿ ವಹಿಸುವುದು ಅತ್ಯಗತ್ಯ.

Advertisement

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಮೊದಲೇ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಜಾಸ್ತಿ ಎನ್ನಿಸುವಷ್ಟು ಉಷ್ಣತೆ ಉಂಟಾಗಿದೆ. ಜೊತೆಗೆ ಒಂದಿಷ್ಟು ಅನಾರೋಗ್ಯಗಳೂ ಉಂಟಾಗುತ್ತಿವೆ. ಬಿಸಿಲಿನ ಬೇಗೆಯಿಂದ ಉಂಟಾಗುವ ಅನಾರೋಗ್ಯದಿಂದ ಪಾರಾಗುವುದೇ ಜನ ಸಾಮಾನ್ಯರಿಗೆ ಸವಾಲಾಗಿದೆ. ವಾತಾವರಣ ಶುಷ್ಕತೆಯಿಂದ ಕೂಡಿರುವುದರಿಂದ ಬ್ಯಾಕ್ಟಿರಿಯಾ, ವೈರಸ್‌ಗಳು ತೀವ್ರವಾಗಿ ಹರಡುತ್ತವೆ. ಕಾಲರಾ, ಟೈಫಾಯ್ಡ ಜ್ವರಗಳು, ಬಿಸಿನಿಲಿಂದ ತಲೆ ಸುತ್ತು, ಕಣ್ಣಿನ ತೊಂದರೆಗಳು, ಚಿಕನ್‌ ಫಾಕ್ಸ್‌, ಮೂಗಿನಲ್ಲಿ ರಕ್ತ ಸುರಿಯುವಿಕೆ, ಚರ್ಮ ಸಮಸ್ಯೆಗಳು ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಕಾಡುವ ಸಮಸ್ಯೆಯಾಗಿದೆ.

ಬೆಚ್ಚನೆಯ ವಾತಾವರಣವು ಆಹಾರದ ಮೇಲೆ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲಕರವಾಗಿದ್ದು, ಕಲುಷಿತ ಆಹಾರ ಸೇವನೆಯಿಂದ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸಿ ಹೊಟ್ಟೆ ನೋವು, ವಾಕರಿಕೆ, ಅತಿಸಾರ, ವಾತ ಉಂಟು ಮಾಡಬಹುದು. ಕಲುಷಿತ ಆಹಾರ ಅಥವಾ ನೀರಿನ ಮೂಲಕ ಬ್ಯಾಕ್ಟಿರಿಯಾ ದೇಹಕ್ಕೆ ಪ್ರವೇಶಿಸಿ ಟೈಫೈಡ್‌ ಹರಡುವ ಸಾಧ್ಯತೆಗಳಿವೆ. ಮಧ್ಯಾಹ್ನದ ಹೊತ್ತಿನಲ್ಲಿ ಅತಿಯಾಸ ಬಿಸಿಲು ತಾಗಿದರೆ ಚರ್ಮ ಶುಷ್ಕತೆಯಿಂದ ಸನ್‌ಬರ್ನ್ ಕೀವು ಗುಳ್ಳೆಗಳು ಉಂಟಾಗುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.

ಮಕ್ಕಳ ಆರೋಗ್ಯದ ಮೇಲಿರಲಿ ಕಾಳಜಿ: ಬೇಸಿಗೆಯಲ್ಲಿ ಕಲುಷಿತ ನೀರಿನಿಂದ ಮಕ್ಕಳಲ್ಲಿ ಕಂಡು ಬರುವ ವಾಂತಿ ಭೇದಿಯು ಎಂಟೆರೋ ವೈರಸ್‌ನಿಂದ ಬರುತ್ತದೆ. ಇತ್ತೀಚೆಗೆ ಬೇಸಿಗೆಯ ವಾತಾವರಣದಲ್ಲಿ ಮಕ್ಕಳಲ್ಲಿ ವಾಂತಿ ಭೇದಿಯಂತಹ ಕಾಯಿಲೆಗಳು ಉಲ್ಬಣ ವಾಗುತ್ತಿರುವುದು ಪಾಲಕರಲ್ಲಿ ಆತಂಕ ಹುಟ್ಟಿಸಿದೆ. ಸಾಂಕ್ರಾಮಿಕ ವೈರಲ್‌ ಸೋಂಕು ಮಾಂಪ್ಸ್‌ ಮಕ್ಕಳಲ್ಲಿ ಬೇಸಿಗೆಯಲ್ಲಿ ಕಂಡು ಬರುವ ಸಾಮಾನ್ಯ ಕಾಯಿಲೆಯಾಗಿದೆ.

ಸೋಂಕಿತ ವ್ಯಕ್ತಿಯಿಂದ ಸೀನುವಿಕೆ ಅಥವಾ ಕೆಮ್ಮಿನ ಮೂಲಕ ಹರಡುವ ಕಾಯಿಲೆ ಇದಾಗಿದೆ. ಇದರಿಂದ ಕಿವಿಯ ಮುಂಭಾಗದಲ್ಲಿರುವ ಪರೋಟಿಡ್‌ ಗ್ರಂಥಿ ಹಾನಿಯಾಗುತ್ತದೆ. ಜತೆಗೆ ನೋವು, ಊತ ಮತ್ತು ಜ್ವರವನ್ನು ಉಂಟು ಮಾಡುತ್ತದೆ. ಇನ್ನು ಕೊಕ್ಯುಸ್‌ ಇನ್ಫೆಕ್ಷನ್‌ನಿಂದ ಕಣ್ಣು ಕೆಂಪಾಗುವುದು, ಮದ್ರಾಸ್‌ ಐ, ತುರಿಕೆ, ಕಣ್ಣಲ್ಲಿ ನೀರು ಇತ್ಯಾದಿ ಕಾಯಿಲೆಗಳು ಬಾಧಿಸುತ್ತವೆ. ದೀರ್ಘ‌ಕಾಲದವರೆಗೆ ಹೆಚ್ಚಿನ ತಾಪಮಾನಕ್ಕೆ ಮೈ ಒಡ್ಡಿಕೊಂಡಾಗ ಹೀಟ್‌ಸ್ಟ್ರೋಕ್‌ ಎಂದು ಕರೆಯಲ್ಪಡುವ ಹೈಪರ್ಥರ್ಮಿಯಾ ಸಂಭವಿಸುತ್ತದೆ. ಬಿಸಿಲಿನ ಶಾಖವು ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ತಾಗಿದಾಗ ತಲೆನೋವು, ತಲೆತಿರುಗುವಿಕೆ, ದೌರ್ಬಲ್ಯವನ್ನು ಅನುಭವಿಸುವ ಸಾಧ್ಯತೆಗಳಿವೆ. ಇದು ಪ್ರಜ್ಞಾಹೀನತೆಗೂ ಕಾರಣವಾಗಬಹುದು. ಹೀಟ್‌ ಸ್ಟ್ರೋಕ್‌ನಿಂದ ತಪ್ಪಿಸಲು ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್‌ ಆಗಿ ಇರಿಸಿಕೊಳ್ಳಬೇಕು ಎಂದು ವೈದ್ಯರು ತಿಳಿಸುತ್ತಾರೆ.

Advertisement

ಬೇಸಿಗೆಯಲ್ಲಿ ಆಹಾರ ಪದ್ಧತಿ ಹೇಗಿರಬೇಕು?: ಬೇಸಿಗೆಯಲ್ಲಿ ದಿನಕ್ಕೆ ಕನಿಷ್ಠ 2 ಲೀಟರ್‌ ನೀರು ಸೇವಿಸಿದರೆ ಉತ್ತಮ. ದೇಹಕ್ಕೆ ಚೈತನ್ಯ ತುಂಬುವಂತಹ ತರಕಾರಿ, ಹಣ್ಣಿನ ರಸ, ಪಾನೀಯ ಸೇವನೆಗೆ ಹೆಚ್ಚು ಒತ್ತು ಕೊಟ್ಟರೆ ದೇಹದಲ್ಲಿ ನೀರಿನಂಶ ಹೆಚ್ಚಿಸಿಕೊಳ್ಳಬಹುದು. ನಿಂಬೆಹಣ್ಣಿನ ಜ್ಯೂಸ್‌, ಎಳನೀರು, ಬೆಲ್ಲ ಮಿಶ್ರಿತ ನೀರು ಸೇವನೆ ಸೂಕ್ತ. ಆರೆಂಜ್‌, ಕಲ್ಲಂಗಡಿ, ಸೌತೆಕಾಯಿ ಸೇವನೆ ಉತ್ತಮ. ದಿನಕ್ಕೆ 2 ಬಾರಿ ಸ್ನಾನ ಮಾಡುವುದರಿಂದ ದೂಳಿನಿಂದ ಬರುವ ಚರ್ಮದ ಸಮಸ್ಯೆಗಳನ್ನು ತಡೆಯಬಹುದು. ಉರಿಬಿಸಿಲಲ್ಲಿ ಮನಸ್ಸು ಮತ್ತು ದೇಹಕ್ಕೆ ಹಿತ ನೀಡುವಂತಹ ಹಗುರವಾದ ಕಾಟನ್‌ ಉಡುಪು ಧರಿಸಬಹುದು.

ಇನ್ನು ಸಕ್ಕರೆ ಕಾಯಿಲೆ ಪೀಡಿತರು ಮಜ್ಜಿಗೆ, ನೀರು, ಗಂಜಿ ಕುಡಿಯುವುದು ಒಳ್ಳೆಯದು. ಸಮತೋಲಿತ ಪೌಷ್ಟಿಕ ಆಹಾರ ಸೇವಿಸಿ. ಕಾಯಿಸಿ, ಆರಿಸಿದ ನೀರನ್ನೇ ಸೇವಿಸಿ. ಬೇಸಿಗೆಯಲ್ಲಿ ಹೊರಗಡೆಯ ಜಂಕ್‌ ಫ‌ುಡ್‌ ತಿಂದರೆ ಫ‌ುಡ್‌ ಪಾಯಿಸನ್‌’ ಆದೀತು. ಮಸಾಲೆ ಪದಾರ್ಥಗಳು, ಮಾಂಸಾಹಾರ ಹಾಗೂ ಎಣ್ಣೆ ಪದಾರ್ಥಗಳಿಂದ ದೂರವಿರಿ ಎಂದು ಹಾಸ್ಮಟ್‌ ಆಸ್ಪತ್ರೆಯ ನಿರ್ದೇಶಕ, ವೈದ್ಯ ಡಾ.ಅಜಿತ್‌ ಬೆನೆಡಿಕ್ಟ್ ರಾಯನ್‌ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ತೇವಾಂಶ ಕಡಿಮೆಯಾಗಿ ತಾಪಮಾನ : ಕಳೆದ ಒಂದು ತಿಂಗಳಿನಿಂದ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಭೂಮಿಯ ಮೇಲಿನ ತೇವಾಂಶವೂ ಕಡಿಮೆಯಾಗುತ್ತದೆ. ರಾಜ್ಯದ ಬೆಂಗಳೂರು, ಮಂಗಳೂರು, ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಅತೀಯಾದ ಉಷ್ಣಾಂಶ ದಾಖಲಾಗುತ್ತಿದೆ. ಉತ್ತರದಿಂದ ದಕ್ಷಿಣಕ್ಕೆ ಬೀಸುತ್ತಿರುವ ಗಾಳಿಯಿಂದ ಒಣಹವೆ ಉಂಟಾಗಿ ತಾಪಮಾನ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಸದ್ಯದಲ್ಲೇ ಬಲವಾದ ಮೇಲ್ಮೆ„ಗಾಳಿ ಬೀಸುವ ಸಾಧ್ಯತೆಗಳಿವೆ. ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್‌ ದಾಖಲಾಗಲಿದೆ. ರಾಜ್ಯದ ಕೆಲ ಭಾಗಗಳಲ್ಲಿ ಗರಿಷ್ಠ 38 ಡಿಗ್ರಿ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಹವಾಮಾನ ತಜ್ಞರು.

ಬೇಸಿಗೆಯಲ್ಲಿ ಮುಖ್ಯವಾಗಿ ಹೆಚ್ಚು ನೀರಿನಾಂಶ ದೇಹಕ್ಕೆ ಹೋದರೆ ಉತ್ತಮ. ವಾಂತಿ, ಭೇದಿ ಕಾಯಿಲೆಗಳು ಏರಿಕೆಯಾಗುತ್ತಿರು ವುದು ಆತಂಕಕಾರಿ ಸಂಗತಿ. ಗುಣ ಮಟ್ಟದ ಆಹಾರ ಶೈಲಿಗೆ ಒಗ್ಗಿಕೊಳ್ಳು ವುದು ಅನಿವಾರ್ಯವಾಗಿದೆ. – ಡಾ|ಅಜಿತ್‌ ಬೆನೆಡಿಕ್ಟ್ ರಾಯನ್‌, ನಿರ್ದೇಶಕ, ಹಾಸ್ಮಟ್‌ ಆಸ್ಪತ್ರೆ.

– ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next