Advertisement

ವಿಟ್ಟಲನ ನಾಮಸ್ಮರಣೆಗೆ ಆರೋಗ್ಯ ವರ್ಧಕ ಶಕ್ತಿ

09:34 AM Jan 23, 2020 | mahesh |

ಸಂಸ್ಕೃತ ಭಾಷೆಯೇ ಬಯೋಲಾಜಿಕಲ್‌ ಆಗಿದೆ. ಮಂತ್ರ ಪಠನದಿಂದ ನರನಾಡಿಗಳು ಕ್ರಿಯಾಶೀಲವಾಗುತ್ತವೆ. ವಿಟ್ಟಲನ ನಾಮಸ್ಮರ ಣೆಗೂ ಈ ಶಕ್ತಿ ಇದೆ. ಇದು ಆರೋಗ್ಯ ಪ್ರದಾಯಿ ಎಂದು ಪ್ರಸಿದ್ಧ ಹಿಂದೂಸ್ಥಾನೀ, ಭಜನೆ ಸಂಗೀತಕಾರ ಪುಣೆಯ ಮಹೇಶ್‌ ಕಾಳೆ ಹೇಳಿದ್ದಾರೆ. ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸ ವದ “”ದರ್ಬಾರ್‌ ಸಂಗೀತ ಕಚೇರಿ’ ಕಾರ್ಯಕ್ರಮದ ಅಂಗವಾಗಿ ಸೋಮವಾರ ಅವರು ನೀಡಿದ ಕಾರ್ಯಕ್ರಮದಲ್ಲಿ ಬೃಹತ್‌ ಶ್ರೋತೃ ವರ್ಗವನ್ನು ವಿಟ್ಟಲನ ನಾಮಸ್ಮರಣೆಯಲ್ಲಿ ಹಿಡಿದಿಟ್ಟರು. ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದ ಭಾಗ ಇಂತಿದೆ:

Advertisement

ಎಂಜಿನಿಯರಿಂಗ್‌ನಲ್ಲಿ 2 ಸ್ನಾತಕೋತ್ತರ ಪದವಿ ಗಳಿಸಿಯೂ ಶಾಸ್ತ್ರೀಯ ಸಂಗೀತದಲ್ಲಿ ಪೂರ್ಣಕಾಲೀನವಾಗಿ ತೊಡಗಿಸಿಕೊಂಡಿರುವ ಹಿನ್ನೆಲೆ ಏನು?
ತಾಯಿ ಗೃಹಿಣಿಯಾದರೂ ಸಂಗೀತದ ಬಗ್ಗೆ ತಿಳಿವಳಿಕೆ ಇತ್ತು. ಹೀಗಾಗಿ ಅವರು ಸಂಗೀತವನ್ನು ಚಿಕ್ಕಪ್ರಾಯದಿಂದಲೇ ಕಲಿಸಿದರು. ಹತ್ತನೆಯ ತರಗತಿಯಲ್ಲಿ ನಾನು ಓದುತ್ತಿರುವಾಗಲೇ ಸಂಗೀತಕ್ಷೇತ್ರದ ದಂತಕಥೆ ಎನಿಸಿದ್ದ ಪಂ| ಜಿತೇಂದ್ರ ಅಭಿಷೇಕಿಯವರ ಗುರುತ್ವ ಸಿಕ್ಕಿದ್ದು ನನ್ನ ಯೋಗಭಾಗ್ಯ ಎನ್ನಬೇಕು. ನಾನು ಹಾಡುತ್ತಿರುವಾಗ ಎಲ್ಲರಲಿ ಒಂದಾಗಿ ಹಾಡುತ್ತಿದ್ದೆ. ನನ್ನ ಅಜ್ಜಿಯ ಪ್ರಾಯದಂತಿರುವ ಓರ್ವ ವೃದ್ಧೆ ಬಂದು ನಾನು ವಿಟ್ಟಲನ ಭಜನೆ ಹಾಡುವಾಗ “ವಿಟ್ಟಲನನ್ನೇ ನೋಡಿದೆ’ ಎಂದು ನನ್ನ ಕಾಲು ಮುಟ್ಟಿ ನಮಸ್ಕರಿಸಲು ಬಂದರು. ಆದರೆ ನಾನು ಅದಕ್ಕೆ ಅವಕಾಶ ಕೊಡಲಿಲ್ಲ. ಹೀಗಾಗಿ ಶ್ರೋತೃ ವರ್ಗ ಆತ್ಮೀಯವಾಗಿ ಪ್ರೀತಿಸಲು ಶುರು ಮಾಡಿತು. ಸಂಗೀತ ಸಾಧನದಿಂದ ಜನರನ್ನು ಸಂತೋಷದಲ್ಲಿರಿಸಲು ಸಾಧ್ಯವಾಗಿದೆ. 2005-06ರಿಂದ ನಾನು ಪೂರ್ಣಕಾಲೀನವಾಗಿ ಇದರಲ್ಲಿಯೇ ತೊಡಗಿಕೊಂಡೆ.

ವಿಟ್ಟಲನ ಭಜನೆಯಲ್ಲಿ ಭಾವಪರವಶತೆಯಿಂದ ಹಾಡುತ್ತೀರಿ? ಇದು ಪಂ| ಭೀಮಸೇನ್‌ ಜೋಷಿಯವರು ಸಂತವಾಣಿಯನ್ನು ಜನಪ್ರಿಯಗೊಳಿಸಿದಂತೆ. ಇಷ್ಟೊಂದು ತಲ್ಲೀನತೆಗೆ ಕಾರಣಗಳೇನು?
ಮಹಾರಾಷ್ಟ್ರದ ವಾರಕರಿ ಸಂಪ್ರದಾಯ ಒಂದು ದೊಡ್ಡ ಮಟ್ಟದ ಪಂಥವಾಗಿದೆ. ಪಾಂಡುರಂಗ ವಿಟuಲನನ್ನು ಜಾತಿಮತ ಭೇದವಿಲ್ಲದೆ ಜನರು ಸ್ವೀಕರಿಸಿದ್ದಾರೆ. ಸಂತ ಜ್ಞಾನೇಶ್ವರ, ಸಂತ ತುಕಾರಾಂ, ಸಂತ ನಾಮದೇವ ರಂತಹ ವಿವಿಧ ಸಮುದಾಯಗಳಿಗೆ ಸೇರಿದ ಸಂತರು ಆಧ್ಯಾತ್ಮಿಕವಾಗಿಯೂ ವಿಟuಲನನ್ನು ಸ್ತುತಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಅಭಂಗ ಪದ್ಧತಿ ಸೆಮಿ ಕ್ಲಾಸಿಕಲ್‌ ಸಂಗೀತ ಪದ್ಧತಿಯನ್ನು ರೂಪು ಗೊಳಿಸಿದೆ. ಭಕ್ತಿ ಸಂಗೀತವೂ ಇದರ ಮುಂದುವರಿದ ಭಾಗವಾಗಿದೆ. ನನ್ನ ತಂದೆ ಗೋಂದಲಿಕರ್‌ ಮಹಾರಾಜರ ಸಂಪರ್ಕ ಹೊಂದಿದ್ದರು. ನಮ್ಮ ಪುಣೆಯ ಮನೆಯಲ್ಲಿ ಪ್ರತಿ ರವಿವಾರ, ಗುರುಪೂರ್ಣಿಮೆ, ರಾಮನವಮಿಯಂತಹ ಪರ್ವ ದಿನಗಳಂದು ಅಭಂಗ, ಭಕ್ತಿ ಸಂಗೀತಗಳನ್ನು ಹಾಡುತ್ತೇವೆ. ನಾನು ನಿನ್ನೆಯೂ ಮನೆಯಲ್ಲಿ ಹಾಡಿದ್ದೇನೆ. ನಾನು ಪ್ರಥಮವಾಗಿ ಹಾಡಿದ್ದೇ ಅಭಂಗ ಎನ್ನುವುದು ನನ್ನ ಸ್ಮರಣೆಗೆ ಬರುತ್ತಿದೆ.

ವಿಟ್ಟಲ ಶಬ್ದದಲ್ಲಿ ಆರೋಗ್ಯವನ್ನಾಗಿಸುವ ಶಕ್ತಿ ಇದೆ ಎಂದು ವೈದ್ಯಕೀಯ ಸಂಶೋಧನೆ ಯಾಗಿದೆಯಂತೆ. ಹೀಗಾಗಿ ನೀವು ವಿಟ್ಟಲನ ನಾಮಸ್ಮರಣೆಗೆ ಮಹತ್ವ ಕೊಡುತ್ತಿದ್ದೀರಾ?
ಸಂಸ್ಕೃತ ಭಾಷೆಯೇ ಬಯಾಲಾಜಿಕಲ್‌. ಸಂಸ್ಕೃತದ ಶ್ಲೋಕವನ್ನು ಪುನಃ ಪುನಃ ಉತ್ಛರಿಸುವ ಹಿಂದೆ ವಿಶಿಷ್ಟ ಶಕ್ತಿಯ ಕಾರಣಗಳಿವೆ. ಉದಾಹರಣೆಗೆ “ಓಂ ಗಂ ಗಣಪತಯೇ ನಮಃ’. ಇಂತಹ ಮಂತ್ರಗಳನ್ನು ಪದೇ ಪದೇ ಹೇಳಿದಾಗ ನಮ್ಮ ನರನಾಡಿಗಳು ಕ್ರಿಯಾಶೀಲವಾಗುತ್ತವೆ. ನಾನು ತಜ್ಞನಲ್ಲದೆ ಇದ್ದರೂ ವಿಟuಲನ ನಾಮಸ್ಮರಣೆಯಿಂದ ಈ ಧ್ವನಿ ತರಂಗಗಳು ನರಗಳ ಮೇಲೆ ಉತ್ತಮ ಪರಿಣಾಮ ಬೀರುತ್ತವೆ ಎಂದು ಹೇಳುತ್ತೇನೆ.

ಶಾಸ್ತ್ರೀಯ ಸಂಗೀತ, ಸೆಮಿ ಕ್ಲಾಸಿಕಲ್‌, ಭಕ್ತಿ ಸಂಗೀತ, ದಾಸ ಸಂಗೀತ, ಮಹಾರಾಷ್ಟ್ರದ ನಾಟ್ಯ ಸಂಗೀತಗಳ ನಡುವಿನ ವ್ಯತ್ಯಾಸಗಳನ್ನು ನೀವು ಹೇಗೆ ವರ್ಣಿಸುತ್ತೀರಿ?
ಶಾಸ್ತ್ರೀಯ ಸಂಗೀತ ಎಲ್ಲ ಸಂಗೀತ ಪ್ರಕಾರಗಳಿಗೂ ಮಾತೃ ಸ್ಥಾನವನ್ನು ಹೊಂದಿದೆ. ನಾಟ್ಯ ಸಂಗೀತ ಮಹಾರಾಷ್ಟ್ರದ ವೈಶಿಷ್ಟ್ಯವಾಗಿದೆ. ಇದು ಕ್ಷೀಣಿಸುತ್ತಿರುವಾಗ ನಮ್ಮ ಗುರು ಪಂ|ಜಿತೇಂದ್ರ ಅಭಿಷೇಕಿಯವರು ಇದನ್ನು ಪುನರುಜ್ಜೀವನಗೊಳಿಸಿದರು. 1967ರಲ್ಲಿ ಹೊರಬಂದ ಸಿನೆಮಾಗಳಲ್ಲಿ ಸಂಗೀತ ಸಂಯೋಜಿಸಿದ್ದರು. ಅಭಂಗ, ನಾಟ್ಯ ಸಂಗೀತ, ದಾಸ ಸಂಗೀತಗಳು ಶಾಸ್ತ್ರೀಯ ಸಂಗೀತದ ಅಂಶಗಳೇ ಆಗಿವೆ. ಇವೆಲ್ಲವೂ ಶಾಸ್ತ್ರೀಯವಾದ ರಾಗಗಳಿಂದಲೇ ಕೂಡಿವೆ. ಎಲ್ಲವೂ ವಿವಿಧ ಆಯಾಮಗಳಲ್ಲಿ ಅವುಗಳದ್ದೇ ಆದ ಮಹತ್ವವನ್ನು ಹೊಂದಿವೆ.

Advertisement

ನೀವು ಪ್ರಸಿದ್ಧ ಹಾಡುಗಾರರಾಗಿಯೂ ಜನಸಾಮಾನ್ಯರ ಜತೆ ಸರಳವಾಗಿ ಬೆರೆಯುವ ಗುಣವನ್ನು ಪಡೆದುಕೊಂಡಿದ್ದೀರಿ. ಈ ಬಗ್ಗೆ ಏನಂತೀರಿ?
ನಾನು ಯಾವತ್ತೂ ವಿನಯಪೂರ್ವಕವಾಗಿಯೇ ಇರುವವ. ಕಲೆಯೂ ಹೀಗೆಯೇ. ಪ್ರಾಯಃ ನನ್ನ ಹಿರಿಯರು, ಗುರುಗಳು ಕೊಟ್ಟ ಸಂಸ್ಕಾರ ಇದಕ್ಕೆ ಕಾರಣವಾಗಿರಬಹುದು. ಪ್ರೇಕ್ಷಕರು ಇದ್ದರೆ ಮಾತ್ರ ಜನಪ್ರಿಯತೆ ಇರುತ್ತದೆ. ನನ್ನ ಹೃದಯದಲ್ಲಿ ಪ್ರೇಕ್ಷಕರು ಸದಾ ಇರುತ್ತಾರೆ. ಹೀಗಾಗಿ ಯುವಕರು ನನ್ನ ಸಂಗೀತವನ್ನು ಬಹಳಷ್ಟು ಇಷ್ಟಪಡುತ್ತಾರೆ. ಯುವ ಸಮೂಹ ಭಾರತೀಯ ಸಂಗೀತದತ್ತ ಒಲವು ಹೊಂದಬೇಕೆನ್ನುವುದು ನನ್ನ ಆದ್ಯತೆ.

ಕಟ್ಯಾರ್‌ ಕಾಳಜಾತ್‌ ಘುಸಲಿ ಚಲನಚಿತ್ರದ ಬಳಿಕ ನೀವು ಪ್ರಸಿದ್ಧರಾದಿರಿ. ನಿಮ್ಮ ಆದ್ಯತೆ ಚಲನಚಿತ್ರಕ್ಕೆ ಇರುತ್ತದೆಯೋ?
ದೇವರು ನನಗೆ ಸಂಗೀತವನ್ನು ಅನುಗ್ರಹಿಸಿದ್ದಾನೆ. ಈ ಚಲನಚಿತ್ರಕ್ಕೆ ಹಾಡಲು ಹೇಳಿದರು, ನಾನು ಹಾಡಿದೆ. ಶಾಸ್ತ್ರೀಯ ಸಂಗೀತದ ಜನಪ್ರಿಯತೆಗಾಗಿ ಇದನ್ನು ಮಾಧ್ಯಮವಾಗಿ ನೋಡುತ್ತೇನೆ. ನಾನು ಟಿವಿಯಲ್ಲಿಯೂ ತೀರ್ಪುಗಾರನಾಗಿ ಭಾಗವಹಿಸುತ್ತೇನೆ. ಒಂದರ್ಥದಲ್ಲಿ ಹೇಳುವುದಾದರೆ ಮಹಾರಾಷ್ಟ್ರದ ಚಲನಚಿತ್ರಕ್ಕೂ ನಾಟ್ಯಸಂಗೀತಕ್ಕೂ ಅವಿನಾಭಾವ ಸಂಬಂಧವಿದೆ. ಕಟ್ಯಾರ್‌ ಕಾಳಜಾತ್‌ ಘುಸಲಿ ಚಲನಚಿತ್ರದಿಂದಾಗಿ ಯುವ ಸಮೂಹ ಶಾಸ್ತ್ರೀಯ ಸಂಗೀತದತ್ತ ಒಲಿಯಿತು. ಸಾಮಾನ್ಯವಾಗಿ ಶಾಸ್ತ್ರೀಯ ಸಂಗೀತದ ಶ್ರೋತೃ ವರ್ಗದಲ್ಲಿ ಹಿರಿಯರು ಹೆಚ್ಚಿಗೆ ಇದ್ದರೆ ನನ್ನ ಶ್ರೋತೃ ವರ್ಗದಲ್ಲಿ ಯುವವೃಂದವೇ ಜಾಸ್ತಿ. ನನ್ನ ಆದ್ಯತೆ ಶಾಸ್ತ್ರೀಯ ಸಂಗೀತಕ್ಕೆ.

ಅಮೆರಿಕದಲ್ಲಿ ನೀವು ನಡೆಸುತ್ತಿರುವ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡುತ್ತೀರಾ?
ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ನಾನು ಇಂಡಿಯನ್‌ ಕ್ಲಾಸಿಕಲ್‌ ಮ್ಯೂಸಿಕ್‌ ಆ್ಯಂಡ್‌ ಆರ್ಟ್ಸ್ (ಐಸಿಎಂಐ) ಎಂಬ ಲಾಭರಹಿತ ಸಂಸ್ಥೆಯನ್ನು ನಡೆಸುತ್ತಿದ್ದು 150-200 ವಿದ್ಯಾರ್ಥಿಗಳು ಭಾರತೀಯ ಸಂಗೀತವನ್ನು ಕಲಿಯುತ್ತಿದ್ದಾರೆ. ಇದಲ್ಲದೆ ಮಹೇಶ್‌ ಕಾಳೆ ಸ್ಕೂಲ್‌ ಆಫ್ ಮ್ಯೂಸಿಕ್‌ ಎಂಬ ಸಂಗೀತ ಶಾಲೆಯನ್ನು ನಡೆಸುತ್ತಿದ್ದೇನೆ. ಇವುಗಳನ್ನು ಎಂಟು ವರ್ಷಗಳಿಂದ ನಡೆಸುತ್ತಿದ್ದೇನೆ.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next