Advertisement

ಮಸಾಲೆ ರಾಜ ಏಲಕ್ಕಿಯಲ್ಲಿದೆ ರೋಗ ನಿರೋಧಕ ಶಕ್ತಿ…ಏನಿದರ ಔಷಧಿ ಗುಣ?

10:23 AM Jan 11, 2020 | mahesh |

ಏಲಕ್ಕಿ ಭಾರತ ದೇಶದಲ್ಲಿ ಬೆಳೆಯುವ ಒಂದು ಸಸ್ಯ. ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಏಲಕ್ಕಿಯನ್ನು, ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳಕ್ಕಾಗಿ ಉಪಯೋಗಿಸುತ್ತಾರೆ. ಇದರಲ್ಲಿ ಅನೇಕ ಔಷಧಿ ಗುಣಗಳಿದ್ದು, ಕಾಫಿ ತೋಟದಲ್ಲಿ ಉಪ ಬೆಳೆಯಾಗಿ ಬೆಳೆಯುತ್ತಾರೆ. ವಾಣಿಜ್ಯ ಬೆಳೆಯಾಗಿ ಪ್ರಸಿದ್ಧಿ ಪಡೆದಿರುವ ಇದು ಮಸಾಲೆ ರಾಜ ಎಂದೇ ಖ್ಯಾತಿ ಪಡೆದಿದೆ. ಏಲಕ್ಕಿಯಿಂದ ರೋಗನಿರೋಧಕ ಶಕ್ತಿ, ಜೀರ್ಣ ಶಕ್ತಿ ವೃದ್ಧಿಸುವ ಜತೆಗೆ ಆರೋಗ್ಯಕ್ಕೆ ಉತ್ತಮ ಎಂದು ಸಾಕಷ್ಟು ಉಪಯೋಗಗಳಿವೆ.

Advertisement

ಜೀರ್ಣಕ್ರಿಯೆ ಸುಧಾರಣೆ ಮಾಡುವುದು
ಕೆಟ್ಟ ಹಾಗೂ ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಇಂದಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಜಠರ ಕರುಳಿನ ಸಮಸ್ಯೆಯು ಕಾಡುತ್ತಲಿರುವುದು. ಯಾವಾಗ ನೋಡಿದರೂ ಗ್ಯಾಸ್ ಸಮಸ್ಯೆ ಬಾಧಿಸುವುದು ಎಂದು ಹೇಳುವವರೇ ಅಧಿಕ ಮಂದಿ. ಗ್ಯಾಸ್, ಆಸಿಡಿಟಿ, ಸೆಳೆತ, ವಾಕರಿಕೆ, ಎದೆಯುರಿ ಇತ್ಯಾದಿ ಸಮಸ್ಯೆ ನಿವಾರಣೆ ಮಾಡಲು ಏಲಕ್ಕಿ ಬಳಸಿಕೊಳ್ಳಬಹುದು.

ಬಾಯಿಯ ಆರೋಗ್ಯ ಸುಧಾರಿಸುವುದು
ಪ್ರತಿ ದಿನ ಊಟದ ಬಳಿಕ ಒಂದು ಕಪ್ ಏಲಕ್ಕಿ ಚಹಾ ಕುಡಿಯುವ ಮೂಲಕ ಅಥವಾ ಒಂದೆರಡು ಏಲಕ್ಕಿ ಜಗಿಯುವುದರಿಂದ ಬಾಯಿಯ ದುರ್ವಾಸನೆಯ ನಿಯಂತ್ರಿಸಬಹುದು ಹಾಗೂ ಬಾಯಿಯ ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಬಹುದು.

ಸೂಕ್ಷ್ಮಜೀವಿ ವಿರೋಧಿ
ಏಲಕ್ಕಿಯು ಕೆಲವೊಂದು ರೀತಿಯ ಹಾನಿಕಾರಕ ಸೂಕ್ಷ್ಮಜೀವಿಗಳಾಗಿರುವಂತಹ ಶಿಲೀಂಧ್ರ, ಬ್ಯಾಕ್ಟೀರಿಯಾ ಮತ್ತು ವೈರಸ್ ನ ಬೆಳವಣಿಗೆಯನ್ನು ನಿಧಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ರಕ್ತದೊತ್ತಡ ಸಮತೋಲನದಲ್ಲಿಡುವುದು
ಏಲಕ್ಕಿ ಗ್ಲೂಕೋಸ್ ನಿಯಂತ್ರಿಸುವ ಅಂಶ ಮತ್ತು ಇನ್ಸುಲಿನ್ ಚಯಾಪಚಯಗೊಳಿಸುವುದು. ಏಲಕ್ಕಿಯಲ್ಲಿರುವ ಅಂಶವು ಆರೋಗ್ಯಕರ ಗ್ಲೂಕೋಸ್ ನ್ನು ವೃದ್ಧಿಸುವುದು ಮತ್ತು ಇನ್ಸುಲಿನ್ ಚಯಾಪಚಯಗೊಳಿಸುವುದು.

Advertisement

ದಂತ ಆರೋಗ್ಯ
ಹಲ್ಲಿನ ಹಲವಾರು ಸಮಸ್ಯೆಗಳಿಗೆ ಹಿಂದಿನಿಂದಲೂ ಆಯುರ್ವೇದ ಕ್ರಮದಲ್ಲಿ ಏಲಕ್ಕಿ ಬಳಸಿಕೊಂಡು ಬರಲಾಗುತ್ತಿದೆ. ಏಲಕ್ಕಿಯಲ್ಲಿ ಇರುವಂತಹ ಕೆಲವೊಂದು ಸೂಕ್ಷ್ಮಾಣು ವಿರೋಧಿ ಗುಣಗಳು ದಂತಕುಳಿ ನಿವಾರಣೆ ಮಾಡುವುದು. ದಂತ ಪದರ ನಿವಾರಣೆಮಾಡಲು ಇದನ್ನು ಬಾಯಿ ಮುಕ್ಕಳಿಸಿಕೊಳ್ಳಲು ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಬಳಸಿ ಕೊಂಡು ಬರಲಾಗುತ್ತಿದೆ.

ಜ್ವರ ಹಾಗೂ ಮೂಗು ಕಟ್ಟಿಕೊಂಡಿದ್ದರೆ
ಶೀತ ಜ್ವರದಿಂದ ನರಳುತ್ತಿದ್ದರೆ ಹಾಗೂ ಶೀತದಿಂದಾಗಿ ಮೂಗು ಕಟ್ಟಿಕೊಂಡಿದ್ದರೆ, ತಲೆನೋವಿದ್ದರೆ, ದಿನನಿತ್ಯ ಒಂದು ಕಪ್ ಏಲಕ್ಕಿ ಚಹಾ ಮಾಡಿ ಕುಡಿಯುತ್ತಾ ಬಂದರೆ, ಶೀಘ್ರದಲ್ಲಿಯೇ ಉಪಶಮನ ದೊರಕುತ್ತದೆ. ಅಷ್ಟೆ ಅಲ್ಲದೇ, ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಗಂಟಲ ಬೇನೆ, ಕೆಮ್ಮು ಹಾಗೂ ಕಫದ ಸಮಸ್ಯೆ ಇದ್ದರೆ, ಬಿಸಿ ಬಿಸಿ ಏಲಕ್ಕಿ ಚಹಾ ಮಾಡಿ ಕುಡಿಯುತ್ತಾ ಬಂದರೆ ಕೂಡಲೇ ಇವೆಲ್ಲಾ ಸಮಸ್ಯೆ ಕಡಿಮೆಯಾಗುತ್ತದೆ.

ರಕ್ತ ಸಂಚಾರ
ರಕ್ತ ಪರಿಚಲನೆಯನ್ನು ಸರಾಗವಾಗಿಸುವಲ್ಲಿ ಏಲಕ್ಕಿ ಸಹಕಾರಿ.

ಬಿಕ್ಕಳಿಕೆ
ಶ್ವಾಸಕೋಶದ ಕೆಳಗಿನ ಭಾಗದ ಅಂಗಾಂಶದಲ್ಲಿನ ಸೆಳೆತದಿಂದಾಗಿ ಬಿಕ್ಕಳಿಕೆ ಉಂಟಾಗುವುದು. ಇದರ ಪರಿಣಾಮ ನಗು, ಬಿಕ್ಕಳಿಕೆ ಅಥವಾ ಬೇರೆ ಸ್ಥಿತಿ ಕಾಣಿಸಬಹುದು. ಏಲಕ್ಕಿ ಹಾಕಿದ ನೀರನ್ನು ಕುದಿಸಿ ಕುಡಿದರೆ ಅದರಿಂದ ಈ ಸಮಸ್ಯೆಯು ನಿವಾರಣೆ ಆಗುವುದು ಎಂದು ಹೇಳಲಾಗುತ್ತದೆ.

ಜೀರ್ಣಕ್ರಿಯೆ ಸಮಸ್ಯೆ
ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ ಮತ್ತು ತಡೆಯಲು ಏಲಕ್ಕಿಯು ಅದ್ಭುತವಾಗಿ ನೆರವಾಗುವುದು. ಏಲಕ್ಕಿಯಲ್ಲಿ ಇರುವಂತಹ ತಂಪುಕಾರಕ ಗುಣವು ಅಸಿಡಿಟಿ ನಿವಾರಣೆ ಮಾಡಲು ನೆರವಾಗುವುದು.

-ಅಸ್ತಮ ಇದ್ದರೆ ಏಲಕ್ಕಿ ಎಣ್ಣೆಯನ್ನು ಬಿಸಿ ನೀರಿಗೆ ಹಾಕಿ ಆವಿ ತೆಗೆದುಕೊಂಡರೆ ಕಟ್ಟಿರುವ ಕಫ ಕರಗಿ ಅಸ್ತಮ ಕಡಿಮೆಯಾಗುತ್ತದೆ.

-ಸ್ವಲ್ಪ ಏಲಕ್ಕಿ ಪುಡಿಗೆ ಕಾಲು ಚಮಚ ಕಲ್ಲುಸಕ್ಕರೆ ಸೇರಿಸಿ ದಿನಕ್ಕೆ 3 ರಿಂದ 4 ಬಾರಿ ಸೇವಿಸಿದರೆ ಗಂಟಲು ನೋವು, ಶೀತ, ಕೆಮ್ಮು ಶಮನವಾಗುತ್ತದೆ.

-ಪ್ರಯಾಣ ಮಾಡುವಾಗ ವಾಂತಿ, ವಾಕರಿಕೆ ಬರುತ್ತಿದ್ದರೆ ಏಲಕ್ಕಿ ಪುಡಿಯನ್ನು ಬೆಲ್ಲದ ಜತೆ ಸೇವಿಸಿದರೆ ವಾಂತಿ ಬರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next