Advertisement

ಎರಡಾಣೆ ಕೊಟ್ಟು ಹರಸಿದರು

01:41 PM May 15, 2018 | |

“ಭೇಷ್‌! ಚೆನ್ನಾಗಿ ಹಾಡುತ್ತೀಯಾ. ಪದಗಳ ಉಚ್ಚಾರಣೆಯೂ ಸ್ಪಷ್ಟವಾಗಿದೆ’ ಎಂದ ಜಿ.ಪಿ. ರಾಜರತ್ನಂರವರು ತಮ್ಮ ಜುಬ್ಟಾದ ಜೇಬಿನಿಂದ ಎರಡಾಣೆ ನಾಣ್ಯವೊಂದನ್ನು ತೆಗೆದು ನನಗೆ ಕೊಡಲು ಕೈಯನ್ನು ಮುಂದೆ ಚಾಚಿದರು. ಕಕ್ಕಾಬಿಕ್ಕಿಯಾದ ನಾನು ಅತೀವ ಸಂಕೋಚದಿಂದ- “ಅಯ್ಯೋ ಸಾರ್‌, ದುಡ್ಡೆಲ್ಲಾ ಏನೂ ಬೇಡ’ ಎನ್ನುತ್ತಾ ಹಿಂಜರಿದೆ. 

Advertisement

ಮೈಸೂರಿನ ಪುಟ್ಟ ಹಳ್ಳಿಯೊಂದರಲ್ಲಿ ವಾಸವಾಗಿದ್ದ ನಮ್ಮ ಕುಟುಂಬ 1954ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿತು. ಆಗ ನಮ್ಮ ಮೊಟ್ಟ ಮೊದಲ ವಾಸ್ತವ್ಯ ನಮ್ಮ ಸೋದರ ಮಾವ “ಟೀಯೆಸ್ಸಾರ್‌’ ಎಂದೇ ಹೆಸರಾಗಿದ್ದ, ಆಗಿನ ಪ್ರಜಾವಾಣಿ ಸಂಪಾದಕರಾಗಿದ್ದ ದಿ. ಟಿ.ಎಸ್‌. ರಾಮಚಂದ್ರ ರಾವ್‌ ಅವರ ಮನೆಯಲ್ಲಿ. ನನಗಾಗ ಸುಮಾರು 12 ವರ್ಷ. ನನಗೆ ಚೆನ್ನಾಗಿ ನೆನಪಿದೆ, ಅಂದು ಭಾನುವಾರ. ಟೀಯೆಸ್ಸಾರ್‌ ತಮ್ಮ ರೂಮಿನಲ್ಲಿ ಕುಳಿತುಕೊಂಡು ಏನನ್ನೋ ಬರೆಯುತ್ತಿದ್ದರು. ಸಮಯ ಸುಮಾರು 10 ಗಂಟೆ ಇರಬಹುದು. ಹೊರಗಡೆ ಬಾಗಿಲು ತಟ್ಟಿದ ಸದ್ದಾಯ್ತು. ಹೋಗಿ ಬಾಗಿಲು ತೆರೆದೆ. 

ಬಂದವರು ಯಾರೆಂದು ನೋಡುತ್ತಲೇ ರೋಮಾಂಚನವಾಯ್ತು. ಎದುರಿಗೆ ಖ್ಯಾತ ಸಾಹಿತಿ ಜಿ.ಪಿ. ರಾಜರತ್ನಂ ನಿಂತಿದ್ದರು. “ಬನ್ನಿ ಸಾರ್‌, ಒಳಗೆ ಬನ್ನಿ’ ಎನ್ನುತ್ತಾ ಆದರಾಭಿಮಾನದಿಂದ ಅವರನ್ನು ಸ್ವಾಗತಿಸಿದೆ. ಅವರು “ಟೀಯೆಸ್ಸಾರ್‌ ಇದ್ದಾರೇನಯ್ನಾ?’ ಎಂದು ಪ್ರಶ್ನಿಸುತ್ತಿದ್ದಂತೆಯೇ, ನಾನು ಒಳಗೆ ಓಡಿ ಹೇಗಿ ಮಾಮನಿಗೆ ವಿಷಯ ತಿಳಿಸಿದೆ. ರಾಜರತ್ನಂ ಅವರ ಭಾವಚಿತ್ರವನ್ನು ನೋಡಿದ್ದೆನೇ ಹೊರತು ಎಂದೂ ಪ್ರತ್ಯಕ್ಷವಾಗಿ ನೋಡಿರಲಿಲ್ಲ. ರೂಮಿನಿಂದ ಹೊರಗೆ ಬಂದ ಟೀಯೆಸ್ಸಾರ್‌, ಅವರನ್ನು ಸ್ವಾಗತಿಸುತ್ತಾ ನನ್ನತ್ತ ತಿರುಗಿ “ಕಾಫಿ’ ಎಂದಷ್ಟೇ ಹೇಳಿ ರಾಜರತ್ನಂ ಅವರನ್ನು ತಮ್ಮ ರೂಮಿನೊಳಗೆ ಕರೆದುಕೊಂಡುಹೋದರು. ನಾನು ಅಡುಗೆಮನೆಗೆ ಹೋಗಿ ನನ್ನ ಅಜ್ಜಿ ಮಾಡಿಕೊಟ್ಟ ಕಾಫಿಯನ್ನು ತೆಗೆದುಕೊಂಡು ಹೋಗಿ ಕೊಟ್ಟೆ…

ಆ ಸಮಯದಲ್ಲಿ ರಾಜರತ್ನಂ ಅವರ “ಬಣ್ಣದ ತಗಡಿನ ತುತ್ತೂರಿ’ ಪದ್ಯ ಆಬಾಲವೃದ್ಧರಾಗಿ ತುಂಬಾ ಜನಜನಿತವಾಗಿತ್ತು. ನಾನು “ಸಾರ್‌, ನಿಮ್ಮ ಬಣ್ಣದ ತಗಡಿನ ತುತ್ತೂರಿ ನನ್ನ ಅಚ್ಚುಮೆಚ್ಚಿನ ಪದ್ಯ. ಅದು ನನಗೆ ಕಂಠಪಾಠವಾಗಿ ಹೋಗಿದೆ’ ಎಂದೆ. ಅವರು ನಸುನಗುತ್ತಾ “ಅರೇ, ಹೌದಾ? ತುಂಬಾ ಸಂತೋಷ. ನಿನಗೆ ಅದನ್ನು ಹಾಡಲು ಬರುತ್ತದೆಯೇ? ಹಾಗಿದ್ದರೆ ಒಮ್ಮೆ ಹಾಡಿ ತೋರಿಸು ನೋಡೋಣ’ ಎಂದು ಕೇಳಿದರು. ನಾನು ಹುರುಪಿನಿಂದ “ಬರುತ್ತದೆ ಸಾರ್‌..!’ ಎಂದವನೇ ಅದನ್ನು ಸ್ವಲ್ಪ ರಾಗಬದ್ಧವಾಗಿ ಒಂದು ಚೂರೂ ತಪ್ಪಿಲ್ಲದಂತೆ ಹಾಡಿ ತೋರಿಸಿದೆ.

ಅವರು “ಭೇಷ್‌! ಚೆನ್ನಾಗಿ ಹಾಡುತ್ತೀಯಾ. ಪದಗಳ ಉಚ್ಚಾರಣೆಯೂ ಸ್ಪಷ್ಟವಾಗಿದೆ’ ಎಂದವರೇ ತಮ್ಮ ಜುಬ್ಟಾದ ಜೇಬಿನಿಂದ ಎರಡಾಣೆ ನಾಣ್ಯವೊಂದನ್ನು ತೆಗೆದು ನನಗೆ ಕೊಡಲು ಕೈಯನ್ನು ಮುಂದೆ ಚಾಚಿದರು. ಕಕ್ಕಾಬಿಕ್ಕಿಯಾದ ನಾನು ಅತೀವ ಸಂಕೋಚದಿಂದ- “ಅಯ್ಯೋ ಸಾರ್‌, ದುಡ್ಡೆಲ್ಲಾ ಏನೂ ಬೇಡ’ ಎನ್ನುತ್ತಾ ಹಿಂಜರಿದೆ. ಅವರು ಪುನಃ “ಪರವಾಗಿಲ್ಲ ತೆಗೆದುಕೋ’ ಎಂದು ಒತ್ತಾಯ ಮಾಡಿದಾಗ ನಾನು ಟೀಯೆಸ್ಸಾರ್‌ ಅವರ ಮುಖ ನೋಡಿದೆ. ಅವರು “ಹಿರಿಯರು ಆಶೀರ್ವಾದ ಮಾಡಿ ಕೊಡುತ್ತಿದ್ದಾರೆ. ಬೇಡ ಅನ್ನಬಾರದು. ಪರವಾಗಿಲ್ಲ ತೆಗೆದುಕೋ’ ಎಂದಾಗ ಗತ್ಯಂತರವಿಲ್ಲದೆ ತೆಗೆದುಕೊಂಡು ಅವರ ಕಾಲು ಮುಟ್ಟಿ ನಮಸ್ಕರಿಸಿದೆ. 

Advertisement

ಅವರು ಕೂಡಲೆ “ಪರವಾಗಿಲ್ಲ ಟೀಯೆಸ್ಸಾರ್‌, ನಿಮ್ಮ ಹುಡುಗ ದೊಡ್ಡವರಿಗೆ ಹೇಗೆ ಗೌರವ ನೀಡಬೇಕೆಂಬುದನ್ನು ಚೆನ್ನಾಗಿ ಅರಿತಿದ್ದಾನೆ’ ಎನ್ನುತ್ತಾ ನನ್ನ ಬೆನ್ನು ತಟ್ಟಿ ಆಶೀರ್ವದಿಸಿದರು. ಆ ಕಾಲಕ್ಕೆ ಎರಡಾಣೆ ದೊಡ್ಡ ಮೊತ್ತವಾಗಿತ್ತು. ವಿಷಯ ತಿಳಿದ ನನ್ನ ತಾಯಿ ಎಂ.ಕೆ. ಇಂದಿರಾ(ಕಾದಂಬರಿಗಾರ್ತಿ)ರವರು “ನೀನು ತುಂಬಾ ಪುಣ್ಯ ಮಾಡಿದ್ದೀಯ. ಅಂಥ ಮಹನೀಯರ ಆಶೀರ್ವಾದ ಎಲ್ಲರಿಗೂ ಸಿಗುವುದಿಲ್ಲ. ನಿನಗೆ ಸಿಕ್ಕಿದೆ. ಆ ಎರಡಾಣೆ ನಿನಗೆ ಸೇರಿದ್ದು. ನಿನಗೇನಾದರೂ ಬೇಕಿದ್ದರೆ ತೆಗೆದುಕೋ’ ಎಂದುಬಿಟ್ಟರು. 

ತದನಂತರ ರಾಜರತ್ನಂರವರು 1979ರಲ್ಲಿ ಸ್ವರ್ಗಸ್ಥರಾದ ಸುದ್ದಿ ತಿಳಿದು ಕಂಬನಿ ಮಿಡಿದಿದ್ದೆ. ಅಂದು ಸದಾಕಾಲ ಯಾವ ಮಕ್ಕಳ ಬಾಯಲ್ಲಿ ನೋಡಿದರೂ ತುತ್ತೂರಿ ಪದ್ಯ ನಲಿದಾಡುತ್ತಿತ್ತು. ಆ ಕಾಲದ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕದಲ್ಲಿಯೂ ಈ ಪದ್ಯವನ್ನು ಅಳವಡಿಸಲಾಗಿತ್ತು. ರಾಜರತ್ನಂರವರಿಗೆ ಪುಟ್ಟ ಮಕ್ಕಳನ್ನು ಕಂಡರಂತೂ ಅದೇನು ಅಕ್ಕರೆಯೋ, ಪ್ರೀತಿಯೋ ಪದಗಳಿಂದ ವರ್ಣಿಸಲು ಸಾಧ್ಯವಾಗದು.

1942ನೇ ಇಸವಿಯಲ್ಲಿ ಮುದ್ರಣಗೊಂಡಿದ್ದ ಆ ಎರಡಾಣೆ ನಾಣ್ಯವನ್ನು ಇಂದಿಗೂ ನಾನು ಸಂಗ್ರಹಿಸಿರುವ ದೇಶವಿದೇಶಗಳ ಹಳೆಯ ನೋಟು, ನಾಣ್ಯಗಳೊಂದಿಗೆ ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿದ್ದೇನೆ. ಅದನ್ನು ನೋಡಿದಾಗಲೆಲ್ಲಾ ಹಸನ್ಮುಖೀ ಜಿ.ಪಿ ರಾಜರತ್ನಂ ಅವರ ವ್ಯಕ್ತಿತ್ವ ನನ್ನ ಕಣ್ಣಮುಂದೆ ಹಾದುಹೋದಂತಾಗಿ ಹೃದಯ ಹೂವಿನಂತೆ ಅರಳುತ್ತದೆ.

ಎಂ.ಕೆ. ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next