Advertisement

ಮಂಗಳೂರು ಗಲಭೆ, ಡಿ.ಜೆ.ಹಳ್ಳಿ ಘಟನೆ ತನಿಖೆ ಏನಾಯಿತು, ಡ್ರಗ್ಸ್‌ ತನಿಖೆಯೂ ಅಷ್ಟೇ: HDK

11:07 AM Sep 03, 2020 | sudhir |

ಚನ್ನಪಟ್ಟಣ: “ಕ್ರಿಕೆಟ್‌ ಬೆಟ್ಟಿಂಗ್‌, ಕಾನೂನು ಬಾಹಿರ ಡ್ಯಾನ್ಸ್‌ ಬಾರ್‌ ನಡೆಸುತ್ತಿರುವವರು, ಮಾಫಿಯಾ ಹಣದಿಂದ ನನ್ನ ಸರ್ಕಾರವನ್ನು ಅಸ್ಥಿರಗೊಳಿಸಲಾಯಿತು ಎನ್ನುವ ಮಾತನ್ನಾಡಿದ್ದೇನೆಯೇ ವಿನಃ ಬಿಜೆಪಿಯವರು ಸರ್ಕಾರ ಬೀಳಿಸಿದರು ಎಂದು ಹೇಳಿಲ್ಲ, ಕಳ್ಳನ ಮನಸ್ಸು ಹುಳ್ಳುಳ್ಳಗೆ ಎನ್ನುವಂತೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ’ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

Advertisement

ಹೆಸರೇಳಿಲ್ಲ:ತಾಪಂ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಸುದ್ದಿಗಾರ ರೊಂದಿಗೆ ಮಾತನಾಡಿದರು. ಡ್ರಗ್ಸ್‌ ಮಾಫಿಯಾ ಬಗ್ಗೆ ತಾನು ನೀಡಿರುವ ಹೇಳಿಕೆಯನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು, ಸರ್ಕಾರ ಪತನದಲ್ಲಿ ಮಾಫಿಯಾ ಹಣದ ಪಾತ್ರವಿದೆ ಎಂದು ಹೇಳಿದ್ದೆ, ಬಿಜೆಪಿ ನಾಯಕರ ಹೆಸರೇಳಿಲ್ಲ. ತಾನು ಮಾತ ನಾಡುತ್ತಿರುವ ಯಾವುದೇ ಪದದಲ್ಲೂ ಗೊಂದಲವಿಲ್ಲ. ನಾನು ನೇರವಾಗಿ ಮಾತ ನಾಡುವ ವ್ಯಕ್ತಿ ಎಂದರು.

ಕೆಲವರಿಗೆ ಅಮಲು: ನನಗೆ ಯಾವತ್ತೂ ಮತ್ತು ಬರಿಸೋದಿಕ್ಕೆ ಬರೋದಿಲ್ಲ, ಅಧಿಕಾರದಲ್ಲಿದ್ದರೂ, ಇಲ್ಲದಿದ್ದಾಗಲೂ ಮತ್ತು ಬಂದಿಲ್ಲ, ಕೆಲವರಿಗೆ ಅಧಿಕಾರ ಸಿಕ್ಕ ತಕ್ಷಣ ಅಮಲೇರುತ್ತಿದೆ. ಅದು ನನಗೆ ಬಂದಿಲ್ಲ ಎಂದು ಸಚಿವರ ವಿರುದ್ಧ ಹರಿಹಾಯ್ದರು. ಡ್ರಗ್ಸ್‌ ವಿಚಾರದಲ್ಲಿ ಇದೀಗ ತನಿಖೆ ಮಾತು ಬರುತ್ತಿದೆ. ಈ ಹಿಂದೆ ಮಂಗಳೂರು ಗಲಭೆ ನಡೆದಾಗ ಇಬ್ಬರು ಅಮಾಯಕರು ಬಲಿಯಾದರು. ಆ ಮ್ಯಾಜಿ ಸ್ಟ್ರೇಟ್‌ ತನಿಖೆ ಏನಾಯಿತು, ಬೆಂಗಳೂರಿನ ಡಿ.ಜೆ.ಹಳ್ಳಿ ಘಟನೆ ತನಿಖೆ ಏನಾಯಿತು, ಗಲಭೆ ಮಾಡಿದವರನ್ನು ಏನು ಮಾಡಿದ್ದಾರೆ, ಇದೀಗ ಡ್ರಗ್ಸ್‌ ತನಿಖೆ ವಿಚಾರ ಬಂದಿದೆ. ಅದರ ಹಣೆಬರಹವೂ ಇಷ್ಟೇ ಎಂದರು.

ಇದೇನಾ ಅಭಿವೃದ್ಧಿ?: ಕೋವಿಡ್ ವಿಚಾರದಲ್ಲಿ ಕೇಂದ್ರ ಸರ್ಕಾರ ನೀಡಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಿಂದ ಯಾರು ಉದ್ಧಾರವಾದರು. ಬರೀ ಚಪ್ಪಾಳೆ ತಟ್ಟಿಸಿದರು. ದೀಪ ಹತ್ತಿಸಿದರು. ಇದೀಗ ದೇಶದ ಜಿಡಿಪಿ ಶೇ.23 ಕಡಿಮೆಯಾಗಿದೆ. ರಾಜ್ಯಕ್ಕೆ
ಬರಬೇಕಾದ ಹಣ ಕೊಡದೆ ಸಾಲ ಮಾಡಿ ಎಂದು ಈಗ ಹೇಳುತ್ತಿದ್ದಾರೆ. ಇದೆಯಾ ಕೇಂದ್ರದ ನಾಯಕರ ಅಭಿವೃದ್ಧಿ ಎಂದು ಕುಮಾರಸ್ವಾಮಿ ಟೀಕಿಸಿದರು.

ತೊಂದರೆ ನೀಡದಿರಿ: ಸರ್ಕಾರ ನಮ್ಮದಲ್ಲದಿದ್ದರೂ ನನಗೆ ಗೌರವ ಕೊಡುವ ಮಂದಿ ಬಿಜೆಪಿ ಸರ್ಕಾರದಲ್ಲಿದ್ದಾರೆ. ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ. ಈಗಾಗಲೇ ತಾಲೂಕಿನಲ್ಲಿ ಮಂತ್ಲಿ ಕೊಡುವಂತೆ ಪಿಡಿಒಗಳಿಗೆ ಫ‌ರ್ಮಾನು
ಹೋಗಿರುವ ವಿಚಾರ ತಿಳಿದಿದೆ. ನಾನು ಯಾವ ಅಧಿಕಾರಿಗಳನ್ನೂ ಹಣ ಕೇಳಿಲ್ಲ, ಮುಂದೆಯೂ ಕೇಳಲ್ಲ. ಹಣ ಕೊಟ್ಟು ಇಲ್ಲಿ ಉಳಿಯುತ್ತೇನೆ ಎಂದರೆ ಬಿಡಲ್ಲ, ಗ್ರಾಮಾಂತರ ವಿಭಾಗದ ಪಿಎಸ್‌ಐ ಒಬ್ಬರು 4 ಲಕ್ಷರೂ. ಹಣ ಕೊಟ್ಟು ಇಲ್ಲೇ ಉಳಿದುಕೊಳ್ಳುವ ತಂತ್ರ ಮಾಡುತ್ತಿದ್ದಾರೆಂಬ ದೂರು ಬಂದಿದೆ. ಅದೆಲ್ಲಾ ಇಲ್ಲಿ ನಡೆಯಲ್ಲ, ಹಣ ಕೊಟ್ಟು ನಾಳೆ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತೀರೆಂದು ಗೊತ್ತಿದೆ. ಇನ್ನು ಠಾಣೆಗಳಲ್ಲಿ ಸಾಧ್ಯವಾದಷ್ಟು ರಾಜಿ ಸಂಧಾನಕ್ಕೆ ಹೆಚ್ಚಿನ ಆದ್ಯತೆ ನೀಡಿ. ಇದು ಸಲಹೆ ಎಂದು ಸ್ವೀಕರಿಸಿ, ರಾಜಕಾರಣ ಮಾಡಬೇಡಿ ಎಂದು ಗುಡುಗಿದರು. ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಸ್‌.ಲಿಂಗೇಶ್‌ ಕುಮಾರ್‌, ಜೆಡಿಎಸ್‌ ಅಧ್ಯಕ್ಷ ಜಯಮುತ್ತು, ನಗರ ಜೆಡಿಎಸ್‌ ರಾಂಪುರ ರಾಜಣ್ಣ, ಪಿಕಾರ್ಡ್‌ ಬ್ಯಾಂಕ್‌ ಅಧ್ಯ ಕ್ಷ ನಾಗರಾಜು, ಮುಖಂಡರಾದ ಸತೀಶ್‌ಬಾಬು, ಹನುಮಂತು, ಬೋರ್‌ವೆಲ್‌ ರಾಮಚಂದ್ರು ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next