Advertisement

ಕೆಸಿಎನ್‌ ಮೋಸ ನೆನೆದು ಕಣ್ಣೀರಿಟ್ಟ ಎಚ್‌ಡಿಕೆ

11:01 PM Nov 27, 2019 | Team Udayavani |

ಮಂಡ್ಯ/ಕಿಕ್ಕೇರಿ: ಜಿಲ್ಲೆಯ ಜನ ತಮ್ಮ ಮೇಲೆ ಇಟ್ಟಿರುವ ಪ್ರೀತಿ ಹಾಗೂ ನಾರಾಯಣಗೌಡ ತಮಗೆ ಮಾಡಿರುವ ಮೋಸ ನೆನೆದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಣ್ಣೀರಿಟ್ಟರು. ಕೆ.ಆರ್‌.ಪೇಟೆ ತಾಲೂಕಿನ ಕಿಕ್ಕೇರಿಯ ಸಂತೆಮಾಳದಲ್ಲಿ ಬುಧವಾರ ಜೆಡಿಎಸ್‌ ಅಭ್ಯರ್ಥಿ ಬಿ.ಎಲ್‌.ದೇವರಾಜು ಪರ ಚುನಾ ವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

Advertisement

“ಬಾಂಬೆ ಕಳ್ಳ’ ಎಂದು ಕರೆಯುವ ಈತನಿಗೆ 2013ರಲ್ಲಿ ಟಿಕೆಟ್‌ ನೀಡಿ ಶಾಸಕನನ್ನಾಗಿ ಮಾಡಲಾಯಿತು. 2018ರಲ್ಲಿ ನನ್ನ ಕರ್ಮ, ನನ್ನ ತಂದೆಯ ವಿರೋಧದ ನಡುವೆಯೂ ನಾನು ಈತನಿಗೆ ಟಿಕೆಟ್‌ ನೀಡಿದೆ. ಆದರೆ, ನಾರಾಯಣಗೌಡ ಸರ್ಕಾರ ಬೀಳಿಸಲು ಬಿಜೆಪಿ ಜೊತೆ ಸೇರಿದ್ದ. 2019ರ ಫೆಬ್ರವರಿಯಲ್ಲಿ ನಾನು ಬಜೆಟ್‌ ಸಿದ್ಧತೆಯಲ್ಲಿದ್ದು, ಮಂಡ್ಯ ಜಿಲ್ಲೆಗೆ ಏನು ಕೊಡಬೇಕೆಂದು ಚಿಂತನೆ ಮಾಡ್ತಿದ್ದೆ. ಆಗ ಇವನು (ನಾರಾಯಣಗೌಡ) ಬಾಂಬೆಯಲ್ಲಿ ನಾಟಕವಾಡಿ ಆಸ್ಪತ್ರೆಯಲ್ಲಿದ್ದ.

ಬಿಜೆಪಿಯವರಿಂದ ಹಣ ಪಡೆದು ಮಲಗಿದ್ದ. ಈಗ ಅಭಿವೃದ್ಧಿಗೆ ಹಣ ಕೊಡಲಿಲ್ಲವೆಂದು ನನ್ನ ಮೇಲೆ ಆರೋಪ ಮಾಡುತ್ತಿದ್ದಾನೆ. ಇದನ್ನು ದೇವರು ಮೆಚ್ಚುತ್ತಾನಾ?. ಈತ ಆಸ್ಪತ್ರೆಯಲ್ಲಿರುವಾಗ ನನಗೊಂದು ಪತ್ರ ಬರೆದಿದ್ದ. ಅದರಲ್ಲಿ ನಾನು ಅನಾಥ. ನೀವೇ ಸಹೋದರ, ದೇವೇಗೌಡ, ಚೆನ್ನಮ್ಮಾಜಿ ನನಗೆ ತಂದೆ-ತಾಯಿ ಅಂತ ಪತ್ರ ಬರೆದಿದ್ದ. ಈತ ನನಗೆ ದ್ರೋಹ ಮಾಡಿದಾಗ ಇದಾವುದೂ ಅವನ ನೆನಪಿಗೆ ಬರಲೇ ಇಲ್ಲ’ ಎಂದು ಬಿಕ್ಕಿ ಬಿಕ್ಕಿ ಅತ್ತರು.

ಜಿಲ್ಲೆಯ ಜನರೇ ಕೈಬಿಟ್ಟ ಮೇಲೆ ನಾನು ಅಧಿಕಾರ ದಲ್ಲಿರಬೇಕೆ?. ಜನರ ಪ್ರೀತಿಯ ಮುಂದೆ ಉಳಿದ ಅಧಿಕಾರವೆಲ್ಲವೂ ಯಕಶ್ಚಿತ್‌ ಎಂದು ಕಣ್ಣೀರಿಟ್ಟರಲ್ಲದೆ, “ನಾನು ನಂಬಿದ ಜನರೇ ನನ್ನ ಕೈ ಬಿಟ್ಟ ಮೇಲೆ ಸ್ವಾಭಿಮಾನ ಎಲ್ಲಿಂದ ಬಂತು’ ಎಂದು ಬೇಸರದಿಂದ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next