Advertisement

ಎಚ್‌ಡಿಕೆ ಸಿಎಂ ಆಗೋದು ತಡೆಯೋಕೆ ಆಗಲ್ಲ: ದೇವೇಗೌಡ

06:15 AM Nov 30, 2017 | Team Udayavani |

ಬೆಂಗಳೂರು: ಈ ರಾಜ್ಯದಲ್ಲಿ ಮುಂದಿನ ಬಾರಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತಿಳಿಸಿದ್ದಾರೆ.

Advertisement

ಇಡೀ ರಾಜ್ಯದಲ್ಲಿ ಕುಮಾರಸ್ವಾಮಿ ಬೇಕು ಎಂಬ ಕೂಗು ಎದ್ದಿದೆ. ಹೀಗಾಗಿ, ಯಾರು ಏನೇ ಹೇಳಿದರೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಶತಸಿದ್ಧ ಎಂದು ಹೇಳಿದ್ದಾರೆ.

ನಗರದ ಪುರಭವನದಲ್ಲಿ “ಟೈಗರ್‌ ಆ್ಯಪ್‌’ ಮತ್ತು ಎಚ್‌ಡಿಕೆ ರಕ್ತದಾನ ಸಮಿತಿ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಪ್ಪತ್ತು ತಿಂಗಳು ಮುಖ್ಯಮಂತ್ರಿಯಾಗಿ ಜನರ ಮನಸ್ಸು ಗೆದ್ದಿದ್ದ ಕುಮಾರಸ್ವಾಮಿ ಮತ್ತೂಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬುದು ರಾಜ್ಯದ ಜನರ ಆಶಯವಾಗಿದೆ ಎಂದು ತಿಳಿಸಿದರು.

ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲಿದ್ದು ಅದು ನಾನು ಕೊಡುವ ಭಾಗ್ಯವಲ್ಲ. ರಾಜ್ಯದ ಜನರೇ ಕೊಡುವ ಭಾಗ್ಯ ಎಂದರು.

ಈ ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ ಅಧಿಕಾರ ನಡೆಸಿದ ಯಾರ್ಯಾರು ಏನು ಮಾಡಿದ್ದಾರೆ ಎಂಬುದು ಹೊರಗೆ ತೆಗೆಯುವ ಕಾಲ  ಈಗ ಬಂದಿದೆ. ಮುಂದಿನ ದಿನಗಳಲ್ಲಿ  ಎಲ್ಲವೂ ಬಹಿರಂಗವಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

Advertisement

ಟ್ಯಾಕ್ಸಿ ಕ್ಯಾಬ್‌ ಸೇವೆ ಆರಂಭಿಸಿರುವುದು ಶ್ರೇಷ್ಠ ಕೆಲಸ. ಚಾಲಕರಿಗೆ ಕಿರುಕುಳ ತಪ್ಪಿಸಿ ಸೌಲಭ್ಯ ಕಲ್ಪಿಸಲು ಆರಂಭಿಸಿರುವುದು ಒಳ್ಳೆಯದು. ಕುಮಾರಸ್ವಾಮಿ ದೇವೇಗೌಡರ ಮಗ ಎಂಬುದು ಎಲ್ಲರಿಗೂ ಗೊತ್ತಿದೆ. ಪುತ್ರ ವಾತ್ಸಲ್ಯದಿಂದ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಟೀಕೆ ಬರಬಹುದು. ಆದರೆ, ನಾನು ಅದಕ್ಕೆ ಭಯ ಪಡೋಲ್ಲ ಎಂದು ಹೇಳಿದರು. 

ಮುಂದಿನ ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬರಲಿದ್ದು ದುಡಿಯುವ ಕೈಗಳಿಗೆ ಆರ್ಥಿಕ ಶಕ್ತಿ ಕಲ್ಪಿಸಲಿದೆ. ಕೂತು ತಿನ್ನುವರರನ್ನು ಹಿಂದೆ ಸರಿಸಿ ಕೆಲಸ ಮಾಡುವವರಿಗೆ ಉದ್ಯೋಗ ಕಲ್ಪಿಸಲಿದ್ದೇವೆ ಎಂದು ತಿಳಿಸಿದರು.

ಟ್ಯಾಕ್ಸಿಯ ಸಿಂಬಲ್‌ನಲ್ಲಿ ಹುಲಿ ಮುಖ ಇದೆ. ಆದರೆ, ಇದು ಯಾರನ್ನೂ ತಿನ್ನಲ್ಲ. ಲೂಟಿ ಮಾಡುವ ರಾಜಕಾರಣಿಗಳತ್ತ ಕಣ್ಣಿಡಲಿದೆ ಎಂದು ಚಟಾಕಿ ಹಾರಿಸಿದರು.

ಕಾರ್ಯಕ್ರಮದ ನಂತರ ನಮ್ಮ ಟೈಗರ್‌ ಟ್ಯಾಕ್ಸಿಯಲ್ಲಿ ಕುಳಿತು ನೂತನ ಕ್ಯಾಬ್‌ ಸೇವೆಗೆ ಚಾಲನೆ ನೀಡಿದರು. ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಓಲಾ ಹಾಗೂ ಊಬರ್‌ ಸಂಸ್ಥೆಗಳ ವಿರುದ್ಧ ಸಿಡಿದೆದ್ದ ಚಾಲಕರು ಎಚ್‌.ಡಿ.ಕುಮಾರಸ್ವಾಮಿ ನೆರವಿನೊಂದಿಗೆ ಟೈಗರ್‌ ಟ್ಯಾಕ್ಸಿ ಸೇವೆ ಆರಂಭಿಸಿದ್ದು, ಇದಕ್ಕಾಗಿ ಆ್ಯಪ್‌ ಸಹ ಸಿದ್ಧಪಡಿಸಿದ್ದಾರೆ. ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ಕೈಗೆ‌ಟಕುವ  ದರ ಹಾಗೂ ಉತ್ತಮ ಸೇವೆ ಘೋಷವಾಕ್ಯದಡಿ ಕಾರ್ಯಾರಂಭ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next