Advertisement

ಎಚ್‌ಡಿಕೆ ಗುರಿ ಏನು; ಎಲ್ಲಿ ನಾಟುತ್ತೆ ಬಾಣ?

12:51 AM Feb 08, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಆಧಿಕಾರಕ್ಕೆ ಬಂದರೆ ಬ್ರಾಹ್ಮಣ ಮುಖ್ಯಮಂತ್ರಿ ಮಾಡಲು ಸಂಘ ಪರಿವಾರ ತೀರ್ಮಾನಿಸಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿದ ಒಂದು ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ ಯಲ್ಲದೆ, ಇದರ ಹಿಂದಿರುವ “ರಾಜಕೀಯ’ದ ಲೆಕ್ಕಾಚಾರಗಳು ಪ್ರಾರಂಭವಾಗಿವೆ.

Advertisement

ಎಚ್‌.ಡಿ.ಕುಮಾರಸ್ವಾಮಿ ಅವರು “ಬ್ರಾಹ್ಮಣ ಸಮುದಾಯದ ಮುಖ್ಯಮಂತ್ರಿ’ ಅದರಲ್ಲೂ ಪ್ರಹ್ಲಾದ ಜೋಷಿ ಅವರ ಬಗ್ಗೆ ಪ್ರಸ್ತಾವಿಸಿ ಪದೇಪದೆ ಪುನರುಚ್ಚಾರ ಮಾಡುತ್ತಿರುವ “ಟಾರ್ಗೆಟ್‌’ ಬಗ್ಗೆಯೂ ನಾನಾ ವ್ಯಾಖ್ಯಾನಗಳು ಕೇಳಿಬರುತ್ತಿವೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗದು ಎಂಬ ಸಂದೇಶ ರವಾನಿಸಿ ಆ ಮೂಲಕ ರಾಜಕೀಯ ಲಾಭದ ಉದ್ದೇಶ ಇದರ ಹಿಂದಿರ ಬಹುದಾದರೂ ಎಚ್‌.ಡಿ.ಕುಮಾರ ಸ್ವಾಮಿ “ಗುರಿ’ ಇನ್ನೇನೋ ಇದೆ ಎಂದು ರಾಜಕೀಯ ವಲಯದಲ್ಲಿ ಆಂತರಿಕ ವಾಗಿ ಚರ್ಚೆ ನಡೆಯುತ್ತಿದೆ.

ಪ್ರಹ್ಲಾದ ಜೋಷಿ ಅವರನ್ನು ಮುಖ್ಯಮಂತ್ರಿ ಮಾಡಲು ಸಂಘ ಪರಿವಾರ ನಿರ್ಧಾರ ಮಾಡಿದ್ದಾರೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಅವರ ಈ ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದ್ದು, ಚುನಾವಣೆ ಹೊಸ್ತಿಲಲ್ಲಿ ಇದು “ಎಫೆಕ್ಟ್’ ನೀಡಬಹುದು ಸಣ್ಣ ಆತಂಕ ಆರಂಭವಾಗಿದೆ. ಒಕ್ಕಲಿಗ ಹಾಗೂ ಲಿಂಗಾಯತ ಮತ ಬಿಜೆಪಿಗೆ ತಪ್ಪಿಸಲು ಕಾರ್ಯತಂತ್ರ ಇರ ಬಹುದು ಎಂಬ ಕಾರಣಕ್ಕೆ ಬಿಜೆಪಿ ನಾಯಕರು ಕುಮಾರಸ್ವಾಮಿ ಮೇಲೆ ಮುಗಿಬಿದ್ದಿದ್ದಾರೆ. ಈ ಹೇಳಿಕೆಯ ಶಾಖ ಕುಮಾರ ಸ್ವಾಮಿಗೂ ತಟ್ಟಿದೆ.

ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗಿದೆ. ಪಂಚರ್‌ ಮಾಡಿ ಕೂರಿಸಲಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಬ್ರಾಹ್ಮಣ ರನ್ನು ಮುಖ್ಯಮಂತ್ರಿಯಾಗಿ ಮಾಡಲಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಯಿಂದಾಗುವ ಡ್ಯಾಮೇಜ್‌ ರಾಜ ಕೀಯ ಸೂಕ್ಷ್ಮತೆ ಬಲ್ಲವರಿಗೆ ಗೊತ್ತಿಲ್ಲದೇನೂ ಅಲ್ಲ. ಇದೀಗ ಬ್ರಾಹ್ಮಣ ಸಿಎಂ ಪ್ರಸ್ತಾವ ಇಲ್ಲ ಎಂದು ಹೇಳಲು ಆಗದು, ಹೌದು ಎನ್ನಲೂ ಆಗದು ಎಂಬ ಸ್ಥಿತಿ ಬಿಜೆಪಿಯದಾಗಿದೆ.

Advertisement

ಈ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಥವಾ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೆಚ್ಚು ಮಾತನಾಡಿಲ್ಲ. ಆರ್‌.ಅಶೋಕ್‌ ಹಾಗೂ ಡಾ| ಅಶ್ವತ್ಥನಾರಾಯಣ ತಮ್ಮ ತಮ್ಮ ಕ್ಷೇತ್ರಗಳ ಮತಬ್ಯಾಂಕ್‌ ಕಾರಣಕ್ಕಾಗಿ ಮಾತನಾಡುತ್ತಿದ್ದು ಇದು ನಿರೀಕ್ಷಿತ. ವಿಷಯ ಈಗಾಗಲೇ ದಿಲ್ಲಿ ವರಿಷ್ಠರಿಗೂ ತಲುಪಿದೆ. ಮುಂದೇನು ಎಂಬ ಕುತೂಹಲವೂ ಇದೆ.

ಈ ವಿಚಾರದಲ್ಲಿ ಒಂದೆಡೆ ಸ್ವಾಮೀಜಿಗಳು ಬಿಜೆಪಿಯನ್ನು ಬೆಂಬಲಿಸಿ ಮಾತನಾಡಿದ್ದು, ಇನ್ನೊಂದು ರೀತಿಯಲ್ಲಿ ಬಿಜೆಪಿಗೆ ತನ್ನ ಹಿಂದುತ್ವ ಅಸ್ತ್ರವನ್ನು ಮತ್ತಷ್ಟು ಝಳಪಿಸಲು ಈ ಹೇಳಿಕೆ ಸಹಾಯಕವಾಗಬಹುದು ಎಂಬ ವ್ಯಾಖ್ಯಾನವೂ ಇದೆ. ಹಿಂದೂ ಸಮುದಾಯ ಎಂದು ತಾವು ಸಮಗ್ರವಾಗಿ ನೋಡುವಾಗ ಅಲ್ಲಿ ಜಾತಿ ಪ್ರಶ್ನೆ ಬರುವುದಿಲ್ಲ ಎಂದು ಬಿಜೆಪಿ ತನ್ನ ವಾದ ಮಂಡಿಸಲಿದೆ. ಇದನ್ನೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ. ಹೇಳಿದ್ದು.

ಇವೆಲ್ಲದರ ನಡುವೆ, ಈ ಹೇಳಿಕೆಯನ್ನು ಕುಮಾರಸ್ವಾಮಿ ಸಮರ್ಥಿಸಿಕೊಳ್ಳುತ್ತಿದ್ದಾರೆಯೇ ಹೊರತು ಯಾವುದೇ ಪಕ್ಷದ ಯಾವುದೇ ನಾಯಕರು ಬೆಂಬಲಿಸದೆ ಇರುವುದನ್ನು ನೋಡಿದರೆ, ಇದರ ಸೂಕ್ಷ್ಮತೆ ಅರ್ಥವಾಗುತ್ತದೆ. ಈ ಹೇಳಿಕೆಗೆ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಕುಮಾರಸ್ವಾಮಿ ಅವರು ತಮ್ಮ ವಿರೋಧ ಬ್ರಾಹ್ಮಣ ಸಮುದಾಯದ ವಿರುದ್ಧ ಅಲ್ಲ; ಪ್ರಹ್ಲಾದ್‌ ಜೋಷಿ ವಿರುದ್ಧ ಮಾತ್ರ ಎಂದು ಸೀಮಿತಗೊಳಿಸಿರುವುದು ಇದರ ಬಿಸಿ ಜೆಡಿಎಸ್‌ಗೂ ತಟ್ಟಿದೆ ಎನ್ನುವುದನ್ನು ಖಚಿತಪಡಿಸುತ್ತದೆ.

ಜೋಷಿ ಮೌನ
ಕಳೆದ ಮೂರು ದಿನಗಳಿಂದಲೂ “ಪ್ರಹ್ಲಾದ್‌ ಜೋಷಿ ಸಿಎಂ’ ಮತ್ತು “ಬ್ರಾಹ್ಮಣ’ ಕುರಿತ ಚರ್ಚೆ ನಡೆಯುತ್ತಿದ್ದರೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಮಾತ್ರ ತುಟಿ ಎರಡು ಮಾಡಿಲ್ಲ. ದಿಲ್ಲಿಯಲ್ಲಿದ್ದು ಕೊಂಡು ಲೋಕಸಭೆ ಕಲಾ ಪದ ಮೇಲೆ ಗಮನ ಹರಿಸಿರುವ ಜೋಷಿಯವರು, ಈ ಬಗ್ಗೆ ಗೊತ್ತಿದ್ದೂ, ಗೊತ್ತಿಲ್ಲದವರಂತೆ ಮೌನವಾಗಿದ್ದಾರೆ. ಅವರ ಮೌನ ಯಾವ ಅರ್ಥ ಕೊಡಲಿದೆ ಎಂಬ ಕುತೂಹಲವೂ ಹಲವರ ಲ್ಲಿದೆ.

ಜೆಡಿಎಸ್‌ಗೆ ಲಾಭವೇ?
ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಮುಖ್ಯಮಂತ್ರಿಯಾಗಲಿದ್ದು ಪ್ರಹ್ಲಾದ್‌ ಜೋಷಿ ಅವರನ್ನೇ ಮುಖ್ಯಮಂತ್ರಿ ಮಾಡಲು ಸಂಘ ಪರಿವಾರ ತೀರ್ಮಾನಿಸಿದೆ ಎಂಬ ಹೇಳಿಕೆಯಿಂದ ಜೆಡಿಎಸ್‌ಗೆ ಯಾವ ರೀತಿಯಲ್ಲಿ ರಾಜಕೀಯ ಲಾಭವಾಗಲಿದೆ ಎಂಬುದರ ಬಗ್ಗೆಯೂ ಚರ್ಚೆಯಾಗುತ್ತಿದೆ. ಈ ಬಾರಿಯೂ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದು ಅನುಮಾನ ಎಂಬ ವ್ಯಾಖ್ಯಾನಗಳ ನಡುವೆಯೇ ಏನೇ ಆಗಲಿ ಮತ್ತೂಮ್ಮೆ ಮುಖ್ಯಮಂತ್ರಿ ಆಗಬೇಕು ಎಂದು ಹಠ ತೊಟ್ಟಿರುವ ಎಚ್‌.ಡಿ.ಕುಮಾರಸ್ವಾಮಿ “ಗುರಿ’ ಏನು ಅಥವಾ ಅವರ “ಬಾಣ’ ಎಲ್ಲಿ ನಾಟುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ ಮೌನದ ನಡೆ
ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೆ ಬಂದರೆ ಲಿಂಗಾಯತ ಅಥವಾ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಅವಕಾಶ ಕಡಿಮೆ ಎಂಬ ಸಂದೇಶ ರವಾನೆಯಾದರೆ ತಾನು ಹೇಗೆ ಅದರ ಲಾಭ ಪಡೆದುಕೊಳ್ಳಬಹುದು ಎಂದು ಕಾಂಗ್ರೆಸ್‌ ಲೆಕ್ಕಿಸುತ್ತಿದೆ. ಬಿಜೆಪಿ ತಮ್ಮ ಪಕ್ಷ ಎಂದು ನಂಬಿಕೊಂಡಿದ್ದ ಲಿಂಗಾಯತರು ಒಂದು ವೇಳೆ ಇದರಿಂದ ಭ್ರಮನಿರಸನರಾಗಿ ತಮ್ಮತ್ತ ಮುಖ ಮಾಡಬಹುದು ಎನ್ನುವ ಲೆಕ್ಕಾಚಾರವೂ ಕಾಂಗ್ರೆಸ್‌ನದು. ಹೀಗಾಗಿಯೇ ಮೌನವಾಗಿದ್ದು ಕೊಂಡು ಬಿಜೆಪಿ-ಜೆಡಿಎಸ್‌ನ ಕಾಳಗವನ್ನು ನೋಡುತ್ತಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next