Advertisement

ನೂತನ ಸರಕಾರಕ್ಕೆ ಪ್ರಾದೇಶಿಕ ಪಕ್ಷಗಳು ಅನಿವಾರ್ಯ

02:13 AM May 16, 2019 | Team Udayavani |

ಉಡುಪಿ/ಕಾಪು: ಕಾಂಗ್ರೆಸ್‌ನ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷರ ನಡುವಿನ ವಾಕ್ಸಮರ ಗಂಭೀರವಾದುದಲ್ಲ ಎಂದು ಹೇಳಿರುವ ಜೆಡಿಎಸ್‌ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಚುನಾವಣೆ ಬಳಿಕ ಬಿಜೆಪಿಯೊಂದಿಗಿನ ಸಖ್ಯ ಸಾಧ್ಯತೆಯನ್ನೂ ತಳ್ಳಿ ಹಾಕಿದ್ದಾರೆ.ಸತತ 58 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ಹಿರಿಯ ರಾಜಕಾರಣಿ ಎಚ್‌.ಡಿ. ದೇವೇಗೌಡರು ಮೇ 18 ರಂದು 87ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ ಅವರನ್ನು ಸಂದರ್ಶಿಸಿತು. ಸಂದರ್ಶನದ ವಿವರ ಇಲ್ಲಿದೆ.

Advertisement

ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಾಜ್ಯಾಧ್ಯಕ್ಷರ ನಡುವೆ ನಡೆದ ವಾಕ್ಸಮರ ಬಗ್ಗೆ ಏನಂತೀರಿ?
ಅವರು ಯಾವ ಕಾಂಟೆಸ್ಟ್‌ನಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಇದೆಲ್ಲ ಗಂಭೀರ ವಿಷಯವಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ದಿನದಿಂದ ಎಲೆಕ್ಟ್ರಾನಿಕ್‌ ಮಾಧ್ಯಮ ಮೈತ್ರಿ ಸರಕಾರದ ಬಗ್ಗೆ ಒಂದು ದಿನವೂ ಸಹಕಾರ ಕೊಡಲಿಲ್ಲ. ಮೈತ್ರಿ ಸರಕಾರ ಸಿದ್ದರಾಮಯ್ಯ ಸರಕಾರದ ಎಲ್ಲ ಯೋಜನೆಗಳನ್ನೂ ಮುಂದುವರಿಸಿ ರೈತರಿಗೆ 2 ಲ.ರೂ. ವರೆಗೆ ಸಾಲ ಮನ್ನಾ ಮಾಡಿದೆ. ಯಾವ ಸರಕಾರವೂ ಇಂತಹ ಕೆಲಸ ಮಾಡಲಿಲ್ಲ, ಇದಕ್ಕೆ ಒಂದಾದರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರಾ?

ಸಿದ್ದರಾಮಯ್ಯ ಮತ್ತು ಕುಮಾರ ಸ್ವಾಮಿಯವರು ಒಂದೇ ಲಾಡ್ಜ್ನಲ್ಲಿದ್ದರೂ ಮುಖದರ್ಶನ ಮಾಡಲಿಲ್ಲವಂತೆ?
ಇದೂ ಗಂಭೀರವಾದುದಲ್ಲ. ಉಪಚುನಾವಣೆಯಲ್ಲಿ ಒಂದೇ ವೇದಿಕೆಯಲ್ಲಿ ಇಬ್ಬರೂ ಇದ್ದರಲ್ಲ. ಒಟ್ಟಿಗೆ ಲಾಡ್ಜ್ಗೆ ಹೋಗಿದ್ದರು. ರೂಮ್‌ಗೆ ಹೋದ ಅನಂತರ ಮಾತನಾಡಲಿಲ್ಲವೆಂದು ಹೋಗಿ ಇವರೇನು ನೋಡಿದ್ದಾರಾ?

ಕುಮಾರಸ್ವಾಮಿಯವರು ಖರ್ಗೆಯವರು ಸಿಎಂ ಅಭ್ಯರ್ಥಿ ಅಂದಿದ್ದಾರಲ್ಲ?
ಸರಕಾರ ರಚನೆಯಾಗುವಾಗ ಕುಮಾರಸ್ವಾಮಿ, ಮುನಿಯಪ್ಪ, ಖರ್ಗೆ, ಪರಮೇಶ್ವರ್‌ ಎಲ್ಲ ಒಟ್ಟಿಗೆ ಇರುವಾಗ ಖರ್ಗೆಯವರು 2004 ರಲ್ಲೇ ಮುಖ್ಯಮಂತ್ರಿಯಾಗಬೇಕಿತ್ತು ಎಂದು ನಾನೇ ಹೇಳಿದ್ದೆ. ಆಗ ಖರ್ಗೆಯವರು ಹೈಕಮಾಂಡ್‌ ಹೇಳಿದಂತೆ ನಡೆಯುವೆ ಎಂದರು. ಗುಲಾಂ ನಬಿ ಆಜಾದ್‌ ಅವರು ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯವರಾಗಬೇಕೆಂದು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹೇಳಿದ್ದಾರೆ ಎಂದು ಹೇಳಿದ ಮೇಲೆ ಅದರಂತೆ ಸರಕಾರ ರಚನೆಯಾಯಿತು.

ಚುನಾವಣೆ ಬಳಿಕ ಬಿಜೆಪಿ ಜತೆ ಸಖ್ಯ ಸಾಧಿಸುವ ಸಾಧ್ಯತೆ ಇದೆಯೆ?
ಎಂದಾದರೂ ಉಂಟೆ? ನನ್ನ ಮಗನೇ ಮುಖ್ಯಮಂತ್ರಿಯಾಗಿರುವಾಗ ಅದೆಲ್ಲ ರಾಜಧರ್ಮವಲ್ಲ. ಅಂತಹ ಯಾವುದೇ ಆಲೋಚನೆ ಇಲ್ಲ.

Advertisement

ರಾಷ್ಟ್ರ ಮಟ್ಟದ ತೃತೀಯ ರಂಗ, ಚತುರ್ಥ ರಂಗ ವಿಷಯ ರೂಪುಗೊಳ್ಳುವುದರಲ್ಲೇ ಸಮಸ್ಯೆ ಎದುರಿಸುತ್ತಿವೆಯಲ್ಲ?
ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ರಾಜಕೀಯ, ಹೊಂದಾಣಿಕೆ ಇದೆ. ನಾವಿಲ್ಲಿ$ಕುಳಿತುಕೊಂಡು ತುಲನೆ ಮಾಡುವುದು ಕಷ್ಟ. ಒಟ್ಟಾರೆ ಹೇಳುವುದಾದರೆ ಪ್ರಾದೇಶಿಕ ಪಕ್ಷಗಳಿಲ್ಲದೆ ಯಾವ ರಾಷ್ಟ್ರೀಯ ಪಕ್ಷಕ್ಕೂ ಸ್ವತಂತ್ರವಾಗಿ ಸರಕಾರ ರಚಿಸುವುದು ಸಾಧ್ಯವಿಲ್ಲ ಎನ್ನುವುದು ಸತ್ಯ. ಬಿಜೆಪಿಯವರು ತಮಿಳುನಾಡಿನ ಎಐಡಿಎಂಕೆ ಜತೆ, ಬಿಹಾರದ ನಿತೀಶ್‌ ಕುಮಾರ್‌ ಜತೆ ಏಕೆ ಮಾತುಕತೆ ನಡೆಸಿದರು? ಮುನಿಸಿಕೊಂಡಿದ್ದ ಶಿವಸೇನೆ ಜತೆ ಏಕೆ ಹೊಂದಾಣಿಕೆ ಮಾಡಿಕೊಂಡರು? ಇದರರ್ಥ ಬಿಜೆಪಿಗೂ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ ಎಂದಂತಾಯಿತಲ್ಲ.

ಉತ್ತರ ಭಾರತದಲ್ಲಿ ರಾಜಕೀಯ ಹೊಂದಾಣಿಕೆ ಮಾಡಲು ಡ್ಯಾನಿಶ್‌ ಆಲಿಯನ್ನು ಬಿಎಸ್‌ಪಿಗೆ ಕಳುಹಿಸಿದಿರಾ?
ಡ್ಯಾನಿಶ್‌ ಆಲಿ 25 ವರ್ಷ ಕಾಲದಿಂದ ನನ್ನೊಟ್ಟಿಗಿದ್ದ. ಆತನಿಗೆ ಸಂಸದನಾಗಬೇಕೆಂಬ ಆಸೆ ಇತ್ತು. ಮೈತ್ರಿ ಸರಕಾರದಲ್ಲಿ ಬಿಎಸ್‌ಪಿಯ ಮಂತ್ರಿಯೊಬ್ಬರು ಇದ್ದ ಕಾರಣ ಮಾಯಾವತಿ ಜತೆ ಮಾತನಾಡಿದೆ. ಅವರು ತಮ್ಮ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸುವುದಾದರೆ ಅವಕಾಶ ಕೊಡುತ್ತೇನೆಂಬ ಷರತ್ತು ಹಾಕಿದರು. ಆತನ ಭವಿಷ್ಯಕ್ಕಾಗಿ ಹೋಗಪ್ಪ ಎಂದೆ. ನನಗೆ ರಾಷ್ಟ್ರ ಮಟ್ಟದ ರಾಜಕೀಯ ಅಪೇಕ್ಷೆ ಇಲ್ಲ. ಕರ್ನಾಟಕದಲ್ಲಿ ಮೈತ್ರಿ ಸರಕಾರ ಮಾಡುವುದು ಅನಿವಾರ್ಯವಾಯಿತಷ್ಟೆ. ನಮಗೆ ಇರುವುದು ಕೇವಲ ಏಳು ಸ್ಥಾನ. ನಾನು ಅಂತಹ ಯಾವ ಆಲೋಚನೆಯನ್ನೂ ಇಟ್ಟುಕೊಂಡಿಲ್ಲ.

ನೀವು ಪ್ರಧಾನಿ ಮೋದಿಯರೊಂದಿಗೆ ವೈಯಕ್ತಿಕ ಸಂಪರ್ಕ ಇಟ್ಟುಕೊಂಡಿದ್ದೀರಾ?
ಮೂರ್‍ನಾಲ್ಕು ಬಾರಿ ಭೇಟಿಯಾದಾಗ ಮಾತನಾಡಿದ್ದೆ. ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇನೆ ಎಂದಿದ್ದೀರಿ. ಆಯಿತೇ?, ಕಾಂಗ್ರೆಸ್‌ ಮುಕ್ತ ಭಾರತ ಮಾಡುತ್ತೇನೆ ಎಂದಿದ್ದೀರಿ, ಸಾಧ್ಯವೆ ಎಂದು ಕೇಳಿದ್ದೆ. ಉತ್ತರ ಕೊಡಲಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಆಲ್ಬಂ ಮಾಡಿ ಕೊಟ್ಟಿದ್ದೆ. ಪ್ರತಿಕ್ರಿಯೆ ಇಲ್ಲ. ಕಾವೇರಿ ವಿಷಯ ಬಂದಾಗ ಧರಣಿ ಕುಳಿತುಕೊಳ್ಳುವುದಾಗಿ ಹೇಳಿದಾಗ ಪ್ರಧಾನಿ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿಯವರಿಂದ ದೂರವಾಣಿ ಕರೆ ಬಂದಿತ್ತು. ಅನಂತರ ಅನಂತಕುಮಾರ್‌ ಅವರನ್ನು ಕಳುಹಿಸಿದ್ದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಮೋದ್‌ ಮಧ್ವರಾಜರಿಗೆ ಹೆಚ್ಚುವರಿ ಹೊಣೆಗಾರಿಕೆ ಕೊಡುವುದಿದೆಯೆ?
ಚುನಾವಣೆ ವೇಳೆ ಜಯಪ್ರಕಾಶ್‌ ಹೆಗ್ಡೆಯವರು  ಅಭ್ಯರ್ಥಿಯಾಗ ಬಹುದೆಂದುಕೊಂಡಿದ್ದೆ. ಆಗಲಿಲ್ಲ. ಪ್ರಮೋದ್‌ ಮಧ್ವರಾಜ್‌ ಅವರು ಸ್ಪರ್ಧಿಸುತ್ತೇನೆಂದರು. ಅವರು ಗೆದ್ದರೆ ಸಂಸತ್‌ ಪ್ರವೇಶ ಮಾಡುತ್ತಾರೆ. ಇಲ್ಲವಾದರೆ ಜಿಲ್ಲೆ ಅಥವಾ ರಾಜ್ಯ ಮಟ್ಟದಲ್ಲಿ ಅವರು ಅಪೇಕ್ಷೆಪಟ್ಟಂತೆ ಪಕ್ಷದ ಜವಾಬ್ದಾರಿಯನ್ನು ನೀಡುತ್ತೇವೆ.

ಕರಾವಳಿ ಸೃಷ್ಟಿಯ ಒಂದು ಹೆಮ್ಮೆ
ಇಲ್ಲಿದ್ದಷ್ಟು ದೇವಸ್ಥಾನಗಳು ಇನ್ನೆಲ್ಲಿಯೂ ಸಿಗದು. ದೊಡ್ಡ ದೊಡ್ಡ ಮಹಾನುಭಾವರು ಜನ್ಮ ಎತ್ತಿದ್ದಾರೆ. ಶಂಕರಾಚಾರ್ಯರು ಕೇರಳದಲ್ಲಿ ಹುಟ್ಟಿ ಶೃಂಗೇರಿಯಲ್ಲಿ ಮೊತ್ತ ಮೊದಲ ಮಠವನ್ನು ಸ್ಥಾಪಿಸಿದರು ಮಧ್ವಾಚಾರ್ಯರು ದ್ವಾರಕೆಯಿಂದ ಬಂದ ಶ್ರೀಕೃಷ್ಣನನ್ನು ಪ್ರತಿಷ್ಠಾಪಿ ಸಿದರು. ಸೂಕ್ಷ್ಮವಾಗಿ ಗಮನಿಸಿದರೆ ಅಂತಹ ಭೇದವಿಲ್ಲದೆ ಸಾಮರಸ್ಯದಿಂದ ಬಾಳುತ್ತಿದ್ದಾರೆ.

ಆದರೆ ಬಿಜೆಪಿಯವರು (ಹಿಂದಿನ ಜನಸಂಘವಲ್ಲ) ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದಾರೆ.ಪೇಜಾವರ ಸ್ವಾಮಿಗಳು ಹಿಂದೆ ದಲಿತರ ಕೇರಿಗೆ ಪಾದಯಾತ್ರೆ ನಡೆಸಿದರೆ ಇತ್ತೀಚೆಗೆ ಮುಸ್ಲಿಮರಿಗೆ ಸೌಹಾರ್ದಕೂಟ ನಡೆಸಿದರು. ಜಲಂಚಾರು ದೇವಸ್ಥಾನದಲ್ಲಿ ಮುಸ್ಲಿಮರು ಸಹಕಾರ ಕೊಟ್ಟದ್ದನ್ನು ಕೇಳಿ ಸಂತೋಷಗೊಂಡೆ. ಅನೇಕ ಧರ್ಮಪೀಠಗಳು ಸಾಮರಸ್ಯ ಉಳಿಸುವ ಕೆಲಸ ಮಾಡುತ್ತಿವೆ. ಕರಾವಳಿ ಪ್ರದೇಶ ಸೃಷ್ಟಿಯ ಒಂದು ಹೆಮ್ಮೆ, ಸೃಷ್ಟಿಯ ವಿಶೇಷವಿದೆ ಇಂತಹ ವಾತಾವರಣ ಎಲ್ಲ ಕಡೆ ಇಲ್ಲ.

-ಮಟಪಾಡಿ ಕುಮಾರಸ್ವಾಮಿ/
ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next