Advertisement

1470 ಮತಗಟ್ಟೆಗಳಲ್ಲಿ ಮತದಾರರ ಜಾಗೃತಿ

11:16 AM Mar 13, 2019 | |

ಹಾವೇರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಮತದಾರರ ನೋಂದಣಿ ಹಾಗೂ ಮತದಾನ ಜಾಗೃತಿಗಾಗಿ ಜಿಲ್ಲೆಯ 1470 ಮತಗಟ್ಟೆಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲೀಲಾವತಿ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಶಾಲಾ-ಕಾಲೇಜು ಶಿಕ್ಷಕರು ಒಳಗೊಂಡಂತೆ ವಿವಿಧ ಸಂಘ-ಸಂಸ್ಥೆಗಳು ಸಕ್ರೀಯವಾಗಿ ಭಾಗವಹಿಸಿ ಜಾಗೃತಿ ಮೂಡಿಸುತ್ತಿದ್ದಾರೆ. 18 ವರ್ಷ ತುಂಬಿದ ಎಲ್ಲರೂ ಮತದಾರರಾಗಿ ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲೆಯ 1470 ಮತಗಟ್ಟೆಯಲ್ಲಿ ಮತಗಟ್ಟೆಯ ಅಧಿಕಾರಿಯ ನೇತೃತ್ವದಲ್ಲಿ ಜಾಗೃತಿ ಗುಂಪುಗಳನ್ನು ರಚಿಸಲಾಗಿದೆ. ಶಾಲಾ-ಕಾಲೇಜುಗಳ ಹಂತದಲ್ಲಿ 510 ಮತದಾರರ ಸಾಕ್ಷರತಾ ಸಂಘಗಳನ್ನು ರಚಿಸಲಾಗಿದೆ. ಈ ಸಂಘಗಳ ಮೂಲಕ ಯುವ ಮತದಾರರ ನೋಂದಣಿ ಹಾಗೂ ಮತದಾನದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಯುವ ಮತದಾರರಿಗೆ ನೋಂದಣಿ ಹಾಗೂ ಮತದಾನದ ಅರಿವು ಮೂಡಿಸಲು 153 ಕಾಲೇಜುಗಳಲ್ಲಿ ಕ್ಯಾಂಪಸ್‌ ರಾಯಭಾರಿಗಳನ್ನು  ನೇಮಕ ಮಾಡಲಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಸರ್ಕಾರೇತರ ಕಚೇರಿಗಳಲ್ಲಿ ಇಲಾಖೆ ಮುಖ್ಯಸ್ಥರ ನೇತೃತ್ವದಲ್ಲಿ ಚುನಾವಣಾ ಜಾಗೃತ ಸಮಿತಿ ರಚಿಸಿ ಮತದಾನದ ಮಹತ್ವ, ನೋಂದಾವಣಿಯಾಗದವರು  ಮತದಾರರಾಗಿ ನೋಂದಾಯಿಸಿಕೊಳ್ಳುವುದು, ಮತದಾನ ಮಾಡುವ ಕುರಿತಂತೆ ಸಿಬ್ಬಂದಿಗಳಿಗೆ ಹಾಗೂ ಕಚೇರಿಗೆ ಬರುವ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ.

ಎಲ್ಲ ಸಮುದಾಯದ ಹಿರಿಯ ನಾಗರಿಕರು, ವಿಕಲಚೇತನರಿಗೆ, ಮಹಿಳೆಯರಿಗೆ ಮತ ದಾನದ
ಅರಿವು ಹಾಗೂ ಜಾಗೃತಿ ಮೂಡಿಸಲು ಚುನಾವಣಾ ಜಾಗೃತಿ ಸಮಿತಿ ರಚಿಸಲಾಗಿದೆ. ಜಿಲ್ಲೆಯಲ್ಲಿ 17,239 ವಿಶೇಷ ಚೇತನ ಮತದಾರರಿದ್ದು, ಮತದಾನದಲ್ಲಿ ಪಾಲ್ಗೊಳ್ಳಲು ಸೂಕ್ತ ಸಾರಿಗೆ ವ್ಯವಸ್ಥೆ, ಸುಗಮ ಮತದಾನದಕ್ಕಾಗಿ ಮೂಲ ಸೌಕರ್ಯ ಒದಗಿಸುವ ಕೆಲಸವನ್ನು ಕೈಗೊಳ್ಳಲಾಗಿದೆ. ಮಹಿಳೆಯರಿಗಾಗಿ 12 ಸಖೀ ಮತಗಟ್ಟೆ, ವಿಕಲಚೇತನರಿಗಾಗಿ ವಿಶೇಷ ಮತಗಟ್ಟೆ ಹಾಗೂ ಮಾದರಿ ಮತಗಟ್ಟೆಗಳನ್ನು ವಿಶೇಷ ವಿನ್ಯಾಸಗೊಳಿಸಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

Advertisement

ಕಳೆದ ಡಿಸೆಂಬರ್‌ನಿಂದ ಮತದಾರ ದಿನಾಚರಣೆ ಅಂಗವಾಗಿ ಮತದಾನದ ಮಹತ್ವ ಕುರಿತು ಶಾಲಾ-ಕಾಲೇಜು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಅಂತಾರಾಷ್ಟ್ರೀಯ ಮತದಾರರ ದಿನಾಚರಣೆ ಆಚರಣೆ ಮೂಲಕ ಯುವ ಮತದಾರರಿಗೆ ಜಾಗೃತಿ ಮೂಡಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತದಾರರ ಜಾಗೃತಿ ಕುರಿತಂತೆ ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮತದಾರರಲ್ಲಿ ಇವಿಎಂ, ವಿವಿಪ್ಯಾಟ್‌ ಬಗೆಗೆ ವಿಶ್ವಾರ್ಹತೆ ಮೂಡಿಸಲು ಸ್ವಅನುಭವದ ಮೂಲಕ ಜಾಗೃತಿ ಮೂಡಿಸಲು ಜಿಲ್ಲೆಯ  ಎಲ್ಲ ಗ್ರಾಮಗಳಲ್ಲಿ ಸೆಕ್ಟರ್‌ ಅ ಧಿಕಾರಿಗಳ ಮೂಲಕ ಮತಗಟ್ಟೆಗಳಲ್ಲಿ ಅಣುಕು ಮತದಾನದ ಮೂಲಕ ಪ್ರಾತ್ಯಕ್ಷಿಕೆ ನಡೆಸಲಾಗಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಪಾಲಕರು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವ ಕುರಿತಂತೆ ಅವರ ಮಕ್ಕಳ ಮೂಲಕ ಪಾಲಕರಿಗೆ ಪತ್ರ ಬರೆಸಲು ಪ್ರತಿಜ್ಞಾವಿಧಿ, ಪತ್ರ ಸಂಕಲ್ಪ ಕಾರ್ಯಕ್ರಮ ಶಾಲಾ-ಕಾಲೇಜು ವಿದ್ಯಾರ್ಥಿ ನಿಲಯಗಳ ನಿವಾಸಿ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ ಎಂದು ತಿಳಿಸಿದರು.

ವಿವಿಧ ಇಲಾಖೆಗಳ ಸಹಕಾರದೊಂದಿಗೆ ಲೋಕಸಭಾ ಚುನಾವಣೆ ಮತದಾನ ನಡೆಯುವವರೆಗೆ ವಿಶೇಷ ಮತದಾರರ ಜಾಗೃತಿ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಿದೆ. ಈಗಾಗಲೇ ಫೆಬ್ರುವರಿ 23,24 ಹಾಗೂ ಮಾರ್ಚ್‌ 2 ಮತ್ತು 3 ರಂದು ಮಿಂಚಿನ ನೋಂದಣಿ ಮೂಲಕ ಹೊಸದಾಗಿ ಮತದಾರರ ಸೇರ್ಪಡೆಗೆ ಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದರು.

ಕಳೆದ ಡಿಸೆಂಬರನಿಂದ ಜಿಲ್ಲಾ ಕಾರಾಗೃಹ, ಎನ್‌ಎಸ್‌ಎಸ್‌ ಶಿಬಿರ, ಬೃಹತ್‌ ಆರೋಗ್ಯ ಮೇಳ ಇತರ ಕಾರ್ಯಕ್ರಮಗಳಲ್ಲಿ ಮತದಾನ ಜಾಗೃತಿ ಹಾಗೂ ಇವಿಎಂ ಹಾಗೂ ವಿವಿಪ್ಯಾಟ್‌ ಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿ ಕಾರಿ ಕೃಷ್ಣ ಭಾಜಪೇಯಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next