Advertisement

ಕೆರೆ ಹೂಳೆತ್ತಲು ಹೆಚ್ಚಿನ ಅನುದಾನ ಅಗತ್ಯ

03:19 PM Jun 13, 2019 | Team Udayavani |

ಹಾವೇರಿ: ಜಿಲ್ಲಾ ಪಂಚಾಯತಿಯಡಿ ಬರುವ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಹೆಚ್ಚಿನ ಅನುದಾನ ಅಗತ್ಯವಿದೆ. ಹೂಳೆತ್ತುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಜೆಸಿಬಿ ಯಂತ್ರಗಳನ್ನು ಬಳಸುವುದು ಅವಶ್ಯವಿದೆ. ಹೀಗಾಗಿ ವಿಶೇಷ ಅನುದಾನ ಹಾಗೂ ಜೆಸಿಬಿ ಬಳಕೆಗೆ ವಿಶೇಷ ಅನುಮತಿ ಕೋರಿ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ ಹೇಳಿದರು.

Advertisement

ಜಿಪಂ ಸಭಾಂಗಣದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತರಾಜ್‌ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಸ್ವಚ್ಛ ಮೇವ ಜಯತೆ’ ಮತ್ತು ‘ಜಲಾಮೃತ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಲಾಮೃತ ರಕ್ಷಣೆಗೆ ಜಿಲ್ಲೆಯಲ್ಲಿ ಕೆರೆ ಸಂಜೀವಿನಿಯಡಿ ಕೆರೆ ಹೂಳೆತ್ತುವುದು, ಜಲಮರುಪೂರಣ ಚಟುವಟಿಕೆಗೆ ಹೆಚ್ಚಿನ ಅನುದಾನ ಒದಗಿಸಲು ಮುಖ್ಯಮಂತ್ರಿಯವರನ್ನು ಸ್ವತಃ ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಪ್ರತಿ ಗ್ರಾಮಗಳಲ್ಲೂ ಚೆಕ್‌ ಡ್ಯಾಂ ಗಳ ನಿರ್ಮಾಣ, ಕೆರೆಗಳ ಹೂಳೆತ್ತುವ ಕಾರ್ಯಕ್ರಮಗಳು ಆಂದೋಲನದ ರೀತಿಯಲ್ಲಿ ನಡೆಯಬೇಕಾಗಿದೆ. ಜಲ ರಕ್ಷಣೆಹಾಗೂ ಜಲಮೂಲಗಳ ಪುನಶ್ಚೇತನಕ್ಕೆ ನಿರುತ್ಸಾಹತೋರುವ ಅಧಿಕಾರಿಗಳಿಗೆ ಚಾಟಿ ಬೀಸಬೇಕು. ಉತ್ಸಾಹ ತೋರುವ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಪ್ರತಿ ಗ್ರಾಮ ಗ್ರಾಮಗಳಲ್ಲೂ ಸ್ವಚ್ಛತೆ, ವೈಜ್ಞಾನಿಕ ಕಸ ವಿಲೇವಾರಿ ವ್ಯವಸ್ಥೆಯ ಜೊತೆಗೆ ನೀರು ಪೋಲಾಗುವುದನ್ನು ತಡೆದು ಜಲ ಮೂಲಗಳ ರಕ್ಷಣೆಗೆ ಜಾಗೃತಿ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲೇ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಗಳಲ್ಲಿ ಪೊರಕೆ ಹಿಡಿದು ಬೀದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಹಳ್ಳಿಯ ಜನರಿಗೆ ಸ್ವಚ್ಛತೆ ಅರಿವು ಮೂಡಿಸಿ ಸ್ಫೂರ್ತಿ ತುಂಬಬೇಕು ಎಂದರು.

Advertisement

ಗ್ರಾಮದ ಸ್ವಚ್ಛತೆ ಜತೆಗೆ ಅಮೃತಕ್ಕೆ ಸಮಾನವಾದ ನೀರಿನ ಮಿತ ಬಳಕೆ, ಜಲಮೂಲಗಳ ರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೀರು ಸರಬರಾಜು ವ್ಯವಸ್ಥೆಯಲ್ಲಿ ಯಥೇಚ್ಚವಾಗಿ ನೀರು ಪೋಲಾಗುವುದನ್ನು ತಡೆಯಬೇಕಾಗಿದೆ. ಈ ಕುರಿತಂತೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸಿ ಕರ್ತವ್ಯದ ಬಗ್ಗೆ ಎಚ್ಚರಿಸಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಸರ್ಕಾರ ಜಲ ರಕ್ಷಣೆ ಹಾಗೂ ಪರಿಸರ ರಕ್ಷಣೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ, ಅನುದಾನ ಸಹ ನೀಡಿದೆ. ಆದರೆ, ಅನುಷ್ಠಾನದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ. ಜಲ ಮೂಲಗಳ ಪುನಶ್ಚೇತನ ಕೆಲಸ ಸಕಾಲಕ್ಕೆ ನಡೆಸಬೇಕಾಗಿದೆ. ಜಲ ಮೂಲಗಳ ಬಗ್ಗೆ ನಿರ್ಲಕ್ಷ ್ಯಮುಂದುವರೆದರೆ ನೀರಿಗಾಗಿ ಯುದ್ಧ ನಡೆದರೂ ಆಶ್ಚರ್ಯವಿಲ್ಲವೆಂದು ಆತಂಕ ವ್ಯಕ್ತಪಡಿಸಿದರು.

ಜಿಪಂ ಸಿಇಒ ಕೆ.ಲೀಲಾವತಿ ಮಾತನಾಡಿ, ಗ್ರಾಮೀಣ ನೈರ್ಮಲ್ಯ ಹಾಗೂ ಜಲ ರಕ್ಷಣೆಗಾಗಿ ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ‘ಸ್ವಚ್ಛ ಮೇವ ಜಯತೆ’ ಹಾಗೂ ‘ಜಲಾಮೃತ’ ಕಾರ್ಯಕ್ರಮದಡಿ ಜಾಗೃತಿ ಆಂದೋಲ ಹಮ್ಮಿಕೊಳ್ಳಲಾಗಿದೆ. ಜಲಸಾಕ್ಷರತೆ, ಜಲಸಂರಕ್ಷಣೆ, ಜಲಪ್ರಜ್ಞೆ ಹಾಗೂ ಹಸರೀಕರಣದ ಮಹತ್ವ ಹಾಗೂ ಗ್ರಾಮದ ಸ್ವಚ್ಛತೆ, ಕಸಮುಕ್ತ ಗ್ರಾಮ, ಶೌಚಾಲಯ ಬಳಕೆ, ಕೈ ತೊಳೆಯುವಅಭ್ಯಾಸ ರೂಢಿಮಾಡಿಕೊಳ್ಳುವುದು ಹಾಗೂ ಪ್ರತಿ ಶೌಚಾಲಯಕ್ಕೆ ಎರಡು ಗುಂಡಿಗಳ ನಿರ್ಮಾಣ ಅವಶ್ಯಕತೆ ಕುರಿತಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ರಮೇಶ ದುಗ್ಗತ್ತಿ, ಜಿಪಂ ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಾರುತಿ ರಾಠೊಡ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ನೀಲವ್ವ ನಾಗಪ್ಪ ಚವ್ಹಾಣ, ತಾಪಂ ಅಧ್ಯಕ್ಷ ಕರಿಯಪ್ಪ ಉಂಡಿ, ಜಿಪಂ ಸದಸ್ಯ ವಿರುಪಾಕ್ಷಪ್ಪ ಕಡ್ಲಿ, ಪಿಕಾರ್ಡ್‌ ಬ್ಯಾಂಕ್‌ ಸದಸ್ಯ ಸುರೇಶ ಯತ್ನಳ್ಳಿ, ಜಿಪಂ ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ಇದ್ದರು. ಸಭೆ ಆರಂಭಕ್ಕೂ ಮುನ್ನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಟ ಗಿರೀಶ ಕಾರ್ನಾಡ್‌ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಿಸಿ ನಮನ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next