Advertisement

ಯೋಗ ಕಲಿತು ಸದೃಢ ದೇಶ ನಿರ್ಮಿಸೋಣ

02:50 PM Jun 22, 2019 | Naveen |

ಹಾವೇರಿ: ಯೋಗದಿಂದ ಮನಸ್ಸಿಗೆ ಹುಮ್ಮಸು, ಚೈತನ್ಯ ಸಿಗುತ್ತದೆ. ಮಾನಸಿಕವಾಗಿ, ದೈಹಿಕವಾಗಿ ಶಕ್ತಿ ಕುಂದಿದಾಗ ಅವನ ಕೈಹಿಡಿಯುವ ಶಕ್ತಿ ಯೋಗಕ್ಕಿದೆ ಎಂದು ಜಿ.ಪಂ. ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ ಹೇಳಿದರು.

Advertisement

ಐದನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಹಾಗೂ ಆಯುಷ್‌ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸದೃಢವಾದ ದೇಶ ನಿರ್ಮಾಣಕ್ಕೆ ಸದೃಢವಾದ ಮನಸ್ಸು, ಆರೋಗ್ಯವಂತ ಶರೀರ ಹಾಗೂ ಹುಮ್ಮಸ್ಸುಳ್ಳ ಮನೋಬಲ ಅಗತ್ಯವಾಗಿದೆ. ಈ ಎಲ್ಲವೂ ಯೋಗಾಭ್ಯಾಸದಿಂದ ಲಭ್ಯವಾಗುತ್ತದೆ. ಪ್ರತಿಯೊಬ್ಬರೂ ಯೋಗ ಕಲಿತು ಸದೃಢವಾದ ದೇಶ ನಿರ್ಮಾಣಕ್ಕೆ ಶ್ರಮಿಸೋಣ ಎಂದರು.

ಮೊದಲು ಯೋಗದ ಮಹತ್ವ ಅರಿತುಕೊಳ್ಳಬೇಕು, ಮಾನವನ ಹೃದಯ ದೌರ್ಬಲ್ಯವನ್ನು ಕಿತ್ತೂಗೆದು ನವಚೈತನ್ಯವನ್ನು ಬೆಳೆಸಲು ಯೋಗ ಸಹಕಾರಿಯಾಗಿದೆ. ಪ್ರತಿಯೊಬ್ಬರೂ ಯೋಗವನ್ನು ರೂಢಿಸಿಕೊಂಡು ಸದೃಢ ಮನಸ್ಸು ಹಾಗೂ ಉತ್ತಮ ಆರೋಗ್ಯ ಕಾಯ್ದುಕೊಂಡರೆ ದೇಶದ ಅಭಿವೃದ್ಧಿಗೆ ಯೋಗ ಪೂರಕವಾಗಿದೆ. ಆರೋಗ್ಯ ಸುಧಾರಣೆ ಜೊತೆಗೆ ಸಮಾಜ ಸ್ವಾಸ್ಥ್ಯ ಕಾಪಾಡಲು ಯೋಗ ಸಹಕಾರಿಯಾಗಿದೆ ಎಂದರು.

ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾತನಾಡಿ, ಯೋಗ ಪುರಾತನ ವಿದ್ಯೆಯಾಗಿದ್ದು ಋಷಿಮುನಿಗಳ ಕಾಲದಿಂದ ರೂಢಿಯಲ್ಲಿದೆ. ಯೋಗಕ್ಕೆ ತುಂಬ ಮಹತ್ವವಿದೆ. ಪ್ರತಿಯೊಬ್ಬರು ಇದರ ಉಪಯೋಗ ಪಡೆದುಕೊಳ್ಳಬೇಕು. ಯೋಗ ಮೆದುಳು ಹಾಗೂ ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ, ಆಧುನಿಕ ಜೀವನ ಶೈಲಿಗೆ ಬೌದ್ಧಿಕ, ಶಾರೀರಿಕ ಒತ್ತಡ ನಿವಾರಣೆಗೆ ಯೋಗ ಮತ್ತು ಆಧ್ಯಾತ್ಮ ಅವಶ್ಯ. ಯೋಗಾಭ್ಯಾವನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರು ಓಲೇಕಾರ ಮಾತನಾಡಿ, ಯೋಗದಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ನಿವಾರಣೆಗೆ ಸಾಧ್ಯ. ಯೋಗ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಂಡಲ್ಲಿ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

Advertisement

ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯರಾದ ಕೊಟ್ರೇಶಪ್ಪ ಬಸೇಗಣ್ಣಿ ಹಾಗೂ ಸಿದ್ದರಾಜ ಕಲಕೋಟಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿ.ಪಂ. ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ, ವಾರ್ತಾಕಾರಿ ಬಿ.ಆರ್‌.ರಂಗನಾಥ್‌, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಾಕೀರ ಅಹ್ಮದ್‌, ಪೌರಾಯುಕ್ತ ಬಸವರಾಜ ಜಿದ್ದಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಅನ್ನಪೂರ್ಣ, ತಹಶೀಲ್ದಾರ ಶಿವಕುಮಾರ ಇದ್ದರು. ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಎ.ಎ.ಸ್‌.ಶಿರೋಳ ಸ್ವಾಗತಿಸಿದರು. ಡಾ.ಜಿ.ಸಿ. ನಿಡಗುಂದಿ ಕಾರ್ಯಕ್ರಮ ನಿರೂಪಿಸಿದರು. ಡಾ.ಬಾಬಾಸೇಬ ವಂದಿಸಿದರು.

ಯೋಗ ಪ್ರಾತ್ಯಕ್ಷಿಕೆ.. ಬೆಳಿಗ್ಗೆ 6-30ಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ರಕ್ಷಣೆಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮುಂಜಾನೆ 7 ಗಂಟೆಗೆ ಸರಿಯಾಗಿ ಆರಂಭಗೊಂಡ ಯೋಗ ಪ್ರದರ್ಶನವನ್ನು ಹಾವೇರಿ ಯೋಗ ಸಂಸ್ಥೆಯ ಮುಖ್ಯಸ್ಥ ಪ್ರೇಮಕುಮಾರ ಮುದ್ದಿ ನೇತೃತ್ವದ ಮಾರ್ಗದರ್ಶಕರು 45 ನಿಮಿಷ ವಿವಿಧ ಯೋಗಾಸನಗಳ ಪ್ರದರ್ಶಿಸಿದರು. ನಂತರ ಈಶ್ವರೀಯ ವಿದ್ಯಾಲಯದ ಲೀಲಾಜಿ ಅವರು ಧ್ಯಾನ ಮಂತ್ರವನ್ನು ಪಠಿಸಿದರು.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯೋಗ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಜಿಲ್ಲಾ ಮೀಸಲು ಪಡೆಯ ಪೊಲೀಸ್‌ ಅಧಿಕಾರಿಗಳು ಹಾಗೂ ಪೇದೆಗಳು, ವಿವಿಧ ಶಾಲಾ ಮಕ್ಕಳು, ಸಾರ್ವಜನಿಕರು ಯೋಗಾಸನ ಪ್ರದರ್ಶನದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಇದರೊಂದಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಜಿಲ್ಲೆಯ ಯೋಗಪಟುಗಳು ಯೋಗದ ಕ್ಲಿಷ್ಟಕರ ಆಸನಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next