Advertisement

ಈ ವರ್ಷವಾದರೂ ನಿಮ್ಮ ಕನಸಿನ ಬೆನ್ನತ್ತಲು ನಿರ್ಧರಿಸಿದ್ದೀರಾ?

12:30 AM Jan 08, 2019 | |

ಕೆಲವರು ಜೀವನದಲ್ಲಿ ಏನೂ ಗುರಿಗಳನ್ನೇ ಇಟ್ಟುಕೊಳ್ಳದೆ ಸುಮ್ಮನೆ ಬದುಕು ಸವೆಸುತ್ತಿರುತ್ತಾರೆ. ತುಂಬಾ ಆಸೆ ಕನಸುಗಳಿದ್ದರೂ ಯಾವ ನಿರ್ಧಾರವನ್ನೂ ತೆಗೆದುಕೊಳ್ಳದೆ, ಅಯ್ಯೋ ಅದೆಲ್ಲ ನನ್ನಿಂದ ಸಾಧ್ಯಾನಾ ಅಂತ ತಮ್ಮ ಮೇಲೆ ತಾವೇ ಅನುಮಾನ ಪಟ್ಟುಕೊಂಡು ಪ್ರತಿದಿನ ಕಾಲಹರಣ ಮಾಡುತ್ತಿರುತ್ತಾರೆ. 2019 ಈಗಷ್ಟೇ ಆರಂಭವಾಗಿದೆ. ಇಷ್ಟು ವರ್ಷ ಕಡೆಗಣಿಸಿದ ಕೆಲಸಗಳನ್ನು ಈ ವರ್ಷಕ್ಕೆ ಶೆಡ್ನೂಲ್‌ ಮಾಡಿಕೊಳ್ಳಿ ಪ್ರತಿಯೊಬ್ಬರಿಗೂ ಅವರು ಮಾಡಲೇಬೇಕಾದ ಕೆಲಸಗಳು, ನನಸು ಮಾಡಿಕೊಳ್ಳಲೇಬೇಕಾದ ಒಂದಷ್ಟು ಕನಸುಗಳು, ಈಡೇರಿಸಿಕೊಳ್ಳಲೇಬೇಕಾದ ಒಂದಷ್ಟು ಗುರಿಗಳು ಇರುತ್ತವೆ. ಅವುಗಳಲ್ಲಿ ಅರ್ಧದಷ್ಟನ್ನಾದರೂ ಮಾಡಿ ಮುಗಿಸದಿದ್ದರೆ ಬದುಕಿಗೆ ಅರ್ಥವಿರುವುದಿಲ್ಲ. 

Advertisement

ಪ್ರತಿ ವರ್ಷ ಜನವರಿ 1 ಬರುತ್ತದೆ, ಹೋಗುತ್ತದೆ. ಹೊಸ ವರ್ಷದ ದಿನ ಎಲ್ಲರಿಗೂ ಶುಭಾಶಯ ಹೇಳಲು ಎಷ್ಟು ಖುಷಿಪಡುತ್ತೇವೋ ಅಷ್ಟೇ ಆತಂಕವೂ ಮನಸ್ಸಿನಲ್ಲಿರುತ್ತದೆ. ಕಾರಣ-ನಮ್ಮ ಜೀವನದಲ್ಲಿ ನಮಗಿರುವ ಆಸೆಗಳು, ಜವಾಬ್ದಾರಿಗಳು ಮತ್ತು ಓಡುತ್ತಿರುವ ಸಮಯ. ಪ್ರತಿ ವರ್ಷ ನಾವು ದೊಡ್ಡವರಾಗುತ್ತೇವೆಯೇ ಹೊರತು ಚಿಕ್ಕವರಾಗುವುದಿಲ್ಲವಲ್ಲ.

ವರ್ಷಾರಂಭದಲ್ಲಿ ಎಲ್ಲದಕ್ಕೂ ಹುಮ್ಮಸ್ಸಿನಿಂದ ನಿರ್ಣಯ ತೆಗೆದುಕೊಳ್ಳುತ್ತೇವೆ. ಆದರೆ ತಿಂಗಳು ಕಳೆದಂತೆ ಅವುಗಳನ್ನು ಮರೆಯುತ್ತ ಹೋಗುತ್ತೇವೆ. ಅಂದುಕೊಂಡಿದ್ದನ್ನು ಮಾಡುವ ಉತ್ಸಾಹ ಉಳಿದಿರುವುದಿಲ್ಲ. ಅಯ್ಯೋ ಬಿಡು ನಾಳೆ ಮಾಡೋಣ, ಮುಂದಿನ ತಿಂಗಳು ಮಾಡೋಣ, ನಾನೊಬ್ನೆ / ನಾನೊಬ್ಳೆ ಮಾಡಲು ಆಗುವುದಿಲ್ಲ. ಜೊತೆಗೆ ಸ್ನೇಹಿತರಿಲ್ಲ. 

ಮನೆಯಲ್ಲಿ ಪ್ರೋತ್ಸಾಹ ನೀಡ್ತಿಲ್ಲ ಹೀಗೆ ನಮಗೆ ನಾವೇ ನೆಪ ಹೇಳಿಕೊಂಡು ನಮ್ಮ ಸಾಧನೆಗಳನ್ನು ಮುಂದೂಡುತ್ತಲೇ ಇರುತ್ತೇವೆ. ಮನುಷ್ಯ ಇವತ್ತು ನಡೆಯಲು ಶುರು ಮಾಡಿದರೆ ಮುಂದೊಂದು ದಿನ ಓಡೇ ಓಡುತ್ತಾನೆ. ಕೂತಲ್ಲೇ ಕೂತು ಬರೀ ಮಾತಲ್ಲೇ ಎಲ್ಲವನ್ನೂ ಮಾಡುತ್ತೇನೆ ಅನ್ನುತ್ತಿದ್ದರೆ ಅವನು ಒಂದು ದಿನ ಎದ್ದು ನಡೆಯುತ್ತಾನೆ ಎಂಬ ನಂಬಿಕೆಯೂ ಇರುವುದಿಲ್ಲ.

ಪ್ರತಿಫ‌ಲ ಏನು ಸಿಗುತ್ತದೆಯೋ ಬಿಡುತ್ತದೆಯೋ, ನಾವು ಅಂದುಕೊಂಡಿದ್ದನ್ನು ಮಾಡುತ್ತಲೇ ಇರಬೇಕು. ನಮ್ಮೆಲ್ಲರ ಜೀವನಕ್ಕೂ ಸಮಯವೇ ಬಹಳ ಮುಖ್ಯ. ಹಾಗಾದರೆ ಒಂದು ವರ್ಷದ ಸಮಯವನ್ನು ಹೇಗೆ ವಿಂಗಡಿಸಿಕೊಳ್ಳುವುದು?

Advertisement

ಅಲ್ಪಾವಧಿಯ ಗುರಿಗಳು
ನಮ್ಮ ಸಾಮರ್ಥ್ಯವನ್ನು ನಾವೇ ಟೆಸ್ಟ್‌ ಮಾಡಿಕೊಳ್ಳುವುದಕ್ಕೆ ನಮಗೆ ನಾವೇ ಕೆಲವು ಕೆಲಸಗಳನ್ನು ನಿಗದಿಪಡಿಸಿಕೊಳ್ಳಬೇಕು. ಅದಕ್ಕೆ ಅಲ್ಪಾವಧಿಯ ಸಮಯ ನಿಗದಿ ಮಾಡಬೇಕು. ನಮ್ಮ ಒಂದೊಂದೇ ಆಸೆಗಳನ್ನು ಹಂಚಬೇಕು. ಕಷ್ಟಪಟ್ಟರೆ ಏನು ಬೇಕಾದರೂ ಸಿಗುತ್ತದೆ ಅಂದ ಮೇಲೆ ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ನಾವು ಕಷ್ಟಪಡಲೇಬೇಕಲ್ಲವೇ? ಶ್ರದ್ಧೆಯಿಂದ, ಸಮಯ ಪ್ರಜ್ಞೆಯಿಂದ ಒಂದೊಂದೇ ಕೆಲಸ ಮುಗಿಸುತ್ತಾ ಹೋಗಬೇಕು. ಆಗ ವರ್ಷಾಂತ್ಯದಲ್ಲಿ ತಿರುಗಿ ನೋಡಿದರೆ ಓ ನಾನು ಇಷ್ಟೆಲ್ಲಾ ಕೆಲಸ ಮಾಡಿದೆನಾ ಎಂದು ನಮಗೇ ಆಶ್ಚರ್ಯವಾಗುತ್ತದೆ. ಕನಿಷ್ಠ ಪಕ್ಷ ನಾವು ಅಂದುಕೊಂಡಿದ್ದರಲ್ಲಿ ಶೇ.50ರಷ್ಟನ್ನಾದರೂ ಈ ವರ್ಷ ಮಾಡಿದ್ದೇನೆ ಎಂಬ ನೆಮ್ಮದಿ ನಮಗೆ ಸಿಗಬೇಕು. ಇದು ಸಾಧ್ಯವಾಗಬೇಕು ಅಂದರೆ ಪ್ರತಿ ತಿಂಗಳಿಗೂ ಒಂದೊಂದು ಧ್ಯೇಯವಿರಬೇಕು, ಹಾಗೇ ಪ್ರತಿ ಮೂರು ತಿಂಗಳಿಗೊಂದು ಗುರಿ ಇರಬೇಕು.ನಾವು ಸಮಯದ ಹಿಂದೆ ಓಡುತ್ತೇವೋ, ಸಮಯ ನಮ್ಮ ಹಿಂದೆ ಓಡುತ್ತದೆಯೋ ನೋಡೇಬಿಡೋಣ ಎಂದು ಚಾಲೆಂಜ್‌ ಮಾಡಿ ಕೆಲಸಕ್ಕಿಳಿಯಬೇಕು. 

ದೀರ್ಘಾವಧಿಯ ಗುರಿಗಳು
ಕೆಲವರು ಏನೂ ಗುರಿಗಳನ್ನೇ ಇಟ್ಟುಕೊಳ್ಳದೆ ಸುಮ್ಮನೆ ಬದುಕು ಸವೆಸುತ್ತಿರುತ್ತಾರೆ. ತುಂಬಾ ಆಸೆ ಕನಸುಗಳಿದ್ದರೂ ಯಾವ ನಿರ್ಧಾರವನ್ನೂ ತೆಗೆದುಕೊಳ್ಳದೆ, ಅಯ್ಯೋ ಅದೆಲ್ಲ ನನ್ನಿಂದ ಸಾಧ್ಯಾನಾ ಅಂತ ತಮ್ಮ ಮೇಲೆ ತಾವೇ ಅನುಮಾನ ಪಟ್ಟುಕೊಂಡು ಪ್ರತಿದಿನ ಕಾಲಹರಣ ಮಾಡುತ್ತಿರುತ್ತಾರೆ. ಅಂತಹ ವ್ಯಕ್ತಿಗಳನ್ನು ನೀವು ಐದು ವರ್ಷದ ನಂತರ ಭೇಟಿ ಮಾಡಿದರೂ ಹಿಂದೆ ಹೇಗಿದ್ದರೋ ಹಾಗೆಯೇ ಇರುತ್ತಾರೆ. ಪ್ರತಿವರ್ಷ ಹೊಸ ವರ್ಷಕ್ಕೆ ಪಾರ್ಟಿ ಮಾಡುವುದನ್ನು ಮಾತ್ರ ಬಿಡುವುದಿಲ್ಲ. ಮೋಜಿಗೆ ಏನು ಬೇಕೋ ಅವೆಲ್ಲವನ್ನೂ ಮಾಡುತ್ತಾರೆ, ಆದರೆ ಮೈ ಬಗ್ಗಿಸಿ ಕೆಲಸ ಮಾಡಬೇಕು ಅಂದರೆ ಸೋಂಬೇರಿತನ. ನಾವು ಜೀವನದಲ್ಲಿ ಏನನ್ನೂ ಸಾಧಿಸುವುದಿಲ್ಲ, ಕನಿಷ್ಠ ಪಕ್ಷ ನಮ್ಮ ಜವಾಬ್ದಾರಿ ಹಾಗೂ ಕನಸುಗಳನ್ನು ಈಡೇರಿಸುವುದಿಲ್ಲ ಎಂದಾದರೆ ಅದಕ್ಕೆ ಕಾರಣ ನಾವೇ. ಬೇರೆಯವರನ್ನು ದೂಷಿಸುವುದರಲ್ಲಿ ಅರ್ಥವೇ ಇಲ್ಲ. 

ಹೇಗೆ ನಮ್ಮ ಗುರಿಗಳನ್ನು ಮುಟ್ಟುವುದು?
ನಮಗೆ ಪ್ರತಿವರ್ಷ ಬೇರೆ ಬೇರೆ ಹೊಸ ಆಸೆಗಳು ಹುಟ್ಟುತ್ತಲೇ ಇರುತ್ತವೆ. ಅವುಗಳಲ್ಲಿ ನಿಜವಾಗಲೂ ಯಾವುದು ನಮಗೆ ಬೇಕು ಎಂಬುದನ್ನು ನಾವೇ ನಿಷ್ಕರ್ಷಿಸಿ ಆಯ್ದುಕೊಳ್ಳಬೇಕು. ಮೊದಲು ನಮ್ಮ ಅವಶ್ಯಕತೆ, ಆಸೆ ಹಾಗೂ ಕನಸು ಈ ಮೂರನ್ನು ಬೇರ್ಪಡಿಸಿಕೊಳ್ಳಬೇಕು. ಇವುಗಳಲ್ಲಿ ಅಲ್ಪಪಾವಧಿಯಲ್ಲಿ ಮುಗಿಸಬೇಕಾದ್ದು ಯಾವುದು, ದೀರ್ಘಾವಧಿ ಯಾವುದು ಎಂದು ವಿಂಗಡಿಸಿಕೊಳ್ಳಬೇಕು. 

ಆರೋಗ್ಯ ಮತ್ತು ಆಕರ್ಷಣೆ
ನಮ್ಮ ಕ್ಯಾಲೆಂಡರ್‌ನಲ್ಲಿ ಆರೋಗ್ಯಕ್ಕೂ ಸಮಯ ಕೊಡುವುದು ಬಹಳ ಮುಖ್ಯ. ತುಂಬಾ ಜನ ಶಕ್ತಿ ಇದೆಯೆಂದು ಸಮಯವನ್ನು ಸರಿಯಾಗಿ ಪ್ಲಾನ್‌ ಮಾಡಿಕೊಳ್ಳದೆ ಕೆಲಸ ಮಾಡುತ್ತಲೇ ಇರುತ್ತಾರೆ. ಆ ಧಾವಂತದಲ್ಲಿ ಊಟ ತಿಂಡಿ ನಿದ್ದೆ ವ್ಯಾಯಾಮಗಳನ್ನು ಬಿಟ್ಟು ಆ್ಯಸಿಡಿಟಿಯಲ್ಲಿ ಒದ್ದಾಡುತ್ತಾರೆ. ಇಲ್ಲವೇ ಕೆಲಸದ ಒತ್ತಡದಲ್ಲಿ ಅತಿಯಾಗಿ ತಿಂದು ಮೈ ಬೆಳೆಸಿಕೊಳ್ಳುತ್ತಾರೆ. ಕೂದಲು ಉದುರಿ ಹೋಗುತ್ತಿದ್ದರೂ, ಅತಿಯಾದ ಕೋಪದಿಂದ ಮುಖದಲ್ಲಿ ಸುಕ್ಕಿನ ಗೆರೆಗಳು ಬರಲು ಶುರುವಾದರೂ ಯಾವುದಕ್ಕೂ ಗಮನ ಕೊಡದೆ, ಒಂದು ದಿನ ತಮ್ಮನ್ನು ತಾವು ಕನ್ನಡಿಯಲ್ಲಿ ನೋಡಿಕೊಂಡು ಅಯ್ಯೋ ಇದು ನಾನೇನಾ! ಹೇಗಿದ್ದೆ, ಹೇಗಾ ಬಿಟ್ಟೆ ಅಂತ ಪೇಚಾಡುತ್ತಾರೆ.

ನಾವು ದುಡಿಯುವುದು ನಮಗಾಗಿ-ನಮ್ಮವರಿಗಾಗಿ. ವಯಸ್ಸಿದ್ದಾಗ ಅತಿಯಾಗಿ ದುಡಿದು ಆರೋಗ್ಯ ಹಾಳು ಮಾಡಿಕೊಂಡು, ಆನಂತರ ಕೂಡಿಟ್ಟ ದುಡ್ಡನ್ನೆಲ್ಲ ಆರೋಗ್ಯ ಸರಿಪಡಿಸಿಕೊಳ್ಳಲು ಆಸ್ಪತ್ರೆಗೆ ಖರ್ಚುಮಾಡಿದರೆ ಅದರಿಂದ ಪ್ರಯೋಜನವೇನು? ನಾವು ಎಷ್ಟೇ ನಿರಂತರವಾಗಿ ಕೆಲಸ ಮಾಡುತ್ತಿದ್ದರೂ ಆರೋಗ್ಯಕ್ಕಾಗಿ ಪ್ರತಿದಿನ ಒಂದು ಗಂಟೆ ವ್ಯಾಯಾಮ ಮಾಡಲೇಬೇಕು. ವ್ಯಕ್ತಿತ್ವ ಆಕರ್ಷಕವಾಗಿರಬೇಕು ಅಂದರೆ ನಾವು ಸುಂದರವಾಗಿರಬೇಕು ಅಂತ ಅಲ್ಲ. 

ನೋಡಲು ಹೇಗಿದ್ದರೂ ನಮ್ಮ ವ್ಯಕ್ತಿತ್ವಕ್ಕೆ ತಮ್ಮ ದೇಹಕ್ಕೆ ಎನರ್ಜಿ ಇರಬೇಕು. ನಮ್ಮಲ್ಲಿರುವ ಎನರ್ಜಿಯೇ ಎಲ್ಲರನ್ನೂ ಆಕರ್ಷಿಸುವುದು, ಹಾಗೇ ಅಸಾಧ್ಯವಾದದ್ದನ್ನು ಸಾಧ್ಯವಾಗುವಂತೆ ಮಾಡುವುದು. ನಮಗೆ ಆಕರ್ಷಣೆಯನ್ನು ಬೇರೆ ಯಾರೂ ಕೊಡಲು ಸಾಧ್ಯವೆ ಇಲ್ಲ. ಅದನ್ನು ನಮ್ಮೊಳಗೆ ನಾವೇ ಸೃಷ್ಟಿಸಿಕೊಳ್ಳುತ್ತಿರಬೇಕು. ಬದುಕಿನಲ್ಲಿ ನಾವು ಅಂದುಕೊಂಡಿದನ್ನು ಸಾಧಿಸಲು ಹಾರ್ಡ್‌ ವರ್ಕರ್‌ ಆಗಿರುವುದಕ್ಕಿಂತ ಸ್ಮಾರ್ಟ್‌ ವರ್ಕರ್‌ ಆಗಿರುವುದು ಬಹಳ ಮುಖ್ಯ.

2019 ಈಗಷ್ಟೇ ಆರಂಭವಾಗಿದೆ. ಇಷ್ಟು ವರ್ಷ ಕಡೆಗಣಿಸಿದ ಕೆಲಸಗಳನ್ನು ಈ ವರ್ಷಕ್ಕೆ ಶೆಡ್ನೂಲ್‌ ಮಾಡಿಕೊಳ್ಳಿ ಪ್ರತಿಯೊಬ್ಬರಿಗೂ ಅವರು ಮಾಡಲೇಬೇಕಾದ ಒಂದಷ್ಟು ಕೆಲಸಗಳು, ನನಸು ಮಾಡಿಕೊಳ್ಳಲೇಬೇಕಾದ ಒಂದಷ್ಟು ಕನಸುಗಳು, ಈಡೇರಿಸಿಕೊಳ್ಳಲೇಬೇಕಾದ ಒಂದಷ್ಟು ಗುರಿಗಳು ಇರುತ್ತವೆ. ಅವುಗಳಲ್ಲಿ ಅರ್ಧದಷ್ಟನ್ನಾದರೂ ಮಾಡಿ ಮುಗಿಸದಿದ್ದರೆ ಬದುಕಿಗೆ ಅರ್ಥವಿರುವುದಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next