Advertisement

ಹತ್ರಾಸ್‌ ಘಟನೆ ಭಯಾನಕ : ಸಾಕ್ಷ್ಯ ರಕ್ಷಣೆಗೆ ಏನು ಕ್ರಮ ಕೈಗೊಂಡಿದ್ದೀರಿ: ಸುಪ್ರೀಂ ಪ್ರಶ್ನೆ

10:47 AM Oct 07, 2020 | sudhir |

ಲಕ್ನೋ/ಹೊಸದಿಲ್ಲಿ: ಹತ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಘಟನೆಯನ್ನು “ಭಯಾನಕ ಮತ್ತು ಆಘಾತಕಾರಿ’ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಏನೇನು ಕ್ರಮ ಕೈಗೊಂಡಿದ್ದೀರಿ ಎಂಬ ಬಗ್ಗೆ ಗುರುವಾರದೊಳಗೆ ಅಫಿದವಿತ್‌ ಸಲ್ಲಿಸುವಂತೆ ಉತ್ತರಪ್ರದೇಶ ಸರಕಾರಕ್ಕೆ ನಿರ್ದೇಶನ ನೀಡಿದೆ.

Advertisement

ಸಂತ್ರಸ್ತೆಯ ಕುಟುಂಬವು ವಕೀಲರನ್ನು ಆಯ್ಕೆ ಮಾಡಿದೆಯೇ ಎಂಬ ಬಗ್ಗೆಯೂ ತಿಳಿಸುವಂತೆ ಸೂಚಿಸಿದೆ. ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಪಿಐಎಲ್‌ ವಿಚಾರಣೆ ವೇಳೆ, ಉತ್ತರಪ್ರದೇಶ ಸರಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್‌ ತುಷಾರ್‌ ಮೆಹ್ತಾ, “ರಾಜಕೀಯ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಹೀಗಾಗಿ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕಿದೆ’ ಎಂದು ಅರಿಕೆ ಮಾಡಿದರು.

ಇದೇ ವೇಳೆ, ಸಂತ್ರಸ್ತೆಯ ಕುಟುಂಬಕ್ಕೆ ರಕ್ಷಣೆ ಬೇಕಾಗಿದೆ. ಅಲ್ಲದೆ, ಸಿಬಿಐ ತನಿಖೆ ಬಗ್ಗೆ ಕುಟುಂಬಕ್ಕೆ ತೃಪ್ತಿಯಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ ನಡೆಯಲಿ ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಮನವಿ ಮಾಡಿದರು.

ವಿದೇಶಾಂಗ ಇಲಾಖೆ ಕಿಡಿ
ಮಹಿಳೆಯರು ಸೇರಿದಂತೆ ತುಳಿತಕ್ಕೊಳಗಾದ ಗುಂಪುಗಳು ಭಾರತದಲ್ಲಿ ಲಿಂಗಾಧಾರಿತ ಹಿಂಸೆಯ ರಿಸ್ಕ್ ಎದುರಿಸುತ್ತಿವೆ ಎಂಬ ಭಾರತದಲ್ಲಿನ ವಿಶ್ವಸಂಸ್ಥೆಯ ಸಮನ್ವಯಕಾರರ ಹೇಳಿಕೆ ವಿರುದ್ಧ ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್‌ ಶ್ರೀವಾಸ್ತವ ಕಿಡಿಕಾರಿದ್ದಾರೆ. ಪ್ರಕರಣವು ಇನ್ನೂ ತನಿಖೆಯ ಹಂತದಲ್ಲಿದ್ದು, ಬಾಹ್ಯ ವ್ಯಕ್ತಿಗಳು ಅನಗತ್ಯ ಹೇಳಿಕೆ ನೀಡದಿರುವುದು ಒಳ್ಳೆಯದು. ನಾವು ಸಮಾಜದ ಎಲ್ಲ ವರ್ಗದವರಿಗೂ ನ್ಯಾಯ ಒದಗಿಸುತ್ತೇವೆ. ಸರಕಾರ ಈ ಪ್ರಕರಣವನ್ನೂ ಗಂಭೀರವಾಗಿ ತೆಗೆದುಕೊಂಡಿದೆ ಎಂದಿದ್ದಾರೆ.

ಪತ್ರಕರ್ತ ಸೇರಿ ನಾಲ್ವರ ಬಂಧನ
ಸಂತ್ರಸ್ತೆಯ ಕುಟುಂಬದ ಭೇಟಿಗಾಗಿ ಹತ್ರಾಸ್‌ಗೆ ತೆರಳುತ್ತಿದ್ದ ಕೇರಳದ ಪತ್ರಕರ್ತ ಸೇರಿದಂತೆ ನಾಲ್ವರನ್ನು ಉತ್ತರಪ್ರದೇಶ ಪೊಲೀಸರು ಮಥುರಾದಲ್ಲಿ ಬಂಧಿಸಿದ್ದಾರೆ. ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರನ್ನು ಮಲಪ್ಪುರಂನ ಸಿದ್ದೀಕ್‌, ಮುಜಾಫ‌ರ್‌ನಗರದ ಆತಿಕ್‌ ಉರ್‌ ರೆಹಮಾನ್‌, ಬಹ್ರೈಚ್‌ನ ಮಸೂದ್‌ ಅಹ್ಮದ್‌ ಮತ್ತು ರಾಂಪುರದ ಆಲಂ ಎಂದು ಗುರುತಿಸಲಾಗಿದೆ. ಬಂಧನದ ಸುದ್ದಿ ತಿಳಿಯುತ್ತಿದ್ದಂತೆ, ಪೊಲೀಸರ ಕ್ರಮಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಕೇರಳ ಪತ್ರಕರ್ತರ ಸಂಘವು, “ಸಿದ್ದೀಕ್‌ ಕಪ್ಪನ್‌ ಅವರು ದಿಲ್ಲಿ ಮೂಲದ ಹಿರಿಯ ಪತ್ರಕರ್ತರಾಗಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದೆ. ಈ ಕುರಿತು ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದಿದೆ. ಒಬ್ಬ ಪತ್ರಕರ್ತರಾಗಿ ಅವರು ತಮ್ಮ ಕರ್ತವ್ಯ ನಿಭಾಯಿಸಲು ತೆರಳಿದ್ದರು ಎಂದೂ ಹೇಳಿದೆ.

Advertisement

104 ಫೋನ್‌ ಕರೆಗಳು
ಇದೇ ವೇಳೆ, ಸಂತ್ರಸ್ತೆ ಮತ್ತು ಪ್ರಮುಖ ಆರೋಪಿ 2019ರ ಅಕ್ಟೋಬರ್‌ನಿಂದಲೇ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತೆಯ ಸಹೋದರನ ಮೊಬೈಲ್‌ ಸಂಖ್ಯೆಯಿಂದ ಪ್ರಮುಖ ಆರೋಪಿಯ ಮೊಬೈಲ್‌ ಸಂಖ್ಯೆಗೆ 62 ಕರೆಗಳು, ಆರೋಪಿಯಿಂದ ಸಂತ್ರಸ್ತೆಯ ಸೋದರನ ಮೊಬೈಲ್‌ಗೆ 42 ಕರೆಗಳು ಬಂದಿವೆ ಎಂದೂ ಅವರು ಹೇಳಿದ್ದಾರೆ.

ಸಂತ್ರಸ್ತೆಯ ಕುಟುಂಬಕ್ಕೆ 50 ಲಕ್ಷ ರೂ. ಆಮಿಷ!
ಯೋಗಿ ಸರಕಾರದ ವಿರುದ್ಧ ಹೇಳಿಕೆ ನೀಡಲು ಸಂತ್ರಸ್ತೆಯ ಕುಟುಂಬಕ್ಕೆ ಕೆಲವೊಂದು ಶಕ್ತಿಗಳು 50 ಲಕ್ಷ ರೂ.ಗಳ ಆಮಿಷವೊಡ್ಡಿವೆ ಎಂದು ಉತ್ತರಪ್ರದೇಶ ಪೊಲೀಸರು ಸೋಮವಾರ ದಾಖಲಿಸಿದ ಎಫ್ಐಆರ್‌ನಲ್ಲಿ ಉಲ್ಲೇಖೀಸಿ ದ್ದಾರೆ. ಒಟ್ಟಾರೆ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಸಂಚು ಅಡಗಿದೆ ಎಂದು ಆರೋಪಿಸಿದ್ದ ಪೊಲೀಸರು ಸೋಮವಾರ 19 ಎಫ್ಐಆರ್‌ಗಳನ್ನು ದಾಖಲಿಸಿದ್ದು, ಆ ಪೈಕಿ ಇದೂ ಒಂದು. ರಾಜ್ಯ ಸರಕಾರದ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲೂ ಸಿಎಂ ವಿರುದ್ಧದ ಅನೇಕ ಸಂದೇಶಗಳನ್ನು ಹರಿಬಿಡಲಾಗಿತ್ತು ಎಂದೂ ಅದರಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next