Advertisement

Hassan ಎದುರುಮನೆಯ ಕಿಟಕಿಯಲ್ಲಿ ಇಣುಕಿ ನೋಡಿದ್ದೇ ಜೀವಕ್ಕೆ ಮುಳುವಾಯ್ತು

11:48 PM Jan 23, 2024 | Team Udayavani |

ಹಾಸನ: ರಾತ್ರಿ ವೇಳೆ ಎದುರುಮನೆ ಕಿಟಕಿ ಮೂಲಕ ಇಣುಕಿ ನೋಡಿದ ಎನ್ನುವ ಕಾರಣಕ್ಕೆ ವ್ಯಕ್ತಿಯನ್ನು ಅಟ್ಟಾಡಿಸಿ, ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಹೊಳೆನರಸಿಪುರ ತಾಲೂಕಿನ ಎಲೆಗೌಡನಹಳ್ಳಿಯಲ್ಲಿ ರವಿವಾರ ರಾತ್ರಿ ನಡೆದಿದೆ.

Advertisement

ಜಯರಾಂ (55) ಮೃತಪಟ್ಟಿರುವ ವ್ಯಕ್ತಿ. ಜ. 21ರ ತಡರಾತ್ರಿ ಜಯರಾಂ ಪತ್ನಿ ಪ್ರಮೀಳಾ ಅವರ ತಂದೆ ತಮ್ಮೇಗೌಡ ಮೈಸೂರಿನ ಸಾಲಿಗ್ರಾಮ ತಾಲೂಕು ಕೆಸವತ್ತೂರು ಕೊಪ್ಪಲು ಗ್ರಾಮದಲ್ಲಿ ತೀರಿಕೊಂಡಿದ್ದರಿಂದ ಮನೆಮಂದಿ ಎಲ್ಲರೂ ಅಲ್ಲಿಗೆ ಹೋಗಿದ್ದರು. ಮೃತರ ಅಂತ್ಯಕ್ರಿಯೆ ಮರುದಿನ ನಿಗದಿಯಾಗಿದ್ದರಿಂದ, ಜಯರಾಂ ಅವರು ಮನೆಯಲ್ಲಿ ಸಾಕಿದ್ದ ಜಾನುವಾರು ನೋಡಿಕೊಳ್ಳಲು ಗ್ರಾಮಕ್ಕೆ ತೆರಳಿ ರಾತ್ರಿ ವಾಪಸ್‌ ಬಂದು, ಮನೆಯಲ್ಲಿ ಮಲಗಿದ್ದರು.

ರಾತ್ರಿ 11 ಗಂಟೆ ಸಮಯದಲ್ಲಿ ಜಯರಾಂ ಮೂತ್ರ ವಿಸರ್ಜನೆ ಮಾಡಲು ಹೊರಗೆ ಬಂದಿದ್ದರೆನ್ನಲಾಗಿದೆ. ಈ ವೇಳೆ ಎದುರುಗಡೆಯ ಮಧು ಅವರ ಮನೆಯ ಕಿಟಕಿ ಮೂಲಕ ಇಣುಕಿ ನೋಡಿದರು ಎನ್ನಲಾಗಿದೆ. ಇದನ್ನು ಗಮನಿಸಿದ ಮಧು ಮತ್ತು ಸಂಬಂಧಿಕರು ಜಯರಾಂ ಅವರನ್ನು ಅಟ್ಟಾಡಿಸಿಕೊಂಡು ಬಂದು ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಿ ತೀವ್ರ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ.

ಅಷ್ಟರಲ್ಲಿ ಗ್ರಾಮಸ್ಥರು ಬಂದು ಜಗಳ ಬಿಡಿಸಿದ್ದಾರೆ. ಅನಂತರ ಗಾಯಾಳುವನ್ನು ಮನೆಯಲ್ಲಿ ಮಲಗಿಸಿದ್ದು, ಬೆಳಗಾಗುವುದರೊಳಗಾಗಿ ಜಯರಾಂ ಮೃತಪಟ್ಟಿದ್ದರು. ಮೃತರ ಮಗಳು ನೀಡಿದ ದೂರು ಆಧರಿಸಿ ಹಳ್ಳಿ ಮೈಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next