Advertisement

Hasanamba Temple: ಇಂದಿನಿಂದ ಹಾಸನಾಂಬ ಜಾತ್ರೋತವ ಆರಂಭ

10:55 AM Nov 02, 2023 | Team Udayavani |

ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಜಿಲ್ಲೆಯ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವಕೆ ಕ್ಷಣಗಣನೆ ಆರಂಭವಾಗಿದ್ದು, ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದೆ.ನ.15 ರವರೆಗೂ ನಡೆಯಲಿ ರುವ ಹಾಸನಾಂಬ ಜಾತ್ರೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿ ಕೊಂಡಿದೆ. ಶ್ರೀ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರ ದೇವಾಲ ಯದ ಹೊರ ಆವರಣ ಹಾಗೂ ಒಳಾವರಣಹಾಗೂ ಪ್ರವೇಶ ದ್ವಾರಗಳ ಪುಷ್ಪಾಲಂಕಾರ ಆಕರ್ಷಣೀಯವಾಗಿದೆ.

Advertisement

ಜಿಲ್ಲೆಯಲ್ಲಿ ಪ್ರವಾಸದ ಪ್ಯಾಕೇಜ್‌: ಇದೇ ಮೊದಲ ಬಾರಿಗೆ ಹಾಸನಾಂಬೆ ದರ್ಶನದ ಜೊತೆ ಜೊತೆಯಲ್ಲೇ, ಕಲೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಲವು ಹೊಸ ಪ್ರಯೋಗಗಳನ್ನು ಜಿಲ್ಲಾಡಳಿತವು ಅನುಸರಿಸಲು ಮುಂದಾಗಿದೆ. ರಾಜ್ಯದ ವಿವಿಧೆಡೆಗಳಿಂದ ಬರುವ ಭಕ್ತರು, ಪ್ರವಾಸಿಗರಿಗೆ ಹಾಸನಾಂಬೆ ದರ್ಶನ ಮಾಡಿಸುವುದರ ಜೊತೆಗೆ ಅವರಿಗೆ ಜಿಲ್ಲೆಯ ಐತಿಹಾಸಿಕ ಮಹತ್ವ, ಪ್ರಾಕೃತಿಕ ಸೊಬಗು, ಶಿಲ್ಪಕಲೆ ಹಾಗೂ ಸಾಂಸ್ಕೃತಿಕ ವೈಭವ ಪರಿಚಯಿಸುವ ಪ್ರವಾಸದ ಪ್ಯಾಕೇಜ್‌ ವ್ಯವಸ್ಥೆ ಮಾಡಿದೆ.

ಮುಂಗಡ ಬುಕ್ಕಿಂಗ್‌: ಕೆಎಸ್‌ಆರ್‌ಟಿಸಿ ಸಹಕಾರದೊಂದಿಗೆ ಜಿಲ್ಲೆಯ 4 ಪ್ರವಾಸಿ ಸರ್ಕ್ನೂಟ್‌ಗಳನ್ನು ರೂಪಿಸಿ ಪ್ರತಿದಿನವೂ ಬೆಳಗ್ಗೆ ಹಾಸನದಿಂದ ಹೊರಟು ಸಂಜೆ ಹಾಸನಕ್ಕೆ ವಾಪಸ್ಸಾಗುವ ಪ್ರವಾಸಿ ಪ್ಯಾಕೇಜ್‌ನ್ನು 15 ದಿನಗಳ ಕಾಲ ಹಮ್ಮಿಕೊಂಡಿದೆ. ಅದಕ್ಕಾಗಿ ಮುಂಗಡ ಬುಕ್ಕಿಂಗ್‌ ಮತ್ತು ಹಾಸನ ನಗರ ಸಾರಿಗೆ ಬಸ್‌ ನಿಲ್ದಾಣದಲ್ಲಿ ಸ್ಥಳದಲ್ಲಿಯೇ ಟಿಕೆಟ್‌ ಖರೀದಿಸುವ ವ್ಯವಸ್ಥೆಯನ್ನು ಕೆ.ಎಸ್‌ಆರ್‌ಟಿಸಿ ರೂಪಿಸಿದೆ. ಹೆಲಿಕಾಪ್ಟರ್‌ನಲ್ಲಿ ಜಾಲಿ ರೈಡ್‌, ವಾಯು ಸಾಹಸ ಕ್ರೀಡೆಗಳನ್ನು ಏರ್ಪಡಿಸಿದೆ.

ಮನರಂಜನೆ, ಮನೋಲ್ಲಾಸ ಉಣಬಡಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ನ.5 ಮತ್ತು 12 ರಂದು ರಾತ್ರಿ ಹಾಸನದ ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರಿಂದ ಭಕ್ತರಿಗೆ ಸಾಕಷ್ಟು ಮನರಂಜನೆ ಸಿಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ: ಈ ಬಾರಿ ದೇವಾಲಯ ಮುಂಭಾಗ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ. ಬದಲಾಗಿ ಮಹಾರಾಜ ಪಾರ್ಕ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜತೆಗೆ ಧ್ವನಿ ಮತ್ತು ಬೆಳಕಿನ ಕಾರಂಜಿ ಮುದ ನೀಡಲಿದೆ. ಇದಲ್ಲದೇ ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ಸ್ಥಳೀಯ ಕಲಾವಿದರ ಜೊತೆಗೆ ರಾಜ್ಯಮಟ್ಟದ ಕಲಾವಿದರನ್ನು ಆಹ್ವಾನಿಸಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಹೀಗಾಗಿ ಹೊಸ ಸಂಭ್ರಮ ಮೇಳೈಸಲಿದೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಗುರುವಾರದಿಂದ ಆರಂಭವಾಗಲಿರುವ ಹಾಸನಾಂಬೆಯ ಜಾತ್ರಾ ಮಹೋತ್ಸವದ ಸಿದ್ಧತೆ ತೃಪ್ತಿಕರವಾಗಿದೆ. ಭಕ್ತರು ಶಾಂತ ರೀತಿಯಲ್ಲಿ ದೇವಿಯ ದರ್ಶನ ಪಡೆಯುವ ಮೂಲಕ ಉತ್ಸವ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ವನವಿ ಮಾಡಿದರು.

ಜಗಮಗಿಸುತ್ತಿರುವ ವಿದ್ಯುದ್ದೀಪಾಲಂಕಾರ:

ಹಾಸನ ನಗರದ ಪ್ರಮುಖ ರಸ್ತೆಗಳು ಈಗಾಗಲೇ ವರ್ಣರಂಜಿತ ವಿದ್ಯುದ್ದೀಪಾಲಂಕಾರದಿಂದ ಜಗಮಗಿಸುತ್ತಿವೆ. ಪ್ರಮುಖ ವೃತ್ತಗಳಲ್ಲಿ ಪುರಾಣದ ಕತೆಗಳನ್ನು ಬಿಂಬಿಸುವ ಚಿತ್ರಗಳು ಕಂಗೊಳಿಸುತ್ತಿವೆ. ರೈಲು ನಿಲ್ದಾಣದ ಸಮೀಪ ವಿದ್ಯುದೀಪಗಳಿಂದ ಕಂಗೊಳಿಸುವ ಸ್ವಾಗತ ಕಮಾನು ನಿರ್ಮಾಣವಾಗಿದೆ. ಜೊತೆಗೆ ಹಾಸನನಗರಕ್ಕೆ ತಾಲೂಕುಗಳಿಂದ ಸಂಪರ್ಕಿಸುವ ರಸ್ತೆಗಳಲ್ಲಿ 8 ಸ್ವಾಗತ ಕಮಾನುಗಳನ್ನು ನಿರ್ಮಾಣ ಮಾಡಲಾಗಿದೆ. ಎಲ್ಲ ಸರ್ಕಾರಿ ಕಚೇರಿಗಳು ವಿದ್ಯುದೀªàಪಗಳಿಂದ ಕಂಗೊಳಿಸುತ್ತಿದ್ದು, ಖಾಸಗಿ ವಾಣಿಜ್ಯ ಸಂಕೀರ್ಣಗಳು, ಹೋಟೆಲ್‌ಗ‌ಳ ಮಾಲೀಕರೂ ವಿದ್ಯುದ್ಧೀಪಾಲಂಕಾರ ಮಾಡಿ ಹಬ್ಬದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಮೈಸೂರಿನ ದಸಾರಾ ಮಾದರಿಯಲ್ಲಿರುವ ವಿದ್ಯುದೀಪಾಲಂಕಾರವು ಹಾಸನಾಂಬೆಯ ಜಾತ್ರೋತ್ಸವ ನಡೆಯುವ ನ.15 ರವರೆಗೂ ಇರಲಿದೆ.

ಸಿದ್ಧತೆಗೆ ಸಚಿವರ ಮೆಚ್ಚುಗೆ  :

ದೇವಾಲಯಕ್ಕೆ ಬುಧವಾರ ಮಧ್ಯಾಹ್ನ ಭೇಟಿ ನೀಡಿ ಪೂರ್ವ ಸಿದ್ಧತೆ ಬಗ್ಗೆ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅವರು, ಎಲ್ಲಾ ಸಿದ್ಧತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕಎಚ್‌.ಪಿ.ಸ್ವರೂಪ್‌ ಪ್ರಕಾಶ್‌, ಡೀಸಿ ಸತ್ಯಭಾಮ ಸಿ, ಎಸ್‌ಪಿ ಮೊಹಮದ್‌ ಸುಜೀತಾ, ಎಸಿ ಮಾರುತಿ ಮತ್ತಿತರು ಈ ಸಂದರ್ಭದಲ್ಲಿ ಹಾಜರಿದ್ದರು.

24 ಗಂಟೆಯೂ ದೇವಿ ದರ್ಶನ:

ನ.3ರಿಂದ ನ.14ರವರೆಗೆ ದೇವಿಗೆ ನೈವೇದ್ಯ ಅರ್ಪಣೆ ಸಮಯ ಹೊರತುಪಡಿಸಿ ದಿನದ 24 ಗಂಟೆಯೂ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಸರದಿ ಸಾಲಿನಲ್ಲಿ ಸಾಗುವ ಭಕ್ತರಿಗೆ ಮಳೆ, ಬಿಸಿಲಿನ ರಕ್ಷಣೆ ನೀಡಲು ಜರ್ಮನ್‌ ಟೆಂಟ್‌, ನೆಲಹಾಸು, ಬ್ಯಾರಿಕೇಡ್‌, ಫ್ಯಾನ್‌ ವ್ಯವಸ್ಥೆ ಸೇರಿದಂತೆ ಈ ಬಾರಿ ವಿಶೇಷವಾಗಿ ಭಕ್ತರಿಗೆ ಹಲವು ಸೌಲಭ್ಯ ಕಲ್ಪಿಸಲಾಗಿದೆ.

ಪಾಸ್‌ಗಳ ದುರ್ಬಳಕೆಗೆ ತಡೆ:

ವಿವಿಐಪಿ, ವಿಐಪಿ ಮತ್ತು ವಿಶೇಷ ದರ್ಶನದ 1000 ರೂ. ಮತ್ತು 300 ರೂ. ಟಿಕೆಟ್‌ ಗಳ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಪಾಸ್‌ ಮತ್ತು ಟಿಕೆಟ್‌ಗಳ ಸ್ಕ್ಯಾನ್‌ ಮಾಡುವ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಜಿಲ್ಲಾಡಳಿತವು ಜಾರಿ ಮಾಡುತ್ತಿದೆ. ಎಲ್ಲಾ ಭಕ್ತರಿಗೆ ದೊನ್ನೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಿಸಿ ಕ್ಯಾಮೆರಾಗಳ ವೀಕ್ಷಣೆಗೆ ವಾರ್‌ ರೂಂ. ಸ್ಥಾಪನೆ ಜೊತೆಗೆ ಅವಲೋಕನ ಮಾಡಲು 36 ವಾಕಿಟಾಕಿ ವ್ಯವಸ್ಥೆ ಮಾಡಲಾಗುತ್ತಿದೆ. ಇದೂ ಕೂಡ ಪ್ರಥಮ ಪ್ರಯತ್ನವಾಗಿದೆ.

ಬಿಗಿ ಪೊಲೀಸ್‌ ಬಂದೋಬಸ್ತ್ :  ಹಾಸನಾಂಬ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಸೂತ್ರವಾಗಿ ನಡೆಸಲು ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಿದ್ದು, ಒಟ್ಟು 1200 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೊಹಮ್ಮದ್‌ ಸುಜೀತಾ ತಿಳಿಸಿದ್ದಾರೆ. ಮೂವರು ಎಎಸ್‌ಪಿ, 9 ಜನ ಡಿವೈಎಸ್ಪಿ, 26 ಸಿಪಿಐ, 100 ಪಿಎಸ್‌ಐ ಮತ್ತುಎಎಸ್‌ಐ, 1000 ಸಿಬ್ಬಂದಿಯನ್ನು ನೇಮಿಸಲಾಗಿದೆ. ಹೊರ ಜಿಲ್ಲೆಗಳಿಂದಲೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕರೆಸಿ ನಿಯೋಜಿಸಿಕೊಳ್ಳಲಾಗಿದೆ. 14 ದಿನ 24 ಗಂಟೆಯೂ ದರ್ಶನ ಇರುವುದರಿಂದ ಮೂರು ಪಾಳಿಯಲ್ಲಿ ಭದ್ರತೆ ಮಾಡಲಾಗಿದೆ. ವಿಶೇಷವಾಗಿ ಕೆಎಸ್‌ಆರ್‌ಪಿ, ಡಿಎಆರ್‌ ಸೇರಿ ಮೀಸಲು ಪಡೆಗಳನ್ನೂ ಬಳಸಿಕೊಳ್ಳಲಾಗುವುದು ಎಂದು ಎಸ್ಪಿ ಮೊಹಮ್ಮದ್‌ ಸುಜೀತಾ ಅವರು ಮಾಹಿತಿ ನೀಡಿದ್ದಾರೆ.

ವಾಹನ, ಪಾರ್ಕಿಂಗ್‌ ವ್ಯವಸ್ಥೆ :  ಟ್ರಾಫಿಕ್‌ ಸಮಸ್ಯೆ ಸುಧಾರಿಸುವ ನಿಟ್ಟಿನಲ್ಲಿ 50 ಪಾಯಿಂಟ್‌ ಗುರುತು ಮಾಡಲಾಗಿದೆ. ಅಲ್ಲದೇ ಹೆಚ್ಚಿನ ಸಿಬ್ಬಂದಿ ನಿಯೋಜಿಸಿಕೊಳ್ಳಲಾಗಿದೆ. ಈ ಬಾರಿ ಗಣ್ಯರನ್ನು ಕರೆದುಕೊಂಡು ಬರಲು ಪ್ರವಾಸಿ ಮಂದಿರದಿಂದ ಜಿಲ್ಲಾಡಳಿತದ ವತಿಯಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ನಗರಸಭೆ ಆವರಣ, ಹೊಸ ಲೈನ್‌ ರಸ್ತೆ ಹಾಗೂ ಗೊರೂರು ರಸ್ತೆಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next