Advertisement

ಇಂದಿನಿಂದ ಹಾಸನಾಂಬಾ ಜಾತ್ರೋತ್ಸವ ಆರಂಭ : ಸಾರ್ವಜನಿಕರಿಗೆ ನೇರ ದರ್ಶನ ನಿಷೇಧ

01:45 PM Nov 05, 2020 | sudhir |

ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ, ಪುರಾಣ ಪ್ರಸಿದ್ಧ ಹಾಸನದ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವ ನ.5 ರಿಂದ 16ರವರೆಗೆ ನಡೆಯಲಿದೆ.

Advertisement

ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಸಾರ್ವಜನಿಕರಿಗೆ ದೇವಿಯ ನೇರ ದರ್ಶನವನ್ನು ಜಿಲ್ಲಾಡಳಿತ ನಿಷೇಧಿಸಿದ್ದು, ಭಕ್ತರು ಎಲ್‌ಇಡಿ ಪರದೆ ಹಾಗೂ ಆನ್‌ಲೈನ್‌ ಮೂಲಕ ಮಾತ್ರ ದೇವಿ ಪೂಜೆಯನ್ನು ವೀಕ್ಷಿಸಿ ಸಮಾಧಾನಪಟ್ಟುಕೊಳ್ಳುವಂತಾಗಿದೆ.
ಸಂಪ್ರದಾಯದಂತೆ ಅಶ್ವಯುಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12 ಗಂಟೆಗೆ ಮೈಸೂರು ಅರಸು ಮನೆತನದ ನರಸಿಂಹರಾಜ ಅರಸು ಅವರು ಬಾಳೆ ಕಂದು ಕಡಿದ ಬಳಿಕ ಅಮ್ಮನವರ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಾಗುತ್ತದೆ.

ಸಚಿವ ಸಮ್ಮುಖದಲ್ಲಿ ಬಾಗಿಲು ಓಪನ್‌:
ಮೊದಲ ದಿನ ದೇವಿಯ ಗರ್ಭಗುಡಿ ಸ್ವತ್ಛತೆ, ಸುಣ್ಣಧಾರಣೆ ಮತ್ತು ಜಿಲ್ಲಾ ಖಜಾನೆಯಿಂದ ತೆಗೆದುಕೊಂಡು ಹೋಗುವ ಆಭರಣ ಧಾರಣೆ ನಂತರ ಪೂಜಾ ಕಾರ್ಯ ನಡೆಯುತ್ತದೆ. ದೇವಾಲಯದ ಬಾಗಿಲನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಆವರ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಆನಂತರ ಜನ ಪ್ರತಿನಿಧಿಗಳು, ಆಮಂತ್ರಿತರು ಮತ್ತು ಅತಿ ಗಣ್ಯರು ದೇವಿಯ ದರ್ಶನಕ್ಕೆ ಸಂಜೆ 6 ಗಂಟೆವರೆಗೂ ಅವಕಾಶವಿದೆ. ದೇವಾಲಯದ ಬಾಗಿಲು ತೆರೆಯುವ ದಿನ ಮತ್ತು ಬಾಗಿಲನ್ನು ಮಚ್ಚುವ ದಿನ ಮಾತ್ರ ಜನ ಪ್ರತಿ ನಿಧಿಗಳು, ಆಮಂತ್ರಿತರು  ಅತಿ ಗಣ್ಯರು ದೇವಿಯ ನೇರ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ಖರ್ಚುನಲ್ಲಿ ಕಡಿಮೆ ಮಾಡಿಲ್ಲ: ಹಾಸನಾಂಬೆಯನ್ನು ನೇರವಾಗಿ ಭಕ್ತರು ದರ್ಶನ ಮಾಡಲು ಅವಕಾಶ ನೀಡದಿದ್ದರೂ ಜಾತ್ರಾ ಮಹೋತ್ಸವದ ಖರ್ಚು, ಅದ್ಧೂರಿಯನ್ನೇನೂ ಜಿಲ್ಲಾಡಳಿತ ಕಡಿಮೆ ಮಾಡಿಲ್ಲ. ದೇವಾಲಯದ ಹೊರ ಆವರಣದಲ್ಲಿ ಆಕರ್ಷಕ
ಅಲಂಕಾರ, ಹಾಸನ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುದೀಪಾಲಂಕಾರ ಸೇರಿದಂತೆ ಪ್ರತಿ ವರ್ಷದಂತೆಯೇ ಅದ್ಧೂರಿಯ ಸಿದ್ಧತೆ ಮಾಡಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಲವ್ ಜಿಹಾದ್ ಕೊನೆಗಾಣಿಸಲು ಕಠಿಣ ಕ್ರಮ: ಮಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ

Advertisement

ಭಕ್ತರು ಹಾಸನಾಂಬೆಯ ಪೂಜೆ ನಡೆಯವ 12 ದಿನಗಳೂ ಬೃಹತ್‌ ಎಲ್‌ಇಡಿ ಪರದೆಗಳನ್ನು ಹಾಸನ ನಗರದ 10 ಕಡೆ ಅಳವಡಿಸಲಾಗಿದೆ. ಹಾಸನಾಂಬಾ ದೇವಾಲಯದ ಪರಿಸರದಲ್ಲಿ 4 ಕಡೆ, ಹಾಸನದ ತಣ್ಣೀರುಹಳ್ಳ, ಹೇಮಾವತಿ ಪ್ರತಿಮೆ ಬಳಿ, ಕೇಂದ್ರೀಯ ಬಸ್‌ ನಿಲ್ದಾಣದ ಬಳಿ, ವಿದ್ಯಾನಗರ ಲೇಡಿಸ್‌ ಹಾಸ್ಟೆಲ್‌ ಸಮೀಪ, ಉಪನೋಂದಣಾಧಿಕಾರಿ ಕಚೇರಿ ಬಳಿ, ರೈಲ್ವೆ ನಿಲ್ದಾಣ ಸಮೀಪ, ಜಿಲ್ಲಾ ಕ್ರೀಡಾಂಗಣದ ಬಳಿ, ಹೇಮಾವತಿ ನಗರದಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗಿದೆ.

ಯುಟ್ಯೂಬ್‌ //hassanabalive2020.com ಲಿಂಕ್‌ ಮೂಲಕ ಉತ್ಸವದ ಪ್ರಾರಂಭದ ದಿನದಿಂದ ಕೊನೆವರೆಗೂ ಭಕ್ತರು ಪೂಜೆ ವೀಕ್ಷಣೆ ಮಾಡ ಬಹುದಾಗಿದೆ. ದರ್ಶನೋತ್ಸವದ ಆರಂಭದ ದಿನ ಮಾತ್ರವೇ ಅಲಂಕಾರಗಳಿಲ್ಲದ ದೇವಿಯ ವಿಶ್ವರೂಪ
ದರ್ಶನ ನೋಡಬಹುದು. ಬಾಗಿಲು ತೆರೆಯುವ ದಿನ ಸಂಜೆ ದೇವಿಗೆ ವಸ್ತ್ರಾಭರಣಗಳನ್ನು ಧರಿಸಿ, ಅಲಂಕರಿಸಿ ಪೂಜೆ ಆರಂಭಿಸಲಾಗುತ್ತದೆ. ವಿಶ್ವರೂಪ ದರ್ಶನದಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಬಾಗಿಲು ತೆರೆದ ತಕ್ಷಣ ದರ್ಶನ ಪಡೆಯಲು ಭಕ್ತರು ಪ್ರತಿ ವರ್ಷವೂ ಮುಗಿಬೀಳುತ್ತಿದ್ದರು. ಆದರೆ, ಈ ವರ್ಷ ಅದಕ್ಕೆ ಅವಕಾಶವಿಲ್ಲ.

ಹಾಸನಾಂಬಾ ದೇವಿ ಮಹಿಮೆ
ಹಾಸನ: ಪುರಾಣದ ಹಿನ್ನೆಲೆಯ ಹಾಸನಾಂಬೆ ಹಲವು ಪವಾಡ ಸದೃಶ ಸಂಗತಿ ಮೈಗೂಡಿಸಿ ಕೊಂಡಿದ್ದಾಳೆ. ಗರ್ಭಗುಡಿ ಬಾಗಿಲು ಹಾಕುವ ಸಂದರ್ಭದಲ್ಲಿ ಹಚ್ಚಿದ ಹಣತೆ, ಇಟ್ಟ ನೈವೇದ್ಯ ಹಾಗೂ ಮುಡಿಸಿದ ಹೂ ಬಾಡುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಇದನ್ನೂ ಓದಿ:ಕಾಂಗ್ರೆಸ್ ಪಕ್ಷ ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಲ್ಲಲಿದೆ: ಡಿಕೆ ಶಿವಕುಮಾರ್

ಹಾಸನ ನಗರವು 12ನೇ ಶತಮಾನದಲ್ಲಿ ಸಿಂಹಾಸನಪುರಿ ಎಂದು ಪ್ರಸಿದ್ಧವಾಗಿತ್ತು. ನಗರವನ್ನಾಳುತ್ತಿದ್ದ ಪಾಳೇಗಾರ ಕೃಷ್ಣಪ್ಪ ನಾಯಕ ಒಮ್ಮೆ ಕುದುರೆಯೇರಿ ಹೋಗುತ್ತಿರುವಾಗ ಹಾಸನಾಂಬ ದೇಗುಲದ ಸ್ಥಳದಲ್ಲಿ ಮೊಲವೊಂದು ರಸ್ತೆಗೆ ಅಡ್ಡಲಾಗಿ ಓಡಿ ಹೋಯಿತು. ಅಂದು ಆತನ ಕನಸಿನಲ್ಲಿ ಕಾಣಿಸಿಕೊಂಡ ಸಪ್ತಮಾತೃಕೆಯರು, ಮೊಲ ಅಡ್ಡ ಹೋದ ಜಾಗದಲ್ಲಿ ತಾವು ನೆಲೆಸಿದ್ದು, ಅಲ್ಲಿ ಗುಡಿ ನಿರ್ಮಿಸಲು ಸೂಚಿಸಿದರು. ಅದರಂತೆ ಕೃಷ್ಣಪ್ಪ ನಾಯಕ, ಅಲ್ಲಿ ಹಾಸನಾಂಬೆ ದೇವಸ್ಥಾನ ನಿರ್ಮಿಸಿದ
ಎಂದು ಹೇಳಲಾಗುತ್ತದೆ.

ವಾರಣಾಸಿಯಿಂದ ದಕ್ಷಿಣದತ್ತ ವಿಹಾರಾರ್ಥವಾಗಿ ಬಂದ ಸಪ್ತಮಾತೃಕೆಯರು ಇಲ್ಲೇ ನೆಲೆಸಿದರು. ವೈಷ್ಣವಿ, ಕೌಮಾರಿ,
ಮಹೇಶ್ವರಿಯರು ಹಾಸನಾಂಬೆ ದೇವಾಲಯದಲ್ಲಿ ಹುತ್ತ ರೂಪದಿಂದ, ಬ್ರಾಹ್ಮಿದೇವಿ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆಯಲ್ಲಿ ಕೆಂಚಮ್ಮ ದೇವಿಯಾಗಿ ಹಾಗೂ ಚಾಮುಂಡಿ, ವಾರಾಹಿ, ಇಂದ್ರಾಣಿಯರು ಹಾಸನದ ಮಧ್ಯಭಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದ್ದಾರೆ ಎಂಬುದು ಭಕ್ತರ ನಂಬಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next